ವಾಜಪೇಯಿ ಪ್ರಧಾನಿಯಾಗಿದ್ದ ಸಹಿ ಹಾಕಿದ್ದ ಒಪ್ಪಂದವನ್ನು ಭಾರತಕ್ಕೆ ನೆನಪಿಸಿದ ಚೀನಾ
ಬೀಜಿಂಗ್, ಡಿಸೆಂಬರ್ 31: ಸ್ವತಂತ್ರ ಟಿಬೆಟ್ ಕುರಿತು ಭಾರತ ಪ್ರತಿಪಾದಿಸಿರುವ ಬೆನ್ನಲ್ಲೇ, 2003ರಲ್ಲಿ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಚೀನಾ ಪ್ರಧಾನಿ ವೆನ್ ಜಿಯಾಬವೊ ಸಹಿ ಹಾಕಿದ್ದ ಘೋಷಣೆಯನ್ನು ಚೀನಾ ನೆನಪಿಸಿದೆ. ಟಿಬೆಟ್ ಸ್ವಾಯತ್ತ ಪ್ರದೇಶವು ಚೀನಾದ ಒಂದು ಭಾಗ ಎಂದು ಭಾರತ ಈಗಾಗಲೇ ಪರಿಗಣಿಸಿದೆ ಎಂದು ಅದು ಹೇಳಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಸಹಿ ಹಾಕಿರುವ ಟಿಬೆಟಿಯನ್ ನೀತಿ ಮತ್ತು ಬೆಂಬಲ ಕಾಯ್ದೆ (ಟಿಪಿಎಸ್ಎ) 2020ಯನ್ನು ಖಂಡಿಸಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ರಾಯಭಾರ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ. ಟಿಪಿಎಸ್ಎ 2020ಯನ್ನು ಈ ತಿಂಗಳ ಆರಂಭದಲ್ಲಿ ಅನುಮೋದಿಸಿದ್ದ ಅಮೆರಿಕ ಸಂಸತ್ತು, ಚೀನಾದ ಯಾವುದೇ ಹಸ್ತಕ್ಷೇಪವಿಲ್ಲದೆ ಟಿಬೆಟ್ನ ಬೌದ್ಧರಿಗೆ ಮುಂದಿನ ದಲೈಲಾಮಾ ಅವರನ್ನು ಆಯ್ಕೆ ಮಾಡುವ ಹಕ್ಕು ಇದೆ ಎಂದು ಹೇಳಿತ್ತು.
ಚೀನಾ ಎಚ್ಚರಿಕೆ ಲೆಕ್ಕಿಸದ ಟ್ರಂಪ್: ದಲೈಲಾಮ ಆಯ್ಕೆಯ ಕಾನೂನಿಗೆ ಸಹಿ
'2003ರಲ್ಲಿ ಭಾರತ ಮತ್ತು ಚೀನಾಗಳು ಪೀಪಲ್ಸ್ ರಿಪಬ್ಲಿಕನ್ ಆಫ್ ಚೀನಾ ಮತ್ತು ರಿಪಬ್ಲಿಕ್ ಆಫ್ ಇಂಡಿಯಾದ ನಡುವಿನ ಸಂಬಂಧಗಳ ತತ್ವಗಳು ಮತ್ತು ವಿಸ್ತೃತ ಸಹಕಾರ ಘೋಷಣೆಗಳಿಗೆ ಸಹಿ ಹಾಕಿದ್ದವು. ಇದರಲ್ಲಿ, ಕ್ಸಿಜಾಂಗ್ ಸ್ವಾಯತ್ತ ಪ್ರದೇಶವನ್ನು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಪ್ರದೇಶದ ಭಾಗ ಎಂದು ಭಾರತ ಪರಿಗಣಿಸಲಿದೆ ಮತ್ತು ಭಾರತದಲ್ಲಿ ಚೀನಾ ವಿರುದ್ಧ ರಾಜಕೀಯ ಚಟುವಟಿಕೆಗಳನ್ನು ನಡೆಲು ಟಿಬೆಟ್ಟಿಯನ್ನರಿಗೆ ಭಾರತ ಅವಕಾಶ ನೀಡುವುದಿಲ್ಲ ಎಂದು ಹೇಳಲಾಗಿತ್ತು' ಎಂಬುದಾಗಿ ನವದೆಹಲಿಯಲ್ಲಿನ ಚೀನಾ ರಾಯಭಾರ ಕಚೇರಿ ವಕ್ತಾರ ಜಿ ರಾಂಗ್ ಹೇಳಿದ್ದಾರೆ. ಮುಂದೆ ಓದಿ.
