‘ನಾನು ಯಾರ ಸಹಾಯವಿಲ್ಲದೆ ಈಗ ಉಸಿರಾಡಬಲ್ಲೆ’: ಅಲೆಕ್ಸಿ ನವಲ್ನಿ
''ನಾನು ಈಗ ಮೊದಲಿನಂತೆ ಉಸಿರಾಡಬಲ್ಲೆ. ಯಾರದ್ದೇ ಸಹಾಯವಿಲ್ಲದೆ, ಗಂಟಲಿನಲ್ಲಿ ವೆಂಟಿಲೇಟರ್ ಪೈಪ್ ಇಲ್ಲದೆ ನಾನು ಮತ್ತೆ ಉಸಿರಾಡುತ್ತಿದ್ದಾನೆ..." ಈ ಮಾತುಗಳನ್ನ ಕೇಳುತ್ತಿದ್ದರೆ ಸಾವು ಗೆದ್ದು ಬಂದವರ ಭಾವನೆಗಳು ಎದೆಗೆ ನಾಟುವಂತಿವೆ. ಅಷ್ಟಕ್ಕೂ ಇಂತಹ ಭಾವನಾತ್ಮಕ ಪದಗಳನ್ನು ನುಡಿದಿರುವುದು ಪುಟಿನ್ ಪಾಲಿಗೆ ಪರಮ ಶತ್ರು ಮತ್ತು ರಷ್ಯಾ ಭಷ್ಟಾಚಾರ ವಿರೋಧಿ ಹೋರಾಟಗಾರ ಅಲೆಕ್ಸಿ ನವಲ್ನಿ. ಆಗಸ್ಟ್ 20ರಂದು ಸೈಬೀರಿಯಾದ ಟಾಮ್ಸ್ಕ್ನಿಂದ ಮಾಸ್ಕೋಗೆ ವಿಮಾನದಲ್ಲಿ ಮರಳುವಾಗ ಅಲೆಕ್ಸಿ ನವಲ್ನಿ ಆರೋಗ್ಯ ಹದಗೆಟ್ಟಿತ್ತು.
ಒಮಾಸ್ಕ್ ಎಂಬಲ್ಲಿ ತುರ್ತಾಗಿ ವಿಮಾನ ಇಳಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ವಿಮಾನ ಹತ್ತುವ ಮೊದಲು ರೆಸ್ಟೋರೆಂಟ್ ಒಂದರಲ್ಲಿ ನವಲ್ನಿ ಟೀ ಸೇವಿಸಿದ್ದರು. ಅದರಲ್ಲಿ ಕಾರ್ಕೋಟಕ ವಿಷ ಬೆರೆಸಲಾಗಿತ್ತು ಎಂಬ ಆರೋಪವಿತ್ತು. ನಂತರ ರಷ್ಯಾದ ಸಾಮಾನ್ಯ ಆಸ್ಪತ್ರೆಯಲ್ಲಿ ನವಲ್ನಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು.
ಇಷ್ಟೂ ಹೈಡ್ರಾಮದ ಬಳಿಕ ನವಲ್ನಿಗೆ ಜರ್ಮನಿಯಲ್ಲಿ ಚಿಕಿತ್ಸೆ ಕೊಡಿಸಲು ದೊಡ್ಡ ಹೋರಾಟವೇ ನಡೆದಿತ್ತು. ಇದೀಗ ಜರ್ಮನಿ ರಾಜಧಾನಿ ಬರ್ಲಿನ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಲೆಕ್ಸಿ ನವಲ್ನಿ ಆರೋಗ್ಯ ಸ್ಥಿರವಾಗಿದೆ. ಮೊದಲು ಕೋಮಾ ಸ್ಟೇಜ್ನಿಂದ ಹೊರಬಂದಿದ್ದ ನವಲ್ನಿ ಈಗ ಆರಾಮವಾಗಿ ವೆಂಟಿಲೇಟರ್ ಸಹಾಯವಿಲ್ಲದೆ ಉಸಿರಾಡುತ್ತಿದ್ದಾರೆ. ತನ್ನ ಪತ್ನಿ ಹಾಗೂ ವೈದ್ಯ ಸಿಬ್ಬಂದಿ ಜೊತೆಗೆ ಇರುವ ಫೋಟೋ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ನವಲ್ನಿ ಅಪ್ಲೋಡ್ ಮಾಡಿದ್ದು, ಈ ಫೋಟೋ ಜಗತ್ತಿನಾದ್ಯಂತ ವೈರಲ್ ಆಗುತ್ತಿದೆ.

