Tirupati laddu controversy ತಿರುಪತಿ ಲಡ್ಡು: ತಮ್ಮನ ಪರವಾಗಿ ನಟ ಸೂರ್ಯ ಕ್ಷಮಾಪಣೆ ಕೇಳಿದ್ದು ನಿಜವೇ
ತಿರುಪತಿ ಲಡ್ಡು ವಿವಾದ ಈಗ ಆಂಧ್ರಪ್ರದೇಶದಿಂದ ಉಳಿದ ರಾಜ್ಯಗಳಲ್ಲೂ ವಿವಾದಕ್ಕೆ ಕಾರಣವಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಈ ವಿವಾದ ಇದೀಗ ತಮಿಳುನಾಡಿನಲ್ಲೂ ಭಾರೀ ಚರ್ಚೆಗೆ ಕಾರಣವಾಗಿದೆ. ತಮಿಳು ನಟ ಕಾರ್ತಿ ಅವರು, ಆಂಧ್ರಪ್ರದೇಶದಲ್ಲಿ ತೆಲುಗು ಚಿತ್ರವೊಂದರ ಪ್ರಮೋಷನ್ನಲ್ಲಿ ಮಾತನಾಡಿರುವುದು ವಿವಾದವಾಗಿದೆ. ಆದರೆ, ಈ ವಿಷಯದಲ್ಲಿ ತಮಿಳು ನಟ ಸೂರ್ಯ ಅವರು ಕ್ಷಮೆಯಾಚಿಸಿದ್ದಾರೆ ಎನ್ನುವ ಟ್ವೀಟ್ ವೈರಲ್ ಆಗುತ್ತಿದೆ. ಇದು ನಿಜವೇ, ಸೂರ್ಯ ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.
ತಿರುಪತಿ ಲಡ್ಡುವಿನ ತಯಾರಿಕೆಯಲ್ಲಿ ಕಲಬೆರಕೆ ತುಪ್ಪವನ್ನು ಬಳಸಲಾಗಿದೆ ಎನ್ನುವ ವಿಷಯ ಭಾರೀ ಗಂಭೀರ ಚರ್ಚೆಗೆ ಕಾರಣವಾಗಿದೆ. ಈ ನಡುವೆ ತಮಿಳು ನಟ ಕಾರ್ತಿ ಮಾತನಾಡಿದ್ದ ವಿಷಯ ವಿವಾದದ ಕೇಂದ್ರ ಬಿಂದುವಾಗಿತ್ತು. ಇದರಲ್ಲಿ ತಮ್ಮನ ಪರವಾಗಿ (ಕಾರ್ತಿ ಅಣ್ಣ ಸೂರ್ಯ) ಸೂರ್ಯ ಅವರೂ ಕ್ಷಮೆ ಕೇಳಿದ್ದಾರೆ ಎನ್ನಲಾದ ಟ್ವೀಟ್ ಸಂದೇಶ ವೈರಲ್ ಆಗಿದೆ ಅದರ ಸತ್ಯಾಸತ್ಯತೆ ಇಲ್ಲಿದೆ.

ವೈರಲ್ ಪೋಸ್ಟ್ನಲ್ಲಿ ಏನಿದೆ: ಇದೀಗ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ವೈರಲ್ ಆಗಿರುವ ಪೋಸ್ಟ್ ಈ ರೀತಿ ಇದೆ. ತಿರುಪತಿ ಲಡ್ಡಿನ ಬಗ್ಗೆ ನನ್ನ ತಮ್ಮ ಮಾತನಾಡಿರುವ ಮಾತುಗಳಿಗೆ ನಾನು ತೀವ್ರವಾಗಿ ವಿಷಾದ ವ್ಯಕ್ತಪಡಿಸುತ್ತೇನೆ. ಆಡಿಯೋ ಫಂಕ್ಷನ್ನಲ್ಲಿ ನನ್ನ ತಮ್ಮ ಕಾರ್ತಿ ಆ ರೀತಿ ಮಾತನಾಡಿರಬಾರದಿತ್ತು. ಅವರ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ. ನನ್ನ ತಮ್ಮ ಮಾತನಾಡಿದ ಮಾತುಗಳಿಗಾಗಿ ನಾನು ಮೂರು ದಿನಗಳ ದೀಕ್ಷೆ (ವ್ರತ) ಸ್ವೀಕರಿಸಲಿದ್ದಾನೆ ಎಂದಿದೆ. ಈ ಪೋಸ್ಟ್ನಲ್ಲಿ ಸೂರ್ಯ ಅವರ ಹೆಸರು ಹಾಗೂ ಪೋಟೋ ಇರುವ ಎಕ್ಸ್ ಖಾತೆಯಿಂದ ಆಗಿದೆ. ಆಂಧ್ರಪ್ರದೇಶದ ಉಪ ಮಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ಟ್ಯಾಗ್ ಮಾಡಲಾಗಿದೆ.
