ದ್ವೀಪ ರಾಷ್ಟ್ರದಲ್ಲಿ ಪ್ರಳಯ ಫಿಕ್ಸ್..! ಬರೋಬ್ಬರಿ 17 ಸಾವಿರ ಬಾರಿ ಭೂಕಂಪನ..!
ಕೆಲ ಭಾಗಗಳಲ್ಲಿ ಭೂಕಂಪನ ಮಾಮೂಲಿ ಗೆಸ್ಟ್ ರೀತಿ ಬಂದುಹೋಗುತ್ತೆ. ಇನ್ನೂ ಕೆಲವು ಭಾಗಗಳಿಗೆ ಭೂಮಿ ಕಂಪನಿಸಿದ ಅನುಭವವೇ ಇರುವುದಿಲ್ಲ. ಆದರೆ ಇಲ್ಲೊಂದು ದೇಶದಲ್ಲಿ ಕಳೆದ 1 ವಾರದಲ್ಲಿ 17 ಸಾವಿರ ಬಾರಿ ಭೂಮಿ ಕಂಪಿಸಿದೆ ಎಂದರೆ ನಿಮಗೆ ಆಶ್ಚರ್ಯ ಎನಿಸಬಹುದು. ಅಂತಹದ್ದೂ ಒಂದು ದೇಶ ಇದೆಯಾ ಅಂತಾ ತುಂಬಾ ಚಿಂತಿಸಬೇಡಿ. ಇಂತಹ ವಿಚಿತ್ರ ಘಟನೆಗೆ ಸಾಕ್ಷಿಯಾಗಿದ್ದು ಉತ್ತರ ಅಟ್ಲಾಂಟಿಕ್ನ ದೇಶ ಐಸ್ಲ್ಯಾಂಡ್.
ಉತ್ತರ ಅಟ್ಲಾಂಟಿಕ್ನ ಮಹಾ ಸಾಗರದ ಮಧ್ಯೆ ಸಣ್ಣ ರೊಟ್ಟಿಯ ತುಣುಕಿನಂತೆ ಹಬ್ಬಿರುವ ದೇಶ ಐಸ್ಲ್ಯಾಂಡ್. ಯುರೋಪ್ ಖಂಡಕ್ಕೆ ಸೇರಿರುವ ಐಸ್ಲ್ಯಾಂಡ್ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಆದರೆ ಇಲ್ಲಿನ ಜನರ ಪಾಲಿಗೆ ದೊಡ್ಡ ಶತ್ರುಗಳು ಎಂದರೆ ಒಂದು ಚಳಿ, ಮತ್ತೊಂದು ಮೇಲಿಂದ ಮೇಲೆ ಸಂಭವಿಸುವ ಭೂಕಂಪನಗಳು.
ಈ ರೀತಿ ಭೂಕಂಪನ ಸಂಭವಿಸುವುದು ಇಲ್ಲಿನ ಜನರಿಗೆ ಮಾಮೂಲಾಗಿ ಹೋಗಿದೆ. ಹೀಗಾಗಿ ಜನರು ಭೂಕಂಪನ ಎಂದರೆ ಭಯಪಡುವುದನ್ನ ಬಿಟ್ಟು ಸಾಕಷ್ಟು ವರ್ಷಗಳೇ ಕಳೆದಿವೆ. ಆದರೆ ಈ ಬಾರಿ 1 ವಾರದ ಅವಧಿಯಲ್ಲಿ ಸುಮಾರು 17 ಸಾವಿರಕ್ಕೂ ಹೆಚ್ಚು ಬಾರಿ ಭೂಮಿ ಕಂಪಿಸಿರುವುದು ಆತಂಕ ಹೆಚ್ಚಿಸಿದೆ.
ಭೂಕಂಪನದ ‘ಹಾಟ್ ಸ್ಪಾಟ್’ ಐಸ್ಲ್ಯಾಂಡ್..!
