Wayanad Landslide: ವಯನಾಡ್ ಭೂಕುಸಿತದಿಂದ ಸಾವಿನ ಸಂಖ್ಯೆ 146ಕ್ಕೆ ಏರಿಕೆ: ಮುಂದುವರೆದ ಕಾರ್ಯಚರಣೆ!
ವಯನಾಡು ಕರ್ನಾಟಕಕಕ್ಕೆ ಹತ್ತಿರದಲ್ಲಿರುವ ಸ್ಥಳ. ಇಲ್ಲಿಗೆ ರಜಾ ದಿನಗಳಲ್ಲಿ ಅನೇಕ ಜನ ಕರ್ನಾಟಕದಿಂದ ಪ್ರವಾಸ ಕೈಗೊಳ್ಳುತ್ತಾರೆ. ತನ್ನದೇ ಆದ ನೈಸರ್ಗಿಕ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುವ ಈ ಸ್ಥಳ ಈಗ ಸಾವಿನ ಮನೆಯಾಗಿ ಹೋಗಿದೆ.
ಹೌದು.. ಮಂಗಳವಾರ ಮುಂಜಾನೆ ಕೇರಳದ ವಯನಾಡ್ ಜಿಲ್ಲೆಯ ಹಲವು ಸ್ಥಳಗಳಲ್ಲಿ ಭೂಕುಸಿತ ಸಂಭವಿಸಿ ನೋಡ ನೋಡುತ್ತಲೇ ನೂರಾರು ಜನ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ಮಂಗಳವಾರವೇ ರಕ್ಷಣಾ ಕಾರ್ಯಚರಣೆ ಆರಂಭವಾಗಿದ್ದು ಸಾವನ್ನಪ್ಪಿದವರ ಸಂಖ್ಯೆ 146ಕ್ಕೆ ಏರಿಕೆಯಾಗಿದೆ. ಅಲ್ಲದೆ 128 ಮಂದಿ ಗಾಯಗೊಂಡಿದ್ದಾರೆ. 800ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಪೀಡಿತ ಪ್ರದೇಶಗಳ ಶಾಲೆ, ಕಾಲೇಜುಗಳನ್ನು ಮುಚ್ಚಲಾಗಿದೆ.

ಮಂಗಳವಾರ ಬೆಳ್ಳಂಬೆಳಗ್ಗೆ ಭೂಕುಸಿತ ಸಂಭವಿಸಿದ್ದರಿಂದ ಮನೆಗಳಲ್ಲಿ ಮಲಗಿದ್ದ ಜನರು ನಿದ್ದೆಯಲ್ಲೇ ಉಸಿರು ಚೆಲ್ಲಿದ್ದಾರೆ. ಭೂಕುಸಿತದಿಂದ ಅನೇಕ ಮನೆಗಳು ನೆಲಸಮವಾಗಿವೆ, ನದಿಗಳು ಉಕ್ಕಿ ಹರಿಯುತ್ತಿವೆ. ಅಲ್ಲದೆ ಹಲವು ಮರಗಳು ನೆಲಕ್ಕುರುಳಿವೆ. ವಿದ್ಯುತ್, ರಸ್ತೆ ಸಂಪರ್ಕವಿಲ್ಲದೆ ಜನರಲ್ಲಿ ಆತಂಕ ಮನೆ ಮಾಡಿದೆ.
ಆರ್ಮಿ, ನೌಕಾಪಡೆ ಮತ್ತು ಎನ್ಡಿಆರ್ಎಫ್ನ ರಕ್ಷಣಾ ತಂಡಗಳು ಪ್ರತಿಕೂಲ ಹವಾಮಾನದ ನಡುವೆ ಸಂತ್ರಸ್ತರನ್ನು ಹುಡುಕುವ ಕಾರ್ಯವನ್ನು ಇಂದು ಮತ್ತೆ ಆರಂಭಿಸಿದ್ದಾರೆ. ಸಂತ್ರಸ್ತರಿಗೆ ಅಗತ್ಯ ನೆರವು ನೀಡಲು ಬಹು ಏಜೆನ್ಸಿಗಳು ಒಟ್ಟಾಗಿ ಕೆಲಸ ಮಾಡುತ್ತಿವೆ.