I am deeply sorry for the comments made by my brother on laddu in the recent audio function and for that I am also going for 3 Days Deeksha for my brother's words @PawanKalyan garu https://t.co/prcd7DrdlD
— Suriya(Parody) (@Suriya_parody) September 24, 2024
ಸೂರ್ಯ ಟ್ವೀಟ್ ಮಾಡಿಲ್ಲ: ಈ ರೀತಿ ವೈರಲ್ ಆಗಿರುವ ಟ್ವೀಟ್ ಅನ್ನು ಪರಿಶೀಲನೆ ಮಾಡಿದರೆ ಅದು ಫೇಕ್ ಎನ್ನುವುದು ಸ್ಪಷ್ಟವಾಗಿದೆ. ಸೂರ್ಯ ಅವರ ಟ್ವಿಟ್ಟರ್ ಖಾತೆಯಲ್ಲಿ ಆ ರೀತಿಯ ಟ್ವೀಟ್ಟೇ ಇಲ್ಲ. ಈ ರೀತಿ ಟ್ವೀಟ್ ಆಗಿರುವುದು ಫೇಕ್ ಖಾತೆಯಿಂದ ಎಂದು ತಿಳಿದು ಬಂದಿದೆ. ಈ ರೀತಿ ಸುಳ್ಳು ಮಾಹಿತಿ ಹಬ್ಬಿಸುತ್ತಿರುವುದಕ್ಕೆ ಸೂರ್ಯ ಅಭಿಮಾನಿಗಳು ಗರಂ ಆಗಿದ್ದಾರೆ.
ಕಾರ್ತಿ ಹೇಳಿದ್ದೇನು, ಕ್ಷಮೆಯಾಕೆ ?
ನಟ ಕಾರ್ತಿ ಅವರು ಮಾತನಾಡಿದ್ದ ವಿಷಯ ಮಂಗಳವಾರ ವಿವಾದಕ್ಕೆ ಕಾರಣವಾಗಿತ್ತು. ತಮಿಳು ನಟ ಕಾರ್ತಿ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ (ನಟನಾಗಿ) ತಮಿಳು ಸಿನಿಮಾ 'ವೆಯಿಳಾಗನ್' ಇದೇ 27ಕ್ಕೆ ಬಿಡುಗಡೆಗೆ ಸಿದ್ಧವಾಗಿದೆ. ಇದನ್ನು ತೆಲುಗಿನಲ್ಲಿ 'ಸತ್ಯಂ-ಸುಂದರಂ' ಹೆಸರಿನಲ್ಲಿ ಡಬ್ ಮಾಡಲಾಗಿದೆ. ಈ ಸಿನಿಮಾ ಪ್ರಚಾರಕ್ಕಾಗಿ ಕಾರ್ತಿ ಅವರು ಮಂಗಳವಾರ ಹೈದರಾಬಾದ್ಗೆ ಬಂದಿದ್ದರು. ಸಮಾರಂಭದಲ್ಲಿ ನಿರೂಪಕಿ ಲಾಡ್ಡು ಬೇಕಾ ಎಂದು ತಮಾಷೆಯಾಗಿ ಕೇಳಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿ ಕಾರ್ತಿ ಅವರು ಲಾಡು ವಿಚಾರ ಈಗ ಬೇಡ, ತುಂಬಾ ಸೂಕ್ಷ್ಮ ವಿಚಾರವಾಗಿದೆ. ಈಗ ಲಾಡು ಬೇಡ ಎಂದು ಸಣ್ಣದಾಗಿ ನಕ್ಕಿದ್ದರು. ನಿಮಗಾಗಿ ಮೋತಿಚೂರನ ಲಾಡ್ಡು ತರಿಸಿಕೊಡುತ್ತೇವೆ ಎಂದಿದ್ದರು. ಅದಕ್ಕೆ ನಟ ಕಾರ್ತಿ ಅವರು ಈಗ ಲಾಡ್ಡು ಬೇಡ ಎಂದಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಇದಕ್ಕೆ ಅವರು ಕ್ಷಮೆಯನ್ನೂ ಕೇಳಿದ್ದಾರೆ. ನಟ ಹಾಗೂ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಸನಾತನ ಧರ್ಮದ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಿ ಎಂದಿದ್ದರು.












Click it and Unblock the Notifications