Tirupati: ಸೆಪ್ಟೆಂಬರ್, ಅಕ್ಟೋಬರ್ನಲ್ಲಿ ಬ್ರಹ್ಮೋತ್ಸವ ಆಯೋಜಿಸಲು ಟಿಟಿಡಿ ನಿರ್ಧಾರ- ದಿನಾಂಕ, ವಿಶೇಷತೆ, ವಿವರ ತಿಳಿಯಿರಿ
ತಿರುಪತಿ, ಆಗಸ್ಟ್ 01: ಈ ವರ್ಷದ ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ಅವಳಿ ಬ್ರಹ್ಮೋತ್ಸವವನ್ನು ಆಯೋಜಿಸಲು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ನಿರ್ಧರಿಸಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಎವಿ ಧರ್ಮ ರೆಡ್ಡಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಧರ್ಮ ರೆಡ್ಡಿ, 'ಬ್ರಹ್ಮೋತ್ಸವಕ್ಕೆ ಮೊದಲೇ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ಕುರಿತಾಗಿ ಹದಿನೈದು ದಿನಗಳಲ್ಲಿ ಜಿಲ್ಲಾಡಳಿತದೊಂದಿಗೆ ಪರಿಶೀಲನಾ ಸಭೆ ನಡೆಸಲಾಗುವುದು' ಎಂದು ತಿಳಿಸಿದ್ದಾರೆ.
ವಾರ್ಷಿಕ ಬ್ರಹ್ಮೋತ್ಸವದ ಪ್ರಮುಖ ದಿನವಾದ ಧ್ವಜಾರೋಹಣ ದಿನದಂದು ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಶ್ರೀ ವೆಂಕಟೇಶ್ವರ ಸ್ವಾಮಿಗೆ ರೇಷ್ಮೆ ವಸ್ತ್ರವನ್ನು ಅರ್ಪಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಸಾಲಕಟ್ಲ ಬ್ರಹ್ಮೋತ್ಸವಗಳು ಸೆಪ್ಟೆಂಬರ್ 18 ರಿಂದ 26 ರ ವರೆಗೆ ನಡೆಯಲಿದ್ದು, ನವರಾತ್ರಿ ಬ್ರಹ್ಮೋತ್ಸವಗಳು ಅಕ್ಟೋಬರ್ 15ರಿಂದ 23 ರ ವರೆಗೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಸಾಲಕಟ್ಲ ಬ್ರಹ್ಮೋತ್ಸವಗಳ ಇತರ ಪ್ರಮುಖ ದಿನಗಳು
ಸೆಪ್ಟೆಂಬರ್ 22 ರಂದು ಗರುಡ ಸೇವೆ, ಸೆಪ್ಟೆಂಬರ್ 23 ರಂದು ಚಿನ್ನದ ರಥ, ಸೆಪ್ಟೆಂಬರ್ 25 ರಂದು ರಥೋತ್ಸವ ಮತ್ತು ಸೆಪ್ಟೆಂಬರ್ 26 ರಂದು ಚಕ್ರಸ್ನಾನಮ್ಗಳನ್ನು ನೆರವೇರಿಸಲಾಗುವುದು.
ನವರಾತ್ರಿ ಬ್ರಹ್ಮೋತ್ಸವಗಳು ಅಕ್ಟೋಬರ್ 15 ರಂದು ಪ್ರಾರಂಭವಾಗುತ್ತವೆ. ನಂತರ ಅಕ್ಟೋಬರ್ 19 ರಂದು ಗರುಡ ವಾಹನ, ಅಕ್ಟೋಬರ್ 20 ರಂದು ಪುಷ್ಪಕ ವಿಮಾನ ಮತ್ತು ಅಕ್ಟೋಬರ್ 22 ರಂದು ಚಿನ್ನದ ರಥದ ಮೆರವಣಿಗೆ ನಡೆಯಲಿದೆ ಎಂದು ಟಿಟಿಡಿ ಮಾಹಿತಿ ನೀಡಿದೆ.

