ಮಹಿಳಾ ಬೀಟ್ ಅಧಿಕಾರಿಗಳಿಗೆ ಹೊಸ ಹೆಸರು ಕೊಟ್ಟ ಯುಪಿ ಸರ್ಕಾರ
ಲಕ್ನೋ, ಸೆಪ್ಟೆಂಬರ್ 27: ಮಿಷನ್ ಶಕ್ತಿ ಮಹಿಳಾ ಬೀಟ್ ಅಧಿಕಾರಿಗಳನ್ನು ಉತ್ತರ ಪ್ರದೇಶ ಸರ್ಕಾರವು ದೀದಿ ಎಂಬ ಹೊಸ ಹೆಸರಿನಿಂದ ಕರೆಯಲಿದ್ದು, ಮುಂಬರುವ ಶರದಿಯ ನವರಾತ್ರಿಯ ಮೊದಲ ದಿನ ಅಭಿಯಾನದ ಹೊಸ ಹಂತವು ಆರಂಭವಾಗಲಿದೆ.
ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ, ಗೌರವ ಸ್ವಾವಲಂಬನೆಯನ್ನು ಎತ್ತಿಹಿಡಿಯುವ ಸಿಎಂ ಯೋಗಿ ಆದಿತ್ಯನಾಥ್ ಅವರ ದೂರದೃಷ್ಟಿಯಂತೆ ಶಕ್ತಿ ದೀದಿಗಳು, ಆರೋಗ್ಯ, ಕಂದಾಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಗಳ ಜೊತೆಗೂಡಿ ಎಲ್ಲ ಅರ್ಹ ಮಹಿಳೆಯರಿಗೆ ಮೀಸಲಾದ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಮುಂದಾಗುತ್ತಾರೆ.

ಅಭಿಯಾನದ ಈ ಹಂತದಲ್ಲಿ ಮಹಿಳಾ ಸುರಕ್ಷತೆ ಹಾಗೂ ತುರ್ತು ಸಂದರ್ಭಗಳಲ್ಲಿ ಸಹಾಯವನ್ನು ನಿರ್ವಹಿಸುವ ಬಗ್ಗೆ ಮಾಹಿತಿಯನ್ನು ಒದಗಿಸಲಾಗುತ್ತದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಕಲ್ಯಾಣ ಯೋಜನೆಗಳೊಂದಿಗೆ ಸಂಪರ್ಕ ಸಾಧಿಸಲು ಇಲ್ಲಿ ಅವಕಾಶವಿದೆ. ಮುಖ್ಯಮಂತ್ರಿಯವರ ಸೂಚನೆಯಂತೆ ದೀದಿಗಳು, ಆಶಾ ಕಾರ್ಯಕರ್ತೆಯರು, ಎಎನ್ಎಂ, ರೋಜ್ಗಾರ್ ಸೇವಕ್, ಲೇಖ್ಪಾಲ್, ಅಂಗನವಾಡಿ ಕಾರ್ಯಕರ್ತೆಯರು ಮುಂತಾದವರು ಪ್ರತಿ ವಾರ ನಿಗದಿತ ದಿನದಂದು ಗ್ರಾಮದ ಮಹಿಳೆಯರೊಂದಿಗೆ ಸಂವಹನ ನಡೆಸಲಿದ್ದಾರೆ.
ಇಲ್ಲಿ ಮಹಿಳಾ ಬೀಟ್ ಅಧಿಕಾರಿಗಳು ಮಹಿಳೆಯರ ಸುರಕ್ಷತೆಗಾಗಿ ಮುಖ್ಯಮಂತ್ರಿ ಕೈಗೊಂಡಿರುವ ಕ್ರಮಗಳ ಬಗ್ಗೆ ಎಲ್ಲರಿಗೆ ಮಾಹಿತಿ ನೀಡುತ್ತಾರೆ. ತುರ್ತು ಸಂದರ್ಭಗಳಲ್ಲಿ ಉಪಯುಕ್ತವಾದ 112, 108, 1090 ಮತ್ತು 181 ನಂತಹ ಸಹಾಯವಾಣಿ ಸೇವೆಗಳ ಬಗ್ಗೆಯೂ ಅವರಿಗೆ ಅರಿವು ಮೂಡಿಸುತ್ತಾರೆ. ಇದುವರೆಗೆ ವಿವಿಧ ಇಲಾಖಾ ಯೋಜನೆಗಳಿಂದ ಹೊರಗುಳಿದಿರುವ ಅರ್ಹ ಮಹಿಳೆಯರನ್ನು ಗುರುತಿಸಿ ಅವರಿಗೆ ಈ ಯೋಜನೆಗಳ ಲಾಭ ಪಡೆಯಲು ಸಹಾಯ ಮಾಡುತ್ತಾರೆ.
ಮಿಷನ್ ಶಕ್ತಿಯ ಹೊಸ ಹಂತಕ್ಕೆ ಸಂಬಂಧಿಸಿದ ಶಕ್ತಿ ದೀದಿ ಯೋಜನೆ ಉದ್ಘಾಟನೆಯಾಗಿದೆ. ಈ ಯೋಜನೆಯನ್ನು ಕಾರ್ಯಗತಗೊಳಿಸಲು ರಾಜ್ಯದ 7 ಕಮಿಷನರೇಟ್ಗಳು ಮತ್ತು 68 ಜಿಲ್ಲೆಗಳ ಪೊಲೀಸ್ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಸೆಪ್ಟೆಂಬರ್ 5 ರಿಂದ 21 ರವರೆಗೆ ಆಯೋಜಿಸಲಾಗಿದೆ.
ಈ ತರಬೇತಿ ಪಡೆದ ಅಧಿಕಾರಿಗಳು ತಮ್ಮ ತಮ್ಮ ಕಮಿಷನರೇಟ್ಗಳು, ಜಿಲ್ಲೆಗಳಲ್ಲಿ ಮಹಿಳಾ ಬೀಟ್ ಪೊಲೀಸ್ ಅಧಿಕಾರಿಗಳಿಗೆ (ಶಕ್ತಿ ದೀದಿ) ತರಬೇತಿ ನೀಡಿ ಮಾಸ್ಟರ್ ಟ್ರೈನರ್ಗಳಾಗಿ ಸೇವೆ ಸಲ್ಲಿಸುತ್ತಾರೆ. ಇದರ ಬೆನ್ನಲ್ಲೇ ನವರಾತ್ರಿಯಿಂದ ಔಪಚಾರಿಕ ಪ್ರಚಾರ ಆರಂಭವಾಗಲಿದೆ.












Click it and Unblock the Notifications