Rahul Gandhi from Raebareli: ಅಮೇಥಿ ಬಿಟ್ಟು ರಾಯ್ಬರೇಲಿಯಿಂದ ರಾಹುಲ್ ಗಾಂಧಿ ಕಣಕ್ಕಿಳಿಸಿದ ಕಾಂಗ್ರೆಸ್ ಲೆಕ್ಕಾಚಾರವೇನು?
ಲಕ್ನೋ, ಮೇ. 03 : 2024 ರ ಲೋಕಸಭೆ ಚುನಾವಣೆಗೆ ತನ್ನ ವಯನಾಡ್ ಕ್ಷೇತ್ರದ ಸಂಸದ ಮತ್ತು ಅಭ್ಯರ್ಥಿ ರಾಹುಲ್ ಗಾಂಧಿಯನ್ನು ಮತ್ತೆ ರಾಯ್ಬರೇಲಿ ಕ್ಷೇತ್ರದಿಂದ ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ ದೊಡ್ಡ ಲೆಕ್ಕಾಚಾರವನ್ನೆ ಹಾಕಿದೆ. ಈ ನಿರ್ಧಾರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ತನ್ನ ಅಜ್ಜ ಫಿರೋಜ್ ಗಾಂಧಿ, ಅಜ್ಜಿ ಇಂದಿರಾ ಗಾಂಧಿ ಮತ್ತು ತಾಯಿ ಸೋನಿಯಾ ಗಾಂಧಿ ಅವರು ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಣಕ್ಕಿಳಿಯುತ್ತಿದ್ದಾರೆ. ಗಾಂಧಿ ಕುಟುಂಬದ ಭದ್ರಕೋಟೆ ಎಂದು ಪರಿಗಣಿಸಲಾದ ರಾಯ್ ಬರೇಲಿಯಿಂದ ಸ್ಪರ್ಧಿಸಲಿರುವ ಗಾಂಧಿಗಳ ಮೂರನೇ ತಲೆಮಾರಿನವರಾಗಿದ್ದಾರೆ ರಾಹುಲ್. ಮೇ 3 ರಂದು ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಿದ್ದಾರೆ. ಮೇ 20 ರಂದು ಐದನೇ ಹಂತದಲ್ಲಿ ಈ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.

2019ರಲ್ಲಿ ಕೇರಳದ ವಯನಾಡ್ನಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿ ಅವರು ಅಮೇಥಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಸೋಲು ಕಂಡಿದ್ದರು. ಈ ಬಾರಿಯೂ ಅವರು ಮತ್ತೆ ಅಮೇಥಿಯಿಂದ ಕಣಕ್ಕಿಳಿಯುತ್ತಾರೆ ಎಂಬ ಊಹಾಪೋಹವಿತ್ತು. ಆದರೆ ಕಾಂಗ್ರೆಸ್ ಈ ಬಾರಿ ಅಮೇಥಿಯಿಂದ ಕಿಶೋರಿ ಲಾಲ್ ಶರ್ಮಾ ಅವರನ್ನು ಅಭ್ಯರ್ಥಿಯನ್ನಾಗಿ ಹೆಸರಿಸಿದೆ. ಹಾಗಾದರೆ, ರಾಹುಲ್ ಗಾಂಧಿ ಅವರನ್ನು ರಾಯ್ ಬರೇಲಿಯಿಂದ ಕಣಕ್ಕೆ ಇಳಿಸಿಲು ಕಾರಣವೇನು ಎಂಬುದನ್ನು ಈ ಲೇಖನದಲ್ಲಿ ಚರ್ಚೆ ಮಾಡೋಣ.
ರಾಯ್ ಬರೇಲಿಯಿಂದ ರಾಹುಲ್ ಗಾಂಧಿ ಸ್ಪರ್ಧಿಸಲು ಕಾರಣವೇನು?
