ಯುಪಿಯಲ್ಲಿ 'ಠೇವಣಿ' ಕಳೆದುಕೊಂಡ ಕಾಂಗ್ರೆಸ್ ಸಂಭ್ರಮಿಸುತ್ತಿರುವುದು ಯಾಕೆ?
ನನಗೆ ಸಿಗದೇ ಇದ್ದದ್ದು ನಿನಗೂ ಸಿಗಬಾರದು ಎನ್ನುವ ಹಾಗಾಯಿತು ಕಾಂಗ್ರೆಸ್ ಪಕ್ಷದ ಕಥೆ. ಉತ್ತರಪ್ರದೇಶದ ಲೋಕಸಭಾ ಚುನಾವಣೆಯಲ್ಲಿ ಗೆದ್ದದ್ದು ಎಸ್ಪಿ-ಬಿಎಸ್ಪಿ ಮೈತ್ರಿಕೂಟವಾದರೂ, ಅವರಿಗಿಂತ ಹೆಚ್ಚು ಸಂಭ್ರಮಿಸುತ್ತಿರುವುದು ಕಾಂಗ್ರೆಸ್!
ಗೋರಖಪುರ ಮತ್ತು ಫೂಲ್ ಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪರಾಭವಗೊಂಡಿದೆ. ಎಸ್ಪಿ ಅಭ್ಯರ್ಥಿಯ ಜೊತೆಗಿನ ನೇರ ಸ್ಪರ್ಧೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲುಂಡಿದ್ದಾರೆ. ಆದರೆ, ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡಿದೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಉತ್ತರಪ್ರದೇಶ ಎನ್ನುವುದು ನೆಹರೂ-ಗಾಂಧಿ ಕುಟುಂಬದ ಕರ್ಮಭೂಮಿ. ಇದೇ ಪೂಲ್ ಪುರ ಕ್ಷೇತ್ರದಿಂದ ಹಿಂದೊಮ್ಮೆ ಪಂಡಿತ್ ನೆಹರೂ ಮೂರು ಬಾರಿ ಆಯ್ಕೆಯಾಗಿದ್ದರು, ಇದಾದ ನಂತರ ನೆಹರೂ ಸಹೋದರಿ (ವಿಜಯಲಕ್ಷ್ಮಿ ಪಂಡಿತ್) ಎರಡು ಬಾರಿ ಆಯ್ಕೆಯಾಗಿದ್ದರು. ಹಾಗಾಗಿ, ಬಿಜೆಪಿಗೆ ಏನಿದು ಉಪಚುನಾವಣೆಯ ಸೋಲು ಎಚ್ಚರಿಕೆಯ ಗಂಟೆಯೋ, ಅದೇ ರೀತಿ ಕಾಂಗ್ರೆಸ್ಸಿಗೂ ಇದು ಆತ್ಮವಿಮರ್ಶೆಯ ಕಾಲ.
ನಮ್ಮ ಗೆಲುವು ಬಡವರಿಗೆ, ಅಲ್ಪಸಂಖ್ಯಾತರಿಗೆ ಅರ್ಪಣೆ: ಅಖಿಲೇಶ್
ಬಿಜೆಪಿ ಈ ಎರಡು ಕ್ಷೇತ್ರಗಳಲ್ಲಿ ಸೋತಿತು ಎನ್ನುವುದು ಹೌದಾದರೂ, ಕಾಂಗ್ರೆಸ್ ಇದಕ್ಕಾಗಿ ಸಂಭ್ರಮಿಸುತ್ತಿರುವುದು, ವಿರೋಧಿಗಳ ಸೋಲಲ್ಲಿ ಗೆಲುವನ್ನು ಕಾಣುತ್ತಿರುವ ಹಾಗಾಯಿತು. ಈ ಎರಡು ಕ್ಷೇತ್ರಗಳಲ್ಲಿ 2014ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ, ಕಾಂಗ್ರೆಸ್ಸಿಗೆ ಬಿದ್ದಿರುವ ಮತಗಳ ಪ್ರಮಾಣ ಗಣನೀಯವಾಗಿ ಕುಸಿದಿರುವುದು ಕಾಂಗ್ರೆಸ್ ಮುಖಂಡರ ಗಮನಕ್ಕೆ ಬಂದಿದೆಯೋ ಇಲ್ಲವೋ?
ಉತ್ತರಪ್ರದೇಶದ ಉಪಚುನಾವಣಾ ಫಲಿತಾಂಶದ ನಂತರ ಮಾತನಾಡುತ್ತಿದ್ದ ಕಾಂಗ್ರೆಸ್ಸಿನ ಹಿರಿಯ ಮುಖಂಡ ಗುಲಾಂನಬಿ ಆಜಾದ್, ಪ್ರಗತಿಪರ ಪಕ್ಷಗಳು ಒಂದಾಗಿ ಬಿಜೆಪಿಯನ್ನು ಸೋಲಿಸಿತು ಎಂದು ಗೆಲುವಿನ ನಗೆಬೀರಿದ್ದಾರೆ. ಕಾಂಗ್ರೆಸ್ ಠೇವಣಿ ಕಳೆದುಕೊಂಡ ಬಗ್ಗೆ ಚಕಾರವೆತ್ತಲಿಲ್ಲ. ಮುಂದೆ ಓದಿ..