ಚೀನಾಕ್ಕೆ ವಾಜಪೇಯಿ ಪ್ರವಾಸ
ವಾಜಪೇಯಿ ಅವರು ವೆನ್ ಆಹ್ವಾನದ ಮೇರೆಗೆ 2003ರ ಜೂನ್ 22 ರಿಂದ 27ರವರೆಗೆ ಬೀಜಿಂಗ್ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಜೂನ್ 23ರಂದು ಇಬ್ಬರೂ ನಾಯಕರು ಈ ಘೋಷಣೆಗೆ ಸಹಿ ಹಾಕಿದ್ದರು. ಈ ಬದ್ಧತೆಯನ್ನು ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಒಪ್ಪಂದ ದಾಖಲೆಗಳಲ್ಲಿ ಪುನರುಚ್ಚರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸ್ವತಂತ್ರ ಟಿಬೆಟ್ಗೆ ವಿರೋಧ
ಟಿಬೆಟ್ ಸ್ವಾಯತ್ತ ಪ್ರದೇಶವು ಚೀನಾ ಭೂಮಿಯ ಭಾಗ ಎಂದು ಭಾರತ ಅದರಲ್ಲಿ ಪರಿಗಣಿಸಿತ್ತು. ಅಲ್ಲದೆ, ಭಾರತದಲ್ಲಿ ಚೀನಾ ವಿರೋಧಿ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಟಿಬೆಟಿಯನ್ನರಿಗೆ ಅವಕಾಶ ನೀಡುವುದಿಲ್ಲ ಎಂದು ಮತ್ತೆ ಭರವಸೆ ನೀಡಿತ್ತು. ಈ ವಿಚಾರವಾಗಿ ಭಾರತದ ನಿಲುವನ್ನು ಚೀನಾ ಶ್ಲಾಘಿಸಿತ್ತು. ಚೀನಾವನ್ನು ವಿಭಜಿಸುವ ಮತ್ತು 'ಸ್ವತಂತ್ರ ಟಿಬೆಟ್' ರಚಿಸುವ ಪ್ರಯತ್ನ ಮತ್ತು ಕ್ರಮಗಳನ್ನು ಈ ಘೋಷಣೆಯಲ್ಲಿ ವಿರೋಧಿಸಲಾಗಿತ್ತು.
ಚೀನಾದಿಂದ ಟಿಬೆಟ್ನಲ್ಲಿ ಬ್ರಹ್ಮಪುತ್ರ ನದಿಗೆ ಬೃಹತ್ ಅಣೆಕಟ್ಟು ನಿರ್ಮಾಣ: ಭಾರತಕ್ಕೆ ಆತಂಕ
ಭಾರತ ನ್ಯಾಯೋಚಿತ ನಿಲುವು ಪಡೆಯಲಿ
'ಭಾರತವು ಚೀನಾದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆಯ ವಿಚಾರಕ್ಕೆ ಸಂಬಂಧಿಸಿದಂತೆ ವಸ್ತುಬದ್ಧ ಮತ್ತು ನ್ಯಾಯೋಚಿತ ನಿಲುವನ್ನು ತೆಗೆದುಕೊಳ್ಳಬೇಕು ಹಾಗೂ ಕ್ಸಿಜಾಂಗ್ (ಟಿಬೆಟ್) ಸಂಬಂಧಿಸಿದ ವಿಷಯಗಳ ಅತ್ಯಂತ ಸೂಕ್ಷ್ಮ ಸ್ವಭಾವವನ್ನು ಗ್ರಹಿಸಬೇಕು' ಎಂದು ಚೀನಾ ಬುಧವಾರ ಹೇಳಿದೆ.
ಭಾರತ-ಚೀನಾ ಸಂಬಂಧ ಹದಗೆಡಿಸುವುದು ಬೇಡ
'ಮಾಧ್ಯಮಗಳು ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ನಡೆದಿರುವ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗಳನ್ನು ಗಮನಿಸಬೇಕು ಹಾಗೂ ಚೀನಾದ ಆಂತರಿಕ ವ್ಯವಹಾರಗಳ ಮಧ್ಯೆ ಟಿಬೆಟ್ ಕಾರ್ಡ್ ಬಳಕೆಯ ಆಟವನ್ನು ಆಡುವುದರ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಹಾನಿ ಮಾಡುವ ಬದಲು ಚೀನಾ-ಭಾರತ ಸಂಬಂಧಗಳು ಮುಂದುವರಿಯಲು ಸಹಾಯ ಮಾಡಬೇಕು' ಎಂದು ತಿಳಿಸಿದೆ.