ಶ್ರೀಲಂಕಾದಿಂದ ವಾಪಸ್ ಹೊರಟ ಚೀನೀ ಬೇಹುಗಾರಿಕೆ ನೌಕೆ
ನವದೆಹಲಿ, ಆಗಸ್ಟ್ 23: ಭಾರತದ ಆತಂಕಕ್ಕೆ ಕಾರಣವಾಗಿದ್ದ ಚೀನಾದ ಬೇಹುಗಾರಿಕೆ ನೌಕೆ ಯುವಾನ್ ವಾಂಗ್ 5 ನಿನ್ನೆ ಸೋಮವಾರ ಶ್ರೀಲಂಕಾದಿಂದ ನಿರ್ಗಮಿಸಿತು ಎಂದು ವರದಿಗಳು ಹೇಳುತ್ತಿವೆ.
ಚೀನಾದ ಈ ಸ್ಪೈ ಶಿಪ್ ಕಳೆದ ವಾರವಷ್ಟೇ ಶ್ರೀಲಂಕಾದ ಹಂಬನತೋಟ ಬಂದರಿಗೆ ಬಂದು ನಿಂತಿತ್ತು. ತನ್ನ ಹಡಗು ಇಲ್ಲಿ ನಿಲುಗಡೆ ಆಗಿರುವುದು ಬೇರೆ ಯಾವ ದೇಶಕ್ಕೂ ಕೆಡಕು ಮಾಡುವುದಕ್ಕಲ್ಲ. ಇದು ಎರಡು ದೇಶಗಳ ಮಧ್ಯೆ ಆಗಿರುವ ಸಹಜ ವಿನಿಮಯ ಎಂಬುದು ಚೀನಾದ ಅಭಯವಾಗಿತ್ತು.
ಆದರೆ, ಯುವಾನ್ ವಾಂಗ್ 5 ನೌಕೆ ಚೀನಾದ ಬೇಹುಗಾರಿಕೆಗೆ ಬಳಸಲಾಗುವ ಹಡಗಾಗಿದೆ. ಇದು ಸೆಟಿಲೈಟ್ ಮತ್ತು ಕ್ಷಿಪಣಿಗಳ ಮಾಹಿತಿ ಕದಿಯಬಲ್ಲುದು. ಸಬ್ಮರೀನ್ಗಳ ಅಳವಡಿಕೆಗೆ ಅನುಕೂಲವಾಗುವ ರೀತಿಯಲ್ಲಿ ಸಾಗರ ಸರ್ವೇಕ್ಷಣೆ ಮಾಡಬಲ್ಲುದು. ಮೇಲಾಗಿ ಹಂಬನತೋಟ ಪ್ರದೇಶ ಭಾರತದ ಭದ್ರತೆಯ ಪಾಲಿಗೆ ಆಯಕಟ್ಟಿನ ಜಾಗದಲ್ಲಿದೆ. ಭಾರತ ನಡೆಸುವ ಕ್ಷಿಪಣಿ ಪರೀಕ್ಷೆಗಳ ನಿಖರ ಮಾಹಿತಿಯನ್ನು ಇಲ್ಲಿಂದ ಪಡೆಯಲು ಸಾಧ್ಯ.

ಈ ಹಿನ್ನೆಲೆಯಲ್ಲಿ ಹಂಬನತೋಟ ಬಂದರಿಗೆ ಚೀನಾದ ಬೇಹುಗಾರಿಕೆ ನೌಕೆ ಬಂದಿಳಿದದ್ದು ಭಾರತಕ್ಕೆ ಅಸಮಾಧಾನ ಉಂಟು ಮಾಡಿದೆ. ಪದೇ ಪದೇ ಭಾರತ ಎತ್ತಿದ ಆಕ್ಷೇಪಗಳ ಮಧ್ಯೆಯೂ ಶ್ರೀಲಂಕಾ ಚೀನಾ ನೌಕೆ ಆಗಮಿಸಲು ಅನುಮತಿ ನೀಡಿತ್ತು. ಆಗಸ್ಟ್ 22ರವರೆಗೂ ಇಲ್ಲಿದ್ದು ಆನಂತರ ನಿರ್ಗಮಿಸುತ್ತದೆ ಎಂದು ಹೇಳಿತ್ತು. ನಿಗದಿತ ದಿನದಂದೇ ಯುವಾನ್ ವಾಂಗ್-೫ ನೌಕೆ ಕಾಲ್ತೆಗೆದಿದೆ.
ಭಾರತ ಪ್ರತಿಕ್ರಿಯೆ
ಚೀನಾದ ಬೇಹುಗಾರಿಕೆ ನೌಕೆ ಶ್ರೀಲಂಕಾಗೆ ಬಂದ ಘಟನೆ ಬಗ್ಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದರು. ಭಾರತದ ಭದ್ರತೆಯ ಮೇಲೆ ಪರಿಣಾಮ ಬೀರುವ ಯಾವ ವಿಚಾರವಾದರೂ ನಮಗೆ ಮುಖ್ಯ ಎಂದು ಅವರು ನಿನ್ನೆ ಸೋಮವಾರ ಹೇಳಿದರು.

