ಹೊಸ ವರ್ಷದಲ್ಲಿ 75 ವಂದೇ ಭಾರತ್ ರೈಲು ಸಂಚಾರ ಸಾಧ್ಯವೇ?
ನವದೆಹಲಿ, ಡಿಸೆಂಬರ್ 02; ಕೇಂದ್ರ ಸರ್ಕಾರ 2023ರಲ್ಲಿ 75 ವಂದೇ ಭಾರತ್ ರೈಲು ಸಂಚಾರ ನಡೆಸುವುದಾಗಿ ಘೋಷಣೆ ಮಾಡಿದೆ. ಸದ್ಯ ಭಾರತದಲ್ಲಿ 5 ಮಾರ್ಗದಲ್ಲಿ ಮಾತ್ರ ಸೆಮಿ ಹೈಸ್ಪೀಡ್ ರೈಲು ಸಂಚಾರ ನಡೆಸುತ್ತಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ನವೆಂಬರ್ 11ರಂದು ಬೆಂಗಳೂರಿನಲ್ಲಿ ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್ಪ್ರೆಸ್ಗೆ ಹಸಿರು ನಿಶಾನೆ ತೋರಿಸಿದರು. ಇದು ದೇಶದ 5ನೇ ಮತ್ತು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಾಗಿದೆ.
ಬಜೆಟ್ನಲ್ಲಿ ಕೇಂದ್ರ ಸರ್ಕಾರ ಘೋಷಣೆ ಮಾಡಿದಂತೆ 2023ಕ್ಕೆ 75, ಮುಂದಿನ ಮೂರು ವರ್ಷಗಳಲ್ಲಿ 400 ವಂದೇ ಭಾರತ್ ರೈಲು ಓಡಿಸಲು ಸಾಧ್ಯವೇ? ಎಂಬುದು ಸದ್ಯದ ಪ್ರಶ್ನೆಯಾಗಿದೆ. ವಂದೇ ಭಾರತ್ ರೈಲು ವಿನ್ಯಾಸಗೊಳಿಸಿದ ಸುಧಾಂಶು ಮಣಿ ಈ ಕುರಿತು ಪತ್ರಿಕ್ರಿಯೆ ನೀಡಿದ್ದಾರೆ.
ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್)ನಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ವಿನ್ಯಾಸಗೊಳಿಸಲಾಗುತ್ತಿದೆ. ಸುಧಾಂಶು ಮಣಿ ಐಸಿಎಫ್ನ ಮಾಜಿ ಜನರಲ್ ಮ್ಯಾನೇಜರ್. ಸದ್ಯ ರೈಲು ವಿನ್ಯಾಸ ಮತ್ತು ಅಭಿವೃದ್ಧಿಯ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ವಂದೇ ಭಾರತ್ ರೈಲಿನ ಬಗ್ಗೆ ಇಂಡಿಯನ್ ಎಕ್ಸ್ಪ್ರೆಸ್ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದಾರೆ.

ವಂದೇ ಭಾರತ್ ರೈಲುಗಳ ವಿನ್ಯಾಸ
ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಮತ್ತು ಇತರ ಸಂಸ್ಥೆಗಳು ಒಟ್ಟಾಗಿ ಕಾರ್ಯ ನಿರ್ವಹಣೆ ಮಾಡಿ ವಂದೇ ಭಾರತ್ ರೈಲುಗಳ ವಿನ್ಯಾಸ ಮಾಡಿವೆ. ಸದ್ಯ ದೇಶದಲ್ಲಿ 5ನೇ ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ 2021ರ ಆಗಸ್ಟ್ 15ರ ಭಾಷಣದಲ್ಲಿ ಇಂತಹ 75 ರೈಲುಗಳನ್ನು ಓಡಿಸುತ್ತೇವೆ ಎಂದು ಘೋಷಣೆ ಮಾಡಿದರು. ಕೇಂದ್ರದ ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವರು ಮುಂದಿನ ಮೂರು ವರ್ಷದಲ್ಲಿ 400 ವಂದೇ ಭಾರತ್ ರೈಲು ಓಡಿಸಲಾಗುತ್ತದೆ, ಇದರ ವಿನ್ಯಾಸಕ್ಕಾಗಿ ಅಗತ್ಯವಾದ ತಂಡ ಸಹ ಸಿದ್ಧವಿದೆ ಎಂದು ಹೇಳಿದರು. 2016ರಲ್ಲಿಯೇ ಸುಧಾಂಶು ಮಣಿ ಅವರನ್ನು ಐಸಿಎಫ್ನ ಮುಖ್ಯಸ್ಥರಾಗಿ ನೇಮಿಸುವಾಗ ಭವಿಷ್ಯದಲ್ಲಿ ವೇಗವಾಗಿ ಸಂಚಾರ ನಡೆಸುವ ರೈಲುಗಳನ್ನು ವಿನ್ಯಾಸಗೊಳಿಸಬೇಕು ಎಂದು ಸೂಚನೆ ನೀಡಲಾಗಿತ್ತು.

