ಒಂದು ಹನಿ ನೀರನ್ನೂ ಕರ್ನಾಟಕಕ್ಕೆ ಬಿಡೆವು: ಗೋವಾ ಸಚಿವ
Recommended Video

ಪಣಜಿ, ಡಿಸೆಂಬರ್ 29: 'ಮಹದಾಯಿಯ ಒಂದು ಹನಿ ನೀರನ್ನೂ ನಾವು ಕರ್ನಾಟಕದೊಂದಿಗೆ ಹಂಚಿಕೊಳ್ಳುವುದಿಲ್ಲ' ಎಂದು ಗೋವಾದ ಜಲ ಸಂಪನ್ಮೂಲ ಸಚಿವ ವಿನೋದ್ ಪಾಲ್ಯಂಕರ್ ಗುಡುಗಿದ್ದಾರೆ.
ಮಹದಾಯಿ ಕುರಿತು ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರು ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರಿಗೆ ಬರದಿರುವ ಪತ್ರ ಕರ್ನಾಟಕದಲ್ಲಿ ಮಾತ್ರವಲ್ಲದೆ ಗೋವಾ ರಾಜಕೀಯದಲ್ಲಿಯೂ ಸಂಚಲನ ಮೂಡಿಸಿದ್ದು, ಗೋವಾದಲ್ಲಿ ಆಡಳಿತಾರೂಢ ಬಿಜೆಪಿಯ ಮಿತ್ರ ಪಕ್ಷಗಳು ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ಇದಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿವೆ.

ಗೋವಾ ಜಲಸಂಪನ್ಮೂಲ ಸಚಿವ ಪಾಲಿನೇಕರ್ ಅವರು ಮನೋಹರ ಪರಿಕ್ಕರ್ ಅವರು ಬರೆದಿರುವ ಪತ್ರವನ್ನು 'ರಾಜಕೀಯ ಗಿಮಿಕ್' ಎಂದು ಕರೆದಿದ್ದು, ಪರಿಕ್ಕರ್ ಅವರು ರಾಜಕೀಯ ಲಾಭಕ್ಕಾಗಿ ಪತ್ರ ಬರೆದಿದ್ದಾರೆ, ಪತ್ರದ ಬರೆದುದರ ಕುರಿತು ಸಚಿವ ಸಂಪುಟದ ಗಮನಕ್ಕೆ ತಂದಿಲ್ಲ ಎಂದಿದ್ದಾರೆ.
'ಕರ್ನಾಟಕ ಬಿಜೆಪಿ ಅಧ್ಯಕ್ಷರಿಗೆ ಗೋವಾ ಮುಖ್ಯಮಂತ್ರಿ ಬರೆದಿರುವ ಪತ್ರದ ಪ್ರತಿಯನ್ನು ನನಗಂತೂ ಕಳಿಸಿಲ್ಲ, ಆದರೆ ನಾನಂತೂ ನನ್ನ ನಿಲುವು ಸ್ಪಷ್ಟಪಡಿಸುತ್ತಿದ್ದೇನೆ, ನಾವು ಒಂದು ಹನಿ ನೀರನ್ನು ಕೂಡ ಕರ್ನಾಟಕದೊಂದಿಗೆ ಹಂಚಿಕೊಳ್ಳುವುದಿಲ್ಲ' ಎಂದು ಖಡಾಖಂಡಿತವಾಗಿ ಅವರು ಹೇಳಿದರು.
ಮನೋಹರ ಪರಿಕ್ಕರ್ ಅವರು ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರಕ್ಕೆ ಗೋವಾದ ಸಮ್ಮಿಶ್ರ ಸರ್ಕಾರದ ಸದಸ್ಯರಲ್ಲಿ ಭಾರಿ ವಿರೋಧ ವ್ಯಕ್ತವಾಗಿದ್ದು, ವಿರೋಧ ಪಕ್ಷ ಕಾಂಗ್ರೆಸ್ ಕೂಡ ಮನೋಹರ ಪರಿಕ್ಕರ್ ಅವರು ಬರೆದಿರುವ ಪತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮನೋಹರ್ ಅವರ ಈ ನಡೆಯಿಂದಾಗಿ ಸರ್ಕಾರದಲ್ಲಿ ಬಿರುಕು ಮೂಡುವ ಸ್ಥಿತಿ ನಿರ್ಮಾಣವಾಗಿದೆ.
ಇತ್ತ ಕಡೆ ಮಹದಾಯಿ ಹೋರಾಟ ದಿನೇ ದಿನೇ ಜೋರಾಗುತ್ತಿದ್ದು, ಸುಮ್ಮನೇ ಮಲಗಿದ್ದ ಹಾವನ್ನು ಕೆಣಕಿ ಕಚ್ಚಿಸಿಕೊಂಡ ಸ್ಥಿತಿಯಲ್ಲಿ ಯಡಿಯೂರಪ್ಪ ಅವರು ಸಿಲುಕಿದ್ದಾರೆ.












Click it and Unblock the Notifications