5ಲಕ್ಷ ತೆರಿಗೆ ಮಿತಿ ಏರಿಕೆ: ವಿಧಿಯಿಲ್ಲದೆ 1ನಿಮಿಷ ಬಜೆಟ್ ಭಾಷಣ ನಿಲ್ಲಿಸಿದ ಪಿಯೂಶ್
ಚುನಾವಣೆ ಹತ್ತಿರ ಬರುತ್ತಿರುವುದರಿಂದ ಯಾವುದೇ ಪಕ್ಷದ ಸರಕಾರ ಇದ್ದರೂ ಜನಪರ ಬಜೆಟ್ ಮಂಡಿಸುವುದು ಸಾಮಾನ್ಯ. ಅಂತೆಯೇ, ನರೇಂದ್ರ ಮೋದಿ ಸರಕಾರ ಕೂಡಾ ಅದನ್ನೇ ಮಾಡಿದೆ. ಅದರಲ್ಲಿ ಪ್ರಮುಖವಾದದ್ದು, ತೆರಿಗೆ ಮಿತಿ ಏರಿಕೆ.
ಇದನ್ನು ಕುಮಾರಸ್ವಾಮಿ ಬಾಂಬೆ ಮಿಠಾಯಿ ಎಂದಾದರೂ ಹೇಳಲಿ, ಸರಕಾರ ಮತದಾರರಿಗೆ ಲಂಚ ನೀಡುತ್ತಿದೆ ಎಂದು ಖರ್ಗೆ ಸಾಹೇಬ್ರಾದರೂ ಹೇಳಲಿ, ಮೋದಿ ಬಳಗದ ಕೊನೆಯ ನಾಟಕ ಎಂದು ರಾಹುಲ್ ಗಾಂಧಿ ಅಣಕವಾಡಿದರೂ, ಒಟ್ಟಿನಲ್ಲಿ ಚುನಾವಣೆಯ ಹೆಸರಿನಲ್ಲಾದರೂ ಮಧ್ಯಮವರ್ಗ ಕೊಂಚ ನಿಟ್ಟುಸಿರು ಬಿಡುವಂತಾಗಿದ್ದಂತೂ ಹೌದು.

ಮೂಲತಃ ಸಿಎ ರ್ಯಾಂಕ್ ಪಡೆದಿರುವ, ಹಣಕಾಸು ಸಚಿವ ಸ್ಥಾನವನ್ನೂ ನಿಭಾಯಿಸುತ್ತಿರುವ ಪಿಯೂಶ್ ಗೋಯಲ್, ಐದು ಲಕ್ಷದ ವರೆಗೆ ತೆರಿಗೆ ವಿನಾಯತಿ ಎಂದು ಬಜೆಟ್ ಪ್ರಸ್ತಾವನೆ ಸಲ್ಲಿಸುತ್ತಿದ್ದಂತೆಯೇ, ಅದು ಲೋಕಸಭೆಯೋ ಅಥವಾ ಸಾರ್ವಜನಿಕ ಸಭೆಯೋ ಎನ್ನುವ ರೀತಿಯಲ್ಲಿ ಬೆಂಬಲ ವ್ಯಕ್ತವಾಯಿತು. ಅದು ಎಷ್ಟರ ಮಟ್ಟಿಗೆ ಎಂದರೆ ಸುಮಾರು ಒಂದು ನಿಮಿಷ, ಪಿಯೂಶ್ ತಮ್ಮ ಬಜೆಟ್ ಭಾಷಣವನ್ನೇ ನಿಲ್ಲಿಸಬೇಕಾಯಿತು.
ಆಡಳಿತ ಪಕ್ಷದ ಸದಸ್ಯರು ಮೇಜುತಟ್ಟಿ ಸ್ವಾಗತಿಸುತ್ತಿದ್ದರೆ, ಪ್ರಧಾನಿ ಮೋದಿ ಕೂಡಾ ತಮ್ಮ ಸಂಸದರನ್ನು ಹುರಿದುಂಬಿಸಲು ತಾನೂ ಮೇಜು ತಟ್ಟಲಾರಂಭಿಸಿದರು. ಇದರಿಂದ ಇನ್ನಷ್ಟು ಉತ್ತೇಜಿತರಾದ ಎನ್ಡಿಎ ಮೈತ್ರಿಕೂಟದ ಸಂಸದರು, ಚಪ್ಪಾಳೆಯ ಜೊತೆ, 'ಮೋದಿ..ಮೋದಿ'' ಎಂದು ಘೋಷಣೆ ಕೂಗಲಾರಂಭಿಸಿದರು.
ಸುಮಾರು ಒಂದು ನಿಮಿಷ, ಪಿಯೂಶ್ ನಗುತ್ತಾ ಬಜೆಟ್ ಭಾಷಣವನ್ನು ಮುಂದುವರಿಸದೇ ಹಾಗೆಯೇ ನಿಂತಿದ್ದರು. ರಾಹುಲ್ ಗಾಂಧಿಯಾದಿಯಾಗಿ ವಿರೋಧ ಪಕ್ಷದ ಸದಸ್ಯರು ಮುಖದ ಮೇಲೆ ಕೈಯಿಟ್ಟುಕೊಂಡು ಗಂಭೀರವಾಗಿ ಕೂತಿದ್ದರು.
ಒಂದು ನಿಮಿಷದ ನಂತರವೂ ಸಂಸದರ ಕರತಾಡನ ಕಮ್ಮಿಯಾಗಿರಲಿಲ್ಲ, ಆದರೆ, ಪಿಯೂಶ್ ಗೋಯಲ್ ಇದರ ಮಧ್ಯೆಯೇ ಬಜೆಟ್ ಭಾಷಣ ಮುಂದುವರಿಸಲು ಆರಂಭಿಸಿದ್ದರಿಂದ, ಎಲ್ಲರೂ ಬಜೆಟ್ ಭಾಷಣ ಕೇಳಲಾರಂಭಿಸಿದರು.











Click it and Unblock the Notifications