ಕುಸ್ತಿಪಟುಗಳಿಗೆ ನ್ಯಾಯ ಸಿಗುವವರೆಗೂ ನಾವು ಹೋರಾಡುತ್ತೇವೆ: ದೇಶದ ಪ್ರಮುಖ ರೈತ ನಾಯಕರಿಂದ ಘೋಷಣೆ- ಇಕ್ಕಟ್ಟಿನಲ್ಲಿ ಕೇಂದ್ರ
ನವದೆಹಲಿ, ಜೂನ್ 01: ಕುಸ್ತಿಪಟುಗಳಿಗೆ ನ್ಯಾಯ ಸಿಗುವವರೆಗೂ ನಾವು ಹೋರಾಟ ನಡೆಸಲಿದ್ದೇವೆ ಎಂದು ರೈತ ಮುಖಂಡರು ಮಹಾಪಂಚಾಯತ್ನಲ್ಲಿ ಘೋಷಿಸಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ರೈತ ನಾಯಕ ರಾಕೇಶ್ ಟಿಕಾಯತ್ ಅವರು, 'ಹರಿಯಾಣದ ರೈತರು ಮತ್ತು ಖಾಪ್ಗಳು ಕುಸ್ತಿಪಟುಗಳಿಗೆ ಬೆಂಬಲವನ್ನು ನೀಡುತ್ತಿದ್ದಾರೆ. ಮುಂದೆ ಅನುಸರಿಸಬೇಕಾದ ಕಾರ್ಯತಂತ್ರವನ್ನು ನಿರ್ಧರಿಸಲಿದ್ದೇವೆ. ಕುಸ್ತಿಪಟುಗಳ ಪ್ರತಿಭಟನೆ ಕುರಿತು ನಾಳೆ ಹರಿಯಾಣದಲ್ಲಿ ನಡೆಯಲಿರುವ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು' ಎಂದು ಹೇಳಿದ್ದಾರೆ.
ಸೋಮವಾರ ತಮ್ಮ ಪದಕಗಳನ್ನು ಗಂಗಾ ನದಿಗೆ ಒಪ್ಪಿಸದಂತೆ ಕುಸ್ತಿಪಟುಗಳ ಮನವೊಲಿಸಿದ ನರೇಶ್ ಟಿಕಾಯತ್, 'ಅಗತ್ಯವಿದ್ದರೆ ನಾವು ಭಾರತದ ರಾಷ್ಟ್ರಪತಿಗಳ ಬಳಿಗೆ ಹೋಗುತ್ತೇವೆ. ನಾವು ನಿಮ್ಮೊಂದಿಗಿದ್ದೇವೆ, ನೀವು ಚಿಂತಿಸಬೇಕಾಗಿಲ್ಲ' ಎಂದು ಮುಜಾಫರ್ನಗರದಲ್ಲಿ ನಡೆದ ಬೃಹತ್ ಸಭೆಯಲ್ಲಿ ತಿಳಿಸಿದರು.

'ಗಂಗೆಯಲ್ಲಿ ಪದಕಗಳನ್ನು ಮುಳುಗಿಸಬೇಡಿ, ಹರಾಜಿಗೆ ಇರಿಸಿ ಎಂದು ನಾನು ಅವರಿಗೆ ಹೇಳಿದ್ದೇನೆ. ಇಡೀ ವಿಶ್ವವೇ ಮುಂದೆ ಬಂದು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತದೆ' ಎಂದು ಅವರು ಹೇಳಿದರು.
ರೈತರು ಮತ್ತು ಖಾಪ್ಗಳು ಕುಸ್ತಿಪಟುಗಳಿಗೆ ಏಕೆ ಬೆಂಬಲ ನೀಡುತ್ತಿದ್ದಾರೆ ಎಂಬುದರ ಕುರಿತು ಮಾತನಾಡಿದ ರಾಕೇಶ್ ಟಿಕಾಯತ್, 'ಕುಟುಂಬವು ದೊಡ್ಡದಾಗಿದ್ದರೆ ಒಳ್ಳೆಯದು' ಎಂದು ತಿಳಿಸಿದರು.
'ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಅವರು ಬಿಹಾರದಲ್ಲಿ ಲಾಲು ಯಾದವ್ ಅವರ ಕುಟುಂಬವನ್ನು ಒಡೆದರು. ಮುಲಾಯಂ ಸಿಂಗ್ ಯಾದವ್ ಅವರ ಕುಟುಂಬದೊಂದಿಗೆ ಅವರು ಏನು ಮಾಡಿದ್ದಾರೆಂದು ನೋಡಿ. ರಾಜಸ್ಥಾನದಲ್ಲಿ ಅದೇ ನಡೆಯುತ್ತಿದೆ' ಎಂದು ಅವರು ಸಭೆಯಲ್ಲಿ ಭಾಗವಹಿಸಿದ್ದ ರೈತರಿಗೆ ಹೇಳಿದರು.

