ದೇಶದಲ್ಲಿ ಕೊರೊನಾ ಏರಿಕೆಗೆ ಕಾರಣ ನಮೂದಿಸಿದ ಆರೋಗ್ಯ ಸಚಿವ
ನವದೆಹಲಿ, ಏಪ್ರಿಲ್ 7: ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರುಗತಿಯಲ್ಲಿ ಸಾಗುತ್ತಿದ್ದು, ಸದ್ಯಕ್ಕೆ ದೇಶದ ಹನ್ನೊಂದು ರಾಜ್ಯಗಳಲ್ಲಿ ಕೊರೊನಾ ಸೋಂಕು ಸವಾಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.
ಮಹಾರಾಷ್ಟ್ರ, ಪಂಜಾಬ್, ಛತ್ತೀಸ್ಗಡ, ದೆಹಲಿ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ದಿನನಿತ್ಯದ ಪ್ರಕರಣಗಳಲ್ಲಿ ಏರಿಕೆಯಾಗಿದ್ದು, ಇವು ಗಂಭೀರವಾಗಿ ಕಾಳಜಿ ವಹಿಸಬೇಕಾದ ರಾಜ್ಯಗಳಾಗಿವೆ ಎಂದು ತಿಳಿಸಿದ್ದಾರೆ.
ಕೊರೊನಾವೈರಸ್ ಏರಿಕೆ ನಡುವೆ ಲಸಿಕೆ ವಿತರಣೆಯಲ್ಲಿ ಇಳಿಕೆ!?
ರಾಜ್ಯ ಆರೋಗ್ಯ ಸಚಿವರೊಂದಿಗೆ ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ ಅವರು, "ಸ್ಥಳೀಯ ಸಂಸ್ಥೆ ಚುನಾವಣೆಗಳು, ಮದುವೆ ಸಮಾರಂಭಗಳು ಹಾಗೂ ರೈತರ ಪ್ರತಿಭಟನೆಯಂಥ ದೊಡ್ಡ ಪ್ರಮಾಣದಲ್ಲಿ ಜನ ಸೇರುವ ಕಾರ್ಯಕ್ರಮಗಳು ಕೊರೊನಾ ಏರಿಕೆಗೆ ಕಾರಣವಾಗಿವೆ" ಎಂದು ವಿವರಿಸಿದ್ದಾರೆ.
ಹನ್ನೊಂದು ರಾಜ್ಯಗಳಲ್ಲಿ ದಿನನಿತ್ಯ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಸಾವಿನ ಸಂಖ್ಯೆಯೂ ಕಳೆದ ಎರಡು ವಾರಗಳಿಂದ ಅಧಿಕವಾಗಿದೆ. ಈ ಹನ್ನೊಂದು ರಾಜ್ಯಗಳು ದೇಶದ ದಿನನಿತ್ಯದ ಕೊರೊನಾ ಪ್ರಕರಣಗಳಲ್ಲಿ ಶೇ 54ರಷ್ಟು ಪಾಲು ಹೊಂದಿವೆ. ಪಂಜಾಬ್ ಹಾಗೂ ಮಹಾರಾಷ್ಟ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾವು ಸಂಭವಿಸುತ್ತಿವೆ ಎಂದು ಮಾಹಿತಿ ನೀಡಿದರು.
ಮಂಗಳವಾರ ಭಾರತದಲ್ಲಿ 115,320 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಪ್ರಕರಣಗಳ ಸಂಖ್ಯೆ 11,789,781ಕ್ಕೆ ತಲುಪಿದೆ. ಮಂಗಳವಾರ 630 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರವೊಂದರಿಂದಲೇ 55,469 ಪ್ರಕರಣಗಳು ದಾಖಲಾಗಿವೆ. ಫೆಬ್ರವರಿ ತಿಂಗಳ ನಂತರ ಕೊರೊನಾ ಪ್ರಕರಣಗಳು ಏರಿಕೆಯಾಗಿದ್ದು, 15 ರಿಂದ 44 ವಯಸ್ಸಿನವರು ಸೋಂಕಿಗೆ ಹೆಚ್ಚು ತುತ್ತಾಗುತ್ತಿದ್ದಾರೆ ಮತ್ತು 60 ವರ್ಷ ಮೇಲ್ಪಟ್ಟವರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.
ಈ ಹನ್ನೊಂದು ರಾಜ್ಯಗಳಲ್ಲಿ ಕೊರೊನಾ ಪರೀಕ್ಷೆಯ ವೇಗ ಹೆಚ್ಚಿಸಿರುವುದರ ಕುರಿತು ಸಚಿವರು ಶ್ಲಾಘನೆ ವ್ಯಕ್ತಪಡಿಸಿದ್ದು, ವೈರಸ್ ತಡೆಗೆ ರಾಜ್ಯಗಳಿಗೆ ಅಗತ್ಯ ನೆರವು ನೀಡಲು ಸಿದ್ಧ ಎಂದು ಹೇಳಿದ್ದಾರೆ.