ಉಪ ರಾಷ್ಟ್ರಪತಿ ಚುನಾವಣೆ: ಎನ್ ಡಿಎ ಅಭ್ಯರ್ಥಿಯಾಗಿ ವೆಂಕಯ್ಯ ನಾಯ್ಡು
ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರನ್ನು ಉಪ ರಾಷ್ಟ್ರಪತಿ ಚುನಾವಣೆಯ ಬಿಜೆಪಿ ಅಭ್ಯರ್ಥಿಯನ್ನಾಗಿಸಲು ಬಿಜೆಪಿಯ ಕೆಲ ನಾಯಕರ ಇಂಗಿತ. ಪಕ್ಷದ ಕೆಲ ಆಂತರಿಕ ಮೂಲಗಳಿಂದ ವಿಚಾರ ಬಹಿರಂಗ. ಈ ವಿಚಾರವನ್ನು ತಳ್ಳಿಹಾಕಿದ ಸಚಿವ ವೆಂಕಯ್ಯ ನಾಯ್ಡು.
ನವದೆಹಲಿ, ಜುಲೈ 17: ಎನ್ ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ವೆಂಕಯ್ಯ ನಾಯ್ಡು ಕಣಕ್ಕೆ ಇಳಿಯಲಿದ್ದಾರೆ. ಮಂಗಳವಾರ ಬೆಳಗ್ಗೆ ಹನ್ನೊಂದು ಗಂಟೆಗೆ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿಂದೆ ಪ್ರಕಟವಾಗಿದ್ದ ಸುದ್ದಿ ಹೀಗಿದೆ.
***
ಉಪ ರಾಷ್ಟ್ರಪತಿ ಚುನಾವಣೆಗೆ ವೆಂಕಯ್ಯ ನಾಯ್ಡು ಅವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದ್ದು, ಈ ಬಗ್ಗೆ ಮಿತ್ರ ಪಕ್ಷಗಳ ಅಭಿಪ್ರಾಯ ಪಡೆಯಲು ಬಿಜೆಪಿ ನಿರ್ಧರಿಸಿದೆ ಎಂದು ಕೆಲ ಉನ್ನತ ಮೂಲಗಳು ತಿಳಿಸಿವೆ.
ಆದರೆ, ಈ ವಿಚಾರವನ್ನು ಖುದ್ದು ವೆಂಕಯ್ಯ ನಾಯ್ಡು ಅವರೇ ನಿರಾಕರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಉಪ ರಾಷ್ಟ್ರಪತಿ ಚುನಾವಣೆಗೆ ತಾವು ಅಭ್ಯರ್ಥಿಯಲ್ಲ ಎಂದು ಸ್ಪಷ್ಟಪಡಿಸಿದ್ದು, ಇದೊಂದು ಕೇವಲ ವದಂತಿಯಷ್ಟೇ ಎಂದು ತಿಳಿಸಿದ್ದಾರೆ.
ಉಪ ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿಯ ಸಂಸದೀಯ ಮಂಡಳಿಯ ಸಭೆ ಇಂದು (ಜುಲೈ 17) ಸಂಜೆ ನಡೆಯುವ ಸಾಧ್ಯತೆಗಳಿವೆ.

ಇಂದು ರಾಷ್ಟ್ರಪತಿ ಚುನಾವಣೆ ಮುಗಿದ ನಂತರವೇ ಈ ಸಭೆ ನಡೆಯಲಿದ್ದು, ಅಲ್ಲಿ ಒಂದಿಷ್ಟು ಅಭ್ಯರ್ಥಿಗಳ ಪಟ್ಟಿಯನ್ನಿಟ್ಟುಕೊಂಡು ಪಕ್ಷದ ಮುಖಂಡರು ಚರ್ಚೆ ನಡೆಸಲಿದ್ದಾರೆ.
ಬಿಜೆಪಿ ವತಿಯಿಂದ ಕಣಕ್ಕಿಳಿಸಲ್ಪಡುವ ಅಭ್ಯರ್ಥಿಯು ಕೇವಲ ರಾಷ್ಟ್ರಪತಿ ಆಗುವುದಷ್ಟೇ ಅಲ್ಲ, ರಾಜ್ಯಸಭೆಯನ್ನೂ ಸಮರ್ಥವಾಗಿ ನಡೆಸಿಕೊಂಡು ಹೋಗಬಲ್ಲ ವ್ಯಕ್ತಿಯಾಗಿರಬೇಕು ಎಂಬುದು ಬಿಜೆಪಿಯ ಆಕಾಂಕ್ಷೆಯಾಗಿದೆ ಎಂದು ಹೇಳಲಾಗಿದೆ.
ರಾಜ್ಯಸಭೆಯಲ್ಲಿ ಬಿಜೆಪಿಗೆ ಬಹುಮತದ ಕೊರತೆಯಿರುವುದರಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ತಾನು ಮಾಡುವ ಅನೇಕ ಮಸೂದೆಗಳಿಗೆ ರಾಜ್ಯಸಭೆಯಲ್ಲಿ ಒಪ್ಪಿಗೆ ಪಡೆಯಲು ಬಿಜೆಪಿ ಸಾಹಸ ಪಡಬೇಕಿದೆ.
ಅಲ್ಲಿ ಎನ್ ಡಿಎ ಹಾಗೂ ಇತರ ಮಿತ್ರ ಪಕ್ಷಗಳ ಸದಸ್ಯರ ಸಂಖ್ಯೆ 74 ಇದ್ದರೆ, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳ ಸಂಖ್ಯೆ 171 ಇದೆ.
ಹೀಗಾಗಿ, ತಮ್ಮ ಕಡೆಯಿಂದ ಸೂಕ್ತ ವ್ಯಕ್ತಿಯು ಉಪ ರಾಷ್ಟ್ರಪತಿಯಾದರೆ, ಅದು ಬಿಜೆಪಿಯ ರಾಜ್ಯಸಭೆಯ ಸಮಸ್ಯೆಗೂ ಪರಿಹಾರ ಸಿಕ್ಕಂತಾಗುತ್ತದೆ ಎಂಬ ಇರಾದೆಯೂ ಪಕ್ಷದೊಳಗಿದೆ ಎಂದು ಹೇಳಲಾಗಿದೆ.












Click it and Unblock the Notifications