ಉಪರಾಷ್ಟ್ರಪತಿ ಚುನಾವಣೆ: ಮಾರ್ಗರೇಟ್ ಆಳ್ವಾಗೆ ಟಿಆರ್ಎಸ್ ಬೆಂಬಲ
ನವದೆಹಲಿ ಆಗಸ್ಟ್ 5: ಉಪರಾಷ್ಟ್ರಪತಿ ಚುನಾವಣೆಯಿಂದಾಗಿ ದೇಶಾದ್ಯಂತ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಚುರುಕುಗೊಂಡಿವೆ. ಈ ಮಧ್ಯೆ ಈ ಚುನಾವಣೆಗೆ ಸಂಬಂಧಿಸಿದಂತೆ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಟಿಆರ್ಎಸ್ ವಿರೋಧ ಪಕ್ಷದ ಅಭ್ಯರ್ಥಿ ಮಾರ್ಗರೇಟ್ ಆಳ್ವಾ ಬೆಂಬಲಿಸಲಿದೆ. ತೆಲಂಗಾಣ ಮುಖ್ಯಮಂತ್ರಿ ಮತ್ತು ಪಕ್ಷದ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ ಮತ್ತು ಟಿಆರ್ಎಸ್ ನಾಯಕರೊಂದಿಗೆ ಸಮಾಲೋಚಿಸಿದ ನಂತರ ಮಾರ್ಗರೇಟ್ ಆಳ್ವಾಗೆ ಬೆಂಬಲ ನೀಡುವ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿದೆ.
ವಿರೋಧ ಪಕ್ಷಗಳು ಅವಿರೋಧವಾಗಿ ಮಾರ್ಗರೇಟ್ ಆಳ್ವಾರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿವೆ. ಆಮ್ ಆದ್ಮಿ ಪಕ್ಷ, ಜಾರ್ಖಂಡ್ ಮುಕ್ತಿ ಮೋರ್ಚಾ ಸಹ ಆಳ್ವಾ ಬೆಂಬಲಿಸಿದೆ.

ಜೆಎಂಎಂ ಅಧ್ಯಕ್ಷ ಶಿಬು ಸೊರೆನ್ ನೀಡಿರುವ ಪತ್ರದಲ್ಲಿ ಮಾರ್ಗರೇಟ್ ಆಳ್ವಾಗೆ ಮತ ಹಾಕುವಂತೆ ಸಂಸದರಿಗೆ ಸೂಚಿಸಲಾಗಿದೆ. ರಾಜ್ಯಸಭೆಯಲ್ಲಿ 2 ಮತ್ತು ಲೋಕಸಭೆಯಲ್ಲಿ 1 ಸೇರಿದಂತೆ 3 ಸಂಸದರನ್ನು ಪಕ್ಷ ಹೊಂದಿದೆ. ಜೆಎಂಎಂ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಬೆಂಬಲಿಸಿತ್ತು.
ಜಾರ್ಖಂಡ್ನ ಮಾಜಿ ರಾಜ್ಯಪಾಲರಾದ ದ್ರೌಪದಿ ಮುರ್ಮು ರಾಷ್ಟ್ರಪತಿಯಾಗಿ ಆಯ್ಕೆಯಾದರು. ಸ್ವಾತಂತ್ರ್ಯದ ನಂತರ ಆದಿವಾಸಿ ಮಹಿಳೆಯೊಬ್ಬರು ದೇಶದ ರಾಷ್ಟ್ರಪತಿಯಾಗುವ ಗೌರವಕ್ಕೆ ಪಾತ್ರರಾಗುತ್ತಿರುವುದು ಇದೇ ಮೊದಲು.
ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನಕರ್ರನ್ನು ಉಪರಾಷ್ಟ್ರಪತಿ ಹುದ್ದೆಗೆ ತನ್ನ ಅಭ್ಯರ್ಥಿಯನ್ನಾಗಿ ನಾಮನಿರ್ದೇಶನ ಮಾಡಿದೆ. ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ನಿವಾಸದಲ್ಲಿ ನಡೆದ 17 ವಿರೋಧ ಪಕ್ಷಗಳ ನಾಯಕರ ಸಭೆಯಲ್ಲಿ ಮಾರ್ಗರೇಟ್ ಆಳ್ವಾ ಕಣಕ್ಕಿಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮಾರ್ಗರೇಟ್ ಆಳ್ವಾ ಮೂಲತಃ ಮಂಗಳೂರಿನವರು. ಅವರು 14 ಏಪ್ರಿಲ್ 1942 ರಂದು ಜನಿಸಿದರು. ಆಳ್ವಾ ಅವರಿಗೆ 80 ವರ್ಷ. ಮಾರ್ಗರೇಟ್ ಆಳ್ವಾ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಕೇಂದ್ರ ಸಚಿವರಾಗಿ, ರಾಜ್ಯಪಾಲರಾಗಿ ಆಳ್ವಾ ಕಾರ್ಯನಿರ್ವಹಣೆ ಮಾಡಿದ್ದಾರೆ.












Click it and Unblock the Notifications