ಮುಸ್ಲಿಮರಿಗೆ ಕೇರಳ ಸೂಕ್ತ ರಾಜ್ಯ: ಇಸ್ಲಾಂ ಪ್ರಚಾರಕ ಝಾಕೀರ್ ನಾಯ್ಕ್
ನವದೆಹಲಿ, ಆಗಸ್ಟ್ 25: ವಿವಾದಾತ್ಮಕ ಇಸ್ಲಾಂ ಪ್ರಚಾರಕ ಡಾ. ಝಾಕೀರ್ ನಾಯ್ಕ್ ಮತ್ತೆ ಸುದ್ದಿಯಲ್ಲಿದ್ದಾರೆ. ಭಾರತೀಯ ಮುಸ್ಲಿಮರು ಒಗ್ಗೂಡಿ, ಮುಸ್ಲಿಮರಿಗಾಗಿಯೇ ಪ್ರತ್ಯೇಕ ಪಕ್ಷವೊಂದನ್ನು ಸ್ಥಾಪಿಸುವಂತೆ ಕರೆ ನೀಡಿದ್ದಾರೆ.
ಕಳೆದ ನಾಲ್ಕಾರು ವರ್ಷಗಳಿಂದ ಭಾರತದಲ್ಲಿನ ಮುಸ್ಲಿಂ ಅಲ್ಪಸಂಖ್ಯಾತರ ಮೇಲೆ ದಾಳಿಗಳಾಗುತ್ತಿವೆ. ಭಾರತೀಯ ಮುಸ್ಲಿಮರು ಪಂಥೀಯ ಆಧಾರದಲ್ಲಿ ವಿಭಜನೆಯಾಗಿದ್ದಾರೆ. ಪರಸ್ಪರ ಹೊಡೆದಾಟ ಮತ್ತು ಟೀಕೆಗಳಲ್ಲಿ ತೊಡಗಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ರಾಜಕೀಯ ನಾಯಕತ್ವದ ಕೊರತೆಯಿದ್ದು, ಮುಸ್ಲಿಂ ಮತಗಳ ನಡುವೆ ವಿಭಜನೆಯಾಗುತ್ತಿದೆ ಎಂದಿದ್ದಾರೆ.
ಝಾಕೀರ್ ನಾಯ್ಕ್ ಅವರ ಅಧಿಕೃತ ಫೇಸ್ಬುಕ್ ಪುಟದಲ್ಲಿ ಆಗಸ್ಟ್ 21ರಂದು ವಿಡಿಯೋ ಸಂದೇಶ ಹಂಚಿಕೊಂಡಿದ್ದು, ಭಾರತೀಯ ಜನತಾಪಕ್ಷ ನೇತೃತ್ವದ ಸರ್ಕಾರದ 'ಕಿರುಕುಳ ಮತ್ತು ದಬ್ಬಾಳಿಕೆ'ಗೆ ಭಾರತದ ಮುಸ್ಲಿಮರು ಯಾವ ರೀತಿ ಸ್ಪಂದಿಸಬೇಕು ಎಂಬ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಭಾರತದಿಂದ ಪರಾರಿಯಾಗಿ ಮಲೇಷ್ಯಾದಲ್ಲಿ ನೆಲೆಸಿರುವ ಝಾಕೀರ್ ನಾಯ್ಕ್, ಅಲ್ಲಿಂದಲೇ ಭಾರತೀಯ ಮುಸ್ಲಿಮರಿಗೆ ಉಪದೇಶ ನೀಡುತ್ತಿರುತ್ತಾರೆ. ಮುಂದೆ ಓದಿ.

ಮುಸ್ಲಿಮರ ದೇಶಕ್ಕೆ ಹೋಗುವುದು ಒಳಿತು
ಭಾರತೀಯ ಮುಸ್ಲಿಮರು ತಮ್ಮ ಧಾರ್ಮಿಕ ನಂಬಿಕೆಯನ್ನು ಪಾಲಿಸಲು ಸಾಧ್ಯವಿಲ್ಲ. ಅವರು ಹಿಜಿರಾ ಮಾಡಬೇಕು (ಧಾರ್ಮಿಕ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ಬೇರೆ ಪ್ರದೇಶಕ್ಕೆ ವಲಸೆ ಹೋಗುವುದು). ನೀವು ಮುಸ್ಲಿಂ ಬಾಹುಳ್ಯ ಇರುವ ದೇಶಕ್ಕೆ ಹೋಗುವುದು ಒಳಿತು. ಭಾರತದ ಎಲ್ಲ ಮುಸ್ಲಿಮರೂ ಈ ದೇಶವನ್ನು ತೊರೆಯುತ್ತಾರೆ ಎಂದು ನಿರೀಕ್ಷಿಸಿರುವುದಾಗಿ ಝಾಕೀರ್ ಹೇಳಿದ್ದಾರೆ.

