Get Updates
Get notified of breaking news, exclusive insights, and must-see stories!

ರಾಷ್ಟ್ರಪತಿ ಸ್ಥಾನಕ್ಕೆ 'ರಬ್ಬರ್ ಸ್ಟಾಂಪ್' ಬೇಕಿಲ್ಲ; ಪ್ರತಿಸ್ಪರ್ಧಿಯ ಕಾಲೆಳೆದರೇ ಯಶವಂತ್ ಸಿನ್ಹಾ?

ನವದೆಹಲಿ, ಜೂನ್ 26: ರಾಷ್ಟ್ರಪತಿ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ವಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿರುವ ಯಶವಂತ್ ಸಿನ್ಹಾ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಚುನಾವಣೆ ಕೇವಲ ವೈಯಕ್ತಿಕ ಸ್ಪರ್ಧೆಯಲ್ಲ, ಬದಲಾಗಿ ಸರಕಾರದ ನಿರಂಕುಶ ಆಡಳಿತದ ವಿರುದ್ಧ ಪ್ರತಿರೋಧ ತೋರುವ ಒಂದು ಹೆಜ್ಜೆ ಎಂದು ಅವರು ವ್ಯಾಖ್ಯಾನಿಸಿದ್ದಾರೆ.

"ಇದು ಭಾರತದ ರಾಷ್ಟ್ರಪತಿ ಆಯ್ಕೆಗೆ ನಡೆಯುತ್ತಿರುವ ಚುನಾವಣೆ ಮಾತ್ರವಲ್ಲ. ಸರಕಾರದ ನಿರಂಕುಶ ಆಡಳಿತಕ್ಕೆ ಪ್ರತಿರೋಧವಾಗಿ ಈ ಚುನಾವಣೆ ಇದೆ. ಸರಕಾರದ ದುರ್ನೀತಿಗಳಿಗೆ ಪ್ರತಿರೋಧ ಇರಬೇಕು ಎಂಬ ಸಂದೇಶ ಈ ಚುನಾವಣೆ ಮೂಲಕ ಜನರಿಗೆ ತಲುಪುತ್ತದೆ" ಎಂದು ಯಶವಂತ್ ಸಿನ್ಹಾ ಹೇಳಿದರೆಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕಾಂಗ್ರೆಸ್, ಟಿಎಂಸಿ ಸೇರಿದಂತೆ ಹಲವು ವಿಪಕ್ಷಗಳು ಸೇರಿ ಒಮ್ಮತದಿಂದ ಯಶವಂತ್ ಸಿನ್ಹಾ ಅವರನ್ನು ರಾಷ್ಟ್ರಪತಿ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ಎನ್‌ಡಿಎಯಿಂದ ಮಾಜಿ ರಾಜ್ಯಪಾಲೆ, ಮಾಜಿ ಸಚಿವೆ, ಬುಡಕಟ್ಟು ಸಮುದಾಯಕ್ಕೆ ಸೇರಿದ ದ್ರೌಪದಿ ಮುರ್ಮು ಅವರನ್ನು ಅಭ್ಯರ್ಥಿಯಾಗಿ ನಿಲ್ಲಿಸಿದೆ.

ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬರನ್ನು ಉಚ್ಚಸ್ಥಾನಕ್ಕೆ ಏರಿಸುವುದರಿಂದ ಸಮುದಾಯದ ಏಳಿಗೆ ಆಗುತ್ತದೆ ಎಂಬುದು ನಿಜವಲ್ಲ ಎಂದು ಹೇಳಿದ ಅವರು, ರಾಷ್ಟ್ರಪತಿ ಸ್ಥಾನಕ್ಕೆ ರಬ್ಬರ್ ಸ್ಟಾಂಪ್ ಬೇಕಾಗಿಲ್ಲ ಎನ್ನುವ ಮೂಲಕ ತಮ್ಮ ಎದುರಾಳಿ ಸ್ಪರ್ಧಾಳುವನ್ನು ಪರೋಕ್ಷವಾಗಿ ಯಶವಂತ್ ಸಿನ್ಹಾ ಕುಟುಕಿದ್ದಾರೆ.

