ಗುಜರಾತ್ ನಲ್ಲಿ ಪ್ರಯಾಸದ ಗೆಲುವು, ರಾಜ್ಯಸಭೆಯಲ್ಲಿ ಬಿಜೆಪಿಗೆ ಹೊಡೆತ
ಅಹಮದಾಬಾದ್, ಡಿಸೆಂಬರ್ 20: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಹುಮತಕ್ಕೆ ಬೇಕಾದಷ್ಟೇ ಸ್ಥಾನಗಳನ್ನು ಗೆದ್ದಿರುವುದರಿಂದ ಬಿಜೆಪಿಗೆ ರಾಜ್ಯಸಭೆಯ ಕನಿಷ್ಠ 2 ಸ್ಥಾನಗಳು ನಷ್ಟವಾಗಲಿವೆ.
ಏಪ್ರಿಲ್ ನಲ್ಲಿ ರಾಜ್ಯಸಭೆಯ 4 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇದಕ್ಕೂ ಮೊದಲು ನಾಲ್ವರು ಬಿಜೆಪಿ ನಾಯಕರು ರಾಜ್ಯಸಭೆಯಿಂದ ನಿವೃತ್ತರಾಗಲಿದ್ದಾರೆ. ನಿವೃತ್ತಿಯಾಗಲಿರುವರಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ, ಕೇಂದ್ರ ಸಚಿವರಾದ ಪರ್ಶೋತ್ತಮ್ ರೂಪಾಲಾ, ಮನ್ಸುಖ್ ಭಾಯ್ ಮಾಂಡಾವಿಯಾ ಮತ್ತು ಶಂಕರ್ಭಾಯ್ ವೆಂಗಾದ್ ಸೇರಿದ್ದಾರೆ.
ಗುಜರಾತ್ ನಲ್ಲಿ ಬಿಜೆಪಿ ಕೇವಲ 99 ಸ್ಥಾನಗಳನ್ಜು ಗೆದ್ದಿರುವುದರಿಂದ ಏಪ್ರಿಲ್ ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಕೇವಲ 2 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಲಿದೆ.

ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು 36 ಮತಗಳು ಅಗತ್ಯವಾಗಿವೆ. ಹೀಗಾಗಿ ಗುಜರಾತ್ ನಿಂದ ಕಾಂಗ್ರೆಸ್ ಮತ್ತು ಬಿಜೆಪಿಯ ತಲಾ ಇಬ್ಬರು ರಾಜ್ಯಸಭೆ ಪ್ರವೇಶಿಸಲಿದ್ದಾರೆ.
ಸದ್ಯ ಉತ್ತರ ಪ್ರದೇಶದಲ್ಲಿ ಭರ್ಜರಿ ಜಯ ದಾಖಲಿಸಿರುವ ಬಿಜೆಪಿ ಇಲ್ಲಿಂದಲೇ 8 ಸದ್ಯರನ್ನು ರಾಜ್ಯಸಭೆಗೆ ಕಳುಹಿಸಲಿದೆ. ಈ ಮೂಲಕ ರಾಜ್ಯಸಭೆಯಲ್ಲಿ ತನ್ನ ಸಂಖ್ಯಾಬಲ ವೃದ್ಧಿಗೆ ಯೋಜನೆ ರೂಪಿಸಿದೆ.
ಸದ್ಯ 250 ಸದಸ್ಯ ಬಲದ ರಾಜ್ಯಸಭೆಯಲ್ಲಿ ಎನ್.ಡಿ.ಎ ಮೈತ್ರಿಕೂಟ 86 ಸ್ಥಾನಗಳನ್ನಷ್ಟೇ ಹೊಂದಿದೆ. ಹೀಗಾಗಿ ಪ್ರಮುಖ ಮಸೂದೆಗಳನ್ನು ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದುಕೊಳ್ಳಲು ಎಐಎಡಿಎಂಕೆ ಮತ್ತು ಬಿಜೆಡಿ ಮೇಲೆ ಅವಲಂಬಿತವಾಗಿದೆ.












Click it and Unblock the Notifications