ರಾಯ್ಬರೇಲಿಗೆ ಸಂತ್ರಸ್ತರ ಬಳಿಗೆ ರಾಹುಲ್ ಗಾಂಧಿ
ಲಕ್ನೋ, ನವೆಂಬರ್ 02: ರಾಯ್ ಬರೇಲಿ ಜಿಲ್ಲೆಯ ರಾಷ್ಟ್ರೀಯ ಉಷ್ಣವಿದ್ಯುತ್ ನಿಗಮ(ಎನ್ ಟಿಪಿಸಿ)ದ ಸ್ಥಾವರದಲ್ಲಿ ಬಾಯ್ಲರ್ ಸ್ಫೋಟ ದುರಂತದ ಸಾವು-ನೋವಿನ ಸಂಖ್ಯೆ ಏರಿಕೆಯಾಗಿದೆ.
ಈ ದುರಂತದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ ಈ ಸಮಯಕ್ಕೆ 15 ರಿಂದ 25ಕ್ಕೇರಿದೆ. ಸುಮಾರು 100 ಕಾರ್ಮಿಕರು, ಅಧಿಕಾರಿಗಳು ಗಾಯಗೊಂಡಿದ್ದಾರೆ. ಈ ನಡುವೆ ಪ್ರವಾಸದಲ್ಲಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಪ್ರವಾಸವನ್ನು ಮೊಟಕುಗೊಳಿಸಿದ್ದಾರೆ ಮೊದಲು ಸಂತ್ರಸ್ತರನ್ನು ಕಂಡು ನಂತರ ಗುಜರಾತಿಗೆ ಮರಳುವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ರಾಯ್ ಬರೇಲಿ ವಿದ್ಯುತ್ ಸ್ಥಾವರದಲ್ಲಿ ಸ್ಫೋಟ, ಎಂಟು ಸಾವು
ಗುಜರಾತ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಮೂರು ದಿನಗಳ ಪ್ರವಾಸದಲ್ಲಿದ್ದರು. ರಾಯ್ ಬರೇಲಿಯ ದುರಂತದ ಹಿನ್ನಲೆಯಲ್ಲಿ ತಮ್ಮ ಗುಜರಾತ್ ಪ್ರವಾಸವನ್ನು ಗುರುವಾರದಂದೇ ತಾತ್ಕಾಲಿಕವಾಗಿ ಮೊಟಕುಗೊಳಿಸಿದ್ದಾರೆ. ಗುಜರಾತ್ನಿಂದ ನೇರವಾಗಿ ರಾಯ್ ಬರೇಲಿಗೆ ತೆರಳಿ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಲಿದ್ದಾರೆ.
ಸುಮಾರು 870 ಕಾರ್ಮಿಕರು ಕಾರ್ಯನಿರ್ವಹಿಸುವ ಎನ್ ಟಿಪಿ ಸಿಯ ಉಂಚಾಹರ್ ಘಟಕದ ಬಳಿ ಬುಧವಾರ ಮಧ್ಯಾಹ್ನ 3:30ರ ಸುಮಾರಿಗೆ ಬಾಯ್ಲರ್ ಸ್ಫೋಟಗೊಂಡಿತ್ತು. ಬಾಯ್ಲರ್ ಸ್ಫೋಟ ಸಂಭವಿಸಿದ ನಂತರ 40ಕ್ಕೂ ಅಧಿಕ ಆಂಬ್ಯುಲೆನ್ಸ್ಗಳನ್ನು ಸ್ಥಳಕ್ಕೆ ರವಾನಿಸಲಾಗಿತ್ತು. ಸ್ಥಳದಲ್ಲೇ ತುರ್ತು ಚಿಕಿತ್ಸೆ ನೀಡುವ ನಿಟ್ಟಿನಲ್ಲಿ 10ವೈದ್ಯರನ್ನು ನಿಯೋಜಿಸಲಾಗಿತ್ತು.
ಎನ್ಟಿಪಿಸಿಯಲ್ಲಿದೆ ಒಟ್ಟು 6 ಘಟಕಗಳು
ರಾಷ್ಟ್ರೀಯ ಉಷ್ಣವಿದ್ಯುತ್ ನಿಗಮ (ಎನ್ಟಿಪಿಸಿ) ಒಟ್ಟು 6 ಘಟಕಗಳನ್ನು ಹೊಂದಿದ್ದು, 1,550 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇಲ್ಲಿಂದ ಸುಮಾರು 9 ರಾಜ್ಯಗಳಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ.
ಮೃತರ ಕುಟುಂಬದವರ ರೋದನ ಮುಗಿಲು ಮುಟ್ಟಿದೆ
ಬಾಯ್ಲರ್ ಸ್ಫೋಟ ಪರಿಣಾಮ ಆರಂಭದಲ್ಲಿ 8 ಕಾರ್ಮಿಕರು ಮೃತಪಟ್ಟಿರುವ ಬಗ್ಗೆ ವರದಿಯಾಗಿತ್ತು. ನಂತರ ಕ್ರಮೇಣ ಸಾವಿನ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಇದೀಗ 25 ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಡಳಿತ ಖಚಿತಪಡಿಸಿದೆ.
ನೂರಾರು ಮಂದಿ ಕಾರ್ಮಿಕರು, ಅಧಿಕಾರಿಗಳು ಗಾಯಾಳು
ಸುಮಾರು 90-100 ಕಾರ್ಮಿಕರು ಗಾಯಗೊಂಡಿದ್ದು, ಈ ಪೈಕಿ 22 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಲಕ್ನೋ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಇನ್ನುಳಿದ 15 ಜನರಿಗೆ ರಾಯ್ಬರೇಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೃತರ ಕುಟುಂಬಕ್ಕೆ ತಲಾ 2 ಲಕ್ಷ ನಗದು
ಈ ದುರಂತದಲ್ಲಿ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ನಗದು ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ 50 ಸಾವಿರ, ಸಣ್ಣಪುಟ್ಟ ಗಾಯಾಳುಗಳಿಗೆ 25 ಸಾವಿರ ರೂಪಾಯಿ ಪರಿಹಾರವನ್ನು ಸಿಎಂ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ.
|
ಮೃತರ ಕುಟುಂಬಗಳಿಗೆ ಸಂತಾಪ
ಈ ದುರ್ಘಟನೆ ಬಗ್ಗೆ ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷೆ, ರಾಯ್ಬರೇಲಿ ಸಂಸದೆ ಸೋನಿಯಾ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಖೇದ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.