ಉಪ ರಾಷ್ಟ್ರಪತಿಯಾದ ಮೇಲೂ ಜನರೊಂದಿಗೆ ಬೆರೆಯುವೆ: ವೆಂಕಯ್ಯ
ಉಪರಾಷ್ಟ್ರಪತಿಯಾದ ನಂತರವೂ ಜನ ಸಂಪರ್ಕದಲ್ಲಿರುವೆ ಎಂದ ವೆಂಕಯ್ಯ ನಾಯ್ಡು. ಹೈದರಾಬಾದ್ ನಲ್ಲಿ ಆಗಸ್ಟ್ 9ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೀಗೆ ಹೇಳಿದ್ದಾರೆ.
ಹೈದರಾಬಾದ್, ಆಗಸ್ಟ್ 10: ಉಪರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ನಂತರವೂ ತಾವು ಜನರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸುವ ಪರಿಪಾಠ ಮುಂದುವರಿಸುವುದಾಗಿ ಭಾರತದ ನಿಯೋಜಿತ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.
ನೂತನ ಉಪರಾಷ್ಟ್ರಪತಿ ನಾಯ್ಡು ಅವರಿಗೆ ಬಿಎಸ್ ವೈ ಶುಭಹಾರೈಕೆ
ಇದೇ ತಿಂಗಳ 11ರಂದು ಉಪರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಹೈದರಾಬಾದ್ ನಲ್ಲಿ ಬುಧವಾರ ರಾತ್ರಿ ವೆಂಕಯ್ಯ ನಾಯ್ಡು ಅವರು ಮಾಧ್ಯಮಗಳೊಂದಿಗೆ ಸಂವಾದದಲ್ಲಿ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು,'' ಸಕ್ರಿಯ ರಾಜಕಾರಣಿಯಾಗಿ ಇದು ನನ್ನ ಕೊನೆಯ ಬಹಿರಂಗ ಸಾರ್ವಜನಿಕ ಸಮಾವೇಶವಾಗಿರಬಹುದು. ಆದರೆ, ಉಪರಾಷ್ಟ್ರಪತಿಯಾದ ನಂತರವೂ ನಾನು ಜನರೊಂದಿಗೆ ಮುಖಾಮುಖಿಯಾಗಲು ಬಯಸುತ್ತೇನೆ. ಉಪರಾಷ್ಟ್ರಪತಿಗೆ ನೀಡುವ 7 ಎಕರೆ ಬಂಗಲೆಯಲ್ಲಿ ಹಾಯಾಗಿ ಕುಳಿತುಕೊಳ್ಳಲಾರೆ. ಮಾಧ್ಯಮಗಳೊಂದಿಗೆ, ಜನರೊಂದಿಗೆ ಆಗಾಗ ಮುಖಾಮುಖಿಯಾಗುತ್ತೇನೆ'' ಎಂದು ಅವರು ತಿಳಿಸಿದರು.
ತಮ್ಮ ಮಾತುಗಳನ್ನು ಮುಂದುವರಿಸಿ, '' ನನ್ನ 50 ವರ್ಷಗಳ ರಾಜಕೀಯ ಜೀವನದಲ್ಲಿ ನಾನೆಂದಿಗೂ ಜನರ ಸಮಸ್ಯೆ ಆಲಿಸುವುದರಿಂದ ವಿಮುಖನಾಗಿಲ್ಲ. ಆಂಧ್ರಪ್ರದೇಶದ ಪ್ರತಿಯೊಂದು ಜಿಲ್ಲೆಗೂ ಭೇಟಿ ನೀಡಿದ್ದೇನೆ. ಜನರ ಸಮಸ್ಯೆಯನ್ನು ಆಲಿಸಿದ್ದೇನೆ. ಜನರನ್ನು, ಮಾಧ್ಯಮಗಳನ್ನು ಭೇಟಿ ಮಾಡುವ ಇದೇ ಪರಿಪಾಠವನ್ನು ಉಪರಾಷ್ಟ್ರಪತಿಯಾದ ನಂತರವೂ ಪಾಲಿಸುತ್ತೇನೆ'' ಎಂದು ಅವರು ತಿಳಿಸಿದರು.