ಕಾಂಗ್ರೆಸ್ ತೊರೆದ ವಘೇಲಾರಿಂದ ಕೇಂದ್ರ ಗುಜರಾತ್ ನಲ್ಲಿ ಬಿಜೆಪಿಗೆ ಲಾಭ?
ಅಹಮದಾಬಾದ್, ಡಿಸೆಂಬರ್ 12: ಮಾಜಿ ಮುಖ್ಯಮಂತ್ರಿ ಶಂಕರ್ ಸಿನ್ಹಾ ವಘೇಲಾ ಕಾಂಗ್ರೆಸ್ ಪಕ್ಷ ತೊರೆದು ಹೊರ ಬಂದಿದ್ದು ಹಳೇ ಕಥೆ. ಇದೀಗ ವಘೇಲಾ ಕಾಂಗ್ರೆಸ್ ತೊರೆದಿದ್ದರಿಂದ ಕೇಂದ್ರ ಗುಜರಾತ್ ನಲ್ಲಿ ತನಗೆ ಲಾಭವಾಗಲಿದೆ ಎಂದು ಬಿಜೆಪಿ ಅಂದುಕೊಂಡಿದೆ.
ಕೇಂದ್ರ ಗುಜರಾತನ್ನು ಕ್ಷತ್ರಿಯ-ಹರಿಜನ್-ಆದಿವಾಸಿ-ಮುಸ್ಲಿಂ (KHAM) ಬೆಲ್ಟ್ ಎಂದೇ ಕರೆಯಲಾಗುತ್ತದೆ. ಇಲ್ಲಿ ಕಾಂಗ್ರೆಸ್ ಗೆ ಇವರ ಮತಗಳು ಸುಲಭವಾಗಿ ದಕ್ಕುತ್ತಿದ್ದವು. ಆದರೆ ಕಾಂಗ್ರೆಸ್ ನಾಯಕ ಶಂಕರ್ ಸಿನ್ಹಾ ವಘೇಲಾ ಪಕ್ಷ ತೊರೆದು ಜನ್ ವಿಕಲ್ಪ ಮೋರ್ಚಾದ ಮೂಲಕ ತನ್ನ ಅಭ್ಯರ್ಥಿಗಳನ್ನು ಇಲ್ಲಿ ಕಣಕ್ಕಿಳಿಸಿದ್ದಾರೆ.

ಶಂಕರ್ ಸಿನ್ಹಾ ವಘೇಲಾರ ಅಭ್ಯರ್ಥಿಗಳ ಸ್ಪರ್ಧೆಯು ಬಿಜೆಪಿ ಲಾಭವಾಗಲಿದೆ ಎಂದು ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಇದೇ ಮಾತನ್ನು ಆರ್.ಎಸ್ಎಸ್ ಕಾರ್ಯದರ್ಶಿ ಹಾಗೂ ಈ ಭಾಗದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಧಮೇಶ್ ಮೆಹ್ತಾ ಕೂಡಾ ಒಪ್ಪಿಕೊಂಡಿದ್ದಾರೆ. "ಈ ಬಾರಿ ಕಠಿಣ ಸ್ಪರ್ಧೆ ಇದೆ. ವಘೇಲಾರ ಅನುಪಸ್ಥಿತಿ ಬಿಜೆಪಿಗೆ ಲಾಭವಾಗಲಿದೆ. ಇಲ್ಲದಿದ್ದಲ್ಲಿ ಕಷ್ಟವಾಗುತ್ತಿತ್ತು. ಇಲ್ಲಿನ ಶೇಕಡಾ 8ರಷ್ಟಿರುವ ಕ್ಷತ್ರಿಯರ ಪ್ರಭಾವಿ ನಾಯಕರಾಗಿ ವಘೇಲಾ ಗುರುತಿಸಿಕೊಂಡಿದ್ದರು," ಎಂದು ಅವರು ವಿಶ್ಲೇಷಿಸಿದ್ದಾರೆ.
ಇದೇ ಡಿಸೆಂಬರ್ 14ರಂದು ಗುಜರಾತ್ ನಲ್ಲಿ ಎರಡನೇ ಹಂತದ ಮತದಾನ 93 ಸ್ಥಾನಗಳಿಗೆ ನಡೆಯಲಿದೆ. ಈಗಾಗಲೇ ಮೊದಲ ಹಂತದ ಮತದಾನ ಡಿಸೆಂಬರ್ 9ರಂದು ನಡೆದಿದ್ದು ಫಲಿತಾಂಶ ಡಿಸೆಂಬರ್ 18ರಂದು ಹೊರ ಬೀಳಲಿದೆ.












Click it and Unblock the Notifications