ಚಿದು ಬಗ್ಗೆ ಸುಬ್ರಮಣ್ಯಂ ಸ್ವಾಮಿ, ಮೋದಿಗೆ ಬರೆದ ಪತ್ರದಲ್ಲೇನಿದೆ?
ಆ ಪತ್ರವನ್ನು ಅವರು ಈ ಹಿಂದೆ ಚಿದಂಬರಂ ನಿವಾಸಗಳ ಮೇಲೆ ನಡೆದಿದ್ದ ಐಟಿ ದಾಳಿಯಲ್ಲಿ ಕಲೆಹಾಕಿರುವ ಮಾಹಿತಿಗಳ ಸಂಕ್ಷಿಪ್ತ ರೂಪವೆಂದು ಹೇಳಿದ್ದಾರೆ.
ಚೆನ್ನೈ, ಮೇ 16: ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ವಿರುದ್ಧದ ಕೇಳಿಬಂದ ಆರೋಪಗಳ ಬಗ್ಗೆ ಬಿಜೆಪಿ ನಾಯಕ ಸುಬ್ರಮಣ್ಯಂ ಸ್ವಾಮಿ ಅವರು, ಪ್ರಧಾನಿ ಮೋದಿಯವರಿಗೆ ಇತ್ತೀಚೆಗೆ ಏಳು ಪುಟಗಳ ಸಮಗ್ರ ಮಾಹಿತಿ ನೀಡಿದ್ದರು.
ಅಂದಹಾಗೆ, ಆ ಪತ್ರವನ್ನು ಅವರು ಈ ಹಿಂದೆ ಚಿದಂಬರಂ ನಿವಾಸಗಳ ಮೇಲೆ ನಡೆದಿದ್ದ ಐಟಿ ದಾಳಿಯಲ್ಲಿ ಕಲೆಹಾಕಿರುವ ಮಾಹಿತಿಗಳ ಸಂಕ್ಷಿಪ್ತ ರೂಪವೆಂದು ಹೇಳಿದ್ದಾರೆ. ಆ ಪತ್ರದಲ್ಲಿನ ಪ್ರಮುಖಾಂಶ ಇಲ್ಲಿವೆ.[ಕೇಂದ್ರ ಸರ್ಕಾರದಿಂದ ಸಿಬಿಐ ದುರ್ಬಳಕೆ: ಚಿದಂಬರಂ ಗುಡುಗು]
ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರು ಆರಂಭಿಸಿದ್ದ ಐಎನ್ಎಕ್ಸ್ ಕಂಪನಿಗೆ ಅಪಾರ ಪ್ರಮಾಣದಲ್ಲಿ ವಿದೇಶಿ ಬಂಡವಾಳ ಹರಿದು ಬಂದಿದೆ. ಅಲ್ಲದೆ, ಹಲವಾರು ಲೋಪಗಳ ಹೊರತಾಗಿಯೂ ವಿದೇಶಿ ಬಂಡವಾಳ ಉತ್ತೇಜನಾ ಮಂಡಳಿಯ (ಎಫ್ಐಪಿಬಿ) ನಿರಕ್ಷೇಪಣಾ ಪತ್ರವೂ ಈ ಐಎನ್ಎಕ್ಸ್ ಗೆ ದೊರಕಿದೆ.[ಕಾರ್ತಿ, ಚಿದಂಬರಂ ವಿರುದ್ಧ ಇರೋ ಆರೋಪಗಳೇನು?]
ನಾಲ್ವರ ಹೆಸರಲ್ಲಿ ಬಂಗಲೆ ?
ಅಕ್ರಮವಾಗಿ ಸಂಪಾದಿಸಲ್ಪಟ್ಟ ಹಣದಿಂದಾಗಿ, ಚಿದಂಬರಂ, ಅವರ ಪತ್ನಿ ನಳಿನಿ ಚಿದಂಬರಂ, ಕಾರ್ತಿ ಚಿದಂಬರಂ ಹಾಗೂ ಅವರ ಪತ್ನಿ ಶ್ರೀನಿಧಿ - ಈ ನಾಲ್ವರೂ ಒಟ್ಟಾಗಿ ಬ್ರಿಟನ್ ನಲ್ಲಿ ಒಂದು ವೈಭವೋಪೇತ ಬಂಗಲೆಯನ್ನು ಖರೀದಿಸುತ್ತಾರೆ. ಆ ಆಸ್ತಿಯು ಕೇಂಬ್ರಿಡ್ಜ್ ಟೌನ್ ನಲ್ಲಿದೆ. ದಾಖಲೆಗಳ ಪ್ರಕಾರ, ಚಿದಂಬರಂ ಅವರು ಖರೀದಿಸಿದ ಆ ಬಂಗಲೆಯ ವಿಳಾಸ, ನಂ. 5, ಹೋಲ್ಬನ್ ಕ್ಲೋಸ್, ಕೇಂಬ್ರಿಡ್ಜ್, ಯು.ಕೆ. CB237AQ.
