ಕೊರೊನಾ ಸೋಂಕಿಗೆ ಬಲಿಯಾದವರಲ್ಲಿ ಯಾವ ವಯಸ್ಸಿನವರ ಪ್ರಮಾಣ ಹೆಚ್ಚಿದೆ...
ನವದೆಹಲಿ, ಜೂನ್ 29: ದೇಶದಲ್ಲಿ ಕೊರೊನಾ ಸೋಂಕು 50ರ ವಯೋಮಾನದ ಒಳಗಿನವರನ್ನು ಹೆಚ್ಚಾಗಿ ಬಲಿ ಪಡೆದಿದೆ ಎಂದು ದೆಹಲಿಯ ಏಮ್ಸ್ ನಡೆಸಿದ ಇತ್ತೀಚಿನ ಅಧ್ಯಯನ ತಿಳಿಸಿದೆ.
ಕೊರೊನಾ ಸೋಂಕಿನಿಂದ ಸಂಭವಿಸಿದ ಮರಣ ಪ್ರಮಾಣ ಹಾಗೂ ಸೋಂಕಿನಿಂದ ಯಾವ ವಯೋಮಾನದವರ ಮರಣ ಪ್ರಮಾಣ ಹೆಚ್ಚಿದೆ ಎಂಬ ಕುರಿತು ಏಮ್ಸ್ ಅಧ್ಯಯನ ನಡೆಸಿದ್ದು, ಇದರಲ್ಲಿ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ, ಏಮ್ಸ್ ಟ್ರೌಮಾ ಸೆಂಟರ್ ಮುಖ್ಯಸ್ಥ ಡಾ. ರಾಕೇಶ್ ಮಲ್ಹೋತ್ರಾ ಹಾಗೂ ಇನ್ನಿತರರು ಭಾಗಿಯಾಗಿದ್ದರು. ಇಂಡಿಯನ್ ಜರ್ನಲ್ ಆಫ್ ಕ್ರಿಟಿಕಲ್ ಕೇರ್ ಮೆಡಿಸನ್ನಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದ್ದು, ಕಳೆದ ವರ್ಷ ಏಪ್ರಿಲ್ 4ರಿಂದ ಜುಲೈ 24ರ ಅವಧಿಯಲ್ಲಿ ಸಾವನ್ನಪ್ಪಿದ ಕೊರೊನಾ ರೋಗಿಗಳ ಪ್ರಾಥಮಿಕ ಮೌಲ್ಯಮಾಪನವನ್ನು ನಡೆಸಲಾಗಿದೆ. ಮುಂದೆ ಓದಿ...

18-50ರ ವಯೋಮಾನದವರ ಮರಣ ಪ್ರಮಾಣ 42.1%
ಭಾರತದಲ್ಲಿ ತೆರೆಯಲಾದ ಕೋವಿಡ್ ಕೇಂದ್ರಗಳಿಗೆ ದಾಖಲಾದ ರೋಗಿಗಳ ಮರಣ ಪ್ರಮಾಣ ಹಾಗೂ ಮರಣಕ್ಕೆ ಕಾರಣಗಳನ್ನು ಕಂಡುಕೊಳ್ಳಲು ಈ ಏಮ್ಸ್ ಅಧ್ಯಯನ ನಡೆಸಿದೆ. ಈ ಅಧ್ಯಯನ ಸಮಯದಲ್ಲಿ ಐಸಿಯುಗೆ ಸುಮಾರು 654 ರೋಗಿಗಳು ದಾಖಲಾಗಿದ್ದರು. ಇದರಲ್ಲಿ 247 ಮಂದಿ ಸಾವನ್ನಪ್ಪಿದ್ದು, ಮರಣ ಪ್ರಮಾಣ 37.7% ದಾಖಲಾಗಿದೆ. ಅಧ್ಯಯನವನ್ನು ಸರಳಗೊಳಿಸಲು ವಯೋಮಾನದ ಆಧಾರದ ಮೇಲೆ ಮರಣ ಪ್ರಮಾಣ ವಿಂಗಡಣೆ ಮಾಡಲಾಗಿದೆ. 18 ರಿಂದ 50, 51 ರಿಂದ 65 ಮತ್ತು 65ಕ್ಕಿಂತ ಮೇಲ್ಪಟ್ಟ ವಯಸ್ಕ ರೋಗಿಗಳೆಂದು ವಿಂಗಡಣೆ ಮಾಡಲಾಗಿದ್ದು, ಇದರಲ್ಲಿ ಮರಣವನ್ನಪ್ಪಿದ 18-50ರ ವಯೋಮಾನದ ನಡುವಿನ ರೋಗಿಗಳ ಪ್ರಮಾಣ 42.1% ಇದೆ. 51-65 ವಯೋಮಾನದ ರೋಗಿಗಳ ಪ್ರಮಾಣ 34.8% ಇದ್ದು, 65ಕ್ಕಿಂತ ಮೇಲ್ಪಟ್ಟವರ ಪ್ರಮಾಣ 23.1% ದಾಖಲಾಗಿದೆ.