ಭೂಕುಸಿತದಲ್ಲಿ ಮೃತಪಟ್ಟವರ ಮೃತದೇಹಗಳನ್ನು ಗುರುತಿಸಲಾಗುತ್ತಿಲ್ಲ. ಪತ್ತೆ ಮಾಡಲಾದ ದೇಹಗಳನ್ನು ಮೃತರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ರಾಜ್ಯದ ಪೋತುಕಲ್ನ ಚಾಲಿಯಾರ್ ನದಿಯಿಂದ 16 ಶವಗಳು ಪತ್ತೆಯಾಗಿವೆ. ಇದಲ್ಲದೆ ಮೃತ ದೇಹಗಳ ತುಂಡುಗಳನ್ನು ಸಹ ಹೊರತೆಗೆಯಲಾಗಿದೆ. ಇನ್ನೂ ಹಲವರು ಕೆಸರಿನಲ್ಲಿ ಸಿಕ್ಕಿಬಿದ್ದಿರುವ ಅಥವಾ ಕೊಚ್ಚಿ ಹೋಗಿರುವ ಸಾಧ್ಯತೆಗಳಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ.
ವಯನಾಡಿಗೆ ರಾಹುಲ್ ಗಾಂಧಿ ಭೇಟಿ
ಮಂಗಳವಾರ ಮೊದಲ ಭೂಕುಸಿತ ರಾತ್ರಿ 2 ಗಂಟೆಗೆ ಸಂಭವಿಸಿದೆ. ನಂತರ ಬೆಳ್ಳಂಬೆಳಗ್ಗೆ 4:10 ಕ್ಕೆ ಎರಡನೇ ಭೂಕುಸಿತ ಸಂಭವಿಸಿದೆ. ಇದರಿಂದಾಗಿ ಮೆಪ್ಪಾಡಿ, ಮುಂಡಕ್ಕೈ, ಚುರಲ್ಮಲಾ ಪ್ರದೇಶಗಳ ಸಂಪರ್ಕ ಕಳೆದುಕೊಂಡಿದ್ದು, ಚುರಲ್ಮಲಾ-ಮುಂಡಕ್ಕೈ ರಸ್ತೆ ಸಂಪೂರ್ಣ ಹಾಳಾಗಿದೆ.

ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ 45 ಪರಿಹಾರ ಶಿಬಿರಗಳಿಗೆ 3,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಮಾಜಿ ವಯನಾಡ್ ಸಂಸದ ರಾಹುಲ್ ಗಾಂಧಿ ಕೂಡ ಸಂಸತ್ತಿನಲ್ಲಿ ವಯನಾಡಿನಲ್ಲಿ ಭೂಕುಸಿತ ಘಟನೆಗಳಲ್ಲಿ ಅನೇಕ ಜನರ ಸಾವಿನ ಬಗ್ಗೆ ಪ್ರಸ್ತಾಪಿಸಿದರು. ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿ ವಯನಾಡಿಗೆ ಭೇಟಿ ನೀಡಬಹುದು.
ಎರಡು ದಿನಗಳ ರಾಜ್ಯ ಶೋಕಾಚರಣೆ ಘೋಷಣೆ
ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಮುಂಡಕ್ಕೈ, ಚುರಲ್ಮಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳು ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಲ್ಲಿ ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ದೊಡ್ಡ ಪ್ರಮಾಣದಲ್ಲಿ ಆಸ್ತಿ ಹಾನಿಯಾಗಿದೆ.
ಈ ಘಟನೆಯಿಂದ ರಾಜ್ಯ ಸರ್ಕಾರ ತೀವ್ರ ದುಃಖಿತವಾಗಿದ್ದು ಭೂಕುಸಿತದಲ್ಲಿ ಜನರು ಸಾವನ್ನಪ್ಪಿದ ನಂತರ ಕೇರಳ ಸರ್ಕಾರ ರಾಜ್ಯದಲ್ಲಿ ಎರಡು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ.
ಮುಖ್ಯ ಕಾರ್ಯದರ್ಶಿ ವಿ.ವೇಣು ಹೊರಡಿಸಿರುವ ಅಧಿಕೃತ ಅಧಿಸೂಚನೆಯಲ್ಲಿ ಜುಲೈ 30 ಮತ್ತು 31 ರಂದು ರಾಜ್ಯ ಶೋಕಾಚರಣೆ ಘೋಷಿಸಲಾಗಿದೆ.
ಶಿಷ್ಟಾಚಾರದ ಪ್ರಕಾರ, ಈ ಎರಡು ದಿನಗಳಲ್ಲಿ ರಾಷ್ಟ್ರಧ್ವಜವು ಅರ್ಧ ಮಟ್ಟದಲ್ಲಿ ಉಳಿಯುತ್ತದೆ. ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗುತ್ತದೆ.
ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ರಕ್ಷಣಾ ತಂಡಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ಭಾರತೀಯ ಸೇನೆ ಕೂಡ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಎನ್ಡಿಆರ್ಎಫ್ ಹೊರತುಪಡಿಸಿ, ರಾಜ್ಯ ಸರ್ಕಾರವು ಪೀಡಿತ ಪ್ರದೇಶಗಳಲ್ಲಿ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿಯನ್ನು ನಿಯೋಜಿಸಿದೆ.












Click it and Unblock the Notifications