ತಮ್ಮ ಮೇಲೆ ದೆಹಲಿ ಪೋಲೀಸರ ಭಾರಿ ದಬ್ಬಾಳಿಕೆ ನಡೆಸಿದ ಒಂದು ದಿನದ ನಂತರ, ಕುಸ್ತಿಪಟುಗಳು ತಮ್ಮ ಪದಕಗಳನ್ನು ಗಂಗಾದಲ್ಲಿ ಮುಳುಗಿಸಲು ನಿರ್ಧರಿಸಿ ಹರಿದ್ವಾರಕ್ಕೆ ತೆರಳಿದ್ದರು. ಆದರೆ ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥರಾದ ಟಿಕಾಯತ್ ಮತ್ತು ಹರಿಯಾಣದ ಖಾಪ್ ನಾಯಕರ ಮಧ್ಯಸ್ಥಿಕೆಯ ನಂತರ ಅವರು ಅಂತಿಮವಾಗಿ ಅದನ್ನು ತಡೆಹಿಡಿದರು.
ಅಪ್ರಾಪ್ತ ವಯಸ್ಕ ಸೇರಿದಂತೆ ಏಳು ಅಥ್ಲೀಟ್ಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಡಬ್ಲ್ಯುಎಫ್ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜನವರಿಯಿಂದ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಬಿಜೆಪಿ ಸಂಸದರೂ ಆಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ತಮ್ಮ ವಿರುದ್ಧದ ಆರೋಪ ಸಾಬೀತಾದರೆ ಯಾವುದೇ ಶಿಕ್ಷೆಯನ್ನು ಸ್ವೀಕರಿಸುವುದಾಗಿ ಹೇಳಿದ್ದಾರೆ. ನಮ್ಮ ವಿರುದ್ಧದ ಒಂದೇ ಒಂದು ಆರೋಪ ಸಾಬೀತಾದರೆ ನೇಣು ಹಾಕಿಕೊಳ್ಳುತ್ತೇನೆ. ನಿಮ್ಮ ಬಳಿ (ಕುಸ್ತಿಪಟುಗಳು) ಏನಾದರೂ ಸಾಕ್ಷ್ಯಾಧಾರಗಳಿದ್ದರೆ ಅದನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತು ಯಾವುದೇ ಶಿಕ್ಷೆಯನ್ನು ಸ್ವೀಕರಿಸಲು ನಾನು ಸಿದ್ಧನಿದ್ದೇನೆ ಎಂದು ಅವರು ತಿಳಿಸಿದ್ದಾರೆ.

'ದೆಹಲಿ ಪೊಲೀಸರ ತನಿಖೆಯ ಅಂತ್ಯಕ್ಕೆ ಕಾಯುವಂತೆ ನಾನು ಕ್ರೀಡಾಪಟುಗಳಿಗೆ ಹೇಳುತ್ತೇನೆ. ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಿದ್ದಾರೆ. ಎಫ್ಐಆರ್ (ಪ್ರಥಮ ಮಾಹಿತಿ ವರದಿ) ದಾಖಲಿಸಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೆ, ಹಾನಿಯಾಗುವ ಯಾವುದೇ ಕ್ರಮವನ್ನು ತೆಗೆದುಕೊಳ್ಳಬೇಡಿ' ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.












Click it and Unblock the Notifications