Tahawwur Rana: 26/11 ಮುಂಬೈ ದಾಳಿ ಆರೋಪಿ ತಹವ್ವೂರ್ ರಾಣಾ ಭಾರತಕ್ಕೆ ಶೀಘ್ರದಲ್ಲೇ ಹಸ್ತಾಂತರ
26/11 ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರ ತಹವ್ವೂರ್ ಹುಸೇನ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಮೋದನೆ ನೀಡಿದ್ದಾರೆ. ಶ್ವೇತಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ನಂತರ ಟ್ರಂಪ್ ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
2008ರ ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಆರೋಪಿಯನ್ನು ನಾವು ಭಾರತಕ್ಕೆ ಕಳುಹಿಸುತ್ತಿದ್ದೇವೆ. ಅವರು ಭಾರತದಲ್ಲಿ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ಬಳಿಕ ಈ ನಿರ್ಧಾರಕ್ಕೆ ಟ್ರಂಪ್ ಅವರಿಗೆ ಪ್ರಧಾನಿ ಮೋದಿ ಅವರು ಧನ್ಯವಾದ ಅರ್ಪಿಸಿ, ನಾವು ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ತಹವ್ವೂರ್ ರಾಣಾ ಯಾರು?
ತಹಾವೂರ್ ರಾಣಾ ಪಾಕಿಸ್ತಾನಿ ಮೂಲದ ಕೆನಡಾದ ಪ್ರಜೆ. ಈತನನ್ನು ಅಮೆರಿಕದ ಜೈಲಿನಲ್ಲಿ ಇರಿಸಲಾಗಿದೆ. ಈತ 26/11 ದಾಳಿಯ ಮಾಸ್ಟರ್ಮೈಂಡ್ ಡೇವಿಡ್ ಕೋಲ್ಮನ್ ಹೆಡ್ಲಿಯ ಆಪ್ತನಾಗಿದ್ದಾನೆ. 166 ಅಮಾಯಕರ ಸಾವಿಗೆ ಕಾರಣವಾದ ಮುಂಬೈ ದಾಳಿಯನ್ನು ಹೆಡ್ಲಿ ಯೋಜಿಸಿದ್ದನು. ತಹವ್ವೂರ್ ರಾಣಾ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಮತ್ತು ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್ಐ ಜೊತೆ ಸಂಪರ್ಕ ಹೊಂದಿದ್ದನು.
ಜೊತೆಗೆ ತಹವ್ವೂರ್ ರಾಣಾ ಮುಂಬೈ ದಾಳಿಯ ಪಿತೂರಿಯಲ್ಲಿ ಭಾಗಿಯಾಗಿ, ಭಯೋತ್ಪಾದಕರಿಗೆ ಸಹಾಯ ಮಾಡಿದ ಆರೋಪದಲ್ಲಿ ತಪ್ಪಿತಸ್ಥನೆಂದು ಸಾಬೀತಾಗಿದೆ. ಹೀಗಾಗಿ ಭಾರತೀಯ ಕಾನೂನಿನಡಿಯಲ್ಲಿ ರಾಣಾಗೆ ಶಿಕ್ಷೆಯಾಗುವಂತೆ ಮಾಡಲು ಭಾರತ ಹಲವಾರು ವರ್ಷಗಳಿಂದ ರಾಣಾನನ್ನು ಹಸ್ತಾಂತರಿಸುವಂತೆ ಅಮೆರಿಕಾವನ್ನು ಒತ್ತಾಯಿಸುತ್ತಿದೆ. ಇದೀಗ ಅಮೆರಿಕಾ ಕೂಡ ತಹಾವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಒಪ್ಪಿಗೆ ಸೂಚಿಸಿದೆ.

ತಹವ್ವೂರ್ ರಾಣಾ ಹಸ್ತಾಂತರ:
ಜನವರಿ 2025: ಅಮೆರಿಕದ ಸುಪ್ರೀಂ ಕೋರ್ಟ್ ಆರೋಪಿ ರಾಣಾ ಮೇಲ್ಮನವಿಯನ್ನು ತಿರಸ್ಕರಿಸಿ, ಆತನನ್ನು ಭಾರತಕ್ಕೆ ಗಡೀಪಾರು ಮಾಡುವುದಾಗಿ ಹೇಳಿದೆ.
ಫೆಬ್ರವರಿ 2025: ಭಾರತದ ಗಡೀಪಾರು ಕೋರಿಕೆಯನ್ನು ಕಾರ್ಯಗತಗೊಳಿಸುವುದಾಗಿ ಅಮೆರಿಕ ವಿದೇಶಾಂಗ ಇಲಾಖೆ ಘೋಷಿಸಿತು.ಇದೀಗ ಶ್ವೇತಭವನದ ಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ನಡುವಿನ ಸಭೆಯ ನಂತರ ಹಸ್ತಾಂತರವನ್ನು ಔಪಚಾರಿಕವಾಗಿ ಘೋಷಿಸಲಾಯಿತು. ಮುಂಬೈ ಭಯೋತ್ಪಾದಕ ದಾಳಿಯ ಅಪರಾಧಿಗಳನ್ನು ಶಿಕ್ಷಿಸುವಲ್ಲಿ ಭಾರತಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಅಮೆರಿಕ ಹೇಳಿದೆ.
ಭಾರತದಲ್ಲಿ ತಹವ್ವೂರ್ ರಾಣಾ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುವುದು?
