ಒಂದೇ ದಿನ 58 ಮಂದಿಯನ್ನು ಬಲಿ ಪಡೆದ ಬಿಸಿಲು!
ಬೆಂಗಳೂರು, ಜೂನ್. 02 : ದಕ್ಷಿಣ ಭಾರತದಲ್ಲಿ ಮಳೆ ಸುರಿಯುತ್ತಿದೆ. ಪಶ್ಚಿಮ ಬಂಗಾಳದಲ್ಲೂ ಮಳೆಯಿಂದ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಆದರೆ, ದೇಶದ ಹಲವು ಭಾಗಗಳಲ್ಲಿ ತಾಪಮಾನ ಹೆಚ್ಚಾಗಿದ್ದು, ಸಾವು ನೋವುಗಳು ಪ್ರತಿ ದಿನ ವರದಿಯಾಗುತ್ತಿವೆ. ಜೂನ್ ಒಂದರ ಶನಿವಾರ ಒಂದೇ ದಿನ ದೇಶದಲ್ಲಿ 58ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ 33 ಮಂದಿ ಸೇರಿದಂತೆ ಕನಿಷ್ಠ 58 ಜನರು ತಾಫಮನ ಹೆಚ್ಚಳದಿಂದ ಶನಿವಾರ ಸಾವನ್ನಪ್ಪಿದ್ದಾರೆ ಎಂದು ದೇಶಾದ್ಯಂತ ಅಧಿಕೃತ ವರದಿಗಳು ತಿಳಿಸಿವೆ. ಇದು ದೇಶದಲ್ಲಿ ಉಷ್ಣಾಂಶ ಯಾವ ಮಟ್ಟಿಗೆ ಹೆಚ್ಚಾಗಿದೆ ಎಂಬುದರ ಅರಿವು ಮೂಡಿಸುತ್ತಿದೆ.

ಉತ್ತರ ಪ್ರದೇಶ, ಬಿಹಾರ, ಒಡಿಶಾ ಮತ್ತು ಮಧ್ಯಪ್ರದೇಶಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ. ಈ ಬಗ್ಗೆ ಈ ರಾಜ್ಯಗಳ ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಉಷ್ಣಾಂಶ 61 ° C ಗೆ ಏರಿಕೆಯಾಗಿದೆ. ಯುಪಿ ಮುಖ್ಯ ಚುನಾವಣಾ ಅಧಿಕಾರಿ ನವದೀಪ್ ರಿನ್ವಾ ಸಾವುನೋವುಗಳನ್ನು ದೃಢಪಡಿಸಿದ್ದಾರೆ. ಮೃತರು ಹೋಮ್ಗಾರ್ಡ್ಗಳು, ನೈರ್ಮಲ್ಯ ಕಾರ್ಯಕರ್ತರು ಮತ್ತು ಇತರ ಚುನಾವಣಾ ಸಿಬ್ಬಂದಿ. ಇವರು ಹಗಲಿಡೀ ಮತದಾನದ ಸಮಯದಲ್ಲಿ ಕರ್ತವ್ಯದಲ್ಲಿದ್ದರು ಎಂದು ಹೇಳಿದ್ದಾರೆ.
ಒಂದು ದಿನದ ಹಿಂದೆ ಯುಪಿಯಾದ್ಯಂತ 15 ಮತಗಟ್ಟೆ ಸಿಬ್ಬಂದಿ ಸಾವನ್ನಪ್ಪಿದ್ದರು. ಶನಿವಾರ ಒಟ್ಟು 108,349 ಮತಗಟ್ಟೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮೃತರಿಗೆ 15 ಲಕ್ಷ ಎಕ್ಸ್ಗ್ರೇಷಿಯಾ ಪರಿಹಾರ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಹೋಮ್ಗಾರ್ಡ್ ಸಿಬ್ಬಂದಿಗೆ ಚುನಾವಣಾ ಕರ್ತವ್ಯಕ್ಕೆ ದಿನಕ್ಕೆ 500 ರೂಪಾಯಿ ಪಾವತಿಸಲಾಗಿದೆ ಎಂದು ವರದಿಗಳು ಸೂಚಿಸಿವೆ.