ಐಸ್ಲ್ಯಾಂಡ್ನಲ್ಲಿ ಪದೇ ಪದೇ ಭೂಕಂಪನ ಸಂಭವಿಸಲು ಬಲವಾದ ಕಾರಣವಿದೆ. ಇಲ್ಲಿನ ಜ್ವಾಲಾಮುಖಿಗಳ ಅಬ್ಬರ ಐಸ್ಲ್ಯಾಂಡ್ನಲ್ಲಿ ಪದೇ ಪದೇ ಭೂಮಿ ಕಂಪಿಸುವಂತೆ ಮಾಡುತ್ತಿವೆ. ಫೆಬ್ರವರಿಯಲ್ಲೂ ಜ್ವಾಲಾಮುಖಿ ಬೆಂಕಿ ಮತ್ತು ಬೂದಿ ಉಗುಳಿದ ಪರಿಣಾಮ ಭೂಮಿ ಕಂಪಿಸಿದೆ ಎನ್ನಲಾಗಿದೆ. ಆದರೆ ಮಾಮೂಲಿ ನಡೆಯುವ ವಿದ್ಯಮಾನಕ್ಕಿಂತ ಈ ಬಾರಿ ಭೂಕಂಪನ ಭಯಾನಕವಾಗಿದೆ. ಹೀಗಾಗಿಯೇ ಅಲರ್ಟ್ ಆಗಿರುವಂತೆ ಸ್ಥಳೀಯ ಅಧಿಕಾರಿಗಳಿಗೆ ಮುನ್ಸೂಚನೆ ನೀಡಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ವಾಸವಿರುವ ಜನರನ್ನು ಸ್ಥಳಾಂತರ ಮಾಡಿ ಬೇರೆಡೆ ತಾತ್ಕಾಲಿಕವಾಗಿ ಸೂರು ಒದಗಿಸಲಾಗಿದೆ.
ಭೂಕಂಪನ ಅವಿಭಾಜ್ಯ ಅಂಗ..!
ಐಸ್ಲ್ಯಾಂಡ್ ವಿವಿ ಪ್ರಾಧ್ಯಾಪಕ ಬೆನೆಡಿಕ್ಟ್ ಹೋಲ್ಡರ್ಸನ್ ಇಲ್ಲಿನ ಪ್ರಾಕೃತಿಕ ವಿಕೋಪಗಳ ಬಗ್ಗೆ ತಮ್ಮದೇ ರೀತಿ ವಿಶ್ಲೇಷಣೆ ನೀಡುತ್ತಾರೆ. ಬೆನೆಡಿಕ್ಟ್ ಅವರ ಪ್ರಕಾರ, ಐಸ್ಲ್ಯಾಂಡ್ನಲ್ಲಿ ಭೂಕಂಪನ ಜನರ ಜೀವನದ ಅವಿಭಾಜ್ಯ ಅಂಗವಾಗಿದೆಯಂತೆ. ಇದಕ್ಕಾಗಿ ಬೇಕಾದ ಎಲ್ಲಾ ಸಿದ್ಧತೆಗಳನ್ನ ಸ್ಥಳೀಯರು ಮಾಡಿಕೊಳ್ಳುತ್ತಾರೆ. ಹೀಗಾಗಿಯೇ ಐಸ್ಲ್ಯಾಂಡ್ ನಿವಾಸಿಗಳಿಗೆ ಭೂಕಂಪನ ಜೀವನದ ಅವಿಭಾಜ್ಯ ಅಂಗವಾಗಿದೆ ಎನ್ನುತ್ತಾರೆ. ಪದೇ ಪದೇ ಭೂಮಿ ಕಂಪಿಸುವ ಹಿನ್ನೆಲೆಯಲ್ಲಿ ಐಸ್ಲ್ಯಾಂಡ್ ಜನರು ಕಟ್ಟಡ ನಿರ್ಮಾಣ ಶೈಲಿಯನ್ನೇ ಬದಲಿಸಿದ್ದಾರೆ. ಭೂಕಂಪನ ಸಂಭವಿಸಿದರೂ ಹೆಚ್ಚು ಹಾನಿ ಆಗದೇ ಇರಲಿ ಎಂಬ ಕಾರಣಕ್ಕೆ ಸಣ್ಣ ಸಣ್ಣ ಕಟ್ಟಡಗಳನ್ನು ನಿರ್ಮಿಸುತ್ತಾರೆ.