ವಂದೇ ಭಾರತ್ ರೈಲು ಲಾಭದಾಯಕವೇ?
ಮುಂದಿನ ಮೂರು ವರ್ಷಗಳಲ್ಲಿ 400 ವಂದೇ ಭಾರತ್ ರೈಲು ಓಡಿಸಬೇಕು ಎಂಬುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಆದರೆ, ರೈಲು ಲಾಭದಾಯಕವೇ? ಎಂಬುದು ಪ್ರಶ್ನೆ. ಸದ್ಯ ಸಂಚಾರ ನಡೆಸುತ್ತಿರುವ ವಂದೇ ಭಾರತ್ ರೈಲುಗಳಿಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಆದರೆ ಟಿಕೆಟ್ ದರಗಳ ಬಗ್ಗೆ ಜನರಿಂದ ಆಕ್ಷೇಪಣೆ ಇದ್ಧೇ ಇದೆ.
ಭಾರತದಲ್ಲಿ ಶತಾಬ್ದಿ ರೈಲಿಗೆ ಪರ್ಯಾಯವಾಗಿ ಸಮಯ ಉಳಿಸುವ ರೈಲಾಗಿ ವಂದೇ ಭಾರತ್ ಓಡಿಸಲಾಗುತ್ತಿದೆ. ರಾಜಧಾನಿ, ಶತಾಬ್ದಿಗೆ ಪರ್ಯಾಯವಾಗಿ 100-150 ಕಿ. ಮೀ. ವೇಗದಲ್ಲಿ ವಂದೇ ಭಾರತ್ ಓಡಿಸಬೇಕು ಎಂಬುದು ಗುರಿ. ಮಾರ್ಗ, ಸಮಯ ಸೇರಿದಂತೆ ಇದನ್ನು ಲಾಭದಾಯಕವಾಗಿಸಲು ಮತ್ತಷ್ಟು ಯೋಜನಾ ಬದ್ಧ ಕೆಲಸಗಳ ಅಗತ್ಯವಿದೆ.

ಮೂರು ಅಂಶಗಳ ಕಡೆ ಗಮನ ನೀಡಬೇಕು
ವಂದೇ ಭಾರತ್ ರೈಲು ಯೋಜನೆ ಅನುಷ್ಠಾನಗೊಳಿಸಲು ಮೂರು ಅಂಶಗಳ ಮೇಲೆ ಗಮನಹರಿಸಬೇಕಿದೆ. ಮೊದಲ ಹಂತದಲ್ಲಿ ರೈಲು 160 ಕಿ. ಮೀ. ವೇಗದಲ್ಲಿ ಸಂಚಾರ ನಡೆಸಲು ಹಳಿಗಳನ್ನು ಅಭಿವೃದ್ಧಿಗೊಳಿಸಬೇಕಿದೆ.
ಎರಡನೇಯದಾಗಿ ವಂದೇ ಭಾರತ್ ಸ್ಲೀಪರ್ ಆವೃತ್ತಿ ಪರಿಚಯಿಸಬೇಕು. 2018ರಲ್ಲಿ ಈ ಬಗ್ಗೆ ಯೋಜನೆ ತಯಾರಾಗಿದೆ. ಆದರೆ ಅದನ್ನು ಸ್ಥಗಿತಗೊಳಿಸಲಾಗಿದೆ. ಮತ್ತೆ ಕೆಲಸ ಆರಂಭಿಸಿದರೆ 2023ರ ಮಧ್ಯದಲ್ಲಿ ಈ ರೈಲು ತಯಾರಾಗಲಿದೆ. ಮೂರನೇಯ ಹಂತದಲ್ಲಿ ಭಾರತೀಯ ರೈಲ್ವೆ ರೈಲಿನ ನಿರ್ವಹಣೆ ಮಾಡಲು ಡಿಪೋಗಳನ್ನು ಸ್ಥಾಪನೆ ಮಾಡಬೇಕು. ಶತಾಬ್ದಿ ಮತ್ತು ಇತರ ರೈಲು ಸಂಚಾರ ನಡೆಸುವ 28 ಮಾರ್ಗದ 15 ನಿಲ್ದಾಣದಲ್ಲಿ ಇಂತಹ ಡಿಪೋಗಳು ಬರಬೇಕಿದೆ.

ಸಿಬ್ಬಂದಿಗೆ ತರಬೇತಿ, ಹಳಿಗಳ ಅಭಿವೃದ್ಧಿ
400 ವಂದೇ ಭಾರತ್ ರೈಲು ಸಂಚಾರ ನಡೆಸಲು ಗುರಿ ಹೊಂದಿರುವ ಕೇಂದ್ರ ಸರ್ಕಾರ ಅದಕ್ಕೆ ತಕ್ಕಂತೆ ಸಿಬ್ಬಂದಿಗಳಿಗೆ ತರಬೇತಿ ಕೊಡಬೇಕು, ರೈಲಿನ ನಿರ್ವಹಣೆಯತ್ತ ಗಮನಹರಿಸಬೇಕು. ಅಲ್ಲದೇ ವಂದೇ ಭಾರತ್ ರೈಲು ಟೆಂಡರ್ ಕರೆದಿರುವುದು 220 ಕಿ. ಮೀ. ವೇಗದಲ್ಲಿ ಸಂಚಾರ ನಡೆಸಲು. ಆದರೆ ಇಷ್ಟು ವೇಗವಾಗಿ ರೈಲು ಓಡಿಸಲು ಹಳಿಗಳೇ ಲಭ್ಯವಿಲ್ಲ. ಸದ್ಯ 160 ಕಿ. ಮೀ. ವೇಗಕ್ಕೆ ತಕ್ಕಂತೆ ರೈಲುಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ. ಮೂಲಭೂತ ಸೌಕರ್ಯಗಳು ಲಭ್ಯವಿಲ್ಲದೇ ಹೆಚ್ಚಿನ ವೇಗದಲ್ಲಿ ಸಂಚಾರ ನಡೆಸುವ ರೈಲುಗಳನ್ನು ವಿನ್ಯಾಸಗೊಳಿಸಿದರೆ ನಷ್ಟವಾಗುತ್ತದೆ ಎಂಬುದು ಸುಧಾಂಶು ಮಣಿ ಅವರ ಅಭಿಪ್ರಾಯವಾಗಿದೆ.












Click it and Unblock the Notifications