ಚುನಾವಣಾ ಕರ್ತವ್ಯದಲ್ಲಿದ್ದವರ ಸಾವುಗಳು ಬಿಹಾರದಿಂದಲೂ ವರದಿಯಾಗಿದೆ. ಅಲ್ಲಿ ಒಂದೇ ದಿನ 10 ಸಾವುಗಳು ದಾಖಲಾಗಿವೆ. ಈ ಸಂಖ್ಯೆ ಹೆಚ್ಚಾಗಬಹುದು. ಬಿಹಾರದ ವಿಪತ್ತು ನಿರ್ವಹಣಾ ಇಲಾಖೆ (DMD) ನೀಡಿದ ಹೇಳಿಕೆಯ ಪ್ರಕಾರ, ಹೆಚ್ಚಿನ ಸಾವುನೋವುಗಳು ಭೋಜ್ಪುರದಿಂದ ವರದಿಯಾಗಿದೆ. ಅಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಐವರು ಅಧಿಕಾರಿಗಳು ಶಾಖದ ಹೊಡೆತದಿಂದ ಸಾವನ್ನಪ್ಪಿದ್ದಾರೆ. ರೋಹ್ತಾಸ್ನಲ್ಲಿ ಮೂವರು, ಕೈಮೂರ್ ಮತ್ತು ಔರಂಗಾಬಾದ್ನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಗಳಿಗೆ ಎಕ್ಸ್ ಗ್ರೇಷಿಯಾ ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಒಡಿಶಾದ ವಿಪತ್ತು ನಿರ್ವಹಣಾ ಅಧಿಕಾರಿಗಳು ಶಾಖ ಸಂಬಂಧಿತ ಅನಾರೋಗ್ಯದ ಕಾರಣ ಕನಿಷ್ಠ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ, ಶನಿವಾರದ ಹಿಂದಿನ 48 ಗಂಟೆಗಳಲ್ಲಿ ಸಾವಿನ ಸಂಖ್ಯೆ 54 ಕ್ಕೆ ಏರಿಕಾಯಾಗಿದೆ. ಶುಕ್ರವಾರ, ಒಡಿಶಾದಲ್ಲಿ ಶಾಖ ಸಂಬಂಧಿ ಸಾವುಗಳ ಸಂಖ್ಯೆ 45. ಶಂಕಿತ 54 ಸಾವುಗಳಲ್ಲಿ, 20 ಪಶ್ಚಿಮ ಒಡಿಶಾ ಜಿಲ್ಲೆಯ ಬೋಲಂಗಿರ್ನಿಂದ ವರದಿಯಾಗಿದೆ.
ಉತ್ತರ ಪ್ರದೇಶದಲ್ಲಿ, ರಮಾಬಾಯಿ ಅಂಬೇಡ್ಕರ್ ಮೈದಾನದಲ್ಲಿ ಇವಿಎಂಗಳ ಕಾವಲು ಕಾಯುತ್ತಿದ್ದ ಪೊಲೀಸ್ ಪೇದೆಯೊಬ್ಬರು ಶಾಖದ ಅಲೆಯಿಂದಾಗಿ ಶನಿವಾರ ಸಾವನ್ನಪ್ಪಿದ್ದಾರೆ. ಮಿರ್ಜಾಪುರ ಮತ್ತು ಸೋನ್ಭದ್ರಾದಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ 15 ಸಿಬ್ಬಂದಿ ಶಾಖ-ಸಂಬಂಧಿತ ಕಾಯಿಲೆಗಳಿಂದ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಮಿರ್ಜಾಪುರ ಒಂದರಲ್ಲೇ ಏಳು ಗೃಹ ರಕ್ಷಕರು, ಮೂವರು ನೈರ್ಮಲ್ಯ ಕಾರ್ಮಿಕರು ಮತ್ತು ಒಬ್ಬ ಕ್ಲರಿಕಲ್ ಸಿಬ್ಬಂದಿ ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶದಲ್ಲಿ ಬಿಸಿಗಾಳಿಗೆ ಸಂಬಂಧಿಸಿದ ಎರಡು ಸಾವುಗಳು ವರದಿಯಾಗಿವೆ, ಒರ್ಚಾ ಮತ್ತು ಗ್ವಾಲಿಯರ್ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.












Click it and Unblock the Notifications