'ಹಿಂದಿ' ಖಿಚಡಿಗೆ ಉಪ್ಪಿಟ್ಟು, ಚಿತ್ರಾನ್ನ ಭಾರೀ ಪೈಪೋಟಿ!

ನವದೆಹಲಿ, ನವೆಂಬರ್ 02 : ಖಿಚಡಿಯಂತಾದರೂ ಕರೆಯಿರಿ, ನಮ್ಮ ಕನ್ನಡ ಮಣ್ಣಿನ ಸೊಗಡಿರುವ ಹುಗ್ಗಿಯಂತಾದರೂ ಕರೆಯಿರಿ, ಅತ್ಯಂತ ಆರೋಗ್ಯಕರ ಮತ್ತು ಸ್ವಾದಿಷ್ಟಕರ ಖಾದ್ಯ 'ರಾಷ್ಟ್ರೀಯ ಖಾದ್ಯ'ವಾಗುವ ಅವಕಾಶದಿಂದ ವಂಚಿತವಾಗಿದೆ.

ನವೆಂಬರ್ 4ರಿಂದ ದೆಹಲಿಯಲ್ಲಿ ಆರಂಭವಾಗಲಿರುವ ಮೂರು ದಿನಗಳ 'ವರ್ಲ್ಡ್ ಫುಡ್ ಇಂಡಿಯಾ' ಉತ್ಸವದಲ್ಲಿ ಭಾರತದ ಖ್ಯಾತ ಬಾಣಸಿಗ ಸಂಜೀವ್ ಕಪೂರ್ ಅವರು ಒಂದೇ ಕಡಾಯಿಯಲ್ಲಿ 800 ಕೆಜಿ ತೂಕದ ಖಿಚಡಿಯನ್ನು ತಯಾರಿಸಲಿದ್ದಾರೆ ಮತ್ತು ವಿಶ್ವ ದಾಖಲೆ ಸೃಷ್ಟಿಸಲಿದ್ದಾರೆ.

ಇದೇ ಸಂದರ್ಭದಲ್ಲಿ, ಅಕ್ಕಿ ಮತ್ತಿತರ ಪರಿಕರಗಳಿಂದ ತಯಾರಿಸುವ ರುಚಿಕಟ್ಟಾದ ಹುಗ್ಗಿ ಅಥವಾ ಖಿಚಡಿಯನ್ನು ಜಾಗತಿಕವಾಗಿ ಜನಪ್ರಿಯಗೊಳಿಸಬೇಕೆಂದು ಉಮ್ಮೇದಿಯಿಂದ ಆರಂಭವಾಗಿದ್ದೇ ಖಿಚಡಿಯನ್ನು 'ರಾಷ್ಟ್ರೀಯ ಖಾದ್ಯ'ವನ್ನಾಗಿ ಮಾಡಬೇಕೆಂಬ ಅಭಿಯಾನ.

ಭಾರತೀಯ ತಿನಿಸುಗಳನ್ನು ಜಗತ್ತಿನಾದ್ಯಂತ ಇನ್ನಷ್ಟು ಜನಪ್ರಿಯಗೊಳಿಸಬೇಕು ಮತ್ತು ಆಹಾರ ಉದ್ಯಮಕ್ಕೆ ವಿದೇಶಿ ಬಂಡವಾಳ ಹರಿದುಬರಬೇಕು ಎಂಬ ಉದ್ದೇಶದಿಂದ ಆಹಾರ ಪರಿಷ್ಕರಣಾ ಉದ್ಯಮ ಖಾತೆ ಸಚಿವಾಲಯ ಈ ಉತ್ಸವವನ್ನು ಏರ್ಪಡಿಸಿದೆ.

ಆದರೆ, ಖಿಚಡಿಯನ್ನು ಅಥವಾ ಹುಗ್ಗಿಯನ್ನು ರಾಷ್ಟ್ರೀಯ ಖಾದ್ಯವನ್ನಾಗಿ ಘೋಷಿಸಬೇಕು ಎಂಬ ಆಶಯಕ್ಕೆ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಅವರು ಹುಳಿ ಹಿಂಡಿದ್ದು, ಹುಗ್ಗಿಯನ್ನು ರಾಷ್ಟ್ರೀಯ ಖಾದ್ಯವನ್ನಾಗಿ ಘೋಷಿಸಲಾಗುತ್ತದೆ ಎನ್ನುವುದು ಕಪೋಲಕಲ್ಪಿತ ಮಾತ್ರ, ವರ್ಲ್ಡ್ ಫುಡ್ ಇಂಡಿಯಾದಲ್ಲಿ ಅದೊಂದು ದಾಖಲೆಯಷ್ಟೇ ಎಂದು ಹುಗ್ಗಿ ಪ್ರೇಮಿಗಳ ಉತ್ಸಾಹವನ್ನು ಕಿವುಚಿದ್ದಾರೆ.