ವ್ಯಕ್ತಿ ಏರಿದರೆ ಸಮುದಾಯ ಏರಿದಂತಲ್ಲ

ವ್ಯಕ್ತಿ ಏರಿದರೆ ಸಮುದಾಯ ಏರಿದಂತಲ್ಲ

ಬುಡಕಟ್ಟು ಸಮುದಾಯಕ್ಕೆ ಸೇರಿದ ದ್ರೌಪದಿ ಮುರ್ಮು ಅವರನ್ನು ಅಭ್ಯರ್ಥಿಯಾಗಿ ಬಿಜೆಪಿ ನಿಲ್ಲಿಸಿರುವುದು ಕೇವಲ ರಾಜಕೀಯ ಸಾಂಕೇತಿಕತೆಗೆ ಮಾತ್ರ. ಒಬ್ಬ ವ್ಯಕ್ತಿಯನ್ನು ಉಚ್ಚಸ್ಥಾನಕ್ಕೆ ಏರಿಸುವುದರಿಂದ ಅವರ ಇಡೀ ಸಮುದಾಯ ಏರುತ್ತದೆ ಎನ್ನುವಂತಿಲ್ಲ ಎಂದು ಯಶವಂತ್ ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.

"ಸಾರ್ವಜನಿಕ ಜೀವನದಲ್ಲಿ ನನಗಿರುವ ಸುದೀರ್ಘ ಅನುಭವದಿಂದ ಹೇಳುತ್ತೇನೆ, ಒಬ್ಬ ವ್ಯಕ್ತಿಯ ಬೆಳವಣಿಗೆಯು ಇಡೀ ಸಮುದಾಯದ ಬೆಳವಣಿಗೆಗೆ ಕಾರಣವಾಗುವುದಿಲ್ಲ. ಸರಕಾರ ಅನುಸರಿಸುವ ನೀತಿಗಳ ಮೇಲೆ ಸಮುದಾಯದ ಏಳ್ಗೆ ಅವಲಂಬಿತವಾಗಿರುತ್ತದೆ. ವ್ಯಕ್ತಿಯ ಏಳ್ಗೆಯಿಂದ ಸಮುದಾಯಕ್ಕೆ ಪ್ರಯೋಜನವಾಗುವುದಿಲ್ಲ ಎಂಬುದಕ್ಕೆ ನಮ್ಮದೇ ಇತಿಹಾಸದಲ್ಲಿ ಬಹಳಷ್ಟು ನಿದರ್ಶನಗಳಿವೆ. ದ್ರೌಪದಿ ಮುರ್ಮು ಅವರನ್ನು ಅಭ್ಯರ್ಥಿಯಾಗಿ ನಿಲ್ಲಿಸಿರುವುದು ಕೇವಲ ಸಾಂಕೇತಿಕ ಮಾತ್ರವೇ ಹೊರತು ಹೆಚ್ಚೇನೂ ಅಲ್ಲ" ಎಂದು ಮಾಜಿ ಕೇಂದ್ರ ಸಚಿವರೂ ಆದ ಯಶವಂತ್ ಸಿನ್ಹಾ ಹೇಳಿದ್ಧಾರೆ.

ಜನ ಎಚ್ಚೆತ್ತುಕೊಳ್ಳಬೇಕು

ಜನ ಎಚ್ಚೆತ್ತುಕೊಳ್ಳಬೇಕು

ಈ ಚುನಾವಣೆ ಕೇವಲ ವೈಯಕ್ತಿಕ ಕಾದಾಟಕ್ಕಿಂತ ಮಿಗಿಲಾದುದು. ದೇಶದಲ್ಲಿ ಈಗ ಸಾಕಷ್ಟು ಸಮಸ್ಯೆಗಳು ಕಾಡುತ್ತಿದೆ. ಜನರು ಎಚ್ಚೆತ್ತುಕೊಳ್ಳದಿದ್ದರೆ ಮತ್ತು ಇಡೀ ವ್ಯವಸ್ಥೆ ಸುಧಾರಣೆ ಆಗದಿದ್ದರೆ ನಾವು ಸಮಸ್ಯೆಗಳಿಂದ ಹೊರಬರಲಾಗುವುದಿಲ್ಲ ಎಂದು ಸಿನ್ಹಾ ತಿಳಿಸಿದ್ದಾರೆ.

