Coronavirus Effect: ಇಟಲಿಯಲ್ಲೇ ಸಿಲುಕಿಕೊಂಡ 100ಕ್ಕೂ ಹೆಚ್ಚು ಭಾರತೀಯರು
ನವದೆಹಲಿ, ಮಾರ್ಚ್.11: ಕೊರೊನೊ ವೈರಸ್ ಭೀತಿಗೆ ತತ್ತರಿಸಿರುವ ಇಟಲಿಗೆ ಇಟಲಿಯೇ ಸ್ತಬ್ಧಗೊಂಡಿದೆ. ಇದರಿಂದ 100ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಇಟಲಿಯಲ್ಲಿ ಸಿಲುಕಿದ್ದು ಸ್ವದೇಶಕ್ಕೆ ವಾಪಸ್ ಆಗದೇ ಪರದಾಡುತ್ತಿದ್ದಾರೆ.
ಆಂಧ್ರಪ್ರದೇಶ ಮತ್ತು ತೆಲಂಗಾಣ ಮೂಲದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ. ಪದೋವಾ, ರಿಮಿನಿ, ಮೊಡೆನಾ, ಮಿಲನ್ ಪ್ರದೇಶಗಳನ್ನು ಕೆಂಪು ವಲಯ ಎಂದು ಘೋಷಿಸಲಾಗಿದೆ.
ಇದುವರೆಗೂ ಇಟಲಿಯಲ್ಲಿ ಮಾರಕ ಕೊರೊನಾ ವೈರಸ್ ದಾಳಿಗೆ 631 ಮಂದಿ ಮೃತಪಟ್ಟಿದ್ದು, 10,149 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 724 ಜನ ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.

ಇಟಲಿಯಲ್ಲಿ ವ್ಯಾಪಾರ ವಹಿವಾಟು ಸ್ಥಗಿತ
ಕಳೆದ ಮಾರ್ಚ್.09ರಂದು ಒಂದೇ ದಿನ ಇಟಲಿಯಲ್ಲಿ 97 ಮಂದಿ ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕೆಂಪು ವಲಯ ಎಂದು ಘೋಷಿಸಿದ್ದು ಅಂಗಡಿ ಮುಂಗಟ್ಟುಗಳನ್ನೆಲ್ಲ ಬಂದ್ ಮಾಡಲಾಗಿದೆ.

ಸೂಪರ್ ಮಾರ್ಕೆಟ್ ಗಳೆಲ್ಲ ಬಂದ್ ಬಂದ್ ಬಂದ್!
ಇಟಲಿಯಲ್ಲಿ ಸೂಪರ್ ಮಾರ್ಕೆಟ್ ಗಳೆಲ್ಲ ಬಂದ್ ಆಗಿವೆ. ಮಾಸ್ಕ್ ಇಲ್ಲದೇ ವಿದ್ಯಾರ್ಥಿಗಳು ಪರದಾಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆ ಮನೆಗಳಿಂದ ಹೊರ ಬಾರದಂತೆ ಸೂಚನೆ ನೀಡಲಾಗಿದೆ.

100ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳಿಗೆ ದಿಗ್ಬಂಧನ
ಇಟಲಿಯ ಪಡೋವಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ 50 ವಿದ್ಯಾರ್ಥಿಗಳಿಗೆ ದಿಗ್ಬಂಧನ ವಿಧಿಸಲಾಗಿದೆ. ಈ ಬಗ್ಗೆ ಅನಂತಪುರ ಮೂಲದ ವಿದ್ಯಾರ್ಥಿನಿಯೊಬ್ಬರು ತಿಳಿಸಿದ್ದು, ನಮ್ಮನ್ನು ಹೊರ ಹೋಗುವುದಕ್ಕೆ ಬಿಡುತ್ತಿಲ್ಲ. ಭಾರತವಷ್ಟೇ ಅಲ್ಲ, ಬೇರೆ ಯಾವ ದೇಶಕ್ಕೂ ತೆರಳದಂತೆ ದಿಗ್ಬಂಧನದಲ್ಲಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೇರಳ ಮುಖ್ಯಮಂತ್ರಿಯಿಂದ ಪ್ರಧಾನಮಂತ್ರಿಗೆ ಪತ್ರ
ಭಾರತಕ್ಕೆ ವಾಪಸ್ ಆಗಲು ಹವಣಿಸುತ್ತಿರುವ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆ ತರಲು ಕೇಂದ್ರ ಸರ್ಕಾರವು ಕ್ರಮ ತೆಗೆದುಕೊಳ್ಳಬೇಕು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಒಂದು ವೇಳೆ ಭಾರತೀಯರಲ್ಲಿ ಸೋಂಕು ಪತ್ತೆಯಾಗಿದ್ದೇ ನಿಜವಾದಲ್ಲಿ ಈಗಾಗಲೇ ದೇಶದಲ್ಲಿ ವ್ಯವಸ್ಥಿತಗೊಳಿಸಿದ ಶಿಬಿರಗಳಲ್ಲಿ ಅಂಥವರನ್ನು ಇರಿಸಿ ಚಿಕಿತ್ಸೆಗೆ ಒಳಪಡಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.












Click it and Unblock the Notifications