ಬ್ರಾಂಡ್ ಅಂಬಾಸಡರ್ ಸಂಜೀವ್ ಕಪೂರ್

ಬ್ರಾಂಡ್ ಅಂಬಾಸಡರ್ ಸಂಜೀವ್ ಕಪೂರ್

ಅಂದ ಹಾಗೆ, ಸೆಲೆಬ್ರಿಟಿ ಕುಕ್ ಸಂಜೀವ್ ಕಪೂರ್ ಅವರು ಸಾವಿರ ಲೀಟರ್ ಸಾಮರ್ಥ್ಯವಿರುವ, 7 ಅಡಿ ಅಗಲದ ಬಾಣಲೆಯಲ್ಲಿ ಸ್ಟೀಮ್ ಕುಕ್ಕಿಂಗ್ ಮೂಲಕ ಖಿಚಡಿಯನ್ನು ತಯಾರಿಸಲಿದ್ದಾರೆ ಗ್ರೇಟ್ ಇಂಡಿಯಾ ಫುಡ್ ಸ್ಟ್ರೀಟ್ ಅಭಿಯಾನದ ಬ್ರಾಂಡ್ ಅಂಬಾಸಡರ್ ಸಂಜೀವ್ ಕಪೂರ್.

ಉಪ್ಪಿಟ್ಟು ರಾಷ್ಟ್ರೀಯ ಖಾದ್ಯವಾಗಬೇಕು

ಉಪ್ಪಿಟ್ಟು ರಾಷ್ಟ್ರೀಯ ಖಾದ್ಯವಾಗಬೇಕು

ಉತ್ತರ ಭಾರತದಲ್ಲಿ ಮಾತ್ರ ಜನಪ್ರಿಯವಾಗಿರುವ ಖಿಚಡಿ ಯಾಕೆ ರಾಷ್ಟ್ರೀಯ ಖಾದ್ಯವಾಗಬೇಕು? ಎಂದು ಟ್ವಿಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ. ಇಡ್ಲಿ, ದೋಸೆ, ಪೊಂಗಲ್, ವಡಾ ಅಥವಾ ಉಪ್ಪಿಟ್ಟು ರಾಷ್ಟ್ರೀಯ ಖಾದ್ಯವಾಗಬೇಕು ಎಂದು ಫ್ರಾನ್ಸಿಸ್ ಸುಂದರ್ ಎಂಬುವವರು ವಾದವನ್ನು ಮುಂದಿಟ್ಟಿದ್ದಾರೆ.

ಉಪ್ಪಿಟ್ಟು ನಿಂತಲ್ಲೇ ಆತ್ಮಹತ್ಯೆ ಮಾಡಿಕೊಳ್ಳುತ್ತದೆ

ಉಪ್ಪಿಟ್ಟು ನಿಂತಲ್ಲೇ ಆತ್ಮಹತ್ಯೆ ಮಾಡಿಕೊಳ್ಳುತ್ತದೆ

ಖಿಚಡಿ ಅಂದ್ರೆ ಯಾವ ತಿನಿಸದು? ಎಂದು ಮತ್ತೊಬ್ಬರು ಪ್ರಶ್ನಿಸಿದ್ದು, ಯಪ್ಪೋ ಖಿಚಡಿ ಜನಪ್ರಿಯತೆ ಈಪರಿ ಹೆಚ್ಚುತ್ತಿದೆಯೆಂದರೆ, ನನ್ನ ಪ್ರೀತಿಯ ಉಪಮಾ ಅಥವಾ ಉಪ್ಪಿಟ್ಟು ನಿಂತ ನಿಂತಲ್ಲೇ ಆತ್ಮಹತ್ಯೆ ಮಾಡಿಕೊಂಡು ಬಿಡುತ್ತದೆ ಎಂದು ಶ್ರೀನಿಧಿ ಎಂಬುವವರು ನಗೆ ಅಲೆಯನ್ನು ಎಬ್ಬಿಸಿದ್ದಾರೆ.

