ಸೌದಿಯಲ್ಲಿ ಸಿಲುಕಿದ್ದ ಕನ್ನಡಿಗರು ವಾಪಸ್, ಎಲ್ಲರಿಗೂ ಉದ್ಯೋಗದ ಭರವಸೆ!
ಬೆಂಗಳೂರು, ಸೆ. 25: ಕೊರೊನಾ ವೈರಸ್ ತಂದಿರುವ ಸಂಕಷ್ಟ ಒಂದೆರಡಲ್ಲ. ಇಡೀ ಜಗತ್ತು ಕೋವಿಡ್ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ತುತ್ತು ಅನ್ನಕ್ಕಾಗಿ ದೇಶ ಬಿಟದಟು ಹೋಗಿ ದುಡಿಯುತ್ತಿರುವವರ ಸಂಖ್ಯೆ ಸಣ್ಣದಲ್ಲ. ಆದರೆ ಕೊರೊನಾ ವೈರಸ್ನಿಂದಾಗಿ ಎಲ್ಲಡೆ ಉದ್ಯೋಗ ಕಡಿತ ಈಗಿನ ಸಮಸ್ಯೆ. ಹೀಗೆ ಉದ್ಯೋಗಕ್ಕಾಗಿ ಸೌದಿಗೆ ತೆರಳಿ ಸಂಕಷ್ಟಕ್ಕೆ ಸಿಲುಕಿದ್ದ ಕನ್ನಡಿಗರನ್ನು ರಾಜ್ಯ ಬಿಜೆಪಿ ಸರ್ಕಾರ ಸುರಕ್ಷಿತವಾಗಿ ವಾಪಾಸ್ ಕರೆಯಿಸಿಕೊಂಡಿದೆ.
ಉದ್ಯೋಗ ವೀಸಾ ಅವಧಿ ಮುಗಿದು ಸೌದಿ ಅರೇಬಿಯಾದಲ್ಲಿ ಸಿಕ್ಕಿಕೊಂಡು ಬಂಧನಕ್ಕೆ ಒಳಗಾಗಿದ್ದ 32 ಕನ್ನಡಿಗರ ನೆರವಿಗೆ ರಾಜ್ಯ ಸರಕಾರ ಧಾವಿಸಿದ್ದು, ಅವರೆಲ್ಲರೂ ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್ ಬಂದಿದ್ದಾರೆ.
ಡಿಸಿಎಂ ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರ ಸೂಚನೆಯಂತೆ ಸೌದಿ ಕನ್ನಡಿಗರ ನೆರವಿಗೆ ಧಾವಿಸಿದ್ದ ಕೌಶಲ್ಯಾಭಿವೃದ್ಧಿ ನಿಗಮದ ಅಧಿಕಾರಿಗಳು, ಕಷ್ಟಕ್ಕೆ ಸಿಲುಕಿರುವ ಎಲ್ಲ ಕನ್ನಡಿಗರನ್ನು ತಾಯ್ನಾಡಿಗೆ ವಾಪಸ್ ಕರೆಸಿಕೊಂಡಿದ್ದಾರೆ. ನಿನ್ನೆ ಸಂಜೆ (ಸೆ.24) ಸಂಜೆ ಎಲ್ಲರೂ ಬೆಂಗಳೂರು ತಲುಪಿದ್ದಾರೆ.

ಸೌದಿಯಲ್ಲಿ ಕನ್ನಡಿಗರ ಸಂಕಷ್ಟ!
ಸೌದಿಯಲ್ಲಿ ಕನ್ನಡಿಗರು ಸಿಲುಕಿದ್ದಾರೆಂಬ ಮಾಹಿತಿ ಬಂದಿತ್ತು. ಮಾಹಿತಿ ಬಂದಕೂಡಲೇ ಕೂಡಲೇ ಡಿಸಿಎಂ ಅಶ್ವಥ್ ನಾರಾಯಣ್ ಅವರು, ತಮ್ಮ ಅಧೀನದಲ್ಲಿರುವ ಕೌಶಲ್ಯಾಭಿವೃದ್ಧಿ ನಿಗಮದ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು. ಕೂಡಲೇ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ದೆಹಲಿಯ ವಿದೇಶಾಂಗ ಇಲಾಖೆ, ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳ ಜತೆ ಸುದೀರ್ಘ ಮಾತುಕತೆ ನಡೆಸಿದರಲ್ಲದೆ, ಅಷ್ಟೂ ಉದ್ಯೋಗಿಗಳನ್ನು ಚೆನ್ನೈಗೆ ಕರೆಸಿಕೊಂಡು, ಅಲ್ಲಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ.

