ಲವ್ ಜಿಹಾದ್ ಪ್ರಕರಣದ ತನಿಖೆ ಎನ್ಐಎಗೆ, ಏನಿದು ಪ್ರಕರಣ?
ನವದೆಹಲಿ, ಅ.17 : ಕೇರಳ ಲವ್ ಜಿಹಾದ್ ಪ್ರಕರಣದ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ರಾಷ್ಟ್ರೀಯ ತನಿಖಾದಳಕ್ಕೆ ನಿರ್ದೇಶನ ನೀಡಿದೆ. ಶಫಿನ್ ಜಹಾನ್ ತಮ್ಮ ವಿವಾಹ ಅಸಿಂಧು ಎಂದು ಕೇರಳ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂನಲ್ಲಿ ಪ್ರಶ್ನೆ ಮಾಡಿದ್ದರು.
ರಾಷ್ಟ್ರೀಯ ತನಿಖಾ ದಳ ಲವ್ ಜಿಹಾದ್ ಪ್ರಕರಣದ ತನಿಖೆ ನಡೆಸುವಂತೆ ಸೂಚಿಸಿರುವ ಜೊತೆಗೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ಅವರ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು ಸೂಚನೆ ನೀಡಿದೆ.
ಕೇರಳ ಮೂಲದ ಮುಸ್ಲಿಂ ಯುವಕ ಶಫಿನ್ ಜಹಾನ್ (27) ಅಖಿಲಾ ಅಲಿಯಾಸ್ ಹಾದಿಯಾ ಶಫಿನ್ ಜೊತೆ ವಿವಾಹವಾಗಿದ್ದ. ಆದರೆ, ಕೇರಳ ಹೈಕೋರ್ಟ್ ಮೇ 24ರಂದು ಈ ವಿವಾಹವನ್ನು ಅಸಿಂಧುಗೊಳಿಸಿ ಆದೇಶ ಹೊರಡಿಸಿತ್ತು. ಇದನ್ನು ಸುಪ್ರೀಂಕೋರ್ಟ್ನಲ್ಲಿ ಶಫಿನ್ ಪ್ರಶ್ನಿಸಿದ್ದರು.
ಏನಿದು ಲವ್ ಜಿಹಾದ್ ಪ್ರಕರಣ? : ಕೇರಳದ ಅಖಿಲಾಗೆ (24) 2016ಆಗಸ್ಟ್ ತಿಂಗಳಿನಲ್ಲಿ ಮುಸ್ಲಿಂ ವಿವಾಹ ವೆಬ್ ಸೈಟ್ ಮೂಲಕ ಶಫಿನ್ ಪರಿಚಯವಾಗಿತ್ತು. ಡಿಸೆಂಬರ್ 9, 2016ರಲ್ಲಿ ಶಫಿನ್ ಜೊತೆ ಆಕೆ ವಿವಾಹವಾಗಿದ್ದಳು. ವಿವಾಹವಾದ ಎರಡನೇ ದಿನ ನ್ಯಾಯಲಯದ ಮುಂದೆ ಹಾಜರಾಗುವಂತೆ ನೋಟಿಸ್ ಬಂದಿತ್ತು.
ಬಲವಂತವಾಗಿ ಅಖಿಲಾ ಮದುವೆ ಮಾಡಿಸಿ, ಆಕೆಯನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಎಂದು ಆಕೆಯ ಪೋಷಕರು ಹೈಕೋರ್ಟ್ ಮುಂದೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಮುಂದೆ ತನ್ನ ಇಚ್ಛೆಯಿಂತೆಯೇ ಮತಾಂತರ ಗೊಂಡಿದ್ದೇನೆ ಎಂದು ಅಖಿಲಾ ಹೇಳಿಕೆ ನೀಡಿದ್ದಳು.
