ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮೇಲೆ ವಾಮಾಚಾರ?
ಪ್ರಪಂಚ ಎಷ್ಟೇ ಅಭಿವೃದ್ದಿ ಹೊಂದಿರಲಿ, ಮನುಷ್ಯ ಚಂದ್ರನ ಬಳಿ ಹೋದರೂ, ಮುಂದೊಂದು ದಿನ ಸೂರ್ಯನ ಬಳಿ ಹೋದರೂ, ಜನರಿಗೆ ಮೂಢನಂಬಿಕೆಯ ಮೇಲಿನ 'ನಂಬಿಕೆ' ಕಮ್ಮಿಯಾಗುತ್ತಿಲ್ಲ.
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರೋಧಿಗಳು ಅವರ ಮೇಲೆ ವಾಮಾಚಾರ ನಡೆಸಿದ್ದಾರೆ. ಹಾಗಾಗಿಯೇ, ಅವರು ಆಸ್ಪತ್ರೆಗೆ ಸೇರುವಂತಾಗಿದ್ದು ಎಂದು ತಮಿಳುನಾಡಿನ ಹಿರಿಯ ಜ್ಯೋತಿಷಿಯೊಬ್ಬರು ಹೇಳಿದ್ದಾರೆ. (ಜಯಾ ಆರೋಗ್ಯದಲ್ಲಿ ಚೇತರಿಕೆ ಅಂತಾರೆ ಡಾ ಸ್ವಾಮಿ)
ರಾಜಕೀಯ ರಂಗದಲ್ಲಿ ಜಯಾ ಅವರಿಗೆ ಆಗದವರು ತುಂಬಾ ಜನ ಇದ್ದಾರೆ. ಹೀಗಾಗಿಯೇ ಅವರ ಮೇಲೆ ಮಾಟ ಮಂತ್ರ ಪ್ರಯೋಗಿಸಲಾಗಿದೆ ಎಂದು ಡೈಲಿಮೇಲ್ ಅಂತರ್ಜಾಲ ಪ್ರಕಟಿಸಿದ ಲೇಖನವನ್ನು ಉಲ್ಲೇಖಿಸಿ ಫಸ್ಟ್ ಪೋಸ್ಟ್ ವರದಿ ಮಾಡಿದೆ.
ಕರ್ನಾಟಕದ ಕೆಲವು ರಾಜಕಾರಣಿಗಳಿಗೂ ವಾಮಾಚಾರ, ಕಂದಾಚಾರದ ಬಗ್ಗೆ ಬಹಳಷ್ಟು ನಂಬಿಕೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅತ್ತ ದೂರದ ಉತ್ತರಪ್ರದೇಶದ ರಾಜಕೀಯ ಮುಖಂಡರೊಬ್ಬರು 'ಮಾಟಮಂತ್ರ' ದ ಬಗ್ಗೆ ಎಚ್ಚರದಿಂದಿರಿ ಎಂದು ಮುಲಾಯಂ ಮತ್ತು ಸಿಎಂ ಅಖಿಲೇಶ್ ಯಾದವ್ ಅವರಿಗೆ ಎಚ್ಚರಿಕೆ ನೀಡಿದ್ದಾರಂತೆ. (ಜಯಾ ಅನಾರೋಗ್ಯ, ಸಿಬಿಐ ತನಿಖೆಗೆ ಒತ್ತಾಯ)
ಯಾದವರ ಜಗಳದಲ್ಲಿ ಉಚ್ಚಾಟಿತರಾಗಿರುವ ಸಮಾಜವಾದಿ ಪಕ್ಷದ ಮುಖಂಡ ರಾಮ್ ಗೋಪಾಲ್ ಯಾದವ್, ನಿಮ್ಮ ಮನೆಯಲ್ಲಿರುವ ಹಿತಶತ್ರುಗಳ ಬಗ್ಗೆ ಎಚ್ಚರದಿಂದಿರಿ. ನಿಮ್ಮನ್ನು ಮುಗಿಸಲು ಮಾಟಮಂತ್ರದ ಮೊರೆಹೋಗಿದ್ದಾರೆ ಎಚ್ಚರ ಎಂದು ರಾಮ್ ಗೋಪಾಲ್ ಇಬ್ಬರು ಮುಖಂಡರನ್ನು ಅಲರ್ಟ್ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ತಮಿಳುನಾಡಿನ ಹಿರಿಯ ಜ್ಯೋತಿಷಿ ಹೇಳಿದ್ದೇನು, ಮುಂದೆ ಓದಿ..
