ತ್ರಿಪುರಾ ಪಾಲಿಕೆ ಚುನಾವಣೆ: ಬಿಜೆಪಿಗೆ ಭರ್ಜರಿ ಜಯ
ಅಗರ್ತಲಾ, ನವೆಂಬರ್ 28: ತ್ರಿಪುರಾ ಪಾಲಿಕೆ ಚುನಾವಣೆ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಬಿಜೆಪಿ ಅಧಿಕ ಸ್ಥಾನಗಳಲ್ಲಿ ಜಯ ಸಾಧಿಸಿದೆ. ನವೆಂಬರ್ 25 ರಂದು ನಡೆದ ಚುನಾವಣೆಯಲ್ಲಿ 14 ನಗರ ಸ್ಥಳೀಯ ಸಂಸ್ಥೆಗಳ 222 ಸ್ಥಾನಗಳ ಪೈಕಿ 217 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ತನ್ನ ಸ್ಥಾನವನ್ನು ಬಿಜೆಪಿ ಭದ್ರಪಡಿಸಿಕೊಂಡಿದೆ. ತೃಣಮೂಲ ಕಾಂಗ್ರೆಸ್ನೊಂದಿಗಿನ ಹಗೆತನದ ನಡುವೆ ನಡೆದ ತ್ರಿಪುರಾ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಉಳಿದಂತೆ ಸಿಪಿಎಂ ಮೂರು ಸ್ಥಾನಗಳನ್ನು ಗೆದ್ದರೆ, ತೃಣಮೂಲ ಕಾಂಗ್ರೆಸ್ ಮತ್ತು ಟಿಐಪಿಆರ್ಎ ಮೊಹ್ತಾ ತಲಾ ಒಂದು ಸ್ಥಾನವನ್ನು ಗೆದ್ದಿದೆ. ತ್ರಿಪುರಾದಲ್ಲಿ ಬಿಜೆಪಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.
ಕಳೆದ ಚುನಾವಣೆಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಗೆಲುವು ಸಾಧಿಸಿದ್ದ ಸಿಪಿಐ ಈ ಬಾರಿ ಕೇವಲ ಮೂರು ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಗಿದೆ. ಕೈಲಾಶ್ ಶಹರ್ ಮತ್ತು ಅಂಬಾಸ್ಸಾ ಪುರಸಭೆಗಳು ಮತ್ತು ಪಣಿಸಾಗರ ಪಂಚಾಯ್ತಿ ಸ್ಥಾನಗಳನ್ನು ಸಿಪಿಐಎಂ ಗೆದ್ದಕೊಂಡಿದೆ. ಅಗರ್ತಲ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಬಳಿಕ ಎರಡನೇ ಗರಿಷ್ಠ ಮತಗಳನ್ನು ಗಳಿಸಿಕೊಂಡಿರುವ ತೃಣಮೂಲ ಕಾಂಗ್ರೆಸ್, ಅಂಬಾಸಾ ನಗರ ಪಂಚಾಯ್ತಿಯಲ್ಲಿ ಒಂದು ಸ್ಥಾನವನ್ನಷ್ಟೇ ಗಳಿಸಿಕೊಂಡಿದೆ. ತ್ರಿಪುರಾ ರಾಜ ಸಿಯೋನ್ ಪ್ರದ್ಯೋತ್ ಕಿಶೋರ್ ನೇತೃತ್ವದ ಟಿಐಪಿಆರ್ಎ ಮೊಹ್ತಾ ಒಂದು ಸ್ಥಾನವನ್ನು ಗೆದ್ದಿದೆ.
ಈ ಐತಿಹಾಸಿಕ ಗೆಲುವಿಗಾಗಿ ರಾಜಕೀಯ ಗಣ್ಯರು ಶುಭಾಶಯ ತಿಳಿಸಿದ್ದಾರೆ. ತ್ರಿಪುರಾ ಸಿಎಂ ಬಿಪ್ಲಬ್ ಕುಮಾರ್ ದೇಬ್, ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಪಕ್ಷದ ಎಲ್ಲಾ ಕಾರ್ಯಕರ್ತರನ್ನು ನಾನು ಅಭಿನಂದಿಸಿದ್ದಾರೆ. ಜೊತೆಗೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ 'ಇದು ಪ್ರಜಾಪ್ರಭುತ್ವದ ಗೆಲುವು' ಎಂದು ಕರೆದಿದ್ದಾರೆ.

2018 ರಲ್ಲಿ ತ್ರಿಪುರಾದಲ್ಲಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಸ್ಪರ್ಧಿಸಿದ ಮೊದಲ ಪಾಲಿಕೆ ಚುನಾವಣೆ ಇದಾಗಿದೆ. ಮುಖ್ಯವಾಗಿ ಬಿಜೆಪಿ, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಮತ್ತು ಸಿಪಿಎಂ ನಡುವಿನ ಸ್ಪರ್ಧೆ ಇದಾಗಿದೆ. ಕಾಂಗ್ರೆಸ್ ಈ ಚುನಾವಣೆಗಳನ್ನು ಅಸಿಂಧು ಎಂದು ಘೋಷಿಸಬೇಕು ಎಂದು ಒತ್ತಾಯಿಸಿದೆ. ಆಡಳಿತಾರೂಢ ಬಿಜೆಪಿಯಿಂದ ಚುನಾವಣೆ ವೇಳೆ ದಾಳಿ ಹಾಗೂ ಮತಕ್ಕಾಗಿ ಜನರ ಮೇಲೆ ಒತ್ತಾಯ ಮಾಡಿದ ಆರೋಪ ಕಾಂಗ್ರೆಸ್ ಮಾಡಿತ್ತು.
