Tirumala: ತಿರುಪತಿ ತಿಮ್ಮಪ್ಪನ ಭಕ್ತರಿಗೆ ಅನ್ನಪ್ರಸಾದ ಜೊತೆಗೆ ಮಸಾಲೆ ವಡೆ ಸವಿ ನೀಡಿದ ಟಿಟಿಡಿ
ವಿಶ್ವವಿಖ್ಯಾತ ತಿರುಪತಿ ತಿರುಮಲ ದೇವಸ್ಥಾನದಲ್ಲಿ ನೀಡುವ ಅನ್ನಪ್ರಸಾದದ ಮೆನುವಿನಲ್ಲಿ ಹೊಸ ಖಾದ್ಯ ಸೇರ್ಪಡೆಯಾಗಿದ್ದು ಅದರ ರುಚಿಯನ್ನು ಭಕ್ತರು ಸವಿದಿದ್ದಾರೆ. ಕಳೆದ ದಿನ ಗುರುವಾರ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಭಕ್ತರಿಗೆ ಅನ್ನಪ್ರಸಾದದೊಂದಿಗೆ ಮಸಾಲೆ ವಡೆಯನ್ನು ನೀಡಲಾಗಿದೆ.
ಹೌದು... ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಟ್ರಸ್ಟ್ ತಿಮ್ಮಪ್ಪನ ಭಕ್ತರಿಗೆ ಹೊಸ ಖ್ಯಾದದ ಸವಿ ನೀಡಿದೆ. ಇದರಿಂದ ಭಕ್ತರು ಖುಷಿಯಾಗಿದ್ದು ತಿಮ್ಮಪ್ಪನ ದರ್ಶನದ ಬಳಿಕ ಅನ್ನಪ್ರಸಾದದೊಂದಿಗೆ ಮಸಾಲೆ ವಡೆಯನ್ನು ಸವಿದು ಖುಷಿಯಾಗಿದ್ದಾರೆ.

ಯಾತ್ರಾರ್ಥಿಗಳಿಗೆ ಊಟದ ಅನುಭವವನ್ನು ಹೆಚ್ಚಿಸುವ ಗುರಿಯಿಂದ ಟಿಟಿಡಿ ಅಧ್ಯಕ್ಷ ಬಿಆರ್ ನಾಯ್ಡು, ಕಾರ್ಯನಿರ್ವಾಹಕ ಅಧಿಕಾರಿ (ಇಒ) ಜೆ ಶ್ಯಾಮಲಾ ರಾವ್ ಮತ್ತು ಹೆಚ್ಚುವರಿ ಇಒ ಸಿಎಚ್ ವೆಂಕಯ್ಯ ಚೌಧರಿ ಅವರು ಸರ್ಕಾರದ ಮುಂದೆ ಈ ಉಪಕ್ರಮವನ್ನು ಪ್ರಸ್ತಾಪಿಸಿದರು.
ಬಿಆರ್ ನಾಯ್ಡು ಪ್ರಸ್ತಾವನೆಗೆ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅನುಮೋದನೆ ನೀಡಿದರು. ಸರ್ಕಾರದ ಅನುಮೋದನೆ ಬಳಿಕ ಮಸಾಲ ವಡೆಯನ್ನು ಭಕ್ತರಿಗೆ ಕಳೆದ ದಿನದಿಂದ ವಿತರಿಸಲಾಗುತ್ತಿದೆ. ನಿತ್ಯ ಅನ್ನಪ್ರಸಾದ ಸೇವಿಸುವ ಸಾವಿರಾರು ಭಕ್ತರಿಗೆ ಮಸಾಲೆ ವಡೆಯನ್ನು ನೀಡಲಾಗಿದೆ.
