ಶಾರೂಖ್ ಖಾನ್ ಒಬ್ಬ ಪಾಕಿಸ್ತಾನಿ ಏಜೆಂಟ್: ವಿಎಚ್ಪಿ ನಾಯಕಿ
ನವದೆಹಲಿ, ನ 3: ಪಕ್ಷದ ರಾಷ್ಟ್ರಾಧ್ಯಕ್ಷರ ಮತ್ತು ಪ್ರಧಾನಿ ಮೋದಿಯ ಕಟ್ಟುನಿಟ್ಟಿನ ಆದೇಶವನ್ನು ಲೆಕ್ಕಿಸದೇ ಬಿಜೆಪಿಯ ಮತ್ತು ಸಂಘಪರಿವಾರದ ಕೆಲವು ಮುಖಂಡರ ವಿವಾದಕಾರಿ ಹೇಳಿಕೆಯ ಸರದಿ ಮುಂದುವರಿಯುತ್ತಲೇ ಇದೆ.
ತನ್ನ ಕಟ್ಟಾ ಹಿಂದೂಪರ ಹೇಳಿಕೆಯಿಂದ ಈಗಾಗಲೇ ಬಿಜೆಪಿಗೆ ಸಾಕಷ್ಟು ಬಾರಿ ಮುಜುಗರವನ್ನು ತಂದಿಟ್ಟಿರುವ ವಿಶ್ವಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ, ಬಾಲಿವುಡ್ ಬಾದಶಾ ಶಾರೂಖ್ ಖಾನ್ ಭಾರತದಲ್ಲಿ ಇರಲು ಲಾಯಕ್ಕಿಲ್ಲ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.
ಶಾರೂಖ್ ಖಾನ್ ಒಬ್ಬ ಪಾಕ್ ಏಜೆಂಟ್, ಆತ ತನ್ನ ಐವತ್ತನೇ ಹುಟ್ಟುಹಬ್ಬವನ್ನು ಪಾಕಿಸ್ತಾನದಲ್ಲಿ ಆಚರಿಸಿಕೊಳ್ಳಬೇಕಿತ್ತು. ಭಾರತದ ಯುವಜನತೆ ಹಾಳಾಗಲು ಇವರ ಚಿತ್ರಗಳೇ ಕಾರಣ ಎಂದು ಸಾಧ್ವಿ ಪ್ರಾಚಿ ವಾಕ್ ಪ್ರಹಾರ ನಡೆಸಿದ್ದಾರೆ. (ಮಗಳ ವಯಸ್ಸಿನವಳನ್ನೇ ಮದುವೆಯಾಗಲಿ, ಬಿಜೆಪಿಗೆ ಯಾಕೀ ಚಿಂತೆ)
ಸಾಧ್ವಿ ಈ ಹಿಂದೆ ಕೂಡಾ ಖಾನ್ ತ್ರಯರ ವಿರುದ್ದ ಹೇಳಿಕೆಯನ್ನು ನೀಡಿದ್ದರು. ಶಾರೂಖ್, ಅಮೀರ್ ಮತ್ತು ಸಲ್ಮಾನ್ ತಮ್ಮ ಚಿತ್ರಗಳ ಮೂಲಕ ದೇಶದಲ್ಲಿ ಲವ್ ಜಿಹಾದ್ ಹರಡುತ್ತಿದ್ದಾರೆಂದು ಸಾಧ್ವಿ ಪ್ರಾಚಿ ಹೇಳಿದ್ದರು.
ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ಬಗ್ಗೆ ಖೇದ ವ್ಯಕ್ತಪಡಿಸಿದ್ದ ಶಾರೂಖ್, ಪ್ರಶಸ್ತಿ ಹಿಂದಿರುಗಿಸುವುದಾಗಿ ಜನ್ಮದಿನ ಆಚರಣೆಯ ಸಂದರ್ಭದಲ್ಲಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸುತ್ತಾ, ಸಾಧ್ವಿ ಪ್ರಾಚಿ ಈ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.
ಒಸಾಮಾನಂತಹ ಭಯೋತ್ಪಾದಕ ಸಾವನ್ನಪ್ಪಿದರೆ ಸೋನಿಯಾ ರಾತ್ರಿಯಿಡೀ ಅಳುತ್ತಾರೆ, ಬಿಜೆಪಿ ಮುಖಂಡ: ಮುಂದೆ ಓದಿ..
ಜನ್ಮದಿನದಂದು ಶಾರೂಖ್ ಹೇಳಿದ್ದು
ಜನರ ಮೇಲೆ ತಪ್ಪು ಸರಿ ಹೇರುವ ಅಧಿಕಾರ ಯಾರಿಗೂ ಇಲ್ಲ. ಆದರೆ ದೇಶದ ಜಾತ್ಯಾತೀತೆಯ ವಿರುದ್ದ ವರ್ತಿಸುವುದು ತಪ್ಪು ಜೊತೆಗೆ ದೇಶದ ಹಿತದೃಷ್ಟಿಯಲ್ಲೂ ಒಳ್ಳೆಯದಲ್ಲ. ನಮ್ಮ ದೇಶದಲ್ಲಿ ಧಾರ್ಮಿಕ ಅಸಹಿಷ್ಣುತೆಯನ್ನು ತೋರುವುದೆಂದರೆ ಅದು ನಿಜಕ್ಕೂ ಒಂದು ದೊಡ್ಡ ದುರಂತ ಎಂದು ಶಾರೂಖ್ ಹೇಳಿದ್ದರು ಜೊತೆಗೆ ಪ್ರಶಸ್ತಿ ವಾಪಸಾತಿಯ ಬಗ್ಗೆಯೂ ಪ್ರಸ್ತಾವಿಸಿದ್ದರು.
