Vande Bharat Express : ವಿಚಿತ್ರ ಘಟನೆ, ಹಸುಗೆ ಗುದ್ದಿದ ರೈಲು, ವ್ಯಕ್ತಿ ಸಾವು!
ಅಲ್ವಾರ್: ಎಷ್ಟೇ ಹೇಳಿದರು ಜನ ಬುದ್ಧಿ ಕಲಿಯುವುದಿಲ್ಲ. ರೈಲ್ವೇ ಹಳಿಯ ಮೇಲೆ ಹಸು ಮತ್ತು ಎಮ್ಮೆ ಮೇಯಿಸಲು ಬಿಡಬೇಡಿ ಎಂದು ಹೇಳಿದರೂ ಕೇಳಲ್ಲ. ಅದರಲ್ಲೂ 'ವಂದೇ ಭಾರತ್ ಎಕ್ಸ್ಪ್ರೆಸ್' ಈ ವಿಚಾರದಲ್ಲಿ ದೊಡ್ಡ ಸಂತ್ರಸ್ತ. ಏಕೆಂದರೆ ಪದೇಪದೆ ಈ ರೈಲಿಗೆ ಹಸು, ಎಮ್ಮೆ ಡಿಕ್ಕಿಯಾಗುತ್ತಿವೆ. ಈಗ ಅಂತಹದ್ದೇ ವಿಚಿತ್ರ ಘಟನೆ ನಡೆದು ಒಬ್ಬ ಮೃತಪಟ್ಟು, ಮತ್ತೊಬ್ಬ ಎಸ್ಕೇಪ್ ಆಗಿದ್ದಾನೆ.
ಹೌದು, ವಂದೇ ಭಾರತ್ ಎಕ್ಸ್ಪ್ರೆಸ್ (vande bharat express) ರೈಲಿಗೆ ಹಸು ಮತ್ತು ಎಮ್ಮೆಗಳು ಡಿಕ್ಕಿಯಾದ ಘಟನೆಗಳು ಚರ್ಚೆಗೆ ಗ್ರಾಸವಾಗಿವೆ. ಡೇಂಜರ್ ಅಂತಾ ಗೊತ್ತಿದ್ದರೂ ಹಸು, ಎಮ್ಮೆಗಳನ್ನು ರೈಲ್ವೇ ಹಳಿ ಬಳಿ ಮೇಯಲು ಬಿಡುವುದು ದುರಂತಕ್ಕೆ ಪ್ರಮುಖ ಕಾರಣ ಎಂಬ ಆರೋಪವಿದೆ. ಆದರೆ ರಾಜಸ್ಥಾನದಲ್ಲಿ ವಿಚಿತ್ರವಾದ ದುರ್ಘಟನೆ ನಡೆದಿದೆ. ಹಳಿ ಮೇಲೆ ಇದ್ದ ಹಸುವಿಗೆ ವಂದೇ ಭಾರತ್ ರೈಲು ಡಿಕ್ಕಿಯಾದ ಪರಿಣಾಮ ಹಸುವಿನ ಜೊತೆಗೆ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಈವರೆಗೂ ಇಂತಹ ಘಟನೆ ನಡೆದೇ ಇರಲಿಲ್ಲ, ಅದು ಹೇಗೆ ಎಂಬುದನ್ನ ಮುಂದೆ ತಿಳಿಯಿರಿ.

