Kumbh Mela: ಕಾಲ್ತುಳಿತ ದುರಂತದ ಬೆನ್ನಲ್ಲೇ ಮಹಾಕುಂಭ ಮೇಳದಲ್ಲಿ ಮಹತ್ವದ ಬದಲಾವಣೆ
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಮೌನಿ ಅಮಾವಾಸ್ಯೆಯಂದು ಸಂಭವಿಸಿದ ಕಾಲ್ತುಳಿತದಲ್ಲಿ ಹಲವು ಮಂದಿ ಸಾವನ್ನಪ್ಪಿದ್ದಾರೆ. ಕರ್ನಾಟಕದಿಂದ ಪ್ರಯಾಗ್ರಾಜ್ಗೆ ತೆರಳಿದ್ದ ಕೆಲವರು ಕೂಡ ಈ ದುರಂತದಲ್ಲಿ ಜೀವತೆತ್ತಿದ್ದಾರೆ. ಈ ಘಟನೆ ನಡೆದ ಬಳಿಕ ಪ್ರಯಾಗ್ರಾಜ್ನಲ್ಲಿ ಹಲವು ಮಹತ್ವದ ಬದಲಾವಣೆಗೆ ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ.
ಮಹಾಕುಂಭ ಕಾಲ್ತುಳಿತದಲ್ಲಿ ಕನಿಷ್ಠ 30 ಮಂದಿ ಸಾವನ್ನಪ್ಪಿರುವುದು ವರದಿಯಾಗಿದೆ. ಈ ಘಟನೆ ನಡೆದ ಮರುದಿನದಿಂದಲೇ ಉತ್ತರ ಪ್ರದೇಶ ಸರ್ಕಾರವು ಇಲ್ಲಿನ ಜನಸಂದಣಿ ನಿರ್ವಹಣೆ ಮತ್ತು ಭಕ್ತರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ. ಇಲ್ಲಿ ವಾಹನ ಸಂಚಾರವನ್ನು ಸಹ ನಿರ್ಬಂಧಿಸಿದೆ. ಮುಖ್ಯವಾಗಿ ವಿಐಪಿ ಪಾಸ್ಗಳನ್ನು ಕೂಡ ರದ್ದುಗೊಳಿಸಿದೆ. ಭದ್ರತೆಗಾಗಿ ಇಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಫೆಬ್ರವರಿ 4ರವರೆಗೆ ಮಹಾಕುಂಭ ಮೇಳ ಪ್ರದೇಶವು ವಾಹನ ನಿಲುಗಡೆ ರಹಿತ ವಲಯ ಆಗಿರುತ್ತದೆ. ವಸಂತ ಪಂಚಮಿವರೆಗೆ ಈ ಸಮಯದಲ್ಲಿ ಲಕ್ಷಾಂತರ ಜನರು ಇಲ್ಲಿಗೆ ಸೇರುವ ನಿರೀಕ್ಷೆಯಿದೆ. ಮಹಾಕುಂಭ ಸ್ಥಳದಲ್ಲಿ ಸ್ಥಾಪಿಸಲಾದ ವಿವಿಧ ಶಿಬಿರಗಳವರೆಗೆ ನೀಡಿರುವ ಪಾಸ್ಗಳನ್ನು ಹೊಂದಿರುವ ವಾಹನಗಳಿಗೆ ಮಾತ್ರವೇ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ಫೆಬ್ರವರಿ 4ರವರೆಗೆ ಪ್ರಯಾಗರಾಜ್ಗೆ ಹೊರಗಿನಿಂದ ಯಾವುದೇ ನಾಲ್ಕು ಚಕ್ರಗಳ ವಾಹನಗಳು ಮತ್ತು ಬಸ್ಗಳ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ವರದಿಯಾಗಿದೆ.
