ಅಂತೂ, ಇಂತೂ ಯುದ್ಧ ಅಂತ್ಯಗೊಳಿಸಿದ ಮೊಂಡರು..!
ಸಾವಿರಾರು ಅಮಾಯಕರನ್ನು ಬಲಿಪಡೆದ ನಂತರ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ನಾಯಕರಿಗೆ ಬುದ್ಧಿ ಬಂದಂತೆ ಕಾಣುತ್ತಿದೆ. ಸುಮಾರು 2 ತಿಂಗಳ ಕಾಲ ನಿರಂತರವಾಗಿ ಕಚ್ಚಾಡಿದ್ದ ಈ ಎರಡೂ ದೇಶಗಳು ಇದೀಗ ಶಾಂತಿ ಮಂತ್ರ ಜಪಿಸುತ್ತಿವೆ. ನಗೊರ್ನೊ-ಕರಬಾಖ್ ಪ್ರದೇಶಗಳಿಗಾಗಿ ನಡೆಯುತ್ತಿದ್ದ ಯುದ್ಧವನ್ನು ಕೊನೆಗೂ ನಿಲ್ಲಿಸಲು ಎರಡೂ ದೇಶಗಳು ಒಪ್ಪಂದ ಮಾಡಿಕೊಂಡಿವೆ. ಶಾಂತಿ ಮಾತುಕತೆಗೆ ಒನ್ಸ್ ಅಗೈನ್ ರಷ್ಯಾ ವೇದಿಕೆ ಒದಗಿಸಿತ್ತು. ಈ ಬಗ್ಗೆ ಖುದ್ದು ಅರ್ಮೇನಿಯ ಪ್ರಧಾನಿ ನಿಕೋಲ್ ಪಶಿನ್ಯಾನ್ ಮಾಹಿತಿ ನೀಡಿದ್ದಾರೆ.
ಯುದ್ಧದ ಬಗ್ಗೆ ತೀವ್ರ ಭಾವುಕರಾಗಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ನಿಕೋಲ್ ಪಶಿನ್ಯಾನ್ ತಪ್ಪಿನ ಅರಿವಾದವರಂತೆ ಮಾತನಾಡಿದ್ದಾರೆ. ಸುಮಾರು 2 ತಿಂಗಳಿಂದ ನಿರಂತರವಾಗಿ ನಡೆದ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಯುದ್ಧದಲ್ಲಿ ಸುಮಾರು 1500ಕ್ಕೂ ಹೆಚ್ಚು ಅಮಾಯಕರು ಬಲಿಯಾಗಿದ್ದಾರೆ.
ರಷ್ಯಾ ಅಧ್ಯಕ್ಷ ಸ್ಥಾನ ತೊರೆಯಲು ಮುಂದಾದ ವ್ಲಾದಿಮಿರ್ ಪುಟಿನ್ ?
ಮುಗ್ಧ ಮಕ್ಕಳು, ವೃದ್ಧರು, ಮಹಿಳೆಯರು ಸೇರಿದಂತೆ ಸಾವಿರಾರು ಜನರು ಮೃತಪಟ್ಟಿದ್ದಾರೆ. ಸೈನಿಕರ ಸಾವಿನ ಸಂಖ್ಯೆಯಂತೂ ಇನ್ನೂ ಲೆಕ್ಕಕ್ಕೆ ಸಿಗುತ್ತಿಲ್ಲ. ಘನಘೋರ ಯುದ್ಧವನ್ನು ನಿಲ್ಲಿಸಲು ಅರ್ಮೇನಿಯ-ಅಜೆರ್ಬೈಜಾನ್ ನಾಯಕರು ತಿಂಗಳುಗಳ ಸಮಯಾವಕಾಶ ಪಡೆದಿದ್ದು ಮಾತ್ರ ವಿಪರ್ಯಾಸ.
ಪಟಾಕಿಯಂತೆ ಬೀಳುತ್ತಿದ್ದ ಬಾಂಬ್ಗಳು..!
