ಮದುವೆಯಾಗಿ ಒಂದೂವರೆ ತಿಂಗಳಾಗಿತ್ತಷ್ಟೇ.. ತಬ್ರಿಝ್ ಸಾವಿನ ಕಣ್ಣೀರ ಕತೆ
ರಾಂಚಿ, ಜೂನ್ 25: ಬೈಕ್ ಕಳ್ಳನೆಂದು ತಬ್ರೇಝ್ ಅನ್ಸಾರಿ ಎಂಬ ಯುಕನನ್ನು ಜನರು ಹೊಡೆದು ಕೊಂದ ಘಟನೆ ದೇಶದೆಲ್ಲೆಡೆ ಆಕ್ರೋಶ ಸೃಷ್ಟಿಸಿದೆ. 24 ವರ್ಷ ವಯಸ್ಸಿನ ತಬ್ರೇಝ್ ಸಾಯುವ ಕೇವಲ ಒಂದೂವರೆ ತಿಂಗಳ ಮೊದಲಷ್ಟೇ ಮದುವೆಯಾಗಿದ್ದರು.
ಹತ್ತನೇ ವರ್ಷದಲ್ಲೇ ತಂದೆಯನ್ನೂ, ಇತ್ತೀಚೆಗೆ ತಾಯಿಯನ್ನೂ ಕಳೆದುಕೊಂಡಿದ್ದ ತಬ್ರೇಝ್ ಈಗಷ್ಟೇ ಮದುವೆಯಾಗಿ ಹೊಸ ಬದುಕನ್ನು ಕಾಣತೊಡಗಿದ್ದರು. ಆದರೆ ಅದ್ಯಾವುದೋ ದುರದೃಷ್ಟಕರ ಘಳಿಗೆಯಲ್ಲಿ ಬೈಕ್ ಕದ್ದಿದ್ದಾನೆಂದು ಆರೋಪಿಸಿ ಗುಂಪೊಂದು ಆವರನ ಮೇಲೆ ದಾಳಿ ನಡೆಸಿತ್ತು.

ಅವರು ಬೈಕ್ ಕದ್ದಿದ್ದು ಸತ್ಯವಾಗಿದ್ದರೆ ಅದಕ್ಕೆ ಶಿಕ್ಷೆಯಾಗಲಿ, ಆದರೆ ಶಿಕ್ಷಿಸುವುದಕ್ಕೆ ಪೊಲೀಸರಿದ್ದರು. ಇವರ್ಯಾರು ಅಮಾನುಷವಾಗಿ ಹೊಡೆದು ಕೊಲ್ಲುವುದಕ್ಕೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು.
ಕೆಲವು ಮೂಲಗಳ ಪ್ರಕಾರ 'ಜೈ ಶ್ರೀರಾಮ್', 'ಜೈ ಹನುಮಾನ್' ಎಂದು ಹೇಳುವಂತೆ ಅವನನ್ನು ಒತ್ತಾಯಿಸಲಾಗಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ಘಟನೆಗೆ ಸಾಕ್ಷ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ.
ಆದ್ದರಿಂದ ಈ ಘಟನೆಗೆ ಇದೀಗ ಕೋಮು ಬಣ್ಣ ಲೇಪನವಾಗಿದ್ದು, ಅಲ್ಪಸಂಖ್ಯಾತರಿಗೆ ಭದ್ರತೆ ಇಲ್ಲ ಎಂಬ ಮಾತು ಕೇಳಿಬರುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಹನ್ನೊಂದು ಜನರನ್ನು ಬಂಧಿಸಲಾಗಿದೆ.
ಈ ಘಟನೆ ನಡೆದ ನಂತರ ತಬ್ರೇಝ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆತ ಗಂಭೀರವಾಗಿ ಗಾಯಗೊಂಡಿದ್ದರೂ ಆತನನ್ನು ಆಸ್ಪತ್ರೆಗೆ ಸೇರಿಸಲು ಪೊಲೀಸರು ಒಪ್ಪಿರಲಿಲ್ಲ. ನಂತರ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದರು. ಇದರಿಂದಾಗಿ ಪೊಲೀಸರ ವಿರುದ್ಧವೂ ಆಕ್ರೋಶ ವ್ಯಕ್ತವಾಗಿತ್ತು.

ಪುಣೆಯಲ್ಲಿ ಕೆಲಸ ಮಾಡುತ್ತಿದ್ದ ತಬ್ರೇಝ್ ತನ್ನ ಮದುವೆಯ ಸಲುವಾಗಿ ಜಾರ್ಖಂಡ್ ಗೆ ಬಮದಿದ್ದರು. ಜೂನ್ 24 ರಂದು ಪತ್ನಿಯೊಂದಿಗೆ ಮತ್ತೆ ಪುಣೆಗೆ ತೆರಳಲು ಟಿಕೆಟ್ ಸಹ ಬುಕ್ ಮಾಡಿದ್ದರು.
ತಬ್ರೇಜ್ ಪತ್ನಿ ಶೈಶ್ತಾ ಅನ್ಸಾರಿ ಇನ್ನೂ ಆಘಾತದಿಂದ ಹೊರಬಂದಿಲ್ಲ. ಜೇಮ್ಶೆಡ್ಪುರದಿಂದ ಅವರು ಸ್ನೇಹಿತರೊಂದಿಗೆ ವಾಪಸ್ಸಾಗುತ್ತಿದ್ದ ವೇಳೆ ಈ ಘಟನೆ ನಡೆಸಿದೆ. ಮನೆಯಿಂದ ಕೇವಲ ಐದು ಕಿ.ಮೀ.ದೂರದಲ್ಲಿ ಧುರುಳರು ಅವರನ್ನು ಹೊಡೆದರು ಎಂದು ಶೈಶ್ತಾ ಅಳಲು ತೋಡಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 11 ಜನರನ್ನು ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications