ಹಿಂದೂಗಳಿಗೆ ದಬ್ಬಾಳಿಕೆ ಮಾಡುವ ಬಯಕೆಯಿಲ್ಲ: ಭಾಗವತ್
ಷಿಕಾಗೋ, ಸೆಪ್ಟೆಂಬರ್ 8: 'ಹಿಂದೂಗಳಿಗೆ ಯಾರ ಮೇಲೆಯೂ ದಬ್ಬಾಳಿಕೆ ಮಾಡುವ ಬಯಕೆಯಿಲ್ಲ. ಸಮಾಜಕ್ಕೆ ಒಳಿತನ್ನುಂಟುಮಾಡುವ ಸಂಗತಿಗಳನ್ನು ಮಾತ್ರ ಸಮುದಾಯ ಮಾಡುತ್ತದೆ' ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.
ಅಮೆರಿಕದ ಷಿಕಾಗೋದಲ್ಲಿ ನಡೆದ ಎರಡನೆಯ ವಿಶ್ವ ಹಿಂದೂ ಸಮಾವೇಶದಲ್ಲಿ ಅವರು ಮಾತನಾಡಿದರು. ಸಮುದಾಯದ ಮುಖಂಡರು ಒಗ್ಗಟ್ಟಾಗುವಂತೆ ಮತ್ತು ಮನುಕುಲದ ಸುಧಾರಣೆಗಾಗಿ ದುಡಿಯುವಂತೆ ಮನವಿ ಮಾಡಿದರು.

ಸ್ವಾಮಿ ವಿವೇಕಾನಂದ ಅವರು 1893ರಲ್ಲಿ ಷಿಕಾಗೋದ ಸಂಸತ್ನಲ್ಲಿ ಮಾಡಿದ ಐತಿಹಾಸಿಕ ಭಾಷಣದ 125ನೇ ವಾರ್ಷಿಕೋತ್ಸವದ ಸಂದರ್ಭದ ಸ್ಮರಣಾರ್ಥ ವಿಶ್ವ ಹಿಂದೂ ಸಮಾವೇಶ ಆಯೋಜಿಸಲಾಗಿದೆ.
ನಾವು ಆಧುನಿಕತೆಯ ವಿರೋಧಿಯಲ್ಲ. ಆದರೆ, ಭವಿಷ್ಯದ ಪರವಾದಿ' ಎಂದ ಅವರು, ಹಿಂದೂ ಧರ್ಮ ಪುರಾತನ ಮತ್ತು ಆಧುನಿಕೋತ್ತರವಾದ್ದು ಎಂದು ವ್ಯಾಖ್ಯಾನಿಸಿದರು.
ಸಿಂಹ ಒಂಟಿಯಾಗಿ ಇದ್ದರೆ ಸೀಳುನಾಯಿಗಳು ಆಕ್ರಮಣ ಮಾಡಿ ಅದನ್ನು ಸಾಯಿಸಬಹುದು. ನಾವು ಅದನ್ನು ಮರೆಯಬಾರದು. ನಾವು ಜಗತ್ತನ್ನು ಉತ್ತಮಪಡಿಸಲು ಬಯಸಿದ್ದೇವೆ. ನಮಗೆ ದಬ್ಬಾಳಿಕೆ ನಡೆಸುವ ಯಾವ ಬಯಕೆಯೂ ಇಲ್ಲ. ನಮ್ಮ ಪ್ರಭಾವವು ದಾಳಿ ಅಥವಾ ವಸಾಹತುಕರಣದ ಫಲದಿಂದ ಹುಟ್ಟಿರುವುದಲ್ಲ ಎಂದರು.
ಹಿಂದೂ ಸಮಾಜವು ಒಂದು ಸಮಾಜವಾಗಿ ಕೆಲಸ ಮಾಡಿದಾಗ ಮಾತ್ರ ಸಮೃದ್ಧವಾಗುತ್ತದೆ. ಇಡೀ ಜಗತ್ತನ್ನು ಒಂದು ತಂಡವಾಗಿ ಮಾಡಬಲ್ಲ ಮುಖ್ಯ ಮೌಲ್ಯಗಳಲ್ಲಿ ಒಂದು ನಮ್ಮ ಅಹಂಕಾರಗಳನ್ನು ನಿಯಂತ್ರಿಸಿ ವಾಸ್ತವಗಳನ್ನು ಒಪ್ಪಿಕೊಳ್ಳುವುದನ್ನು ಕಲಿಯುವುದು. ಉದಾಹರಣೆಗೆ ಶ್ರೀಕೃಷ್ಣ ಮತ್ತು ಯುದಿಷ್ಠಿರ ನಡುವೆ ಪರಸ್ಪರ ವಿರೋಧಗಳಿರಲಿಲ್ಲ ಎಂದು ಹೇಳಿದರು.












Click it and Unblock the Notifications