ಎಚ್ ಡಿ ರೇವಣ್ಣ
ನಮ್ಮ ರೇವಣ್ಣ ಅವರಿಗೆ ಮಾಟ, ಮಂತ್ರದ ಮೇಲೆ ಎಲ್ಲಿಲ್ಲದ ನಂಬಿಕೆ. ಅದಕ್ಕೇ ಏನೋ ಯಾವಾಗಲೂ ರಾಹುಕಾಲ, ಯಮಗಂಡ ಕಾಲ ಎಂದುಕೊಂಡಿರುತ್ತಾರೆ. ಅವರ ಜೇಬಿನಲ್ಲಿ ಯಾವಾಗಲೂ ಲಿಂಬೆಹಣ್ಣು ಇದ್ದೇ ಇರುತ್ತೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಲೇವಡಿ ಮಾಡಿದ್ದುಂಟು.
ವಿಧಾನಸೌಧ, ಶಾಸಕರ ಭವನ
ಎಷ್ಟೋ ಬಾರಿ ವಿಧಾನಸೌಧ ಮತ್ತು ಶಾಸಕರ ಭವನದ ಮುಂದೆ ಮಾಟಮಂತ್ರದ ಸೂಚಕವಾಗಿರುವ ಲಿಂಬೆಹಣ್ಣು, ಕುಂಕುಮ, ರಕ್ತ, ಮೆಣಸಿನಕಾಯಿ ಪ್ರತ್ಯಕ್ಷವಾಗಿ ಬಹುದೊಡ್ಡ ಸುದ್ದಿಯಾಗಿತ್ತು.
ಜಯಲಲಿತಾ
ತಮಿಳುನಾಡಿನ ಖ್ಯಾತ ಜ್ಯೋತಿಷಿಯೊಬ್ಬರು ಹೇಳಿರುವ ಪ್ರಕಾರ, ಜಯಲಲಿತಾ ಅನಾರೋಗ್ಯಕ್ಕೆ ಕಾರಣ, ಆಕೆಯ ಮೇಲೆ ನಡೆದಿರುವ ವಾಮಾಚಾರ. ಬರೀ ವಿರೋಧ ಪಕ್ಷವಾದ ಡಿಎಂಕೆ ಕಡೆಯಿಂದ ಮಾತ್ರ ಇದು ನಡೆದಿಲ್ಲ, ಸ್ವಪಕ್ಷೀಯರೂ ಇದಕ್ಕೆ ಕೈಜೋಡಿಸಿದ್ದಾರೆಂದು ಜ್ಯೋತಿಷಿ ಹೇಳಿದ್ದಾರೆ.
ವಿರೋಧ ಪಕ್ಷ ಡಿಎಂಕೆ
ಜಯಲಲಿತಾ ಹೆಸರು ಕೆಡಿಸಲು ಡಿಎಂಕೆ ಭಾರೀ ಮೊತ್ತದ ಹಣವನ್ನು ಜ್ಯೋತಿಷಿಗಳಿಗೆ ನೀಡಿದೆ. ಪಕ್ಷದಲ್ಲಿ ಡಿಕ್ಟೇಟರ್ ರೀತಿಯಲ್ಲಿರುವ ತಮ್ಮ ನಾಯಕಿ ಜಯಾ ಮೇಲೆ ಬಹಳಷ್ಟು ಎಐಎಡಿಎಂಕೆ ಸದಸ್ಯರಿಗೂ ಸಿಟ್ಟಿದೆ, ಅವರೂ ಮಾಟಮಂತ್ರದ ಮೊರೆಹೋಗಿದ್ದಾರೆಂದು ಫಸ್ಟ್ ಪೋಸ್ಟ್ ವರದಿ ಮಾಡಿದೆ.
ಡಿಎಂಕೆ ವರಿಷ್ಠ
ಜ್ಯೋತಿಷಿಗಳ ಮಾಟಮಂತ್ರದ ಪ್ರಯೋಗದಿಂದ ಡಿಎಂಕೆ ವರಿಷ್ಠ ಕರುಣಾನಿಧಿ ಆರೋಗ್ಯಕ್ಕೂ ಸಂಚಕಾರ ಬರಬಹುದು ಎಂದು ಜ್ಯೋತಿಷಿಗಳ ಹೇಳಿಕೆಯನ್ನು ಉಲ್ಲೇಖಿಸಿ ಅಂತರ್ಜಾಲ ವರದಿ ಮಾಡಿದೆ.