ದೇಶವನ್ನು ಪ್ರೀತಿಸದವರು ಹಿಂದಿ ವಿರೋಧಿಸುತ್ತಾರೆ: ಬಿಜೆಪಿ ಸಿಎಂ ವಿವಾದ
ಅಗರ್ತಲಾ, ಸೆಪ್ಟೆಂಬರ್ 17: ಹಿಂದಿ ಹೇರಿಕೆ ಬಗ್ಗೆ ದೇಶದೆಲ್ಲೆಡೆ ವಿವಾದ ಹೊತ್ತಿ ಉರಿಯುತ್ತಿರುವಾಗಲೇ ತ್ರಿಪುರಾ ರಾಜ್ಯದ ಬಿಜೆಪಿ ಸಿಎಂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
'ಒಂದು ದೇಶ, ಒಂದು ಭಾಷೆ' ಎಂದು ಕೆಲವು ದಿನಗಳ ಹಿಂದಷ್ಟೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿಕೆ ಬೆಂಬಲ ನೀಡುವ ಮಾತನ್ನಾಡಿರುವ ತ್ರಿಪುರಾ ಸಿಎಂ ಬಿಪ್ಲದ್ ಕುಮಾರ್ ದೇಬ್, 'ಹಿಂದಿಯನ್ನು ವಿರೋಧಿಸುವವರು, ದೇಶವನ್ನು ಪ್ರೀತಿಸುವುದಿಲ್ಲ' ಎಂದಿದ್ದಾರೆ.
ಆ ಮೂಲಕ ದೇಶದ ಮೇಲೆ ಹಿಂದಿಯನ್ನು ಹೇರಲು, ದೇಶಪ್ರೇಮವನ್ನು ದಾಳವನ್ನಾಗಿ ಬಳಸುವ ಪ್ರಯತ್ನವನ್ನು ತ್ರಿಪುರಾ ಸಿಎಂ ಮಾಡಿದ್ದಾರೆ. ಹಿಂದಿ ದಿವಸ್ ಸಂದರ್ಭ ಹಿಂದಿಯನ್ನು ದೇಶದ ಭಾಷೆಯಾಗಿಸುವ ಬಗ್ಗೆ ಅಮಿತ್ ಶಾ ಆಡಿದ್ದ ಮಾತುಗಳು ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದವು. ಈಗ ಬಿಪ್ಲದ್ ಕುಮಾರ್ ದೇಬ್ ಅವರು ವಿಷಯವನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ದಿದ್ದಾರೆ.

ಮುಂದುವರೆದು ಮಾತನಾಡಿರುವ ತ್ರಿಪುರ ಸಿಎಂ, 'ಯಾರು ದೇಶವನ್ನು ಪ್ರೀತಿಸುವುದಿಲ್ಲವೋ ಅವರು ಹಿಂದಿ ರಾಷ್ಟ್ರ ಭಾಷೆ ಆಗಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ' ಎಂದು ಹೇಳಿದ್ದಾರೆ.
'ದೇಶದ ಬಹುಜನರು ಹಿಂದಿ ಮಾತನಾಡುತ್ತಿರುವ ಕಾರಣ, ಹಿಂದಿ ರಾಷ್ಟ್ರಭಾಷೆ ಆಗಲೆಂದು ನಾನು ಬೆಂಬಲ ನೀಡುತ್ತಿದ್ದೇನೆ' ಎಂದಿರುವ ಅವರು, ಹಾಗೆಂದು ನಾನು ಇಂಗ್ಲಿಷ್ ಭಾಷೆಯ ವಿರೋಧಿ ಅಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ದಕ್ಷಿಣ ಭಾರತದ ರಾಜ್ಯಗಳು, ಪಶ್ಚಿಮ ಬಂಗಾಳ ಸೇರಿ ಇನ್ನೂ ಕೆಲವು ರಾಜ್ಯಗಳು ಈಗಾಗಲೇ ತೀವ್ರ ಆಕ್ರೋಶವನ್ನು ಹೊರಹಾಕಿದ್ದು. ಕರ್ನಾಟಕ ಸಿಎಂ ಯಡಿಯೂರಪ್ಪ ಸಹ ಅಮಿತ್ ಶಾ ಮಾತಿಗೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.












Click it and Unblock the Notifications