ಸುಪ್ರೀಂಕೋರ್ಟ್ ಶಿಫಾರಸ್ಸು ಮಾಡಿ ನ್ಯಾ. ಮುರಳೀಧರ್ ವರ್ಗಾವಣೆಗೆ ಏಕೆ ಹಿಂದೇಟು?
ನವದೆಹಲಿ, ಅಕ್ಟೋಬರ್ 12: ಮದ್ರಾಸ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿರುವ ನ್ಯಾಯಮೂರ್ತಿ ಎಸ್ ಮುರಳೀಧರ್ ಹೆಸರಿಗೆ ಕೇಂದ್ರ ಸರ್ಕಾರವು ಇನ್ನೂ ಅನುಮೋದನೆ ನೀಡಿಲ್ಲ. ಇದರ ಮಧ್ಯೆ ಸೆಪ್ಟೆಂಬರ್ 28ರ ನಿರ್ಣಯದ ಮೂಲಕ ಕೊಲಿಜಿಯಂ ವರ್ಗಾವಣೆಗೆ ಸೂಚಿಸಿದ ಇನ್ನೊಂದು ಹೆಸರನ್ನು ಸರ್ಕಾರ ಬುಧವಾರ ಅನುಮೋದಿಸಿದೆ.
ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಪಂಕಜ್ ಮಿಥಾಲ್ ಶೀಘ್ರದಲ್ಲೇ ರಾಜಸ್ಥಾನ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಆದರೆ ನ್ಯಾಯಮೂರ್ತಿ ಮುರಳೀಧರ್ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ದೆಹಲಿ ಹಿಂಸಾಚಾರ: ನ್ಯಾ.ಮುರಳೀಧರ್ ವರ್ಗಾವಣೆ ಬಗ್ಗೆ ಅಮಿತ್ ಶಾ ಮಾತು
ಈ ಹಿಂದೆ ದೆಹಲಿ ಹೈಕೋರ್ಟ್ನಿಂದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ಗೆ ನ್ಯಾಯಮೂರ್ತಿ ಮುರಳೀಧರ್ ಅನ್ನು ವರ್ಗಾವಣೆ ಮಾಡಿದ್ದು ಸಾಕಷ್ಟು ಸುದ್ದಿಯಾಗಿತ್ತು. ರಾತ್ರೋರಾತ್ರಿ ನಡೆದ ವರ್ಗಾವಣೆಯನ್ನು ಖಂಡಿಸಿದ ದೆಹಲಿ ವಕೀಲರ ಸಂಘವು ಪ್ರತಿಭಟನೆಯನ್ನು ನಡೆಸಿತ್ತು.
ನ್ಯಾ.ಮುರಳೀಧರ್ ವರ್ಗಾವಣೆ ಬಗ್ಗೆ ವಿವಾದ ಹುಟ್ಟಿದ್ದು ಏಕೆ?
2020ರ ಫೆಬ್ರವರಿ ತಿಂಗಳಿನಲ್ಲಿ ದೆಹಲಿಯಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಬಿಜೆಪಿಯ ಅನುರಾಗ್ ಠಾಕೂರ್, ಪರ್ವೇಶ್ ವರ್ಮಾ, ಅಭಯ್ ವೇಮಾ ಮತ್ತು ಕಪಿಲ್ ಮಿಶ್ರಾ ನೀಡಿದ ಪ್ರಚೋದನಕಾರಿ ಭಾಷಣದ ಹಿನ್ನೆಲೆ, ಅವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ನ್ಯಾಯಮೂರ್ತಿ ಮುರಳೀಧರ್ ಸೂಚನೆ ನೀಡಿದ್ದರು. "1984 ರಂತಹ ಮತ್ತೊಂದು ಘಟನೆ ಈ ದೇಶದಲ್ಲಿ ನಡೆಯಲು ನಾವು ಬಿಡುವುದಿಲ್ಲ" ಎಂದು ಅವರು ವಿಚಾರಣೆಯ ಸಂದರ್ಭದಲ್ಲಿ ಹೇಳಿದರು. ಇದಾಗಿ ಮರುದಿನವೇ ರಾತ್ರೋರಾತ್ರಿ ನ್ಯಾಯಮೂರ್ತಿಗಳಿಗೆ ವರ್ಗಾವಣೆ ಪತ್ರ ಕೈ ಸೇರಿತ್ತು.