ಅರ್ಮೇನಿಯ-ಅಜೆರ್ಬೈಜಾನ್ ಗಡಿಯಲ್ಲಿ ಕಳೆದ 2 ತಿಂಗಳುಗಳ ಕಾಲ ಪರಿಸ್ಥಿತಿ ಹೇಗಿತ್ತು ಎಂದರೆ, ದಿನವೂ ದೀಪಾವಳಿ ನಡೆದಿತ್ತು. ಒಮ್ಮೆ ಅರ್ಮೇನಿಯ ಸೈನಿಕರು ಬಾಂಬ್ ಎಸೆದರೆ, ಮರುಕ್ಷಣವೇ ಅಜೆರ್ಬೈಜಾನ್ ಪಡೆಗಳು ಪ್ರತಿದಾಳಿ ಮಾಡುತ್ತಿದ್ದವು. ಅಕಸ್ಮಾತ್ ಅಜೆರ್ಬೈಜಾನ್ ಮೊದಲು ದಾಳಿ ಮಾಡಿದರೆ ತಕ್ಷಣವೇ ಅರ್ಮೇನಿಯ ದಾಳಿ ನಡೆಸುತ್ತಿತ್ತು. ಹೀಗೆ ಪಟಾಕಿಯಂತೆ ಬೀಳುತ್ತಿದ್ದ ಬಾಂಬ್ಗಳಿಗೆ ಸಾವಿರಾರು ಮನೆಗಳು ನಾಶವಾಗಿ ಹೋಗಿವೆ. ಲಕ್ಷ ಲಕ್ಷ ಜನರು ಬೀದಿಪಾಲಾಗಿದ್ದಾರೆ. ಹಾಗೇ ಸಾವಿರಾರು ಜನರ ಪ್ರಾಣಪಕ್ಷಿಯೂ ಹಾರಿಹೋಗಿದೆ. ಇಷ್ಟೆಲ್ಲಾ ನಡೆದರೂ ಯುದ್ಧ ನಿಲ್ಲಿಸಲು 2 ತಿಂಗಳು ಬೇಕಾಯಿತು.
ರಷ್ಯಾ ಮಾತಿಗೆ ಒಪ್ಪಿದ್ದೇ ಆಶ್ಚರ್ಯ..!
ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಮಧ್ಯೆ ಯುದ್ಧ ಆರಂಭವಾದ ದಿನದಿಂದಲೇ ವಿಶ್ವದ ಹಲವು ದೇಶಗಳ ನಾಯಕರು ಶಾಂತಿ ಮಾತುಕತೆಗೆ ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗಿರಲಿಲ್ಲ. ಈಗ ರಷ್ಯಾ ಜೊತೆ ನಡೆದ ಮಾತುಕತೆಗೆ ಬೆಲೆ ಕೊಟ್ಟು ಯುದ್ಧ ನಿಲ್ಲಿಸುತ್ತಿದ್ದೇವೆ ಎಂದು ಎರಡೂ ರಾಷ್ಟ್ರಗಳು ಹೇಳಿರಬಹುದು. ಆದರೆ ತಿಂಗಳ ಹಿಂದೆಯೂ ಇದೇ ರೀತಿ ಶಾಂತಿ ಒಪ್ಪಂದ ನಡೆದಿತ್ತು. ಖದ್ದು ರಷ್ಯಾ ಅಧ್ಯಕ್ಷ ಪುಟಿನ್ ಆದೇಶದ ಹಿನ್ನೆಲೆಯಲ್ಲಿ ರಷ್ಯಾದಲ್ಲಿ ಉನ್ನತ ಮಟ್ಟದ ಸಭೆ ನಡೆದು ಯುದ್ಧ ನಿಲ್ಲಿಸಲು ಒಪ್ಪಿಸಿದ್ದರು. ಆದರೆ ಹೀಗೆ ಶಾಂತಿ ಮಾತುಕತೆ ನಡೆದು 1 ದಿನ ಕಳೆಯುವ ಒಳಗೆ ಎರಡೂ ರಾಷ್ಟ್ರಗಳು ಮತ್ತೆ ಕಿತ್ತಾಡಿದ್ದವು. ಭೀಕರವಾದ ದಾಳಿ, ಪ್ರತಿದಾಳಿಯೂ ನಡೆದಿತ್ತು. ಈಗ ಮತ್ತೆ ರಷ್ಯಾ ನೇತೃತ್ವದಲ್ಲೇ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ನಾಯಕರು ಕದನ ವಿರಾಮಕ್ಕೆ ಒಪ್ಪಿದ್ದು, ದಿಢೀರ್ ಯುದ್ಧ ಸ್ಫೋಟಿಸುವ ಸಾಧ್ಯತೆ ಇದೆ.
ಸಾವಿರಾರು ಅಮಾಯಕರನ್ನು ಕೊಂದು ಹಾಕಿದ ಸರ್ವಾಧಿಕಾರಿಗಳು
ಯುದ್ಧಕ್ಕೆ ಕಾರಣ ಏನು..?