ಅಷ್ಟಕ್ಕೂ ಈ ಘಟನೆ ನಡೆದಿರುವುದು ರಾಜಸ್ಥಾನದ ಅಲ್ವಾರ್ನ ಅರಾವಳಿ ವಿಹಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ. ಈ ದುರ್ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಶಿವದಯಾಳ್ ಶರ್ಮಾ ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ಭಾರತೀಯ ರೈಲ್ವೆಯಲ್ಲಿ ಎಲೆಕ್ಟ್ರೀಷಿಯನ್ ಹುದ್ದೆ ನಿರ್ವಹಿಸಿ ನಿವೃತ್ತರಾಗಿದ್ದ ಎನ್ನಲಾಗಿದೆ. ಅಷ್ಟಕ್ಕೂ ಕಾಳಿ ಮೋರಿ ಗೇಟ್ನಿಂದ ಹೊರಟ ಸೆಮಿ ಹೈ ಸ್ಪೀಡ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಎದುರು ಹಳಿ ಮೇಲೆ ಹಸು ಚಲಿಸುತ್ತಿತ್ತು ಎನ್ನಲಾಗಿದೆ. ಈ ಸಂದರ್ಭದಲ್ಲಿ ವೇಗವಾಗಿ ಬಂದ ವಂದೇ ಭಾರತ್ ಎಕ್ಸ್ಪ್ರೆಸ್ ಹಸುಗೆ ಗುದ್ದಿದೆ. ಆಗ ಹಸು ಅಲ್ಲಿಂದ ಹಾರಿ ಬಿದ್ದಿದೆ. ಆದರೆ ಈ ದುರಂತದಲ್ಲಿ ಹಸು ಜೊತೆ ವ್ಯಕ್ತಿಯೂ ಮೃತಪಟ್ಟಿದ್ದಾನೆ.
ಮೂತ್ರ ವಿಸರ್ಜನೆ ವೇಳೆ ಎಡವಟ್ಟು!
ಇದನ್ನೇ ಅಲ್ವಾ ಹಣೆಬರಹ ಅಂತಾ ಹೇಳೋದು. ಹೀಗೆ ವಂದೇ ಭಾರತ್ ಎಕ್ಸ್ಪ್ರೆಸ್ ಗುದ್ದಿದ ಪರಿಣಾಮ ಹಸು ರೈಲ್ವೇ ಹಳಿಯಿಂದ ಹಾರಿ ಸುಮಾರು 30 ಮೀಟರ್ನಷ್ಟು ದೂರಕ್ಕೆ ಬಿದ್ದಿದೆ. ಆದರೆ ಅದೇ ಸಂದರ್ಭದಲ್ಲಿ ಮೃತ ಶಿವದಯಾಳ್ ಶರ್ಮಾ ಹಳಿಯ ಬಳಿ ಮೂತ್ರ ವಿಸರ್ಜನೆ ಮಾಡುತ್ತಿದ್ದರಂತೆ. ದುರಾದೃಷ್ಟಕ್ಕೆ ರೈಲು ಗುದ್ದಿದ ರಭಸಕ್ಕೆ ಹಾರಿ ಬಂದಿದ್ದ ಹಸು ಶಿವದಯಾಳ್ ಶರ್ಮಾ ಮೇಲೆ ಬಿದ್ದಿದೆ. ಪರಿಣಾಮ ಶಿವದಯಾಳ್ ಶರ್ಮಾ ಸ್ಥಳದಲ್ಲೇ ಜೀವ ಬಿಟ್ಟಿದ್ದಾರೆ. ಈ ದುರ್ಘಟನೆ ಇದೀಗ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ.
ಅಲ್ಲೇ ಇದ್ದ ಮತ್ತೊಬ್ಬ ಎಸ್ಕೇಪ್
ಒಂದು ಕಡೆ ಹಸು ಹಾರಿಬಂದ ಪರಿಣಾಮ ಶಿವದಯಾಳ್ ಶರ್ಮಾ ಮೃತಪಟ್ಟರೆ, ಅದೇ ಜಾಗದಲ್ಲಿ ಇದ್ದ ಮತ್ತೊಬ್ಬ ವ್ಯಕ್ತಿ ಜೀವ ಉಳಿಸಿಕೊಂಡಿದ್ದಾನೆ. ಶಿವದಯಾಳ್ ಶರ್ಮಾ ಜೊತೆಗೆ ನಿಂತಿದ್ದ ವ್ಯಕ್ತಿ ಗ್ರೇಟ್ ಎಸ್ಕೇಪ್ ಆಗಿದ್ದೇ ರೋಚಕ. ಇನ್ನೊಂದು ಕಡೆ ರೈಲು ಗುದ್ದಿದ ರಭಸಕ್ಕೆ ಹಸು ಕೂಡ ಸ್ಥಳದಲ್ಲೇ ಮೃತಪಟ್ಟಿದೆ. ಸುದ್ದಿ ತಿಳಿಯುತ್ತಿದ್ದಂತೆ ರೈಲ್ವೆ ಪೊಲೀಸರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಇನ್ನು ಶಿವದಯಾಳ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಘಟನೆಯಿಂದ ರೈಲ್ವೆ ಸಿಬ್ಬಂದಿ ಕೂಡ ಶಾಕ್ ಆಗಿದ್ದಾರೆ.

ಜಾನುವಾರುಗಳು ವಂದೇ ಭಾರತ್ ಎಕ್ಸ್ಪ್ರೆಸ್ಗೆ ಡಿಕ್ಕಿಯಾಗುವ ಘಟನೆಗಳು ಹೆಚ್ಚಾಗಿ ವರದಿಯಾಗಿರುವುದು ಮುಂಬಯಿ ಮತ್ತು ಗುಜರಾತ್ ಮಾರ್ಗದಲ್ಲಿ ಎನ್ನಲಾಗಿದೆ. ಪ್ರಾಣಿಗಳು ಹಳಿಯ ಮೇಲೆ ನುಗ್ಗುವುದು ಸೇರಿದಂತೆ ರೈಲಿನ ಮೇಲೆ ಕಲ್ಲು ತೂರಾಟದ ಘಟನೆಗಳನ್ನು ತಪ್ಪಿಸಲು ಪಶ್ಚಿಮ ರೈಲ್ವೆ ಮುಂಬಯಿ ಮತ್ತು ಅಹಮದಾಬಾದ್ ಮಾರ್ಗದಲ್ಲಿ 620 ಕಿಲೋ ಮೀಟರ್ಗೂ ಹೆಚ್ಚು ದೂರದವರೆಗೂ ಹಳಿಯ ಎರಡೂ ಬದಿಗಳಲ್ಲಿ ಲೋಹದ ಬೇಲಿ ಅಳವಡಿಸಲು ನಿರ್ಧರಿಸಿದೆಯಂತೆ. ಇಷ್ಟಾದರೆ ಈಗಿರುವ ಸಮಸ್ಯೆಯು ಒಂದಷ್ಟು ಹಿಡಿತಕ್ಕೆ ಸಿಗುತ್ತದೆ.












Click it and Unblock the Notifications