ನ್ಯಾ.ಮುರಳೀಧರ್ ವರ್ಗಾವಣೆ ಖಂಡಿಸಿದ್ದ ದೆಹಲಿ ಬಾರ್ ಅಸೋಸಿಯೇಷನ್
''ಸುಪ್ರೀಂ ಕೋರ್ಟ್ ಕೊಲಿಜಿಯಂನಿಂದ ಜಾರಿಗೊಳಿಸಲಾಗಿದ್ದ ನ್ಯಾಯಮೂರ್ತಿ ಮುರಳೀಧರ್ ವರ್ಗಾವಣೆಯನ್ನು ದೆಹಲಿ ಹೈಕೋರ್ಟ್ ಬಾರ್ ಅಸೋಸಿಯೇಷನ್ ತೀವ್ರವಾಗಿ ಖಂಡಿಸಿತ್ತು. ಈ ರೀತಿಯ ವರ್ಗಾವಣೆಗಳು ನಮ್ಮ ಉದಾತ್ತ ಸಂಸ್ಥೆಗೆ ಹಾನಿಕಾರಕವಲ್ಲ, ಆದರೆ ಜನಸಾಮಾನ್ಯರ ನಂಬಿಕೆಯನ್ನು ನಾಶಮಾಡುತ್ತವೆ. ನ್ಯಾಯ ವಿತರಣಾ ವ್ಯವಸ್ಥೆಯಲ್ಲಿ ಅಪನಂಬಿಕೆಯನ್ನು ಹುಟ್ಟು ಹಾಕುತ್ತದೆ," ಎಂದು ವಕೀಲರ ಸಂಘದ ಹೇಳಿಕೆಯಲ್ಲಿ ದೂಷಿಸಲಾಗಿತ್ತು.
ಅಂದಿನ ರಾಷ್ಟ್ರಪತಿಗೆ ಹೋಗಿತ್ತು ಪತ್ರ
ರಾತ್ರೋರಾತ್ರಿ ನಡೆದ ನ್ಯಾಯಮೂರ್ತಿ ಮುರಳೀಧರ್ ವರ್ಗಾವಣೆ ಅನ್ನು ಖಂಡಿಸಿ ದೆಹಲಿ ಹೈಕೋರ್ಟ್ನಲ್ಲಿ ವಕೀಲರು ಒಂದು ದಿನ ಕೆಲಸಕ್ಕೆ ಗೈರಾಗಿದ್ದರು. ಅಂತಾರಾಷ್ಟ್ರೀಯ ವಕೀಲರ ಗುಂಪು ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಈ ವಿಷಯದ ಬಗ್ಗೆ ಪತ್ರವೊಂದನ್ನು ಬರೆದಿತ್ತು. ಆದರೆ ಫೆಬ್ರವರಿ 12ರಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ ನ್ಯಾಯಾಧೀಶರ ವರ್ಗಾವಣೆಯು ಮಾಮೂಲಿಯಾಗಿದೆ. ಅವರ ಒಪ್ಪಿಗೆಯನ್ನು ರೂಢಿಯಂತೆ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿತ್ತು.
ನ್ಯಾ.ಮುರಳೀಧರ್ ವೃತ್ತಿ ಬದುಕಿನ ಹಿನ್ನೆಲೆ
ದೆಹಲಿ ನ್ಯಾಯಮೂರ್ತಿ ಆಗಿ ಸೇವೆ ಸಲ್ಲಿಸಿದ್ದ ನ್ಯಾ. ಮುರಳೀಧರ್ ಭೋಪಾಲ್ ಅನಿಲ ದುರಂತದ ಸಂತ್ರಸ್ತರಿಗೆ ಮತ್ತು ನರ್ಮದಾ ನದಿಯ ಅಣೆಕಟ್ಟೆಯಿಂದ ನಿರಾಶ್ರಿತರಾದವರಿಗೆ ನ್ಯಾಯ ಸಿಗಬೇಕು ಎಂಬ ವಿಷಯವನ್ನು ತೆಗೆದುಕೊಳ್ಳುವ ಮೂಲಕ ತಮ್ಮ ವಕೀಲ ವೃತ್ತಿಯನ್ನು ಪ್ರಾರಂಭಿಸಿದ್ದರು.
ನ್ಯಾಯಮೂರ್ತಿ ಆಗಿ ನ್ಯಾ.ಮುರಳೀಧರ್ ಹಲವು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ಅವರ ಮಹತ್ವದ ತೀರ್ಪುಗಳಲ್ಲಿ 1984ರ ಸಿಖ್-ವಿರೋಧಿ ದಂಗೆಗಾಗಿ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರು. 1987ರಲ್ಲಿ 42 ಮುಸ್ಲಿಂ ಪುರುಷರನ್ನು ಎತ್ತಿಕೊಂಡು ಕೊಲ್ಲಲ್ಪಟ್ಟ ಹಾಶಿಂಪುರ ಹತ್ಯಾಕಾಂಡಕ್ಕಾಗಿ ಪೊಲೀಸರಿಗೆ ಶಿಕ್ಷೆ ವಿಧಿಸಿದ್ದ ಸಂದರ್ಭದಲ್ಲಿ ಅವರು ಹೈಕೋರ್ಟ್ನ ಭಾಗವಾಗಿದ್ದರು.