ಯಾರಾಗುತ್ತಾರೆ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ?
ನವದೆಹಲಿ, ಮೇ 25: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೊಂದು ಹೀನಾಯ ಸೋಲು ಕಂಡಿದೆ. ಕಾಂಗ್ರೆಸ್ ಪಕ್ಷದ ಕೇವಲ 52 ಜನ ಸಂಸದರಷ್ಟೆ ಈ ಬಾರಿ ಲೋಕಸಭೆ ಪ್ರವೇಶಿಸಿದ್ದಾರೆ. ಬಹುತೇಕ ಹಿರಿತಲೆಗಳು ಈ ಚುನಾವಣೆಯಲ್ಲಿ ಸೋಲು ಕಂಡಿವೆ.
ಕಡಿಮೆ ಕ್ಷೇತ್ರಗಳಲ್ಲಿ ಗೆದ್ದಿದ್ದರಿಂದಾಗಿ ಈಗಾಗಲೇ ಅಧಿಕೃತ ವಿರೋಧ ಪಕ್ಷ ಸ್ಥಾನವನ್ನು ಕಳೆದುಕೊಂಡಿರುವ ಕಾಂಗ್ರೆಸ್ಗೆ ಈಗ ಮತ್ತೊಂದು ತಲೆನೋವು ಕಾಡುತ್ತಿದೆ. ಅದೆಂದರೆ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಯಾರಾಗುತ್ತಾರೆ ಎನ್ನುವುದು.
ಕಳೆದ 16ನೇ ಲೋಕಸಭೆಯಲ್ಲಿಯೂ ಸಹ ಕಾಂಗ್ರೆಸ್ ಅಧಿಕೃತ ವಿರೋಧಪಕ್ಷವಾಗಿರಲಿಲ್ಲ, ಆಗ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕತ್ವವನ್ನು ಮಲ್ಲಿಕಾರ್ಜುನ ಖರ್ಗೆ ಅವರು ವಹಿಸಿಕೊಂಡಿದ್ದರು. ಆದರೆ ಈ ಬಾರಿ ಅವರು ಸೋತಿದ್ದಾರೆ. ಹಾಗಾಗಿ ಈ ಬಾರಿ ಯಾರಿಗೆ ಆ ಜವಾಬ್ದಾರಿ ಕೊಡುವುದೆಂಬ ಗೊಂದಲ ಕಾಂಗ್ರೆಸ್ನಲ್ಲಿದೆ.

ಶಶಿ ತರೂರ್ಗೆ ಸಿಗಬಹುದು ಅವಕಾಶ
ಕೇರಳದ ತಿರುವನಂತಪುರಂ ಕ್ಷೇತ್ರದಿಂದ ಗೆದ್ದಿರುವ ಶಶಿ ತರೂರ್ಗೆ ಅವಕಾಶ ಸಿಗಬಹುದೆಂಬ ಮಾತುಗಳು ಕೇಳಿಬರುತ್ತಿವೆಯಾದರೂ ಇನ್ನೂ ಅಧಿಕೃತವಾಗಿಲ್ಲ. ಅಲ್ಲದೆ ಅವರನ್ನು ಆಯ್ಕೆ ಮಾಡುವಲ್ಲಿಯೂ ಕೆಲವು ಸಮಸ್ಯೆಗಳಿವೆ.

ಶಶಿ ತರೂರ್ ಮೇಲೆ ಕೊಲೆಯ ಆರೋಪವಿದೆ
ಶಶಿ ತರೂರ ಪಾಂಡಿತ್ಯ ರಾಜಕೀಯ ಜ್ಞಾನದ ಮೇಲೆ ಅನುಮಾನುಗಳು ಕಾಂಗ್ರೆಸ್ ಗೆ ಇಲ್ಲ, ಆದರೆ ಅವರ ಸುತ್ತಾ ಸುತ್ತಿಕೊಂಡಿರುವ ಮಡದಿ ಸುನಂದಾ ಪುಷ್ಕರ್ ಕೊಲೆ ಆಪಾದನೆ ಕಾಂಗ್ರೆಸ್ ಅನ್ನು ಚಿಂತೆಗೀಡು ಮಾಡಿದೆ. ಆದರೆ ಈ ಬಾರಿ ಲೋಕಸಭೆಯಲ್ಲಿ ಭಯೋತ್ಪಾದನೆ ಆರೋಪಿಯೇ ಆಡಳಿತ ಪಕ್ಷದಲ್ಲಿರುವುದರಿಂದ ಶಶಿ ತರೂರ್ ಅವರನ್ನು ರಕ್ಷಿಸಿಕೊಳ್ಳಬಹುದೆಂಬ ಲೆಕ್ಕಾಚಾರ ಕಾಂಗ್ರೆಸ್ಗೆ ಇರದೇ ಇಲ್ಲ.

ರಾಹುಲ್ ಗಾಂಧಿ ಚುಕ್ಕಾಣಿ ಹಿಡಿಯಲಾರರು
ರಾಹುಲ್ ಗಾಂಧಿ ಅವರೇ ಸ್ವತಃ ತಾವೇ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿಯುತ್ತೇನೆ ಎಂದು ಹೇಳುವ ಪರಿಸ್ಥಿತಿಯಲ್ಲಿ ಸ್ವತಃ ಅವರಿಲ್ಲ. ಹಾಗಾಗಿಯೇ ಪಕ್ಷದ ಅಧ್ಯಕ್ಷರಾಗಿದ್ದರೂ ಕಳೆದ ಬಾರಿ ಅವರ ಬದಲಿಗೆ ಹಿರಿಯರಾದ ಖರ್ಗೆ ಅವರಿಗೆ ಸ್ಥಾನ ನೀಡಲಾಗಿತ್ತು.

ಹಲವು ಘಟಾನುಘಟಿಗಳು ಮಣ್ಣು ಮುಕ್ಕಿದ್ದಾರೆ
ಕಾಂಗ್ರೆಸ್ನ ಘಟಾನುಗಟಿಗಳು ಈ ಬಾರಿ ಚುನಾವಣೆಯಲ್ಲಿ ಮಣ್ಣು ಮುಕ್ಕಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ದಿಗ್ವಿಜಯ್ ಸಿಂಗ್, ಶೀಲಾ ದೀಕ್ಷಿತ್, ಭೂಪೇಂದ್ರ ಸಿಂಗ್ ಹೂಡಾ, ಹರೀಶ್ ರಾವತ್, ಸುಶೀಲ್ ಕುಮಾರ್ ಶಿಂಧೆ, ಅಶೋಕ್ ಚವಾಣ್, ನದಾಮ್ ಟುಕಿ, ಮುಕುಲ್ ಸಂಗ್ಮಾ ಅವರುಗಳು ಸೋಲನುಭವಿಸಿದ್ದಾರೆ.












Click it and Unblock the Notifications