UP: ಮೀರತ್ನಲ್ಲಿ 3 ಅಂತಸ್ತಿನ ಕಟ್ಟಡ ಕುಸಿತ: 10 ಮಂದಿ ಸಾವು- ಸಿಎಂ ಯೋಗಿ ಸಂತಾಪ
ಮೀರತ್ ಸೆಪ್ಟೆಂಬರ್ 15: ಉತ್ತರ ಪ್ರದೇಶದ ಮೀರತ್ ನಲ್ಲಿ ಶನಿವಾರ (ಸೆ.14) ದುರಂತವೊಂದು ಸಂಭವಿಸಿದೆ. ಭಾರೀ ಮಳೆಯಿಂದಾಗಿ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದ್ದು, 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ.
ಮೀರತ್ ಜಿಲ್ಲಾಡಳಿತ ಹೊರಡಿಸಿದ ಹೇಳಿಕೆಯ ಪ್ರಕಾರ, ಜಾಕಿರ್ ಕಾಲೋನಿಯಲ್ಲಿ ಶನಿವಾರ ಸಂಜೆ 5:15 ರ ಸುಮಾರಿಗೆ ಮೂರು ಅಂತಸ್ತಿನ ಮನೆ ಕುಸಿದು 10 ಜನರು ಸಾವನ್ನಪ್ಪಿದ್ದಾರೆ. ಒಬ್ಬ ವ್ಯಕ್ತಿ ಇನ್ನೂ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಶಂಕೆ ಇದೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ಮುಂದುವರೆದಿದೆ. ಮೃತರನ್ನು ಸಾಜಿದ್ (40), ಮಗಳು ಸಾನಿಯಾ (15), ಮಗ ಸಾಕಿಬ್ (11), ಸಿಮ್ರಾ (ಒಂದೂವರೆ ವರ್ಷ), ರೀಜಾ (ಏಳು), ನಫೊ (63), ಫರ್ಹಾನಾ (20), ಅಲಿಶಾ (18), ಅಲಿಯಾ (ಆರು) ಮತ್ತು ರಿಮ್ಸಾ (ಐದು ತಿಂಗಳು) ಎಂದು ಗುರುತಿಸಲಾಗಿದೆ.

ಅಪಘಾತ ಯಾವಾಗ ಮತ್ತು ಎಲ್ಲಿ ಸಂಭವಿಸಿತು?
ಮೀರತ್ನ ಲೋಹಿಯಾ ನಗರದ ಜಾಕಿರ್ ಕಾಲೋನಿಯಲ್ಲಿ ಈ ಅಪಘಾತ ಸಂಭವಿಸಿದೆ. ಇಲ್ಲಿ ಶನಿವಾರ ಸಂಜೆ 5.15ರ ಸುಮಾರಿಗೆ 35 ವರ್ಷ ಹಳೆಯದಾದ ಮೂರು ಅಂತಸ್ತಿನ ಕಟ್ಟಡವೊಂದು ಏಕಾಏಕಿ ಕುಸಿದು ಬಿದ್ದಿದೆ. ಈ ಅವಘಡ ಸಂಭವಿಸಿದಾಗ ಕಟ್ಟಡದಲ್ಲಿ ಹಲವರು ಜನ ಇದ್ದರು. ಅಪಘಾತದ ಬಗ್ಗೆ ಮಾಹಿತಿ ಪಡೆದ ತಕ್ಷಣ ರಕ್ಷಣಾ ಕಾರ್ಯ ಆರಂಭಿಸಲಾಗಿದೆ.
ಶನಿವಾರ ಸಂಜೆ ಈ ಘಟನೆ ನಡೆದಿದ್ದು, ತಕ್ಷಣ ತುರ್ತು ಸೇವೆಗೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೀರತ್ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿ) ಡಿ.ಕೆ. ಠಾಕೂರ್, ವಿಭಾಗೀಯ ಕಮಿಷನರ್ ಸೆಲ್ವ ಕುಮಾರಿ ಜೆ, ಪೊಲೀಸ್ ಮಹಾನಿರೀಕ್ಷಕ (ಐಜಿ) ನಚಿಕೇತ ಝಾ ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಡಾ. ವಿಪಿನ್ ತಾಡಾ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಇದ್ದು ರಕ್ಷಣಾ ಮೇಲ್ವಿಚಾರಣೆ ನಡೆಸಿದ್ದಾರೆ.
ಮಳೆಯಿಂದಾಗಿ ಶಿಥಿಲಗೊಂಡ ಮನೆ ಕುಸಿತ
ಮನೆ ಸುಮಾರು 35 ವರ್ಷ ಹಳೆಯದು. ಸತತ ಮಳೆಯಿಂದಾಗಿ ಶಿಥಿಲಗೊಂಡಿದ್ದ ಮನೆ ಕುಸಿದಿದೆ. ಮೂರು ಅಂತಸ್ತಿನ ಕಟ್ಟಡದ ಕುಸಿತದ ನಂತರ ಅದರ ಅಡಿಯಲ್ಲಿ ಅನೇಕ ಪ್ರಾಣಿಗಳು ಸಮಾಧಿಯಾಗಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ಇಲಾಖೆ ಮತ್ತು ಪೊಲೀಸರು ಅವಶೇಷಗಳಿಂದ ಜನರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಶನಿವಾರ ಸಂಜೆ ಆರಂಭವಾದ ಪರಿಹಾರ ಮತ್ತು ರಕ್ಷಣಾ ಕಾರ್ಯ ಭಾನುವಾರವೂ ಮುಂದುವರಿದಿದೆ.