ಅಖಿಲಾ ತಂದೆ ಕೆ.ಎಂ.ಅಶೋಕನ್ ಮುಸ್ಲಿಂ ರಾಜ್ಯ ನಿರ್ಮಾಣ ಮಾಡುವ ಭಾಗವಾಗಿ ಮತಾಂತರ ಮಾಡಲಾಗಿದೆ. ತಮ್ಮ ಪುತ್ರಿಗೆ ಬ್ರೈನ್ ವಾಶ್ ಮಾಡಿ ಈ ರೀತಿ ಹೇಳಿಕೆ ಕೊಡಿಸಲಾಗಿದೆ ಎಂದು ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದರು. ಪ್ರಕರಣದ ಗಂಭೀರತೆ ಅರಿತ ಕೋರ್ಟ್ ಅಖಿಲಾನ್ನು ಕೊಚ್ಚಿಯ ಮಹಿಳಾ ಹಾಸ್ಟೆಲ್ಗೆ ಕಳುಹಿಸಿತು.
ಮಸ್ಕತ್ನಲ್ಲಿ ಕೆಲಸ ಮಾಡುತ್ತಿದ್ದ ಅಖಿಲಾ ಪತಿ ಶಫಿನ್ ನ್ಯಾಯಾಲಯದ ವಿಚಾರಣೆಗಾಗಿ ಇಲ್ಲಿಯೇ ಉಳಿಯಬೇಕಾಯಿತು. ಎಲ್ಲಾ ವಿವಾದಗಳನ್ನು ಬಗೆಹರಿಸಿಕೊಂಡು ವಾಪಸ್ ಆಗುವಂತೆ ಕಂಪನಿ ಆತನನ್ನು ಕೇರಳಕ್ಕೆ ವಾಪಸ್ ಕಳಿಸಿತ್ತು.
ಪೊಲೀಸರ ವಿಚಾರಣೆ ವೇಳೆ ಶಫಿನ್ ಯಾವುದೇ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಸಿಗಲಿಲ್ಲ. ಕೇರಳ ಎಸ್ಪಿಡಿಐ ಕೇರಳ ಸೇರಿದಂತೆ ಎರಡು ವಾಟ್ಸಪ್ ಗುಂಪುಗಳಿಗೆ ಮಾತ್ರ ಶಫಿನ್ ಅಡ್ಮಿನ್ ಆಗಿದ್ದ. ಈ ಕುರಿತು ಕೋರ್ಟಿಗೆ ವರದಿ ನೀಡಲಾಯಿತು.
ಪ್ರಕರಣದ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ವಿವಾಹವನ್ನು ಅಸಿಂಧುಗೊಳಿಸಿತು. 'ಮದುವೆ ಎಂಬುದು ಆಕೆಯ ಜೀವನದ ಬಹುಮುಖ್ಯ ನಿರ್ಧಾರ. ಪೋಷಕರ ಜೊತೆ ಚರ್ಚಿಸಿಯೇ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು' ಎಂದು ನ್ಯಾಯಾಲಯ ಹೇಳಿತು.
ಈ ಆದೇಶದ ಬಳಿಕ ಕೋರ್ಟ್ ಮಹಿಳಾ ಹಾಸ್ಟೆಲ್ ನಲ್ಲಿದ್ದ ಅಖಿಳಾಳನ್ನು ತಂದೆ-ತಾಯಿಯ ವಶಕ್ಕೆ ಒಪ್ಪಿಸಿತು ಮತ್ತು ಕೊಟ್ಟಾಯಂ ಪೊಲೀಸರಿಗೆ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು ಎಂದು ಸೂಚಿಸಿತು. ನಂತರ ಮಾಧ್ಯಮಗಳಿಗೆ ಪತ್ರ ಬರೆದ ಅಖಿಲಾ 'ನನಗೆ ಇಪ್ಪತೈದು ವರ್ಷಗಳು. ಕೋರ್ಟ್ ನನ್ನನ್ನು ಗೃಹ ಬಂಧನದಲ್ಲಿಟ್ಟಿದೆ. ನನ್ನ ಇಚ್ಛೆಯಂತೆ ಬದುಕಲು ಕೋರ್ಟ್ ನನಗೆ ಅವಕಾಶ ನೀಡುತ್ತಿಲ್ಲ' ಎಂದು ಹೇಳಿದ್ದಳು.
ಶಫಿನ್ ಕೇರಳ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದರು. ಕೋರ್ಟ್ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ನೀಡಿದ್ದು, ತನಿಖೆಯ ವರದಿಯನ್ನು ಎನ್ಐಗೆ ನೀಡುವಂತೆ ಕೇರಳ ಪೊಲೀಸರಿಗೆ ಸೂಚನೆ ನೀಡಿದೆ.