ಚಿತ್ರಾನ್ನ ಏನು ತಪ್ಪು ಮಾಡಿದೆ?

ಚಿತ್ರಾನ್ನ ಏನು ತಪ್ಪು ಮಾಡಿದೆ?

ಈ ನಡುವೆ, ನನ್ನ ಖಿಚಡಿಗಿಂತಲೂ ಸೂಪರಾಗಿರುವ, ಅದಕ್ಕಿಂತಲೂ ಸ್ವಾದಿಷ್ಟವಾಗಿರುವ, ಅದಕ್ಕಿಂತಲೂ ಆರೋಗ್ಯಕರವಾಗಿರುವ ಚಿತ್ರಾನ್ನ ಏನು ತಪ್ಪು ಮಾಡಿದೆ ಎಂದು ಸುಭಾಶ್ ಎಂಬುವವರು ಪ್ರಶ್ನಿಸಿದ್ದಾರೆ. ನಿಜ, ಚಿತ್ರಾನ್ನ ಯಾವುದಕ್ಕಿಂತ ಕಮ್ಮಿ? ಎಲ್ಲ ಬ್ಯಾಚಲರುಗಳ ಅತ್ಯಂತ ಫೆವರಿಟ್ ಫುಡ್ ಅಂದ್ರೆ ಚಿತ್ರಾನ್ನವೇ ಅಲ್ಲವೆ?

ಪಶ್ಚಿಮ ಬಂಗಾಳದಲ್ಲಿ ರೊಸೊಗುಲ್ಲಾ ಹಲ್ಲಾಗುಲ್ಲಾ

ಪಶ್ಚಿಮ ಬಂಗಾಳದಲ್ಲಿ ರೊಸೊಗುಲ್ಲಾ ಹಲ್ಲಾಗುಲ್ಲಾ

ದಕ್ಷಿಣ ಭಾರತದಲ್ಲಿ ಖಿಚಡಿಯೊಂದಿಗೆ ಚಿತ್ರಾನ್ನ, ಉಪ್ಪಿಟ್ಟು, ಇಡ್ಲಿವಡಾಗಳು ಪೈಪೋಟಿಗಿಳಿಸಿದ್ದರೆ, ಪೂರ್ವದ ಮೂಲೆಯಲ್ಲಿರುವ ಪಶ್ಚಿಮ ಬಂಗಾಳದಲ್ಲಿ ರೊಸೊಗುಲ್ಲಾ (ರಸಗುಲ್ಲಾ)ವನ್ನು ರಾಷ್ಟ್ರೀಯ ಖಾದ್ಯವನ್ನಾಗಿ ಘೋಷಿಸಬೇಕೆಂದು ಹುಯಿಲೆಬ್ಬಿಸಿದ್ದಾರೆ ಬಾಬು ಮುಷಾಯರ್ ಗಳು ಎಂಬ ಸುದ್ದಿ ಹಬ್ಬುತ್ತಿದೆ.

ಖಿಚಡಿ ಎಂಬುದು ಹಿಂದಿ ಪದ ಅಲ್ವಾ?

ಖಿಚಡಿ ಎಂಬುದು ಹಿಂದಿ ಪದ ಅಲ್ವಾ?

ಖಿಚಡಿ ಎಂಬುದು ಹಿಂದಿ ಪದ ಅಲ್ವಾ? ಅಂತ ಕನ್ನಡಿಗರೊಬ್ಬರು ಲೈಟಾಗಿ ಪ್ರಶ್ನಿಸಿದ್ದಾರೆ. ಖಿಚಡಿ ಎಂಬುದು ಹಿಂದಿ ಪದವೇ ಆಗಿದ್ದರೆ, ಆಹಾರದ ಮೂಲಕ ಕೇಂದ್ರ ಮತ್ತೆ ಕನ್ನಡಿಗರ ಮೇಲೆ ಭಾಷೆಯನ್ನು ಹೇರಲು ಯತ್ನಿಸುತ್ತಿದೆ. ಖಿಚಡಿಗೆ ರಾಷ್ಟ್ರೀಯ ಮಾನ್ಯತೆ ನೀಡಲೇಬಾರದು ಎಂದು ಅವರ ವಾದ. ನಿಮ್ಮ ಪ್ರತಿವಾದವೇನು?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+