ಸಾಧ್ವಿ ನಿರಂಜನ್ ಜ್ಯೋತಿ ಯಾರು, ಕ್ಷಮೆ ಬೇಡಿದ್ದು ಏಕೆ?
ಪ್ರಧಾನಿ ನರೇಂದ್ರ ಮೋದಿ ಸಂಪುಟದ ಅತ್ಯಂತ ಕಡಿಮೆ ಆಸ್ತಿವಂತ ರಾಜ್ಯ ಸಚಿವೆ 47 ವರ್ಷ ವಯಸ್ಸಿನ ಸಾಧ್ವಿ ನಿರಂಜನ್ ಜ್ಯೋತಿ ಬಾಯ್ತೆರೆದರೆ ಬಣ್ಣಗೇಡು ಎಂಬ ಪರಿಸ್ಥಿತಿಗೆ ಸಿಲುಕಿದ್ದಾರೆ. ಮೋದಿ ಅವರ ಎಚ್ಚರಿಕೆಯ ನುಡಿಗಳ ನಂತರ ಕ್ಷಮೆಯಾಚನೆ ಮಾಡಿದ್ದಾರೆ. ಅದರೆ, ಪ್ರತಿಪಕ್ಷಗಳು ಸಂಸದೆಯನ್ನು ಸರ್ಕಾರದಿಂದ ವಜಾ ಮಾಡಿ ಎಂದು ವರಾತ ಹಿಡಿದಿವೆ. ಈ ದಿನ ಎಲ್ಲರ ಚರ್ಚೆಗೆ ಸಿಲುಕಿರುವ ಸಾಧ್ವಿ ನಿರಂಜನ್ ಜ್ಯೋತಿ ಅವರ ಹಿನ್ನೆಲೆ, ವಿವಾದದ ಸುತ್ತ ಒಂದು ನೋಟ ಇಲ್ಲಿದೆ...
ಉತ್ತರಪ್ರದೇಶದ ಫತೇಪುರ್ ಕ್ಷೇತ್ರದಿಂದ ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾದ ಸಾಧ್ವಿ ಜ್ಯೋತಿ ಅವರಿಗೆ ಮೊದಲ ಬಾರಿಗೆ ಮೋದಿ ಅವರ ಸಂಪುಟ ಸೇರುವ ಅವಕಾಶ ಲಭ್ಯವಾಯಿತು. ಜ್ಯೂನಿಯರ್ ಸೆಂಟ್ರಲ್ ಮಿನಿಸ್ಟರ್ ಎನಿಸಿಕೊಂಡುಬಿಟ್ಟರು. ನ.10,2014ರಂದು ಆಹಾರ ಸಂಸ್ಕರಣಾ ಖಾತೆಯ ರಾಜ್ಯ ಸಚಿವೆಯಾಗಿ ಮೋದಿ ಸಂಪುಟಕ್ಕೆ ಸಾಧ್ವಿ ಸೇರ್ಪಡೆಗೊಂಡರು. [ಮೋದಿ ಎಚ್ಚರಿಕೆ ನಂತರ ಸಾಧ್ವಿ ಕ್ಷಮೆಯಾಚನೆ]
ಉಮಾಭಾರತಿ, ಸುಷ್ಮಾ ಸ್ವರಾಜ್ ರಿಂದ ಮೊದಲಗೊಂಡು ಬಿಜೆಪಿಯಲ್ಲಿ ಫೈರ್ ಬ್ರಾಂಡ್ ಮಹಿಳಾ ವಾಕ್ ಚತುರೆಯರಿಗೇನು ಕಡಿಮೆಯಿಲ್ಲ. ಸಾಧ್ವಿ ನಿರಂಜನ್ ಜ್ಯೋತಿ ಅವರ ಬಿಜೆಪಿ ಒಡನಾಟದ ಬಗ್ಗೆ ವಿವರ ಇಲ್ಲಿದೆ:
* 1967ರಲ್ಲಿ ಜನಿಸಿದ ಅವರು 2002ರಲ್ಲಿ ಹಾಅಗೂ 2007ರಲ್ಲಿ ಉತ್ತರಪ್ರದೇಶ ಅಸೆಂಬ್ಲಿಗೆ ಸ್ಪರ್ಧಿಸಿ ಸೋಲುಕಂಡಿದ್ದರು. ಮತ್ತೊಮ್ಮೆ 2012ರಲ್ಲಿ ಗೆಲುವಿನ ರುಚಿ ಕಂಡಿದ್ದರು.
