Wrestlers protest: ಲೈಂಗಿಕ ಕಿರುಕುಳ ಆರೋಪದ ತನಿಖೆ ನಡೆಸಲಿರುವ ಮೇರಿ ಕೋಮ್ ನೇತೃತ್ವದ ಸಮಿತಿ
ನವದೆಹಲಿ, ಜನವರಿ, 20: ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಭಾರತೀಯ ಕುಸ್ತಿಪಟುಗಳ ಬೇಡಿಕೆ ಕೊಂಚ ಈಡೇರಿದಂತಾಗಿದೆ. ಶುಕ್ರವಾರ ತಡರಾತ್ರಿ ನಡೆದ ಸಭೆಯ ನಂತರ ತನಿಖೆಗಾಗಿ ಏಳು ಸದಸ್ಯರ ಸಮಿತಿ ರಚಿಸಲಾಗಿದೆ.
ತಡರಾತ್ರಿ ನಡೆದ ತುರ್ತು ಸಭೆಯ ನಂತರ ಡಬ್ಲ್ಯುಎಫ್ಐ ಮುಖ್ಯಸ್ಥ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳದ ಆರೋಪಗಳ ಬಗ್ಗೆ ಏಳು ಸದಸ್ಯರ ಸಮಿತಿಯು ತನಿಖೆ ನಡೆಸಲಿದೆ ಎಂದು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಘೋಷಿಸಿದೆ.
Wrestlers Protest: ಮತ್ತೊಮ್ಮೆ ಕ್ರೀಡಾ ಸಚಿವರನ್ನು ಭೇಟಿಯಾಗಲಿರುವ ಕುಸ್ತಿಪಟುಗಳು, ತನಿಖೆ ಆರಂಭವಾಗುವ ಸೂಚನೆ
ಈ ಏಳು ಸದಸ್ಯರ ಸಮಿತಿಯಲ್ಲಿ ಹೆಸರಾಂತ ಕ್ರೀಡಾಪಟುಗಳಾದ ಮೇರಿ ಕೋಮ್, ಡೋಲಾ ಬ್ಯಾನರ್ಜಿ, ಅಲಕಾನಂದ ಅಶೋಕ್, ಯೋಗೇಶ್ವರ್ ದತ್ ಮತ್ತು ಸಹದೇವ್ ಯಾದವ್ ಜೊತೆಗೆ ಇಬ್ಬರು ವಕೀಲರು ಇರಲಿದ್ದಾರೆ.
ವಿಶ್ವ ಚಾಂಪಿಯನ್ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್, ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ಹಲವಾರು ಭಾರತೀಯ ಕುಸ್ತಿಪಟುಗಳು ಬುಧವಾರದಿಂದ ದೆಹಲಿಯ ಜಂತರ್ ಮಂತರ್ನಲ್ಲಿ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಧರಣಿ ನಡೆಸುತ್ತಿದ್ದಾರೆ.
ಕುಸ್ತಿಪಟುಗಳು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಅಧ್ಯಕ್ಷೆ ಪಿಟಿ ಉಷಾ ಅವರಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಮನವಿ ಮಾಡಿದ್ದರು. "ಟೋಕಿಯೊದಲ್ಲಿ ಒಲಿಂಪಿಕ್ ಪದಕ ಕಳೆದುಕೊಂಡ ನಂತರ ಫೆಡರೇಶನ್ ಮುಖ್ಯಸ್ಥರು ವಿನೇಶ್ ಫೋಗಟ್ ಅವರಿಗೆ ಮಾನಸಿಕವಾಗಿ ಕಿರುಕುಳ ಮತ್ತು ಚಿತ್ರಹಿಂಸೆ ನೀಡಿದ್ದಾರೆ. ಫೋಗಟ್ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೂ ಹೋಗಿದ್ದರು" ಎಂದು ಕುಸ್ತಿಪಟುಗಳು ಪಿಟಿ ಉಷಾ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು. ಜೊತೆಗೆ ತನಿಖೆ ನಡೆಸಲು ಸಮಿತಿಯನ್ನು ನೇಮಿಸುವಂತೆ ಮನವಿ ಮಾಡಿದ್ದರು.
ಇತ್ತ, ಕುಸ್ತಿಪಟುಗಳ ಆರೋಪವನ್ನು ನಿರಾಕರಿಸಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಇವೆಲ್ಲಾ ರಾಜಕೀಯ ಪಿತೂರಿ ಎಂದು ದೂರಿದ್ದಾರೆ.
'' ಇವರ ಯಾವುದೇ ಆರೋಪದಲ್ಲಿ ಸತ್ಯಾಂಶವಿಲ್ಲ. ನಾನೇಕೆ ನನ್ನ ಅಧಿಕಾರ ಬಿಡಬೇಕು? ಒಬ್ಬರೇ ಒಬ್ಬ ಮಹಿಳಾ ಕುಸ್ತಿಪಟು ಬಂದು ಲೈಂಗಿಕ ಕಿರುಕುಳದ ಆರೋಪವನ್ನು ಸಾಬೀತುಪಡಿಸಿದರೂ, ನಾನು ಗಲ್ಲಿಗೇರಿಸಲು ಸಿದ್ಧ. ಇದರ ಹಿಂದೆ ಒಬ್ಬ ಕೈಗಾರಿಕೋದ್ಯಮಿ ಇದ್ದಾರೆ " ಎಂದು ಬ್ರಿಜ್ ಭೂಷಣ್ ಶರಣ್ ಸಿಂಗ್ ಆರೋಪಿಸಿದ್ದಾರೆ.
ಇನ್ನು, ಆರೋಪ ಮಾಡಿದಾಗಿನಿಂದ ಸಂತ್ರಸ್ತರ ಹೆಸರು ಹೇಳದ ವಿನೇಶ್ ಫೋಗಟ್, ಭಾರತ ಒಲಿಂಪಿಕ್ ಅಸೋಸಿಯೇಷನ್ ಸಮಿತಿಗೆ ಸಂತ್ರಸ್ತರ ಗುರುತನ್ನು ಬಹಿರಂಗಪಡಿಸುವುದಾಗಿ ಶುಕ್ರವಾರ ಒಪ್ಪಿಕೊಂಡಿದ್ದಾರೆ.
ಮೂರು ದಿನಗಳಲ್ಲಿ ಕುಸ್ತಿ ಫೆಡರೇಶನ್ನಿಂದ ಪ್ರತಿಕ್ರಿಯೆ ಕೇಳಿದ್ದ ಕ್ರೀಡಾ ಸಚಿವಾಲಯವು, "ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಸಂಹಿತೆ, 2011 ರ ನಿಬಂಧನೆಗಳ ಪ್ರಕಾರ ಫೆಡರೇಶನ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ" ಎಚ್ಚರಿಕೆ ನೀಡಿದೆ.