ಮರಣಕ್ಕೆ ಯಾವುದು ಪ್ರಮುಖ ಕಾರಣವಾಗಿತ್ತು?
ಮರಣವನ್ನಪ್ಪಿದ ಈ ಕೊರೊನಾ ರೋಗಿಗಳಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ, ದೀರ್ಘಕಾಲದ ಮೂತ್ರಪಿಂಡ ಸಮಸ್ಯೆಗಳು ಕಂಡುಬಂದಿವೆ. ಈ ರೋಗಿಗಳು ತೀವ್ರ ಜ್ವರ, ಕೆಮ್ಮು ಹಾಗೂ ಉಸಿರಾಟದ ತೊಂದರೆಗೂ ಒಳಗಾಗಿದ್ದರು ಎಂಬುದು ತಿಳಿದುಬಂದಿದೆ. ಸೋಂಕಿನಿಂದ ಸಾವನ್ನಪ್ಪಿದ ರೋಗಿಗಳ ಮಾಹಿತಿಯನ್ನು ಎಲೆಕ್ಟ್ರಾನಿಕ್ ಮೆಡಿಸನ್ ವರದಿ, ದೈನಂದಿನ ಔಷಧ ಪಟ್ಟಿ ಹಾಗೂ ಶುಶ್ರೂಷಣಾ ಪಟ್ಟಿಯಿಂದ ಸಂಗ್ರಹಿಸಲಾಗಿದೆ. ಅಮೆರಿಕ, ಸ್ಪೇನ್ ಹಾಗೂ ಇಟಲಿಯಂಥ ಇತರೆ ದೇಶಗಳಲ್ಲಿಯೂ ಈ ಮಟ್ಟದ ಮರಣ ಪ್ರಮಾಣ ದಾಖಲಾಗಿದೆ.

ಮಕ್ಕಳಿಗೆ ಶೀಘ್ರ ಕೊರೊನಾ ಲಸಿಕೆ
ಕೊರೊನಾ ಸೋಂಕು ಮಕ್ಕಳ ಮೇಲೆ ಪರಿಣಾಮ ಬೀರಬಹುದಾದ ಆತಂಕ ವ್ಯಕ್ತಗೊಂಡಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಮಕ್ಕಳಿಗೆ ಲಸಿಕೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. "ಲಸಿಕೆಯೊಂದೇ ಸೋಂಕಿಗೆ ಪರಿಣಾಮಕಾರಿ ಅಸ್ತ್ರ ಹಾಗೂ ಸೋಂಕಿನಿಂದ ಹೊರಗುಳಿಯಬಹುದಾದ ದಾರಿ" ಎಂದು ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಹೇಳಿದ್ದು, ಮಕ್ಕಳಿಗೆ ಶೀಘ್ರದಲ್ಲೇ ಲಸಿಕೆಗಳು ಲಭ್ಯಯವಾಗಲಿವೆ. ನಂತರ ಮಕ್ಕಳಿಗೆ ಶಾಲೆಗಳನ್ನು ತೆರೆಯಬಹುದಾಗಿದೆ ಎಂದಿದ್ದಾರೆ.

ಏಪ್ರಿಲ್ ನಂತರ ತಗ್ಗಿರುವ ಮರಣ ಪ್ರಮಾಣ
ಸೋಮವಾರದ ವರದಿಯಂತೆ ಭಾರತದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿ ದಾಖಲೆಯ ಇಳಿಕೆ ಕಂಡುಬಂದಿದೆ. ಎರಡು ತಿಂಗಳ ನಂತರದಲ್ಲಿ ಮೊದಲ ಬಾರಿಗೆ ಸಾವಿನ ಸಂಖ್ಯೆ 1,000ಕ್ಕಿಂತ ಕಡಿಮೆಯಾಗಿದೆ. ಕೊವಿಡ್-19 ಗುಣಮುಖರ ಸಂಖ್ಯೆಯೂ ಏರಿಕೆಯಾಗಿದ್ದು, ಚೇತರಿಕೆ ಪ್ರಮಾಣ ಶೇ.96.80ರಷ್ಟಿದೆ. 979 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು, ಒಟ್ಟು ಸಾವಿನ ಪ್ರಕರಣಗಳ ಸಂಖ್ಯೆ 3,96,730ಕ್ಕೆ ಏರಿಕೆಯಾಗಿದೆ. ಸೋಮವಾರ 46,148 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.












Click it and Unblock the Notifications