"ನಮ್ಮ ಪ್ರಜಾತಂತ್ರ, ಸಂವಿಧಾನ ಅಪಾಯದಲ್ಲಿದೆ. ಸ್ವಾತಂತ್ರ್ಯ ಹೋರಾಟದ ವೇಳೆ ಇದ್ದ ಮೌಲ್ಯಗಳು ದುರ್ಬಲವಾಗುತ್ತಿವೆ. ಭಾರತಕ್ಕೆ ಅಪಾಯ ಎದುರಾಗಿದೆ. ಜನರು ಈ ದೇಶದ ರಕ್ಷಣೆಗೋಸ್ಕರ ಎಚ್ಚೆತ್ತುಕೊಳ್ಳಬೇಕು... ದೇಶದ ರಾಜಕೀಯ ವ್ಯವಸ್ಥೆ ವಿಫಲವಾಗುತ್ತಿದ್ದು ಜನರು ಬೀದಿಗೆ ಬಂದು ಪ್ರತಿಭಟಿಸುವ ಪರಿಸ್ಥಿತಿ ಬಂದಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇಂಥವು ಆಗಬಾರದು" ಎಂದು ಟಿಎಂಸಿ ನಾಯಕ ಯಶವಂತ್ ಸಿನ್ಹಾ ಖೇದ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರಪತಿ ಹುದ್ದೆ ರಬ್ಬರ್ ಸ್ಟಾಂಪ್ ಅಲ್ಲ

ರಾಷ್ಟ್ರಪತಿ ಹುದ್ದೆ ರಬ್ಬರ್ ಸ್ಟಾಂಪ್ ಅಲ್ಲ

ರಾಷ್ಟ್ರಪತಿ ಭವನಕ್ಕೆ 'ರಬ್ಬರ್ ಸ್ಟಾಂಪ್' ಬಂದು ಸ್ಥಾನ ಅಲಂಕರಿಸುವುದು ಬೇಕಾಗಿಲ್ಲ. ಇದರಿಂದ ಏನೂ ಪ್ರಯೋಜನ ಇಲ್ಲ ಎಂದ ಅವರು, ಹಿಂದೆ ಇಂಥ ರಬ್ಬರ್ ಸ್ಟ್ಯಾಂಪ್ ರಾಷ್ಟ್ರಪತಿಗಳು ಹೇಗೆಲ್ಲಾ ನಡೆದುಕೊಂಡರು ಎಂಬುದನ್ನು ವಿವರಿಸಿದ್ದಾರೆ.

ತಾನು ರಾಷ್ಟ್ರಪತಿಯಾಗಿ ಚುನಾಯಿತನಾದರೆ ಸರಕಾರದ ವಿರೋದಿಗಳನ್ನು ಗುರಿಯಾಗಿಸಿಕೊಂಡು ಸರಕಾರಿ ಯಂತ್ರಗಳನ್ನು ದುರುಪಯೋಗಿಸಿಕೊಳ್ಳುವ ವ್ಯವಸ್ಥೆಗೆ ಕೂಡಲೇ ಅಂತ್ಯವಾಡುತ್ತೇನೆ ಎಂದು ಮಾಜಿ ಬಿಜೆಪಿ ನಾಯಕರೂ ಆದ ಅವರು ಆಶ್ವಾಸನೆ ನೀಡಿದ್ದಾರೆ.

ನಾಮಪತ್ರ ಸಲ್ಲಿಕೆ

ನಾಮಪತ್ರ ಸಲ್ಲಿಕೆ

ದ್ರೌಪದಿ ಮುರ್ಮು ಈಗಾಗಲೇ ನಾಮಪತ್ರ ಸಲ್ಲಿಸಿಯಾಗಿದೆ. ಯಶವಂತ್ ಸಿನ್ಹಾ ನಾಳೆ ಸೋಮವಾರದಂದು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಜೂನ್ 29, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಯಶವಂತ್ ಸಿನ್ಹಾ ನಾಮಪ್ರ ಸಲ್ಲಿಸುವಾಗ ಜೊತೆಯಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಶರದ್ ಪವಾರ್, ಸೀತಾರಾಮ್ ಯಚೂರಿ, ಮಮತಾ ಬ್ಯಾನರ್ಜಿ ಮೊದಲಾದ ವಿಪಕ್ಷಗಳ ದಿಗ್ಗಜ ನಾಯಕರು ಇರಲಿದ್ದಾರೆನ್ನಲಾಗಿದೆ.

ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಜುಲೈ 21ರಂದು ಫಲಿತಾಂಶ ಪ್ರಕಟವಾಗಲಿದೆ.

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+