ಇನ್ನು ಕೆಲ ವರದಿಗಳ ಪ್ರಕಾರ, ಹಂಬನತೋಟದಲ್ಲಿ ಬೀಡುಬಿಟ್ಟ ಯುವಾನ್ ವಾಂಗ್-5 ನೌಕೆಯು ಭಾರತದ ಸೆಟಿಲೈಟ್ಗಳ ಮಾಹಿತಿ ಕದಿಯದ ರೀತಿಯಲ್ಲಿ ಭಾರತ ಕ್ರಮ ಕೈಗೊಂಡಿತ್ತು. ಭಾರತೀಯ ಉಪಗ್ರಹಗಳ ಯಾವ ಸೂಕ್ಷ್ಮ ಮಾಹಿತಿಯೂ ಚೀನಾಗೆ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.
ಹಂಬತೋಟ ಚೀನಾ ಸುಪರ್ದಿಯಲ್ಲಿ
ಭಾರತದ ದುರದೃಷ್ಟಕ್ಕೆ ಶ್ರೀಲಂಕಾದ ಹಂಬನತೋಟ ಈಗ ಚೀನಾ ಸುಪರ್ದಿಯಲ್ಲಿದೆ. ಬಂದರು ಅಭಿವೃದ್ಧಿಗೆ ತೆಗೆದುಕೊಂಡ ಸಾಲವನ್ನು ತೀರಿಸದ ಹಿನ್ನೆಲೆಯಲ್ಲಿ ಚೀನೀ ಕಂಪನಿಗೆ ಈ ಪೋರ್ಟ್ ಅನ್ನು 99 ವರ್ಷಗಳವರೆಗೆ ಲೀಸ್ಗೆ ಬಿಟ್ಟುಕೊಡಲಾಗಿದೆ. ಈ ಬಂದರನ್ನು ಚೀನೀ ಕಂಪನಿಯೇ ನಿರ್ವಹಣೆ ಮಾಡುತ್ತದೆ. ಇದರ ಸಂಪೂರ್ಣ ಹತೋಟಿ ಆ ಕಂಪನಿಗೆ ಇದೆ.
ಭಾರತದ ಮಗ್ಗುಲಮುಳ್ಳಾಗಿರುವ ಚೀನಾ ಭಾರತವನ್ನು ದಕ್ಷಿಣದಿಂದ ಸುತ್ತುವರಿಯಲು ಹಂಬನತೋಟ ಹೇಳಿಮಾಡಿಸಿದ ಜಾಗವಾಗಿದೆ. ಹೀಗಾಗಿ, ಭಾರತದ ಆತಂಕ ಬಹಳ ಸಹಜವಾದುದು.
ಇದೇ ವೇಳೆ, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಚೀನಾ ವಿರುದ್ಧ ಭಾರತ ಪರೋಕ್ಷವಾಗಿ ಟೀಕಿಸಿದೆ. ಬಲವಂತವಾಗಿ ಸ್ಥಾನ ಬದಲಾಯಿಸುವುದರಿಂದ ಭದ್ರತೆಗೆ ಅಪಾಯ ತಂದಂತಾಗುತ್ತದೆ. ಎಲ್ಲಾ ದೇಶಘಳು ಭಯೋತ್ಪಾದನೆಯಂತಹ ಸಾಮಾನ್ಯ ಅಪಾಯಗಳ ವಿರುದ್ಧ ಎದ್ದು ನಿಲ್ಲದಿದ್ದರೆ ಮತ್ತು ವೈರುದ್ಧ್ಯ ನಿಲುವನ್ನು ತಳೆಯದೇ ಕಾರ್ಯನಿರ್ವಹಿಸಿದರೆ ಭದ್ರತಾ ಪರಿಸ್ಥಿತಿ ಸುಧಾರಿಸಬಹುದು ಎಂದು ವಿಶ್ವಸಂಸ್ಥೆಗೆ ಭಾರತದ ರಾಯಭಾರಿಯಾಗಿರುವ ರುಚಿರಾ ಕಾಂಬೋಜ್ ಹೇಳಿದ್ದಾರೆ.
ಇನ್ನು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಕೂಡ ಚೀನಾ ವಿರುದ್ಧ ಟೀಕೆ ಮಾಡಿದ್ದಾರೆ. ಚೀನಾ ಗಡಿ ಒಪ್ಪಂದಗಳಿಗೆ ಬೆಲೆ ಕೊಡುತ್ತಿಲ್ಲ. ಗಾಲ್ವನ್ ಕಣಿವೆ ಘಟನೆಯು ಎರಡು ದೇಶಗಳ ಮಧ್ಯೆ ಸಂಘರ್ಷ ವಾತಾವರಣ ನಿರ್ಮಿಸಿದೆ ಎಂದವರು ಆತಂಕ ವ್ಯಕ್ತಪಡಿಸಿದ್ಧಾರೆ.
"ಚೀನಾ ಜೊತೆ ತೊಂಬತ್ತರ ದಶಕದಲ್ಲಿ ಒಪ್ಪಂದಗಳಾಗಿದ್ದವು. ಗಡಿಭಾಗದಲ್ಲಿ ದೊಡ್ಡ ಪ್ರಮಾಣದ ಸೇನೆಯನ್ನು ನಿಯೋಜಿಸುವಂತಿಲ್ಲ ಎಂದು ನಿರ್ಧಾರವಾಗಿತ್ತು. ಆದರೆ, ಈ ಒಪ್ಪಂದಕ್ಕೆ ಚೀನಾ ಬೆಲೆ ಕೊಡಲಿಲ್ಲ. ಗಾಲ್ವನ್ ಕಣಿವೆಯಲ್ಲಿ ಏನು ಆಯಿತು ಎಂದು ನಿಮಗೆ ಗೊತ್ತು. ಆ ಸಮಸ್ಯೆ ಇನ್ನೂ ಬಗೆಹರಿದಿಲ್ಲ" ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications