ಪಶ್ಚಿಮ ಬಂಗಾಳ ಬಂದ್: ಹೆಲ್ಮೆಟ್ ಧರಿಸಿ ಬಸ್ ಚಲಾಯಿಸಿದ ಚಾಲಕರು

ಹೌರಾ (ಪಶ್ಚಿಮ ಬಂಗಾಳ), ಸೆಪ್ಟೆಂಬರ್ 26: ಪಶ್ಚಿಮ ಬಂಗಾಳದ ಉತ್ತರ ದಿನಾಜ್ಪುರ ಜಿಲ್ಲೆಯಲ್ಲಿ ಗುರುವಾರ ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆಯನ್ನು ಖಂಡಿಸಿ, ಬಿಜೆಪಿ ಕರೆ ನೀಡಿರುವ 12 ಗಂಟೆ ಬಂದ್‌ ವೇಳೆ ಅನೇಕ ಕಡೆ ಹಿಂಸಾಚಾರ ನಡೆದಿದೆ.

ಪ್ರತಿಭಟನಾಕಾರರು ಸರ್ಕಾರಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಲ್ಲದೆ, ರೈಲುಗಳ ಸಂಚಾರಕ್ಕೆ ತಡೆಯೊಡ್ಡಿದ್ದಾರೆ.

ಸರ್ಕಾರ ಬಂದ್‌ ಅನ್ನು ನಿಗ್ರಹಿಸಲು ಮತ್ತು ಪ್ರತಿಭಟನಾಕಾರರನ್ನು ಹತ್ತಿಕ್ಕಲು ಎಲ್ಲೆಡೆ ಪೊಲೀಸ್ ಬಿಗಿ ಭದ್ರತೆ ನಿಯೋಜಿಸಿದೆ. ಆದರೂ ಬೀದಿಗಿಳಿದ ಪ್ರತಿಭಟನಾಕಾರರು ಹೌರಾ, ಕೂಚ್ ಬಿಹಾರ್ ಮುಂತಾದೆಡೆ ಸರ್ಕಾರಿ ಬಸ್‌ಗಳ ಮೇಲೆ ಕಲ್ಲು ತೂರಿದ್ದಾರೆ.

ಹೆಲ್ಮೆಟ್ ಧರಿಸಿ ಬಸ್ ಚಾಲನೆ

ಅನೇಕ ಕಡೆ ಹಿಂಸಾತ್ಮಕ ಕೃತ್ಯಗಳು ವರದಿಯಾಗಿದ್ದರೂ ಸಾರ್ವಜನಿಕ ಸೇವೆಗಳನ್ನು ಸ್ಥಗಿತಗೊಳಿಸಲಾಗಿಲ್ಲ. ಬಸ್‌ ಚಾಲಕರು ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಧರಿಸಿ ಡ್ರೈವಿಂಗ್ ಮಾಡುತ್ತಿದ್ದಾರೆ.

ಸೂಕ್ಷ್ಮ ಸ್ಥಳಗಳಲ್ಲಿ 4 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರತಿಭಟನೆ, ಮೆರವಣಿಗೆಗಳಿಗೆ ಆಸ್ಪದ ನೀಡದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದರ ನಡುವೆಯೂ ಬಿಜೆಪಿ ಕಾರ್ಯಕರ್ತರು ಮೆರವಣಿಗೆಗಳನ್ನು ನಡೆಸುತ್ತಿದ್ದಾರೆ.

ರೈಲು ಸಂಚಾರಕ್ಕೆ ಅಡ್ಡಿ

ಪ್ರತಿಭಟನಾಕಾರರು ಹೌರಾ-ವರ್ಧಮಾನ ಮುಖ್ಯ ರೈಲು ಸಂಚಾರಕ್ಕೆ ಅಡ್ಡಿಪಡಿಸಿದರು.

ಸೀಲ್ದಾ-ಬರಾಸತ್ ಬೊಂಗಾನ್ ವಿಭಾಗ, ಸೀಲ್ದಾಹ್-ಡೈಮಂಡ್ ಹಾರ್ಬರ್ ವಿಭಾಗ, ಬಂಡೇಲ್ ಕಟ್ವಾ ವಿಭಾಗಗಳಲ್ಲಿ ರೈಲು ಸಂಚಾರಕ್ಕೆ ಅಡ್ಡಿಪಡಿಸಲಾಗಿದೆ.

ಉತ್ತರ ಕೋಲ್ಕತಾದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ವೇಳೆ ಪೊಲೀಸರು ಮತ್ತು ಎಬಿವಿಪಿ ಕಾರ್ಯಕರ್ತರ ನಡುವೆ ಸಂಘರ್ಷ ಸಂಭವಿಸಿದ್ದು, ಸುಮಾರು 12 ಕಾರ್ಯಕರ್ತರನ್ನು ಬಂಧಿಸಲಾಗಿದೆ. ಇಸ್ಲಾಂಪುರ ಸೇರಿದಂತೆ ವಿವಿಧೆಡೆ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಶಿಕ್ಷಕರ ನೇಮಕಾತಿ ವಿವಾದ

ಇಸ್ಲಾಂಪುರದ ದರಿಭಿಟ್ ಹೈಸ್ಕೂಲ್‌ನ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ಇಂಗ್ಲಿಷ್ ಶಿಕ್ಷಕರ ಕೊರತೆ ಇತ್ತು. ಆದರೆ, ಸರ್ಕಾರ ಅಲ್ಲಿಗೆ ಇಬ್ಬರು ಉರ್ದು ಮತ್ತು ಸಂಸ್ಕೃತ ಶಿಕ್ಷಕರನ್ನು ನೇಮಿಸಿತ್ತು.

ಇದನ್ನು ವಿರೋಧಿಸಿದ್ದ ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಶಾಲೆಗೆ ಹೊಸದಾಗಿ ನಿಯೋಜಿತರಾಗಿದ್ದ ಶಿಕ್ಷಕರು ಶಾಲೆ ಒಳಗೆ ಪ್ರವೇಶಿಸುವುದನ್ನು ತಡೆದಿದ್ದರು. ಖಾಲಿ ಇರುವ ಎಲ್ಲ ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿದ್ದರು.

ಇಬ್ಬರು ವಿದ್ಯಾರ್ಥಿಗಳ ಬಲಿ

ಈ ವೇಳೆ ಪ್ರತಿಭಟನೆ ಸಂಘರ್ಷಕ್ಕೆ ತಿರುಗಿತ್ತು. ಐಟಿಐ ವಿದ್ಯಾರ್ಥಿ ರಾಜೇಶ್ ಸರ್ಕಾರ್ ಮತ್ತು ಮೂರನೇ ವರ್ಷದ ಪದವಿ ವಿದ್ಯಾರ್ಥಿ ತಪಸ್ ಬರ್ಮನ್ ಎಂಬುವವರು ಘರ್ಷಣೆಯಲ್ಲಿ ಮೃತಪಟ್ಟಿದ್ದರು. ಪೊಲೀಸರು ಹಾರಿಸಿದ ಗುಂಡಿಗೆ ಇಬ್ಬರೂ ಬಲಿಯಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆದರೆ, ಪೊಲೀಸರು ಅದನ್ನು ನಿರಾಕರಿಸಿದ್ದಾರೆ.

ಈ ಘಟನೆಯನ್ನು ಖಂಡಿಸಿ ಬಿಜೆಪಿ ಬುಧವಾರ 12 ಗಂಟೆಗಳ 'ಬಾಂಗ್ಲಾ ಬಂದ್‌'ಗೆ ಕರೆ ನೀಡಿದೆ. ಬಂದ್ ಯಶಸ್ವಿಯಾಗದಂತೆ ನೋಡಿಕೊಳ್ಳುವ ಸಲುವಾಗಿ ಸರ್ಕಾರ ಎಲ್ಲ ಸರ್ಕಾರಿ ಕಚೇರಿಗಳಲ್ಲಿಯೂ ಉದ್ಯೋಗಿಗಳಿಗೆ ಕಡ್ಡಾಯ ಹಾಜರಾತಿ ಸೂಚಿಸಿತ್ತು. ಬಸ್, ರೈಲು, ಮೆಟ್ರೋ ನಿಲ್ದಾಣಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+