ಗಾಂಧಿ ಕುಟುಂಬ 1952 ರಿಂದ ರಾಯ್ ಬರೇಲಿಯನ್ನು ಪ್ರತಿನಿಧಿಸಿದ್ದಾರೆ. ಫಿರೋಜ್ ಗಾಂಧಿ ಅವರು 1952 ಮತ್ತು 1957 ರಲ್ಲಿ ಈ ಕ್ಷೇತ್ರವನ್ನು ಗೆದ್ದರು. ಇಂದಿರಾ ಗಾಂಧಿ ಅವರು 1967 ಮತ್ತು 1977 ರ ನಡುವೆ ರಾಯ್ ಬರೇಲಿ ಎಂಪಿ ಆಗಿದ್ದರು. ಅವರು 1977 ರ ಚುನಾವಣೆಯ ನಂತರದ ಚುನಾವಣೆಯಲ್ಲಿ ಸೋತ ನಂತರ 1980 ರಲ್ಲಿ ಮತ್ತೆ ಸಂಸತ್ತಿಗೆ ಮರಳಿದರು. ಇಂದಿರಾ ಗಾಂಧಿಯವರು 1980 ರಲ್ಲಿ ರಾಯ್ ಬರೇಲಿಯನ್ನು ವಶಪಡಿಸಿಕೊಂಡರು. ಆದರೆ ಅವಿಭಜಿತ ಆಂಧ್ರಪ್ರದೇಶದ ತಮ್ಮ ಇನ್ನೊಂದು ಸ್ಥಾನವಾದ ಮೇದಕ್ ಅನ್ನು ಉಳಿಸಿಕೊಂಡರು.

2004 ರಿಂದ ಸೋನಿಯಾ ಗಾಂಧಿ ರಾಯ್ ಬರೇಲಿ ಸಂಸದರಾಗಿ ಉಳಿದಿದ್ದಾರೆ. ಗಾಂಧಿ ಕುಟುಂಬದ ನಿಕಟ ಸಂಬಂಧಿಗಳಾದ ಅರುಣ್ ನೆಹರು ಮತ್ತು ಶೀಲಾ ಕೌಲ್ ಕೂಡ ಈ ಸ್ಥಾನವನ್ನು ಪ್ರತಿನಿಧಿಸಿದ್ದಾರೆ. ರಾಯ್ ಬರೇಲಿ ಎಂದರೆ ಗಾಂಧಿ ಕುಟುಂಬ ಎನ್ನುವಂತಿದ್ದ ಸ್ಥಾನದಿಂದ ಈ ಬಾರಿ ಸೋನಿಯಾ ಗಾಂಧಿ ಹಿಂದೆ ಸರಿದಿದ್ದು, ರಾಹುಲ್ ಗಾಂಧಿ ಕಣಕ್ಕಿಳಿದಿದ್ದಾರೆ.
ಗಾಂಧಿ ಕುಟುಂಬದ ಸೇಫ್ ಪ್ಲೇಸ್!
ಅಮೇಥಿಗೆ ಹೋಲಿಸಿದರೆ ರಾಯ್ ಬರೇಲಿ ಗಾಂಧಿ ಕುಟುಂಬಕ್ಕೆ ಸುರಕ್ಷಿತ ಸ್ಥಾನ. ರಾಹುಲ್ ಗಾಂಧಿಗೆ ಅಮೇಥಿ ಎಂದರೆ ಮತ್ತೊಂದು ಕಠಿಣ ಸ್ಪರ್ಧೆ ಎಂದರ್ಥ. 2019 ರ ಚುನಾವಣೆಯಲ್ಲಿ, ಉತ್ತರ ಪ್ರದೇಶದ ಇತರ ಸ್ಥಾನಗಳಿಂದ ಕಾಂಗ್ರೆಸ್ ಕಿಕ್ ಔಟ್ ಆದ ನಂತರವೂ ಸೋನಿಯಾ ಗಾಂಧಿ ರಾಯ್ ಬರೇಲಿಯಲ್ಲಿ 55.8% ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಉತ್ತರ- ದಕ್ಷಿಣ ಸಮತೋಲನ
ಸೋನಿಯಾ ಗಾಂಧಿ ರಾಜ್ಯಸಭೆಗೆ ತೆರಳಿದ ನಂತರ ಕಾಂಗ್ರೆಸ್ನಿಂದ ಉತ್ತರ ಭಾರತವನ್ನು ಪ್ರತಿನಿಧಿಸುವ ಹಿರಿಯ ನಾಯಕರ ಅಗತ್ಯತೆ ಕಾಂಗ್ರೆಸ್ಗೆ ಇದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (ಕರ್ನಾಟಕ), ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ ಸಿ ವೇಣುಗೋಪಾಲ್ (ಕೇರಳ), ಮತ್ತು ಮುಖ್ಯ ವಕ್ತಾರ ಜೈರಾಮ್ ರಮೇಶ್ (ಕರ್ನಾಟಕ) ದಕ್ಷಿಣದವರು. ಉತ್ತರ ಭಾರತದಿಂದ ತನ್ನ ಉನ್ನತ ನಾಯಕನನ್ನು ಕಣಕ್ಕಿಳಿಸುವುದು ರಾಜಕೀಯವಾಗಿ ಉತ್ತಮ ನಿರ್ಧಾರ ಎನ್ನಲಾಗುತ್ತಿದೆ.
ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ. ಉತ್ತರ ಭಾರತದ ರಾಜ್ಯಗಳಲ್ಲಿ, ವಿಶೇಷವಾಗಿ ಬಿಜೆಪಿಯೊಂದಿಗೆ ನೇರ ಸ್ಪರ್ಧೆಯಲ್ಲಿರುವ ಆರು ರಾಜ್ಯಗಳಲ್ಲಿ ಅಧಿಕಾರವನ್ನು ಮರಳಿ ಪಡೆಯಲು ಬಯಸಿದರೆ ಅದರ ಸಂಖ್ಯೆಯನ್ನು ಸುಧಾರಿಸಬೇಕಾಗಿದೆ. ಲೋಕಸಭಾ ಚುನಾವಣೆಯ ಪೂರ್ವದಲ್ಲಿ, ಕಾಂಗ್ರೆಸ್ ಕರ್ನಾಟಕ ಮತ್ತು ತೆಲಂಗಾಣವನ್ನು ಗೆದ್ದುಕೊಂಡಿದೆ. ಆದರೆ ರಾಜಸ್ಥಾನ ಮತ್ತು ಛತ್ತೀಸ್ಗಢದಲ್ಲಿ ಅಧಿಕಾರವನ್ನು ಕಳೆದುಕೊಂಡಿತು. ಉತ್ತರ ಭಾರತದಲ್ಲಿ, ಕಾಂಗ್ರೆಸ್ ಹಿಮಾಚಲ ಪ್ರದೇಶದಲ್ಲಿ ಮಾತ್ರ ಅಧಿಕಾರದಲ್ಲಿದೆ. ಜಾರ್ಖಂಡ್ನಲ್ಲಿ ಆಡಳಿತಾರೂಢ ಒಕ್ಕೂಟದ ಒಂದು ಭಾಗವಾಗಿದೆ ಹೀಗಾಗಿ ಕಾಂಗ್ರೆಸ್ಗೆ ಉತ್ತರ ಭಾರತದಲ್ಲಿ ಸಮತೋಲನ ಕಾಪಾಡುವುದು ಮುಖ್ಯವಾಗಿದೆ.
ಕಿಶೋರಿ ಲಾಲ್ ಶರ್ಮಾ ಪ್ರಾಮುಖ್ಯತೆ
ಪ್ರಿಯಾಂಕಾ ಗಾಂಧಿ ಚುನಾವಣೆಯಿಂದ ಹೊರಗುಳಿದ ನಂತರ, ಪಕ್ಷವು ಅಮೇಥಿಗೆ ಗಾಂಧಿ ಕುಟುಂಬದ ನಿಷ್ಠಾವಂತ ಕಿಶೋರಿ ಲಾಲ್ ಶರ್ಮಾ ಅವರನ್ನು ಕಣಕ್ಕಿಳಿಸಿದೆ. ಪಕ್ಷವು ಮಾಜಿ ಸಂಸದೆ ಶೀಲಾ ಕೌಲ್ ಅವರ ಮೊಮ್ಮಗನನ್ನು ಅಮೇಥಿಯಿಂದ ಸಂಭಾವ್ಯ ಅಭ್ಯರ್ಥಿ ಎಂದು ಪರಿಗಣಿಸಿತ್ತು. ಕೊನೆ ಕ್ಷಣದಲ್ಲಿ ಸ್ಮೃತಿ ಇರಾನಿ ವಿರುದ್ಧ ಕಿಶೋರಿ ಲಾಲ್ ಶರ್ಮಾ ಅವರನ್ನು ಅಭ್ಯರ್ಥಿಯಾಗಿ ಘೋಷಿಸಲಾಗಿದೆ.