ಶಾರೂಖ್ ನನ್ನು ಪಾಕಿಸ್ತಾನಕ್ಕೆ ಕಳುಹಿಸಿ
ಅಸಹಿಷ್ಣುತೆ ಬಗ್ಗೆ ಮಾತನಾಡಿದ ಮಾತ್ರಕ್ಕೆ ಯಾರೂ ಇಲ್ಲಿ ಹೀರೋ ಆಗಲು ಸಾಧ್ಯವಿಲ್ಲ, ಪ್ರಶಸ್ತಿ ವಾಪಸ್ ಮಾಡುವುದರ ಬಗ್ಗೆ ಶಾರೂಖ್ ಖಾನ್ ಮಾತನಾಡಬಾರದಾಗಿತ್ತು. ಶಾರೂಖ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದು ವಿಎಚ್ಪಿ ನಾಯಕಿ ಸಾಧ್ವಿ ಪ್ರಾಚಿ ಒತ್ತಾಯಿಸಿದ್ದಾರೆ.
ಸೋನಿಯಾ ಗಾಂಧಿ ಬಗ್ಗೆ ಬಿಜೆಪಿ ಮುಖಂಡ
ಯಾವುದೇ ಉಗ್ರನೊಬ್ಬ ಸತ್ತರೂ ಅದಕ್ಕೆ ಧರ್ಮದ ಲೇಪನ ಹಚ್ಚುವುದು ಕಾಂಗ್ರೆಸ್ಸಿನವರ ಸ್ವಭಾವ. ಒಸಾಮ ಬಿನ್ ಲಾಡೆನ್ ನಂತಹ ಉಗ್ರ ಸತ್ತರೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರಾತ್ರಿಯಿಡೀ ನಿದ್ದೆ ಮಾಡದೇ ಅಳುತ್ತಾ ಕೂರುತ್ತಾರೋ ಏನೋ ಎಂದು ಬಿಜೆಪಿ ಮುಖಂಡ ಮುಖ್ತಾರ್ ಅಬ್ಬಾಸ್ ನಖ್ವಿ ವಿವಾದಕಾರಿ ಹೇಳಿಕೆಯನ್ನು ನೀಡಿದ್ದಾರೆ.
ಬಾತ್ಲಾ ಹೌಸ್ ಕಾರ್ಯಾಚರಣೆ
ಐದು ವರ್ಷದ ಹಿಂದೆ ನಡೆದ ಬಾತ್ಲಾ ಹೌಸ್ ಕಾರ್ಯಾಚರಣೆಯ ವೇಳೆ ಶಂಕಿತ ಉಗ್ರರಿಬ್ಬರು ಮತ್ತು ಒರ್ವ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದರು. ಈ ಸಮಯದಲ್ಲಿ ಸೋನಿಯಾ ಗಾಂಧಿ ರಾತ್ರಿಯಿಡೀ ನಿದ್ದೆಯನ್ನೇ ಮಾಡಲಿಲ್ಲ ಎಂದು ಕಾಂಗ್ರೆಸ್ ಮುಖಂಡರು ಈ ಹಿಂದೆ ಹೇಳಿದ್ದರು. ಅದನ್ನು ಉಲ್ಲೇಖಿಸಿ ಈಗ ನಾನು ಈ ಹೇಳಿಕೆಯನ್ನು ಪುನರುಚ್ಚಿಸುತ್ತಿದ್ದೇನೆ ಎಂದು ನಖ್ವಿ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ದಿಗ್ವಿಜಯ್ ಸಿಂಗ್ ವಿರುದ್ದ ಲೇವಡಿ
ತಮ್ಮ ಈ ವಯಸ್ಸಿನಲ್ಲಿ ದಿಗ್ವಿಜಯ್ ಸಿಂಗ್ ಮಗಳ ವಯಸ್ಸಿನವರನ್ನು ಮದುವೆಯಾಗುತ್ತಾರೆ. ಅವರು ಇನ್ನು ಮುಂದೆ ಯಾರ ಜೊತೆ ಆಟವಾಡುತ್ತಾರೆ, ತನ್ನ ಮಕ್ಕಳ ಜೊತೆಗೋ ಅಥವಾ ಮೊಮ್ಮಕ್ಕಳ ಜೊತೆಗೋ ಎಂದು ಸಾಧ್ವಿ ಪ್ರಾಚಿ ಲೇವಡಿ ಮಾಡಿದ್ದರು.