ಲಂಡನ್ ಬ್ಯಾಂಕಿನಿಂದ ಹಣ ಡ್ರಾ
ಐಟಿ ವಶಪಡಿಸಿಕೊಂಡ ದಾಖಲೆಗಳ ಪ್ರಕಾರ, ಆ ಬಂಗಲೆಯನ್ನು ಕೊಳ್ಳುವಾಗ ಬೇಕಾದ ಅಪಾರ ಮೌಲ್ಯದ ಹಣವನ್ನು ಲಂಡನ್ ನ ಮೆಟ್ರೋ ಬ್ಯಾಂಕ್ ನಲ್ಲಿರುವ ಕಾರ್ತಿ ಚಿದಂಬರಂ ಅವರ ಬ್ಯಾಂಕ್ ಖಾತೆಯಿಂದ (ಖಾತೆ ಸಂಖ್ಯೆ: 16714313) ವಿತ್ ಡ್ರಾ ಮಾಡಿಕೊಳ್ಳಲಾಗಿದೆ ಎಂದು ಸುಬ್ರಮಣ್ಯಂ ಸ್ವಾಮಿ ಅವರು, ಸವಿವರವಾಗಿ ಪ್ರಧಾನಿಗೆ ಸಲ್ಲಿಸಿದ್ದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಆಸ್ತಿ ಘೋಷಣೆ ವೇಳೆಯೂಲ್ಲೂ ಗಪ್ ಚುಪ್
ಅಷ್ಟೇ ಅಲ್ಲ. ಮಿಲಿಯನ್ ಗಟ್ಟಲೆ ಹಣ ಸುರಿದು ಕೊಂಡಲ್ಪಟ್ಟ ಈ ಬಂಗಲೆ ಬಗ್ಗೆ ಚಿದಂಬರಂ ಎಲ್ಲೂ ಬಾಯಿಬಿಟ್ಟಿಲ್ಲ. ಅಷ್ಟೇ ಅಲ್ಲ, ಚುನಾವಣೆಗಳಿಗೆ ನಿಲ್ಲುವಾಗ ನಿಯಮದಂತೆ ಆಸ್ತಿ ಘೋಷಿಸುವಾಗಲೂ ಅವರು ಈ ಬಗ್ಗೆ ಎಲ್ಲೂ ಉಲ್ಲೇಖ ಮಾಡಿಲ್ಲ.
ಅದೂ ಪತ್ನಿ, ಪುತ್ರನ ಹೆಸರಲ್ಲಿರುವುದಾಗಿ ಹೇಳಿಕೆ
ಚುನಾವಣಾ ಪೂರ್ವ ಆಸ್ತಿ ಘೋಷಣೆ ವೇಳೆಯಲ್ಲಿ ಕೇಂಬ್ರಿಡ್ಜ್ ನಲ್ಲಿರುವ ತಮಗೆ ಸಂಬಂಧಪಟ್ಟ ಆಸ್ತಿಯ ಕೊಂಚ ಭಾಗವನ್ನು ಮಾತ್ರ ಘೋಷಿಸಿಕೊಂಡಿದ್ದಾರೆ. ಅದೂ, ತಮ್ಮ ಪತ್ನಿ ಹಾಗೂ ಪುತ್ರನ ಹೆಸರಿನಲ್ಲಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಅಧಿಕಾರದ ದುರುಪಯೋಗ?
''ಕಾರ್ತಿಯವರ ಎಎಸ್ ಸಿಪಿಎಲ್ ಸಂಸ್ಥೆಯ ವಿದೇಶಿ ಬಂಡವಾಳಕ್ಕೆ ಸಂಬಂಧಿಸಿದ ದಾಖಲೆಗಳು ಎಫ್ಐಪಿಬಿ ಹಾಗೂ ಸಿಸಿಇಎ ನ ಅಂಗೀಕಾರಕ್ಕಾಗಿ ಕಾದು ಕುಳಿತಿದ್ದಾಗಲೇ ಎಎಸ್ ಸಿಪಿಎಲ್ ಸಂಸ್ಥೆಗೆ ಹೇರಳವಾಗಿ ವಿದೇಶಿ ಬಂಡವಾಳ ಹರಿದು ಬಂದಿದೆ. ಇದೆಲ್ಲವೂ, ಚಿದಂಬರಂ ಅವರು ಕೇಂದ್ರದಲ್ಲಿ ಹಣಕಾಸು ಸಚಿವರಾಗಿದ್ದಾಗ ಆದ ಬೆಳವಣಿಗೆಗಳು ಎಂಬುದು ಗಮನಾರ್ಹ'' ಎಂದು ಸುಬ್ರಮಣ್ಯಂ ಸ್ವಾಮಿ ಮೋದಿಯವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.