ಎಣಿಕೆ ಕೇಂದ್ರಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ, ತ್ರಿಪುರಾ ಪೊಲೀಸ್ ಮತ್ತು ತ್ರಿಪುರಾ ಸ್ಟೇಟ್ ರೈಫಲ್ಸ್ (ಟಿಎಸ್ಆರ್) ಸಿಬ್ಬಂದಿಯೊಂದಿಗೆ ಮೂರು ಹಂತದ ಭದ್ರತಾ ವ್ಯವಸ್ಥೆಯನ್ನು ನಿಯೋಜಿಸಲಾಗಿದೆ. ಇತ್ತೀಚಿನ ವರದಿಗಳಲ್ಲಿ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.
ಗುರುವಾರ ನಡೆದ ಮತದಾನದಲ್ಲಿಯೇ ಟಿಎಂಸಿ ಮತ್ತು ಸಿಪಿಐ(ಎಂ)ಯಿಂದ ಮತ ದುರುಪಯೋಗದ ಆರೋಪಗಳಿದ್ದು, ಇಬ್ಬರೂ ವಿವಿಧ ಪುರಸಭೆಗಳಲ್ಲಿ ಮರು ಮತದಾನಕ್ಕೆ ಒತ್ತಾಯಿಸಿದ್ದರು. ಆದರೆ ಆಡಳಿತಾರೂಢ ಬಿಜೆಪಿ ಈ ಆರೋಪಗಳನ್ನು ತಳ್ಳಿ ಹಾಕಿತ್ತು. ತ್ರಿಪುರಾದಲ್ಲಿ ಮುನ್ಸಿಪಲ್ ಚುನಾವಣೆಯ ಸಂದರ್ಭದಲ್ಲಿ ನಡೆದ ದೊಡ್ಡ ಪ್ರಮಾಣದ ಹಿಂಸಾಚಾರದ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯ ಸಮಿತಿಯಿಂದ ತನಿಖೆ ನಡೆಸುವಂತೆ ಕೋರಿ ಟಿಎಂಸಿ ಶುಕ್ರವಾರ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದೆ.
ಗುರುವಾರ ತ್ರಿಪುರಾ ಮುನ್ಸಿಪಲ್ ಚುನಾವಣೆಯ ಮತದಾನದ ವೇಳೆ, ಟಿಎಂಸಿ "ಬಿಜೆಪಿ ಗೂಂಡಾಗಳು" ತನ್ನ ಬೂತ್ ಏಜೆಂಟ್ ಮತ್ತು ಅಭ್ಯರ್ಥಿಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದೆ. ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಅವರ "ಗುಂಡಾ ರಾಜ್" ಅನ್ನು ಟಿಎಂಸಿ ಟೀಕಿಸಿದೆ.
ಮತದಾನ ಪ್ರಾರಂಭವಾದ ತಕ್ಷಣ, ಟಿಎಂಸಿ ಇವಿಎಂ ಅಸಮರ್ಪಕ ಕಾರ್ಯ ಮತ್ತು ಬಿಜೆಪಿ ಕಾರ್ಯಕರ್ತರ ಗೂಂಡಾಗಿರಿಯ ಸುಮಾರು 20 ವಿಷಯಗಳನ್ನು ಪ್ರಸ್ತಾಪಿಸಿದೆ. ಇವಿಎಂ ಅಸಮರ್ಪಕ ಕಾರ್ಯದ 20 ನಿದರ್ಶನಗಳಲ್ಲಿ ಇದುವರೆಗೆ ಎರಡನ್ನು ಮಾತ್ರ ಪರಿಹರಿಸಲಾಗಿದೆ ಎಂದು ಪಕ್ಷವು ಗುರುವಾರ ಬೆಳಿಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ಹೇಳಿಕೆಯಲ್ಲಿ ತಿಳಿಸಿದೆ. ಜೊತೆಗೆ ಕೆಲವು "ಬಿಜೆಪಿ ಗೂಂಡಾಗಳು" ತನ್ನ ಕೆಲವು ಅಭ್ಯರ್ಥಿಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ. ಸರಣಿ ಟ್ವೀಟ್ಗಳಲ್ಲಿ ವಿರೂಪಗೊಂಡ ಮುಖವನ್ನು ಹೊಂದಿರುವ ವ್ಯಕ್ತಿಯನ್ನು ತೋರಿಸುವ ವಿಡಿಯೋವನ್ನು ಪಕ್ಷವು ಪೋಸ್ಟ್ ಮಾಡಿದೆ.
ಟ್ವಿಟ್ಟರ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿರುವ ತ್ರಿಪುರಾ ಟಿಎಂಸಿ, "ವಾರ್ಡ್ ಸಂಖ್ಯೆ 51 ರ ನಮ್ಮ ಅಭ್ಯರ್ಥಿಯ ಮೇಲೆ ಕ್ರೂರವಾಗಿ ದಾಳಿ ಮಾಡಲಾಗಿದೆ. ಅವರ ಕಣ್ಣುಗಳು ಊದಿಕೊಂಡಿವೆ ಮತ್ತು ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತ್ರಿಪುರ ಗೂಂಡಾಗಳು ಯಾರನ್ನೂ ಉಳಿಸುತ್ತಿಲ್ಲ. ಗೌರವಾನ್ವಿತ ಸುಪ್ರೀಂ ಕೋರ್ಟ್ ಮಾರ್ಗದರ್ಶನಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ" ಎಂದು ದೂರಲಾಗಿದೆ. ಆರೋಪಗಳೇನೇ ಇದ್ದರೂ ಇಂದು ತ್ರಿಪುರಾ ಪಾಲಿಕೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದು ವಿಪಕ್ಷಗಳಿಗೆ ಭಾರೀ ಮುಖಭಂಗವಾಗಿದೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications