ಖಗ್ರಾಸ ಚಂದ್ರಗ್ರಹಣ: ತಿರುಪತಿ ದೇವಾಲಯದ ಮಹತ್ವದ ಪ್ರಕಟಣೆ
ತಿರುಪತಿ, ಜ 29: ಬುಧವಾರ, ಜನವರಿ 31ರಂದು ಚಂದ್ರನಿಗೆ ರಾಹು ಗ್ರಹಣ ಸಂಭವಿಸಲಿರುವುದರಿಂದ ತಿರುಮಲ ತಿರುಪತಿ ದೇವಾಲಯ ಭಕ್ತರ ಪ್ರವೇಶಕ್ಕೆ ಅಂದು ನಿರ್ಬಂಧ ಹೇರಿದೆ.
ಬುಧವಾರ ಸಂಜೆ 5.17ಕ್ಕೆ ಗ್ರಹಣ ಆರಂಭವಾಗಲಿದ್ದು, ರಾತ್ರಿ 8.43ಕ್ಕೆ ಮುಕ್ತಾಯಗೊಳ್ಳಲಿದೆ. ಹೀಗಾಗಿ ತಿರುಪತಿ ವೆಂಕಟೇಶ್ವರಸ್ವಾಮಿ ದೇವಾಲಯದ ಬಾಗಿಲನ್ನು ಕೆಲವು ಗಂಟೆಗಳ ಕಾಲ ಮುಚ್ಚುವುದಾಗಿ ಟಿಟಿಡಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಖಗ್ರಾಸ ಚಂದ್ರಗ್ರಹಣದ ಹಿನ್ನಲೆಯಲ್ಲಿ ಅಂದು ನಡೆಯಬೇಕಾಗಿರುವ ಕಲ್ಯಾಣೋತ್ಸವ, ಬ್ರಹ್ಮರಥೋತ್ಸವ, ವಸಂತೋತ್ಸವ ಸೇವೆಯನ್ನು ರದ್ದುಗೊಳಿಸಲಾಗಿದೆ.

ಬುಧವಾರ ಬೆಳಗ್ಗೆ ಹನ್ನೊಂದು ಗಂಟೆಯಿಂದ ರಾತ್ರಿ 9.30ರ ವರೆಗೆ ದೇವಾಲಯದ ಬಾಗಿಲು ಮುಚ್ಚಲಿದ್ದು, ನಂತರ ದೇವಾಲಯದ ಶುದ್ದೀಕರಣ ಕಾರ್ಯ ನಡೆಯಲಿದೆ. ಇದಾದ ನಂತರ ಅಂದರೆ ಮಧ್ಯರಾತ್ರಿ ಹನ್ನೆರಡು ಗಂಟೆಯ ನಂತರ ದೇವಾಲಯದ ಬಾಗಿಲು ಭಕ್ತರಿಗೆ ತೆರೆಯಲಾಗುವುದು ಟಿಟಿಡಿ ಹೇಳಿದೆ.
ಪುಷ್ಯ - ಆಶ್ಲೇಷ ನಕ್ಷತ್ರ ಕರ್ಕಾಟಕ ರಾಶಿಯಲ್ಲಿ ಚಂದ್ರನಿಗೆ ರಾಹು ಗ್ರಹಣ ಸಂಭವಿಸಲಿದೆ. ಭಾರತದ ಪೂರ್ವ ಮತ್ತು ಈಶಾನ್ಯ ರಾಜ್ಯಗಳಲ್ಲಿ ಗ್ರಹಣ ಸಂಪೂರ್ಣ ಗೋಚರಿಸಲಿದ್ದು, ಉಳಿದ ಭಾಗಗಳಲ್ಲಿ ಗ್ರಸ್ತೋದಯವಾಗಿ ಗೋಚರಿಸಲಿದೆ.

ಟಿಟಿಡಿಗೆ ಹೊಸ ಅಧ್ಯಕ್ಷರು: ವಿಶ್ವದ ಅತ್ಯಂತ ಶ್ರೀಮಂತ ಧಾರ್ಮಿಕ ಮಂಡಳಿ, ತಿರುಮಲ ತಿರುಪತಿ ದೇವಾಲಯಂ (ಟಿಟಿಡಿ) ಹೊಸ ಅಧ್ಯಕ್ಷರಾಗಿ, ತೆಲುಗು ಚಿತ್ರೋದ್ಯಮದ ಹೆಸರಾಂತ ನಿರ್ದೇಶಕ ಕೆ. ರಾಘವೇಂದ್ರ ರಾವ್ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನುವ ಮಾಹಿತಿಯಿದೆ.
2015ರಿಂದ ಮಂಡಳಿಯ ಸದಸ್ಯರಾಗಿರುವ ರಾಘವೇಂದ್ರ ರಾವ್ ಆವರ ಹೆಸರನ್ನು ಟಿಟಿಡಿ ಅಧ್ಯಕ್ಷ ಸ್ಥಾನಕ್ಕೆ ಆಂಧ್ರಪ್ರದೇಶ ಸರಕಾರ ಅಂತಿಮಗೊಳಿಸಿದೆ ಎನ್ನುವ ಸುದ್ದಿಯಿದೆ. ಚಂದಲವಾಡ ಕೃಷ್ಣಮೂರ್ತಿ ಅವರ ಟಿಟಿಡಿ ಮಂಡಳಿಯ ಅಧ್ಯಕ್ಷೀಯ ಅವಧಿ ಹೋದ ವರ್ಷವೇ ಮುಗಿದಿತ್ತು.












Click it and Unblock the Notifications