ಕೇರಳ ಸೂಕ್ತ ರಾಜ್ಯ
ಭಾರತದಿಂದ ಹೊರ ಹೋಗಲು ಸಾಧ್ಯವಿಲ್ಲದ ಮುಸ್ಲಿಮರು ತಮಗೆ ಹೆಚ್ಚು ಅನುಕೂಲಕರವಾಗಿರುವ ರಾಜ್ಯಕ್ಕೆ ಹೋಗಬೇಕು. ನನ್ನ ಪ್ರಕಾರ ಮುಸ್ಲಿಮರಿಗೆ ಬಹಳ ಸೂಕ್ತವಾದ ರಾಜ್ಯವೆಂದರೆ ಕೇರಳ. ಅಲ್ಲಿ ಮೂರು ಪ್ರಮುಖ ಧರ್ಮಗಳಾದ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತರು ರಾಜ್ಯದ ಮೂರನೇ ಒಂದು ಭಾಗದಷ್ಟು ಜನಸಂಖ್ಯೆಯನ್ನು ಹೊಂದಿದ್ದಾರೆ.

ಕೇರಳದ ಜನರು ಕೋಮುವಾದಿಗಳಲ್ಲ
ಕೇರಳದ ಜನರು ಸ್ವಾಭಾವಿಕವಾಗಿ ಕೋಮುವಾದಿಗಳಲ್ಲ. ಕೇರಳದಲ್ಲಿ ಬಿಜೆಪಿ ಸರ್ಕಾರಕ್ಕೆ ಹಿಡಿತವೂ ಇಲ್ಲ. ಹೀಗಾಗಿ ನೀವು ಒಂದು ರಾಜ್ಯಕ್ಕೆ ಹಿಜಿರಾ ಮಾಡಲು ಬಯಸಿದ್ದರೆ ಅದಕ್ಕೆ ಕೇರಳಕ್ಕೆ ಹೋಗುವುದು ಸೂಕ್ತ ಆಯ್ಕೆ ಎಂದು ಹೇಳುತ್ತೇನೆ. ಮುಂಬೈ ಮತ್ತು ಹೈದರಾಬಾದ್ಗಳನ್ನು ಇತರೆ ಆಯ್ಕೆಗಳಾಗಿ ಇಟ್ಟುಕೊಳ್ಳಬಹುದು ಎಂದು ಝಾಕೀರ್ ಹೇಳಿದ್ದಾರೆ.

'ದಲಿತರು ಹಿಂದೂಗಳಲ್ಲ'
ಭಾರತ ಸರ್ಕಾರವು ದೇಶದಲ್ಲಿನ ಮುಸ್ಲಿಮರ ಸಂಖ್ಯೆಯನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿದ ಝಾಕೀರ್, ಮುಸ್ಲಿಮರು ತಮಗಾಗಿಯೇ ಪ್ರತ್ಯೇಕವಾದ ಪಕ್ಷವೊಂದನ್ನು ಸ್ಥಾಪಿಸಬೇಕು. ಫ್ಯಾಸಿಸ್ಟ್ ಅಥವಾ ಕೋಮುವಾದಿಗಳಲ್ಲದ ಇತರೆ ರಾಜಕೀಯ ಪಕ್ಷಗಳ ಜತೆ ಕೈಜೋಡಿಸಬೇಕು. ಹೊಸ ಪಕ್ಷವು ದಲಿತರೊಂದಿಗೆ ಸೇರಿಕೊಳ್ಳಬೇಕು. ಏಕೆಂದರೆ ದಲಿತರು ಹಿಂದೂಗಳಲ್ಲ. ಅವರ ರಾಜಕೀಯ ಪ್ರಾಬಲ್ಯವು ಸುಮಾರು 600 ಮಿಲಿಯನ್ ಜನರನ್ನು ಹೊಂದಿದೆ ಎಂದು ಸಲಹೆ ನೀಡಿದ್ದಾರೆ.












Click it and Unblock the Notifications