ಅಮೇಥಿಯಿಂದ ಸ್ಪರ್ಧಿಸದ ರಾಹುಲ್ ಗಾಂಧಿ ಅವರ ನಿರ್ಧಾರಕ್ಕೆ ಬಿಜೆಪಿ ನಾಯಕರು ಸಾಕಷ್ಟು ಟೀಕೆ ಮಾಡಿದ್ದಾರೆ. ಕೆಲವರು ಸ್ಮೃತಿ ಇರಾನಿ ವಿರುದ್ಧ ಮತ್ತೆ ಸೋಲುವ ಭಯದಿಂದ ಅಮೇಥಿಯಿಂದ 'ಪಲಾಯನ' ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅಮೇಥಿ, ಇನ್ನು ಗಾಂಧಿ ಕುಟುಂಬದ ಸ್ಥಾನವಲ್ಲ!
2019 ರಲ್ಲಿ ಸ್ಮೃತಿ ಇರಾನಿ ಅವರು ರಾಹುಲ್ ಗಾಂಧಿಯನ್ನು ಸೋಲಿಸಿದ ನಂತರ ಅಮೇಥಿ ಗಾಂಧಿ ಕುಟುಂಬದ ಸ್ಥಾನ ಎಂಬ ನೇಮ್ ಬೋರ್ಡ್ ಕಳೆದುಕೊಂಡಿತು ಎಂದು ಕಾಂಗ್ರೆಸ್ನೊಳಗಿನ ನಾಯಕರೆ ಮಾತನಾಡಿಕೊಳ್ಳುತ್ತಿದ್ದರು. ಇದೇ ಕಾರಣಕ್ಕೆ ಬೇರೋಬ್ಬರನ್ನು ನಿಲ್ಲಿಸಲಾಗಿದೆ. ರಾಹುಲ್ ಗಾಂಧಿ ಅಮೇಥಿಯಿಂದ ಸ್ಪರ್ಧಿಸಿದರೆ ರಾಹುಲ್ V/s ಸ್ಮೃತಿ ಇರಾನಿ ಹೋರಾಟವಾಗಿ ಪರಿವರ್ತನೆಯಾಗುತ್ತಿತ್ತು. ಆಗ ಉಳಿದ ಕ್ಷೇತ್ರಗಳಲ್ಲಿ ಪ್ರಚಾರ ಹೆಚ್ಚುತ್ತಿರಲಿಲ್ಲ. ರಾಹುಲ್ ಗಾಂಧಿ ಅವರು ಈ ಬಾರಿ ರಾಯ್ಬರೇಲಿಯಲ್ಲಿ ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ ಅವರನ್ನು ಎದುರಿಸಲಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ವಿರುದ್ಧ ದಿನೇಶ್ ಪ್ರತಾಪ್ ಸಿಂಗ್ ಸೋತಿದ್ದರು.
ಪ್ರಿಯಾಂಕಾಗಾಗಿ ರಾಹುಲ್ ಸ್ಪರ್ಧೆ!?
ಇನ್ನು, ರಾಹುಲ್ ಗಾಂಧಿ ಎರಡು ಸ್ಥಾನ ಗೆದ್ದರೆ ರಾಯ್ಬರೇಲಿಯಿಂದ ಹಿಂದುಳಿದು, ವಯನಾಡು ಉಳಿಸಿಕೊಳ್ಳುತ್ತಾರೆ ಎಂಬ ಗುಸುಗುಸು ಕಾಂಗ್ರೆಸ್ನಲ್ಲಿದೆ. ಚುನಾವಣೆಯಲ್ಲಿ ದೇಶಾದ್ಯಂತ ಪ್ರಚಾರ ನಡೆಸುತ್ತಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಯ್ಬರೇಲಿಯಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು. ಸೋನಿಯಾ ಗಾಂಧಿಯವರ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯಬಹುದು ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.












Click it and Unblock the Notifications