ಮತ್ತೆ ರಷ್ಯಾ ಕಡೆಗೆ ನವಲ್ನಿ ಪಯಣ
ನವಲ್ನಿಗೆ 'ನೋವಿಚೋಕ್' ಎಂಬ ರಷ್ಯಾ ಸಂಶೋಧಿತ ಕಾರ್ಕೋಟಕ ವಿಷವುಣಿಸಲಾಗಿತ್ತು. ನವಲ್ನಿಗೆ ವಿಷ ಹಾಕಿರುವುದನ್ನು ಜರ್ಮನಿ, ಫ್ರಾನ್ಸ್, ಸ್ವೀಡನ್ನ ಲ್ಯಾಬ್ಗಳಲ್ಲಿ ಪರೀಕ್ಷೆ ಮಾಡಿ ಖಾತ್ರಿಪಡಿಸಿಕೊಳ್ಳಲಾಗಿದೆ. ನವಲ್ನಿ ಜರ್ಮನಿ ಆಸ್ಪತ್ರೆಗೆ ಸೇರಿದ ತಕ್ಷಣ ನಂಜು ನಿವಾರಕ ಚಿಕಿತ್ಸೆ ಶುರುಮಾಡಲಾಗಿತ್ತು. 20ಕ್ಕೂ ಹೆಚ್ಚು ದಿನಗಳಿಂದ ಜರ್ಮನಿಯಲ್ಲಿ ನವಲ್ನಿಗೆ ಚಿಕಿತ್ಸೆ ನಡೆಯುತ್ತಿದ್ದು, ನಂಜುನಿವಾರಕ ಚಿಕಿತ್ಸೆ ನೀಡುತ್ತಿದ್ದ ಹಿನ್ನೆಲೆ 1 ವಾರಕ್ಕೂ ಹೆಚ್ಚು ಕಾಲ ಕೋಮಾದಲ್ಲಿ ಇಡಲಾಗಿತ್ತು. ಆದರೆ ಈಗ ನವಲ್ನಿ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ದೇಹದಲ್ಲಿ ಹರಡಿದ್ದ ವಿಷವನ್ನು ವೈದ್ಯರು ಭಾಗಶಃ ಹೊರತೆಗೆದಿದ್ದಾರೆ. ಹೀಗಾಗಿ ಅಲೆಕ್ಸಿ ನವಲ್ನಿ ಮತ್ತೆ ತನ್ನ ತಾಯ್ನಾಡು ರಷ್ಯಾಗೆ ಹಾರಲು ಸಜ್ಜಾಗಿದ್ದಾರೆ, ಭಷ್ಟರ ಎದೆ ನಡುಗಿಸಲು ಸಿದ್ಧವಾಗಿದ್ದಾರೆ.

ಘಟನೆ ನಡೆದಿದ್ದು ಹೇಗೆ..?
ಆಗಸ್ಟ್ 20ರಂದು ಸೈಬೀರಿಯಾದ ಟಾಮ್ಸ್ಕ್ನಿಂದ ಮಾಸ್ಕೋಗೆ ವಿಮಾನದಲ್ಲಿ ಮರಳುವಾಗ ನವಲ್ನಿ ಆರೋಗ್ಯ ಹದಗೆಟ್ಟಿತ್ತು. ಒಮಾಸ್ಕ್ ಎಂಬಲ್ಲಿ ತುರ್ತಾಗಿ ವಿಮಾನ ಇಳಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ವಿಮಾನ ಹತ್ತುವ ಮೊದಲು ರೆಸ್ಟೋರೆಂಟ್ ಒಂದರಲ್ಲಿ ನವಲ್ನಿ ಟೀ ಸೇವಿಸಿದ್ದರು. ಅದರಲ್ಲಿ ಕಾರ್ಕೋಟಕ ವಿಷ ಬೆರೆಸಲಾಗಿತ್ತು ಎಂಬ ಆರೋಪವಿತ್ತು. ನಂತರ ರಷ್ಯಾದ ಸಾಮಾನ್ಯ ಆಸ್ಪತ್ರೆಯಲ್ಲಿ ನವಲ್ನಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಬಳಿಕ ನವಲ್ನಿ ಕುಟುಂಬ ಮತ್ತು ಬೆಂಬಲಿಗರು ನವಲ್ನಿಗೆ ಜರ್ಮನಿಯಲ್ಲಿ ಚಿಕಿತ್ಸೆ ನೀಡಲು ಮುಂದಾಗಿದ್ದರು. ನವಲ್ನಿಯನ್ನ ಜರ್ಮನಿಗೆ ಶಿಫ್ಟ್ ಮಾಡುವ ವಿಚಾರದಲ್ಲಿ ದೊಡ್ಡ ನಾಟಕ ನಡೆದಿತ್ತು. ಬಳಿಕ ಅಂತಾರಾಷ್ಟ್ರೀಯ ಒತ್ತಡಗಳಿಗೆ ಮಣಿದಿದ್ದ ರಷ್ಯಾ ಸರ್ಕಾರ ನವಲ್ನಿಗೆ ಜರ್ಮನಿಯಲ್ಲಿ ಚಿಕಿತ್ಸೆ ಕೊಡಿಸಲು ಒಪ್ಪಿತ್ತು.