ಭಾರತೀಯ ಸಂಸ್ಥೆಗಳು (ಸಿಬಿಐ, ಎನ್ಐಎ) ರಾಣಾನನ್ನು ಕಟ್ಟುನಿಟ್ಟಾಗಿ ವಿಚಾರಣೆ ನಡೆಸುತ್ತವೆ. ರಾಣಾ ವಿರುದ್ಧ ಭಯೋತ್ಪಾದನೆ, ದೇಶದ್ರೋಹ ಮತ್ತು ಕೊಲೆಯಂತಹ ಗಂಭೀರ ವಿಭಾಗಗಳ ಅಡಿಯಲ್ಲಿ ವಿಚಾರಣೆ ನಡೆಯಲಿದೆ. ಮುಂಬೈ ಪೊಲೀಸರ ಬಳಿ ರಾಣಾ ಮತ್ತು ಹೆಡ್ಲಿ ನಡುವಿನ ಇಮೇಲ್ ಸಾಕ್ಷ್ಯಗಳಿದ್ದು, ಅದನ್ನು ನ್ಯಾಯಾಲಯದಲ್ಲಿ ಬಳಸಲಾಗುವುದು. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜೊತೆ ರಾಣಾ ಅವರ ಸಂಪರ್ಕದ ಬಗ್ಗೆ ತನಿಖೆ ನಡೆಸಲಾಗುವುದು.
26/11 ದಾಳಿಯಲ್ಲಿ ರಾಣಾ ಪಾತ್ರವೇನು?
ರಾಣಾ ಹೆಡ್ಲಿಯ ಆಪ್ತ ಸಹಾಯಕ. ಹೆಡ್ಲಿಯ ಜೊತೆಗೆ ರಾಣಾ ದಾಳಿಯನ್ನು ಯೋಜಿಸುವಲ್ಲಿ ಭಾಗಿಯಾಗಿದ್ದನು. ಅಲ್ಲದೆ ಭಯೋತ್ಪಾದಕರು ಭಾರತವನ್ನು ಪ್ರವೇಶಿಸಲು ಮತ್ತು ಉಳಿಯಲು ಸಹಾಯ ಮಾಡಿದ್ದನು. ಐಎಸ್ಐ ಮತ್ತು ಲಷ್ಕರ್-ಎ-ತೊಯ್ಬಾ ಜೊತೆ ಸಂಪರ್ಕದಲ್ಲಿದ್ದ ಈತ ಭಾರತದಲ್ಲಿ ಭಯೋತ್ಪಾದನೆಯನ್ನು ಹರಡಲು ಸಂಚು ರೂಪಿಸುತ್ತಿದ್ದನು.
ಮುಂಬೈ ಪೊಲೀಸರ ಪ್ರಕಾರ, ತಹವ್ವೂರ್ ರಾಣಾ ನವೆಂಬರ್ 11, 2008 ರಂದು ಭಾರತಕ್ಕೆ ಬಂದಿದ್ದ. ಮುಂಬೈನ ಪೊವಾಯಿಯಲ್ಲಿರುವ ಹೋಟೆಲ್ನಲ್ಲಿ ತಂಗಿದ್ದಾಗ ಹಲವಾರು ಸಭೆಗಳನ್ನು ನಡೆಸಿದ್ದಾನೆ ಎನ್ನುವುದಕ್ಕೆ ಸಾಕ್ಷಿಗಳು ಲಭ್ಯವಾಗಿವೆ.
ಭಾರತ-ಯುಎಸ್ ಶ್ವೇತಭವನದ ಪತ್ರಿಕಾಗೋಷ್ಠಿಯಲ್ಲಿ, ಟ್ರಂಪ್ ಅವರು ಭಾರತ ಮತ್ತು ಯುಎಸ್ ಮೂಲಭೂತವಾದಿ ಇಸ್ಲಾಮಿಕ್ ಭಯೋತ್ಪಾದನೆಯ ವಿರುದ್ಧ ಹೋರಾಡಲು ಹಿಂದೆಂದಿಗಿಂತಲೂ ಹೆಚ್ಚು ಬಲವಾಗಿ ಒಟ್ಟಾಗಿ ಕೆಲಸ ಮಾಡುತ್ತವೆ ಎಂದು ಹೇಳಿದರು. ಈ ಸಭೆಯಲ್ಲಿ, ಭಾರತ ಮತ್ತು ಅಮೆರಿಕ ವ್ಯಾಪಾರ, ರಕ್ಷಣೆ ಮತ್ತು ಭಯೋತ್ಪಾದನಾ ನಿಗ್ರಹದಲ್ಲಿ ಸಹಕಾರವನ್ನು ಬಲಪಡಿಸಲು ಪರಸ್ಪರ ಒಪ್ಪಿಗೆ ಸೂಚಿಸಲಾಗಿದೆ.
ಈ ನಿರ್ಧಾರ ಭಾರತಕ್ಕೆ ಏಕೆ ಮುಖ್ಯ?
26/11 ದಾಳಿಯ ಮಾಸ್ಟರ್ ಮೈಂಡ್ ವಿರುದ್ಧ ನ್ಯಾಯ ಸಿಗುತ್ತದೆ. ಭಯೋತ್ಪಾದನೆ ವಿರುದ್ಧ ಭಾರತದ ಕ್ರಮಕ್ಕೆ ಅಂತರರಾಷ್ಟ್ರೀಯ ಬೆಂಬಲ ಸಿಕ್ಕಂತಾಗುತ್ತದೆ. ಅಮೆರಿಕ ಮತ್ತು ಭಾರತದ ನಡುವಿನ ಭದ್ರತಾ ಪಾಲುದಾರಿಕೆ ಬಲಗೊಳ್ಳುವುದು. ಪಾಕಿಸ್ತಾನದ ಭಯೋತ್ಪಾದಕರಿಗೆ ಭಯ ಇರುತ್ತದೆ.












Click it and Unblock the Notifications