ಕಾಂಗ್ರೆಸ್ಸಿಗೆ ಬಿದ್ದಿರುವ ಮತಗಳು ಶೇ.60ರಷ್ಟು ಕುಸಿದಿದೆ
ಈ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಹೊಂದಾಣಿಕೆ ಮಾಡಿಕೊಂಡು, ಎಸ್ಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ತೀರಾ ಅಪರೂಪದ ರಾಜಕೀಯ ಬೆಳವಣಿಗೆ ಎನ್ನುವಂತೆ ಬದ್ದವೈರಿಗಳಾದ ಮುಲಾಯಂ-ಅಖಿಲೇಶ್ - ಮಾಯಾವತಿ ಒಂದಾಗಿದ್ದರು. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಎಸ್ಪಿ ಅಭ್ಯರ್ಥಿಗೆ ಬೆಂಬಲ ಸೂಚಿಸದೇ ತನ್ನ ಅಭ್ಯರ್ಥಿಯನ್ನೂ ಕಣಕ್ಕಿಳಿಸಿತು. 2014ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ, ಕಾಂಗ್ರೆಸ್ಸಿಗೆ ಬಿದ್ದಿರುವ ಮತಗಳು ಶೇ.60ರಷ್ಟು ಕುಸಿದಿದೆ.
ಕಾಂಗ್ರೆಸ್ ಠೇವಣಿ ಕಳೆದುಕೊಂಡು ಹೀನಾಯವಾಗಿ ಮುಗ್ಗರಿಸಿದೆ
ಗೋರಖಪುರ ಮತ್ತು ಫೂಲ್ ಪುರ ಎರಡೂ ಲೋಕಸಭಾ ಕ್ಷೇತ್ರದಲ್ಲಿ, ಕಾಂಗ್ರೆಸ್ ಠೇವಣಿ ಕಳೆದುಕೊಂಡು ಹೀನಾಯವಾಗಿ ಮುಗ್ಗರಿಸಿದೆ. ಇದೇ ಈ ಹಿಂದಿನ ನೆಹರೂ ಕ್ಷೇತ್ರ ಫೂಲ್ ಪುರದಲ್ಲಿ ಪಕ್ಷೇತರ ಅಭ್ಯರ್ಥಿ ಪಡೆದಷ್ಟು ಮತವನ್ನೂ ಕಾಂಗ್ರೆಸ್ ಪಡೆಯಲಿಲ್ಲ. ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲದಂತೆ ಕಾಂಗ್ರೆಸ್ ಉಪಚುನಾವಣೆಯಲ್ಲಿ ಮುಗ್ಗರಿಸಿದೆ.
ಕಾಂಗ್ರೆಸ್ ಅಭ್ಯರ್ಥಿ ಮನೀಶ್ ಮಿಶ್ರಾ ಪರ ಚಲಾವಣೆಯಾದ ಮತ ಶೇ. 2.6
ಫೂಲ್ ಪುರ ಕ್ಷೇತ್ರದಲ್ಲಿ ಎಸ್ಪಿ ಅಭ್ಯರ್ಥಿ, ಬಿಜೆಪಿ ಅಭ್ಯರ್ಥಿಯನ್ನು 59,573 ಮತಗಳಿಂದ ಸೋಲಿಸಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಬಿದ್ದಿರುವ ಒಟ್ಟು ಮತಗಳು 19,334. ಪಕ್ಷೇತರ ಅಭ್ಯರ್ಥಿ ಅತೀಕ್ ಅಹಮದ್ ಪಡೆದಿರುವ ಮತಗಳು 48,087. ಇಲ್ಲಿ ಠೇವಣಿ ಕಳೆದುಕೊಳ್ಳುವುದರ ಜೊತೆಗೆ, ಮೂರನೇ ಸ್ಥಾನ ಪಡೆಯುವಲ್ಲೂ ಕಾಂಗ್ರೆಸ್ ವಿಫಲವಾಗಿದೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮನೀಶ್ ಮಿಶ್ರಾ ಪರ ಚಲಾವಣೆಯಾದ ಮತ ಶೇ. 2.6.
ಕಾಂಗ್ರೆಸ್ ಮುಖಂಡ ರಾಜ್ ಬಬ್ಬರ್ ಭರ್ಜರಿ ಪ್ರಚಾರ
ಇನ್ನು ಗೋರಖಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಸುರೀತಾ ಕರೀಂ ಅವರ ಪರವಾಗಿ ಚಲಾವಣೆಯಾದ ಮತ ಶೇ. 2. ಕಾಂಗ್ರೆಸ್ ಮುಖಂಡ ರಾಜ್ ಬಬ್ಬರ್ ಭರ್ಜರಿ ಪ್ರಚಾರ ನಡೆಸಿದರೂ, ಮತದಾರ ಕ್ಯಾರೇ ಅನ್ನಲಿಲ್ಲ. ಈ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಪಡೆದ ಮತ 18,858. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಇಲ್ಲಿ 45,719 ಮತಗಳನ್ನು ಪಡೆದಿತ್ತು.
ಕಾಂಗ್ರೆಸ್ ಪರಿಸ್ಥಿತಿ ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲಿ ಹದೆಗೆಡುತ್ತಿದೆ
ಠೇವಣಿ ಕಳೆದುಕೊಂಡಿದ್ದರೂ, ಎರಡು ಕ್ಷೇತ್ರದಲ್ಲಿ ಎಸ್ಪಿ ಅಭ್ಯರ್ಥಿ ಗೆದ್ದ ನಂತರ ನಡೆದ ವಿಜಯೋತ್ಸವದಲ್ಲಿ ಕಾಂಗ್ರೆಸ್ ಕಾರ್ಯಕರ್ತರೂ ಭಾಗವಹಿಸಿದ್ದರು. ದೇಶದ ಅತಿಹೆಚ್ಚು ಲೋಕಸಭಾ ಕ್ಷೇತ್ರ ಹೊಂದಿರುವ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆ ಎರಡರಲ್ಲೂ ಹದೆಗೆಡುತ್ತಿದೆ.