ಸಾಮಾನ್ಯವಾಗಿ ಹಿಂದೂಗಳು ಪ್ರಸಾದದಲ್ಲಿ ಈರುಳ್ಳಿ ಬೆಳ್ಳುಳ್ಳಿ ಸೇವಿಸುವುದಿಲ್ಲ. ಹೀಗಾಗಿ ಅದನ್ನು ಹಾಕಿ ದೇವಸ್ಥಾನಗಳಲ್ಲಿ ಪ್ರಸಾದ ತಯಾರಿಸುವುದಿಲ್ಲ. ಇದಲ್ಲದೆ ಹಿಂದೂ ದೇವರಿಗೆ ಸಾಕಷ್ಟು ಆಹಾರ ನೈವೇದ್ಯ ಮಾಡಿದರೂ ಅದರಲ್ಲಿ ಈರುಳ್ಳಿ, ಬೆಳ್ಳುಳ್ಳಿ ಇರುವುದಿಲ್ಲ. ಈರುಳ್ಳಿ ಬೆಳ್ಳುಳ್ಳಿಯನ್ನು ತಾಮಸಿಕ ಆಹಾರ ಎಂದು ದೂರವಿಡಲಾಗುತ್ತದೆ. ಹೀಗಾಗಿ ತಿರುಪತಿಯಲ್ಲಿ ಪ್ರಸಾದವಾಗಿ ನೀಡುವ ಮಸಾಲ ವಡೆಯಲ್ಲೂ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಹಾಕದೆ ತಯಾರಿಸಲಾಗುತ್ತದೆ.
ಈ ಮಸಾಲ ವಡೆಯನ್ನು ಬೇಳೆ, ಹಸಿರು ಮೆಣಸಿನಕಾಯಿ, ಶುಂಠಿ, ಕರಿಬೇವು, ಕೊತ್ತಂಬರಿ ಸೊಪ್ಪು ಮತ್ತು ಪುದೀನದೊಂದಿಗೆ ರುಚಿ ರುಚಿಯಾಗಿ ತಯಾರಿಸಲಾಗುತ್ತದೆ. ಇದನ್ನು ಅನ್ನ, ಸಾಂಬಾರ್, ರಸಂ, ಚಟ್ನಿ, ಮೊಸರು, ಕರಿ, ಸಿಹಿ ಪೊಂಗಲ್ ಮತ್ತು ಹಪ್ಪಳದೊಂದಿಗೆ ಬಡಸಲಾಗುತ್ತದೆ.
ತಿರುಪತಿಯ ಅನ್ನಪ್ರಸಾದ ಕೇಂದ್ರದಲ್ಲಿ ಪ್ರತಿದಿನ ಬೆಳಿಗ್ಗೆ 10.30 ರಿಂದ ಸಂಜೆ 4.00 ರವರೆಗೆ 35,000 ವಡೆಗಳನ್ನು ಬಡಿಸಲಾಗುವುದು. ರುಚಿ ಮತ್ತು ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಮಸಾಲ ವಡೆಯಲ್ಲಿ ಬಳಕೆ ಮಾಡಲಾಗುತ್ತಿದೆ.
1985ರಲ್ಲಿ ಮಾಜಿ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ಅವರ ಅಡಿಯಲ್ಲಿ ಅನ್ನಪ್ರಸಾದ ಸಂಪ್ರದಾಯವನ್ನು ಪ್ರಾರಂಭಿಸಲಾಯಿತು. ಅಂದಿನಿಂದ ಈವರೆಗೂ ನಿತ್ಯ ಅನ್ನದಾನ ಮಾಡಲಾಗುತ್ತಿದೆ. ಪ್ರತಿದಿನ 2,000 ಯಾತ್ರಾರ್ಥಿಗಳಿಗೆ ಅನ್ನ ಸೇವೆ ಸಲ್ಲಿಸುತ್ತಿತ್ತು. 2014ರ ಹೊತ್ತಿಗೆ ಇದು ಶ್ರೀ ವೆಂಕಟೇಶ್ವರ ಅನ್ನಪ್ರಸಾದ ಟ್ರಸ್ಟ್ ಆಗಿ ವಿಕಸನಗೊಂಡಿದೆ. ನಂತರ ಇದು ಜಾಗತಿಕ ಭಕ್ತರ ದೇಣಿಗೆಗಳಿಂದ ಹಣವನ್ನು ಪಡೆಯಲಾರಂಭಿಸಿತು. ವೈಕುಂಠ ಏಕಾದಶಿ ಮತ್ತು ಹೊಸ ವರ್ಷದಂತಹ ಸಂದರ್ಭಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಭಕ್ತರು ಉಚಿತ ಊಟವನ್ನು ಮಾಡುತ್ತಾರೆ.












Click it and Unblock the Notifications