ಎಲ್ಲ ಭಕ್ತರು ಸುರಕ್ಷಿತವಾಗಿ ತಮ್ಮ ಸ್ಥಳಗಳಿಗೆ ತೆರಳುವವರೆಗೆ ವಾಹನದ ಪಾಸ್ಗಳು ಮಾನ್ಯವಾಗಿರುವುದಿಲ್ಲ ಎಂದು ಸಂಚಾರ ವಿಭಾಗದ ಪೊಲೀಸ್ ಅಧೀಕ್ಷಕ ಅಂಶುಮನ್ ಮಿಶ್ರಾ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 5ರಂದು ಮಹಾಕುಂಭ ಮೇಳ ನಿಮಿತ್ತ ಪ್ರಯಾಗ್ರಾಜ್ಗೆ ಭೇಟಿ ನೀಡಲಿದ್ದಾರೆ. ಈ ಕಾರಣದಿಂದ ಇಲ್ಲಿ ಪೊಲೀಸ್ ಮತ್ತು ಸರ್ಕಾರಿ ವಾಹನಗಳು, ಆಂಬ್ಯುಲೆನ್ಸ್ಗಳು ಮತ್ತು ಇತರ ಅಗತ್ಯ ಸೇವಾ ಪೂರೈಕೆದಾರರ ವಾಹನಗಳ ಸಂಚಾರಕ್ಕೆ ಯಾವುದೇ ನಿರ್ಬಂಧಗಳಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪ್ರಯಾಗ್ರಾಜ್ನಲ್ಲಿ ಜನರ ದಟ್ಟಣೆ ತಗ್ಗಿಸಲು ಹಾಗೂ ಪ್ರವೇಶಕ್ಕೆ ಅನುವು ಮಾಡಿಕೊಡಲು ವಿಐಪಿ ಪಾಸ್ಗಳನ್ನು ರದ್ದು ಮಾಡಿದೆ. ಈ ಹಿಂದೆ ವಿಐಪಿ ಪಾಸ್ಗಳನ್ನು ಹೊಂದಿರುವವರಿಗೆ ಕುಂಭಮೇಳ ನಡೆಯುತ್ತಿರುವ ವಿವಿಧ ವಲಯಗಳಲ್ಲಿನ ಅಖಾರಾಗಳು ಮತ್ತು ಸಾಧುಗಳಿರುವ ಸ್ಥಳಗಳಿಗೆ ಪ್ರವೇಶ ಕಲ್ಪಿಸಲಾಗುತ್ತಿತ್ತು. ಮೊನ್ನೆ ನಡೆದ ಕಾಲ್ತುಳಿತ ದುರಂತದಿಂದಾಗಿ ಯುಪಿ ಸರ್ಕಾರ ಎಚ್ಚೆತ್ತುಕೊಂಡಿದೆ.

ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳುವ ಭಕ್ತರಿಗಾಗಿ ತಯಾರಿಸಿದ ಆಹಾರದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಬೂದಿ ಮಿಶ್ರಣ ಮಾಡಿರುವ ಆರೋಪ ಕೇಳಿಬಂದಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಹಿನ್ನೆಲೆ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಗಂಗಾನಗರ ಡಿಸಿಪಿ ಪ್ರತಿಕ್ರಿಯಿಸಿದ್ದರು. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು, ವರದಿಯ ಆಧಾರದ ಮೇಲೆ ಗಂಗಾ ನಗರ ಉಪ ಪೊಲೀಸ್ ಆಯುಕ್ತರ ಸೊರನ್ ಎಸ್ಎಚ್ಒ ಅವರನ್ನು ಅಮಾನತುಗೊಳಿಸಿದ್ದಾರೆ. ಇಲಾಖಾ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದ್ದರು. ಅಲ್ಲದೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಕೂಡ ಈ ವಿಡಿಯೋವನ್ನು ಹಂಚಿಕೊಂಡು ಗಮನ ಸೆಳೆದಿದ್ದರು.












Click it and Unblock the Notifications