ದ್ವೀಪರಾಷ್ಟ್ರಗಳ ಜನರ ಪರದಾಟ..!
ದ್ವೀಪ ರಾಷ್ಟ್ರಗಳು ರಜಾ ದಿನಗಳನ್ನು ಕಳೆಯಲು ಮಾತ್ರ ಸುಂದರ ತಾಣಗಳು. ಆದರೆ ಅಲ್ಲಿಯೇ ಜೀವಿಸಲು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಪ್ರಾಕೃತಿಕವಾಗಿ ಸೌಂದರ್ಯ ಹೊಂದಿದ್ದರೂ, ಪ್ರಾಕೃತಿಕ ವಿಕೋಪಗಳಿಗೂ ದ್ವೀಪ ರಾಷ್ಟ್ರಗಳು ತುತ್ತಾಗುತ್ತವೆ. ಉದಾಹರಣೆಗೆ ಪದೇ ಪದೇ ಜ್ವಾಲಾಮುಖಿಗಳ ಸ್ಫೋಟ. ಭೂಕಂಪನ ಸೇರಿದಂತೆ ಸುನಾಮಿಯ ಭಯ. ಹೀಗೆ ಸುತ್ತಲೂ ನೀರಿದ್ದು, ನಡುವೆ ರೊಟ್ಟಿಯ ತುಂಡಿನಷ್ಟು ಭೂಮಿ ಹೊಂದಿರುವ ದ್ವೀಪ ರಾಷ್ಟ್ರಗಳು ನಿತ್ಯ ಜೀವ ಭಯದಲ್ಲೇ ಬದುಕಬೇಕಾದ ಪರಿಸ್ಥಿತಿ ಇದೆ. ಆದರೆ ಅಲ್ಲಿನ ಜನರಿಗೆ ಇದು ಅನಿವಾರ್ಯ ಕೂಡ. ಬಾಯಲ್ಲಿ ಬಿದ್ದ ಬಿಸಿ ತುಪ್ಪದಂತೆ ಜೀವನ ಸವೆಸುತ್ತಾರೆ.
ತಾಪಮಾನ ಬದಲಾವಣೆ ಪರಿಣಾಮ
ಜಾಗತಿಕ ತಾಪಮಾನ ಏರಿಕೆ ಹಾಗೂ ಇದರಿಂದ ಉಂಟಾಗುತ್ತಿರುವ ಪ್ರಾಕೃತಿಕ ವಿಕೋಪಗಳಿಗೆ ಮೊದಲು ಬಲಿ ಆಗುವುದೇ ದ್ವೀಪ ರಾಷ್ಟ್ರಗಳು. ಏಕೆಂದರೆ ಧ್ರುವ ಪ್ರದೇಶದ ಹಿಮ ಕರಗಿ, ಸಮುದ್ರದ ನೀರಿನ ಮಟ್ಟ ಹೆಚ್ಚಾದ ಸಂದರ್ಭದಲ್ಲಿ ಕರಾವಳಿ ಭಾಗದ ಅದರಲ್ಲೂ ಸಣ್ಣಪುಟ್ಟ ದ್ವೀಪ ರಾಷ್ಟ್ರಗಳ ಜನ ನಲುಗಿ ಹೋಗುತ್ತಾರೆ. ಈ ಬಗ್ಗೆ ವಿಜ್ಞಾನಿಗಳು ಎಚ್ಚರಿಸುತ್ತಾ ಬಂದರೂ ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಬರುತ್ತಿಲ್ಲ. ಸಮುದ್ರದಲ್ಲಿನ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದು ಸಹಜವಾಗಿ ಭೂಮಿಯನ್ನ ನುಂಗಿ ಹಾಕುತ್ತಿದೆ. ಈಗಾಗಲೇ ಅದೆಷ್ಟೋ ಸಣ್ಣಪುಟ್ಟ ದ್ವೀಪಗಳು ಹೀಗೆ ಸಮುದ್ರದ ಆರ್ಭಟಕ್ಕೆ ಮುಳುಗಿ ಹೋಗಿರುವ ಉದಾಹರಣೆ ಇದೆ.