ನವಲ್ನಿ ಬದುಕುವುದೇ ಅನುಮಾನವಾಗಿತ್ತು
ಕೆಲ ದಿನಗಳ ಹಿಂದೆ ಅಲೆಕ್ಸಿ ನವಲ್ನಿ ಪರಿಸ್ಥಿತಿ ಗಮನಿಸಿದ್ದ ತಜ್ಞರು ಆತ ಬದುಕುಳಿಯುವುದೇ ಅನುಮಾನ ಎಂದಿದ್ದರು. ಅದರಲ್ಲೂ ಜರ್ಮನಿಗೆ ಶಿಫ್ಟ್ ಆಗಲು ನವಲ್ನಿಗೆ ತುರ್ತಾಗಿ ಅನುಮತಿ ನೀಡದಿರುವುದು ಆತನ ಜೀವಕ್ಕೆ ದೊಡ್ಡ ಕಂಟಕ ಸೃಷ್ಟಿಮಾಡಿತ್ತು. ಆದರೆ ಜರ್ಮನಿಯ ಸ್ವಯಂಸೇವಾ ಸಂಸ್ಥೆಯೊಂದು ನವಲ್ನಿಗೆ ಚಿಕಿತ್ಸೆ ಕೊಡಿಸಲು ಮುಂದಾಗಿತ್ತಲ್ಲದೆ, ಸ್ವತಃ ವಿಮಾನವನ್ನು ಕೂಡ ರಷ್ಯಾಗೆ ಕಳುಹಿಸಿತ್ತು. ನವಲ್ನಿಗೆ ಬರ್ಲಿನ್ನಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಕೋಮಾ ಸ್ಟೇಜ್ನಿಂದ ನವಲ್ನಿ ಹೊರಬಂದಿದ್ದಾರೆ.
Recommended Video

ಭ್ರಷ್ಟಾಚಾರದ ವಿರುದ್ಧ ಹೋರಾಟ
ಅಲೆಕ್ಸಿ ನವಲ್ನಿ ರಾಜಕಾರಣಿ ಮಾತ್ರವಲ್ಲ, ಹೋರಾಟಗಾರ ಕೂಡ. ನವಲ್ನಿ ಭ್ರಷ್ಟಾಚಾರದ ವಿರುದ್ಧ ರಷ್ಯಾದಲ್ಲಿ ನಿರಂತರವಾಗಿ ಹೋರಾಡುತ್ತಿದ್ದಾರೆ. ರಷ್ಯಾದ ಮಾಜಿ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ಭ್ರಷ್ಟಾಚಾರದ ಬಗ್ಗೆ ಸಿನಿಮಾ ಕೂಡ ನಿರ್ದೇಶಿಸಿದ್ದರು. ಹಾಗೇ ಪುಟಿನ್ ವಿರುದ್ಧ ಕೇಳಿಬರುತ್ತಿದ್ದ ಭ್ರಷ್ಟಾಚಾರ ಹಾಗೂ ಚುನಾವಣಾ ಅಕ್ರಮಗಳ ವಿರುದ್ಧ ನವಲ್ನಿ ಹಿಂದಿನಿಂದಲೂ ಹೋರಾಟ ನಡೆಸುತ್ತಿದ್ದಾರೆ. ಆದರೆ ಇದೇ ನವಲ್ನಿಯ ಜೀವಕ್ಕೆ ಮುಳುವಾಗಿದೆ ಎಂಬುದು ಆಪ್ತರ ಮಾತು.












Click it and Unblock the Notifications