ಜಿಲ್ಲಾ ಮ್ಯಾಜಿಸ್ಟ್ರೇಟ್ ದೀಪಕ್ ಮೀನಾ ಸುದ್ದಿಗಾರರೊಂದಿಗೆ ಮಾತನಾಡಿ, "ಅಪಘಾತದ ಸಮಯದಲ್ಲಿ, ಮನೆಯಲ್ಲಿ ಸುಮಾರು 15 ಜನರು ಇದ್ದರು, ಅಪಘಾತದ ನಂತರ ಮೂವರನ್ನು ಹೊರತೆಗೆಯಲಾಯಿತು, 12 ಜನರು ಅವಶೇಷಗಳ ಅಡಿಯಲ್ಲಿ ಸಿಲಿಕಿಕೊಂಡಿದ್ದರು. ಘಟನೆಯ ಬಗ್ಗೆ ಮಾಹಿತಿ ಪಡೆದು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಯಿತು. ಎಂಟು ಜನರನ್ನು ರಕ್ಷಿಸಲಾಗಿದೆ. ಅದರಲ್ಲಿ ಆರು ಜನರು ಸಾವನ್ನಪ್ಪಿದರು ಮತ್ತು ನಾಲ್ಕು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ.
ವರದಿಯ ಪ್ರಕಾರ, ಘಟನೆ ಸಂಜೆ 5:15 ರ ಸುಮಾರಿಗೆ ಸಂಭವಿಸಿದೆ. ಮನೆಯ ಮಾಲೀಕನನ್ನು ಅಲಾವುದ್ದೀನ್ ಎಂದು ಗುರುತಿಸಲಾಗಿದೆ. ಕಟ್ಟಡದಲ್ಲಿ ಡೇರಿ ನಡೆಸುತ್ತಿದ್ದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಈ ಅಪಘಾತದ ಬಗ್ಗೆ ಗಮನ ಹರಿಸಿದ್ದಾರೆ. ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯ ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ.
ಕಳೆದ ಕೆಲವು ದಿನಗಳಲ್ಲಿ ರಾಜ್ಯದಲ್ಲಿ ಕಟ್ಟಡ ಕುಸಿತದ ದೊಡ್ಡ ಪ್ರಕರಣಗಳಲ್ಲಿ ಇದೂ ಒಂದು. ಇದಕ್ಕೂ ಮೊದಲು ಸೆಪ್ಟೆಂಬರ್ 7 ರಂದು, ಯುಪಿ ರಾಜಧಾನಿ ಲಕ್ನೋದ ಟ್ರಾನ್ಸ್ಪೋರ್ಟ್ ನಗರ ಪ್ರದೇಶದಲ್ಲಿ ಗೋದಾಮು ಮತ್ತು ಮೋಟಾರ್ ವರ್ಕ್ಶಾಪ್ ಹೊಂದಿರುವ ಮೂರು ಅಂತಸ್ತಿನ ಕಟ್ಟಡ ಕುಸಿದಿತ್ತು. ಇದರಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು, 28 ಮಂದಿ ಗಾಯಗೊಂಡಿದ್ದರು.












Click it and Unblock the Notifications