ಪುರತಾಸಿ ಮಾಸವನ್ನು ಗಮನದಲ್ಲಿಟ್ಟುಕೊಂಡು ಟಿಟಿಡಿ ವಿರಾಮ ದರ್ಶನವನ್ನು ರದ್ದುಗೊಳಿಸಿದೆ. ಬ್ರಹ್ಮೋತ್ಸವದ ಜೊತೆಗೆ ಬರುವ ಶುಭ ಮಾಸದಲ್ಲಿ ಯಾತ್ರಾರ್ಥಿಗಳ ದಟ್ಟಣೆ ಅಧಿಕವಾಗಿರುತ್ತದೆ. ಪುರಟಾಸಿ ಶನಿವಾರಗಳು ಸೆಪ್ಟೆಂಬರ್ 23, 30 ಮತ್ತು ಅಕ್ಟೋಬರ್ 7, 14 ರಂದು ಬರುತ್ತವೆ ಎಂದು ಟಿಟಿಡಿ ತಿಳಿಸಿದೆ.
ನಂದಿನಿ ತುಪ್ಪ ಖರೀದಿ ನಿಲ್ಲಿಸಿದ ಟಿಟಿಡಿ
ಸುಮಾರು 50 ವರ್ಷಗಳ ನಂತರ, ತನ್ನ ಪ್ರಸಿದ್ಧ ಲಡ್ಡುಗಳನ್ನು ತಯಾರಿಸಲು ಕರ್ನಾಟಕ ಹಾಲು ಒಕ್ಕೂಟದಿಂದ (ಕೆಎಂಎಫ್) ತುಪ್ಪವನ್ನು ಖರೀದಿಸುವುದಿಲ್ಲ ಎಂದು ಟಿಟಿಡಿ ಹೇಳಿದೆ.
ಕೆಎಂಎಫ್ ಹೇಳಿದ ಬೆಲೆಯನ್ನು ಟಿಟಿಡಿ ಅನುಮೋದಿಸಿಲ್ಲ. ಈ ಹಿನ್ನೆಲೆಯಲ್ಲಿ ತುಪ್ಪವನ್ನು ಪಡೆಯಲು ಮತ್ತೊಂದು ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಟಿಟಿಡಿ ಮುಂದಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ಭಾನುವಾರ ಹೇಳಿದ್ದಾರೆ.

ಕೆಎಂಎಫ್ ತುಪ್ಪದಿಂದ ಲಡ್ಡುಗಳು ರುಚಿಕರವಾಗಿವೆ ಎಂದು ಟಿಟಿಡಿ ಹಲವು ಬಾರಿ ಹೇಳಿದ್ದರೂ ಒಪ್ಪಂದ ಮುಕ್ತಾಯವಾಗುತ್ತಿದೆ ಎಂದು ತಿಳಿದುಬಂದಿದೆ.
'ಆಗಸ್ಟ್ 1 ರಿಂದ ಹಾಲಿನ ಸಂಗ್ರಹಣೆ ಬೆಲೆ ಹೆಚ್ಚಾಗುವುದರಿಂದ ನಾವು ತುಪ್ಪಕ್ಕೆ ಹೆಚ್ಚಿನ ಬೆಲೆಗೆ ಬೇಡಿಕೆ ಇಟ್ಟಿದ್ದೇವೆ. ಆದರೆ ಟಿಟಿಡಿ ಇ-ಪ್ರೊಕ್ಯೂರ್ಮೆಂಟ್ ಸೈಟ್ ಮೂಲಕ ಕಡಿಮೆ ಬೆಲೆಯನ್ನು ನಮೂದಿಸಿದ ಕಂಪನಿಯನ್ನು ಆಯ್ಕೆ ಮಾಡಿದೆ ಎಂಬುದಾಗಿ ನಮಗೆ ತಿಳಿದುಬಂದಿದೆ' ಎಂದು ಕೆಎಂಎಫ್ ತಿಳಿಸಿದೆ.
ಗುಣಮಟ್ಟದಿಂದಾಗಿ ಕೆಎಂಎಫ್ ತುಪ್ಪ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಹೊಂದಿದೆ. ಯಾವುದೇ ಕಂಪನಿಯು ಕಡಿಮೆ ಬೆಲೆಗೆ ಒಪ್ಪಂದ ಮಾಡಿಕೊಂಡರೆ, ಅದು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುತ್ತದೆ ಎಂದು ಕೆಎಂಎಫ್ ಹೇಳಿದೆ.












Click it and Unblock the Notifications