* ಉತ್ತರ ಪ್ರದೇಶದ ಸಾಧ್ವಿ ನಿರಂಜನ್ ಜ್ಯೋತಿ ಅವರು ಧಾರ್ಮಿಕ ಬೋಧಕರಾಗಿದ್ದುಕೊಂಡು ದಲಿತ ಹಾಗೂ ಹಿಂದುಳಿದ ವರ್ಗಗಳು ಬಿಜೆಪಿಯತ್ತ ಒಲಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
* ಫತೇಪುರದಲ್ಲಿ ಬಿಜೆಪಿಗೆ ಕಶ್ಯಪ ಹಾಗೂ ನಿಷಾದ ಸಮುದಾಯದ ಮತಗಳು ಹರಿಯುವಂತೆ ಮಾಡಿದ್ದಲ್ಲದೆ ಗೆಲುವು ಸಾಧಿಸಿ ಕೇಂದ್ರ ಸಚಿವೆಯಾದರು.
* ಕಳೆದ ಜೂನ್ ನಲ್ಲಿ ಸಾಧ್ವಿ ಜ್ಯೊತಿ ಸುದ್ದಿಯಲ್ಲಿದ್ದರು. ಮೂವರು ದುಷ್ಕರ್ಮಿಗಳು ಮಾಡಿದ ಹತ್ಯೆ ಯತ್ನದಿಂದ ಸ್ವಲ್ಪದರಲ್ಲೇ ಬಚಾವಾಗಿದ್ದರು.
* ಉತ್ತರಪ್ರದೇಶದಲ್ಲಿ ಪ್ರಮುಖ ಮತಬ್ಯಾಂಕ್ ಎನಿಸಿರುವ ನಿಷಾದ ಸಮುದಾಯಕ್ಕೆ ಸಾಧ್ವಿ ಜ್ಯೋತಿ ಸೇರಿದವರಾಗಿದ್ದಾರೆ. ಸ್ವಾಮಿ ಅಚ್ಯುತಾನಂದ ಅವರ ಶಿಷ್ಯೆಯಾಗಿರುವ ಸಾಧ್ವಿ XII ತನಕ ಓದಿದ್ದಾರೆ.
* 2012ರಲ್ಲಿ ಹಮೀರ್ ಪುರ ಅಸೆಂಬ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸಿ ಜನಪ್ರತಿನಿಧಿಯಾದರು.
* ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ವಿವರದ ಪ್ರಕಾರ ಸ್ಥಿರಾಸ್ತಿ 2.95 ಲಕ್ಷ ಹಾಗೂ ಚರಾಸ್ತಿ 23 ಲಕ್ಷ ರು ನಷ್ಟಿದೆ. ಇತ್ತೀಚಿನ ಎಣಿಕೆ ಪ್ರಕಾರ ಸಾಧ್ವಿ ಅವರ ಆಸ್ತಿ ಮೌಲ್ಯ 37 ಲಕ್ಷ ದಾಟುವುದಿಲ್ಲ.[ಕಡಿಮೆ ಆಸ್ತಿ ಹೊಂದಿರುವವರ ವಿವರ]
* ಸಾಧ್ವಿಯಾಗಿರುವ ಜ್ಯೋತಿ ಅವರು ಸದಾಕಾಲ ಕೇಸರಿ ವಸ್ತ್ರ, ಹಣೆಯಲ್ಲಿ ತಿಲಕ ಧರಿಸಿರುತ್ತಾರೆ. ಮಂತ್ರ ಪಠಣ, ಹಿಂದೂ ಸಂಸ್ಕೃತಿ ಅನುಗುಣವಾದ ನಡೆ ನುಡಿ ಇರುವ ಹೆಗ್ಗುರುತು.
* ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವಹಿಂದೂ ಪರಿಷತ್ ಹಾಗೂ ಸಮುದಾಯದ ಬೆಂಬಲ ಬಲದ ನಿರೀಕ್ಷೆಯಲ್ಲಿ ಫೈರ್ ಬ್ರ್ಯಾಂಡ್ ಮಾತುಗಳನ್ನಾಡುವುದು ಇವರಿಗೆ ರೂಢಿಯಾಗಿದೆ.
ವಿವಾದಿತ ಹೇಳಿಕೆ ಏನು?: "Aapko tay karna hai ki Dilli mein sarkar Ramzadon ki banegi ya har**zadon ki."ಎಂದಿದ್ದರು. ದೆಹಲಿ ಜನತೆಗೆ ನಿಮಗೆ ಶ್ರೀರಾಮಭಕ್ತರ (ಬಿಜೆಪಿ) ಸರ್ಕಾರ ಬೇಕೋ ಅಥವಾ ಅಕ್ರಮ ಸಂತಾನದವರ (ಸೋನಿಯಾ-ಕಾಂಗ್ರೆಸ್) ಸರ್ಕಾರ ಬೇಕೋ ಎಂಬುದನ್ನು ನೀವೇ ನಿರ್ಧರಿಸಿ ಎಂದರು.