ತಾಯ್ನಾಡಿಗೆ ಬಂದುಬಿಡಿ ಡಿಸಿಎಂ ಮನವಿ
ಇವರೆಲ್ಲರೂ ಬೆಂಗಳೂರು ವಿವಿಯಲ್ಲಿರುವ ಹಾಸ್ಟೆಲ್ ನಲ್ಲಿ ಇಟ್ಟಿದ್ದು, ಅಲ್ಲಿ ಎಲ್ಲರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಸೌದಿಯಲ್ಲಿಯೂ ಉದ್ಯೋಗ ನಷ್ಟವಾಗಿದ್ದು, ಇನ್ನು ಕೆಲ ದಿನಗಳ ಕಾಲ ಅಲ್ಲಿ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಅಲ್ಲಿ ವಿನಾಕಾರಣ ಕಷ್ಟಕ್ಕೆ ಸಿಲುಕಿಕೊಳ್ಳುವ ಬದಲು ತಾಯ್ನಾಡಿಗೆ ವಾಪಸ್ ಬರುವುದು ಉತ್ತಮ ಎಂದು ಇದೇ ಸಂದರ್ಭದಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರು ಹೇಳಿದ್ದಾರೆ.

ಬಂದಿರುವ ಎಲ್ಲರಿಗೂ ಉದ್ಯೋಗ
ಸೌದಿಯಿಂದ ವಾಪಸ್ ಬಂದಿರುವ ಎಲ್ಲ ಕನ್ನಡಿಗರಿಗೂ ಉದ್ಯೋಗ ಕಲ್ಪಿಸಲಾಗುವುದು. ಅವರವರ ಕೌಶಲ್ಯತೆಯನ್ನು ಗುರುತಿಸಿ ಉದ್ಯೋಗಾವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಅಶ್ವಥ್ ನಾರಾಯಣ ಹೇಳಿದ್ದಾರೆ. ಕೌಶಲ್ಯಾಭಿವೃದ್ಧಿ ನಿಗಮದ ಅಧಿಕಾರಿಗಳ ಪ್ರಯತ್ನದಿಂದ ಸಂತ್ರಸ್ತರನ್ನು ಕರೆಯಿಸಿಕೊಳ್ಳಲಾಗಿದೆ. ಜೊತೆಗೆ ಉದ್ಯೋಗ ಕಳೆದುಕೊಂಡು ಬರುವವರಿಗೆ ರಾಜ್ಯದಲ್ಲಿ ಕೌಶಲ್ಯಾಭಿವೃದ್ಧಿ ನಿಗಮದಿಂದ ಉದ್ಯೋಗದ ಭರವಸೆಯನ್ನು ಕೊಡಲಾಗಿದೆ.
Recommended Video

ಹೊರ ದೇಶಗಳಲ್ಲಿರುವ ಕನ್ನಡಿಗರು
ಕೊರೊನಾ ವೈರಸ್ ಸಂಕಷ್ಟದಿಂದ ಹೊರದೇಶಗಳಲ್ಲಿದ್ದ ಸಾವಿರಾರು ಕನ್ನಡಿಗರು ಉದ್ಯೋಗ ಕಳೆದುಕೊಂಡಿದ್ದಾರೆ. ಒಂದೆಡೆ ಕೊರೊನಾ ವೈರಸ್ ಸಂಕಷ್ಟವಾದರೆ ಮತ್ತೊಂದೆಡೆ ಉದ್ಯೋಗ ಕಡಿತ ಸಮಸ್ಯೆ ಎಲ್ಲ ದೇಶಗಳಲ್ಲಿಯೂ ಕಾಡುತ್ತಿದೆ. ಹೀಗಾಗಿ ಬೇರೆ ದೇಶಗಳ ಜನರನ್ನು ಉದ್ಯೋಗದಿಂದ ತೆಗದುಹಾಕಲಾಗುತ್ತಿದೆ. ಹೀಗಾಗಿ ಹೊರ ದೇಶಗಳಿಂದ ಬರುವವರಿಗೆ ಉದ್ಯೋಗ ಸೃಷ್ಟಿಸಲು ಸರ್ಕಾರ ಪ್ರಯತ್ನಿಸುತ್ತಿದೆ.












Click it and Unblock the Notifications