ನಗೊರ್ನೊ-ಕರಬಾಖ್ ಸಾಕಷ್ಟು ಆದಾಯ ತಂದುಕೊಡಬಲ್ಲ ಪ್ರದೇಶಗಳು. 4,400 ಚ.ಕಿ.ಮೀ ವಿಸ್ತೀರ್ಣದ ಭೂಮಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಈ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಲು ಎರಡೂ ದೇಶಗಳು ಕಚ್ಚಾಡುತ್ತಿವೆ. ಈ ಹಿಂದೆ ಅಂದರೆ 1994ರಲ್ಲೂ ಇದೇ ವಿಚಾರಕ್ಕೆ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಬಡಿದಾಡಿಕೊಂಡಿವೆ. ಆದರೆ ನಂತರ ನಡೆದ ಸಂಧಾನದಲ್ಲಿ ತಕ್ಷಣಕ್ಕೆ ಯುದ್ಧ ನಿಂತಿದ್ದರೂ ದಶಕಗಳ ಕಾಲ ಬೂದಿ ಮುಚ್ಚಿದ ಕೆಂಡದಂತೆ ಇತ್ತು ಪರಿಸ್ಥಿತಿ. ಈಗ ಆ ಕೆಂಡ ಮತ್ತೆ ಬೆಂಕಿಯಾಗಿ, ಜ್ವಾಲೆಯ ರೂಪ ಪಡೆದಿದೆ. ಎರಡೂ ದೇಶಗಳ ನಾಯಕರ ದುರಾಸೆಗೆ ಸಾವಿರಾರು ಅಮಾಯಕ ಜೀವಗಳು ಬಲಿಯಾಗಿವೆ.
'ದೊಡ್ಡಣ್ಣ'ನ ಮಾತಿಗೂ ಕೇರ್ ಮಾಡಲಿಲ್ಲ ಈ ಮೊಂಡರು..!
ಡಿಸೆಂಬರ್ ವೇಳೆಗೆ ಅಸಹನೀಯ ಚಳಿ
ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಉತ್ತರ ಧ್ರುವ ಪ್ರದೇಶಕ್ಕೆ ಹತ್ತಿರದಲ್ಲೇ ಇರುವ ಕಾರಣ ಡಿಸೆಂಬರ್ ವೇಳೆಗೆಲ್ಲಾ ಅಲ್ಲಿ ಅಸಹನೀಯ ಚಳಿ ತಾಗಲಿದೆ. ಕೆಲವು ಸಂದರ್ಭದಲ್ಲಿ ಉಷ್ಣಾಂಶ ಮೈನಸ್ ಡಿಗ್ರಿ ಮುಟ್ಟಲಿದೆ. ಕೆಲವೆಡೆ -40 ಡಿಗ್ರಿಗೆ ಉಷ್ಣಾಂಶ ಕುಸಿದರೆ, ಮತ್ತೆ ಕೆಲವು ಕಡೆ ಉಷ್ಣಾಂಶ (+) ಚಿಹ್ನೆ ಮುಟ್ಟುವುದೇ ಇಲ್ಲ. ಹೀಗೆ ಕೊರೆಯುವ ಚಳಿಯಲ್ಲಿ ಅಲ್ಲಿನ ಜನ ಬೆಚ್ಚನೆಯ ಮನೆಯಿದ್ದರೂ ನಡುಗುತ್ತಲೇ ಬದುಕುತ್ತಾರೆ. ಆದರೆ ಈಗ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಯುದ್ಧದ ಪರಿಣಾಮ ಸಾವಿರಾರು ಮನೆಗಳು ನಾಶವಾಗಿಬಿಟ್ಟಿವೆ. ಲಕ್ಷಾಂತರ ನಿರಾಶ್ರಿತರಿಗೆ ಚಳಿಯದ್ದೇ ಚಿಂತೆಯಾಗಿ ಹೋಗಿದೆ. ಮಕ್ಕಳು, ಸಂಸಾರ ಕರೆದುಕೊಂಡು ಎಲ್ಲಿಗೆ ಹೋಗೋದು ಅಂತಾ ಕಣ್ಣೀರು ಹಾಕುತ್ತಿದ್ದಾರೆ, ಜೊತೆಗೆ ಸಂತ್ರಸ್ತರ ಉಸಿರಲ್ಲಿ ಹಿಡಿ ಶಾಪವೂ ಇದೆ.