ಯಾವಾಗ ನೀಡಿದ ಹೇಳಿಕೆ: ಡಿ.1 ರಂದು ನವದೆಹಲಿಯ ಶ್ಯಾಮ್ ನಗರದಲ್ಲಿ ಮಾಡಿದ ಭಾಷಣದ ವೇಳೆ ಸಾಧ್ವಿ ನಿರಂಜನ್ ಜ್ಯೋತಿ ವಿವಾದಿತ ಹೇಳಿಕೆ ನೀಡಿದ್ದರು.
ಏನೆಂದು ಸಮರ್ಥನೆ ನೀಡಿದ್ದರು: ನರೇಂದ್ರ ಮೋದಿಯವರು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದಾರೆ. ಅವರನ್ನು ಬೆಂಬಲಿಸಿ. ಅದರ ಬದಲು ಭ್ರಷ್ಟಾಚಾರದಲ್ಲಿ ಮುಳುಗಿರುವವರಿಗೆ ಮತ ಹಾಕಬೇಡಿ. ರಾಮನಲ್ಲಿ ನಂಬಿಕೆ ಇಟ್ಟಿರುವವರಿಗೆ ಮತ ನೀಡಬೇಕೋ ಅಥವಾ ರಾಮನಲ್ಲಿ ನಂಬಿಕೆಯಿಲ್ಲದ ಪಾಮರರಿಗೆ ಮತ ನೀಡಬೇಕೋ ಎಂಬುದು ನಿಮ್ಮ ನಿರ್ಧಾರಕ್ಕೆ ಬಿಟ್ಟಿದ್ದು ಎಂದಿದ್ದರು.
ಕ್ಷಮೆಯಾಚನೆ: ನಾನು ಯಾವುದೇ ಕೆಟ್ಟ ಉದ್ದೇಶದಿಂದ ಈ ಮಾತುಗಳನ್ನಾಡಿಲ್ಲ, ನಾನು ಹೇಳಿದ ಮಾತುಗಳನ್ನು ಹಿಂಪಡೆಯುತ್ತೇನೆ ಹಾಗೂ ಹೃದಯಪೂರ್ವಕವಾಗಿ ಕ್ಷಮೆಯಾಚಿಸುತ್ತೇನೆ. ನನ್ನ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದು ಸಂಸತ್ತಿನಲ್ಲಿ ಕ್ಷಮೆಯಾಚಿಸಿದರು.
ಸಂದರ್ಭವನ್ನು ಬಿಜೆಪಿ ಹೇಗೆ ನಿಭಾಯಿಸಿತು?: ಸಾಧ್ವಿ ನಿರಂಜನ್ ಜ್ಯೋತಿ ಅವರು ಮೊದಲ ಬಾರಿಗೆ ಸಂಸದರಾಗಿದ್ದಾರೆ. ಅವರಿಗೆ ಇನ್ನೂ ಹೇಗೆ ಮಾತನಾಡಬೇಕು ಎಂಬುದರ ಅರಿವಿಲ್ಲ, ಬಾಯಿ ತಪ್ಪಿನಿಂದ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಪ್ರತಿಕ್ರಿಯಿಸಿತ್ತು.
ಅದರೆ, ನಂತರ ಪ್ರತಿಪಕ್ಷಗಳ ಪ್ರತಿಭಟನೆ ಬಿಸಿ ತಟ್ಟಿದ ಮೇಲೆ, ಪ್ರಧಾನಿ ಮೋದಿ ಅವರು ಸಾಧ್ವಿ ಅವರಿಗೆ ಖುದ್ದು ಎಚ್ಚರಿಕೆ ಸಂದೇಶ ಕಳಿಸಿದರು. ಸಚಿವೆ ಸಾಧ್ವಿ ಅವರು ಕ್ಷಮೆಯಾಚಿಸಿದ ಬಳಿಕ ಮತ್ತೊಮ್ಮೆ ಬಿಜೆಪಿ ಪ್ರತಿಪಕ್ಷಗಳ ಮೇಲೆ ಮುಗಿಬೀಳತೊಡಗಿತು.
ಈ ಹಿಂದೆ ಕೂಡಾ ಯುಪಿಎ ಸರ್ಕಾರದ ಸಚಿವರು ವಿವಾದಿತ ಹೇಳಿಕೆಗಳನ್ನು ನೀಡಿದ ಉದಾಹರಣೆಗಳಿವೆ. ತಪ್ಪಿ ಮಾಡಿದವರು ತಿದ್ದಿ ನಡೆಯಲು ಅವಕಾಶ ನೀಡಬೇಕು ಎಂದು ಬಿಜೆಪಿ ಪ್ರಕರಣಕ್ಕೆ ಇತಿಶ್ರೀ ಹಾಡಿದೆ.