ಗಾಂಧಿ ಸಾವನ್ನು ಸಂಭ್ರಮಿಸಿದವರು ಇಂದು ಅಧಿಕಾರದಲ್ಲಿ: ಮೋದಿಗೆ ಟಾಂಗ್ ನೀಡಿದ ನಟಿ
ನವದೆಹಲಿ, ಸೆ 2: ಅಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಕೊಂದವರ ಕಡೆಯವರು ಅಥವಾ ಅವರ ಸಾವಿಗೆ ಸಂತೋಷ ಪಟ್ಟವರು ಇಂದು ಅಧಿಕಾರದಲ್ಲಿದ್ದಾರೆ, ಅವರನ್ನೆಲ್ಲಾ ಜೈಲಿಗೆ ಅಟ್ಟಲಾಯಿತೇ ಎಂದು ಪರೋಕ್ಷವಾಗಿ, ಪ್ರಧಾನಿ ಮೋದಿಯವರನ್ನು ಬಾಲಿವುಡ್ ನಟಿಯೊಬ್ಬರು ಟೀಕಿಸಿದ್ದಾರೆ.
ಶನಿವಾರ (ಸೆ 1) ನವದೆಹಲಿಯಲ್ಲಿ ಮಾತನಾಡುತ್ತಿದ್ದ ಬಾಲಿವುಡ್ ನಟಿ ಸ್ವರಾ ಭಾಸ್ಕರ್, ಖಾಲಿಸ್ಥಾನ್ ಹೋರಾಟ ನಡೆಯುತ್ತಿದ್ದಾಗ, ಭಿಂದ್ರನ್ ವಾಲೆಯನ್ನು ಕೆಲವು ಸಮುದಾಯದವರು ಸ್ವಾಮೀಜಿಯೆಂದು ಗೌರವಿಸುತ್ತಿದ್ದರು, ಅವರನ್ನು ವಿಶೇಷ ರಕ್ಷಣಾ ಪಡೆಗಳು ಸಾಯಿಸಿದರು, ಅವರನ್ನು ಕೊಂದವರಿಗೆಲ್ಲಾ ಜೈಲು ಶಿಕ್ಷೆಯಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.
ಗಾಂಧಿಹತ್ಯೆಯ ಕರಾಳ ದಿನ: ನೆನಪಿರಲಿ ಆ ದುರಂತದ 5 ಸಂಗತಿ
ಅಂದು ಮಹಾತ್ಮ ಗಾಂಧಿ ಅವರಂತಹ ಮಹಾನ್ ವ್ಯಕ್ತಿಯ ಹತ್ಯೆ ಮಾಡಲಾಯಿತು, ಆ ವೇಳೆ ಕೂಡ ಕೆಲವು ಪಟ್ಟಭದ್ರ ಹಿತಾಶಕ್ತಿಗಳು ಸಂಭ್ರಮಾಚರಣೆ ಮಾಡಿದ್ದರು. ಅಂತವರು ಇಂದು ಅಧಿಕಾರದಲ್ಲಿವೇ, ಅಂತಹ ರಕ್ತದಾಹಿಗಳಿಗೂ ತಕ್ಕ ಶಿಕ್ಷೆ ಆಗಬೇಕು ಎಂದು ಪರೋಕ್ಷವಾಗಿ ಬಿಜೆಪಿ ಸರಕಾರವನ್ನು ಸ್ವರಾ ಭಾಸ್ಕರ್ ಟೀಕಿಸಿದ್ದಾರೆ.
ಸಮಾಜದಲ್ಲಿ ಈಗ ನಡೆಯುತ್ತಿರುವ ಕೆಲವೊಂದು ಬೆಳವಣಿಗೆಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವಂತದ್ದು, ನಾವು ಏನು ಹೆಜ್ಜೆ ಇಡುತ್ತೇವೆಯೋ ಅದನ್ನು ಅತ್ಯಂತ ಜಾಗರೂಕತೆಯಿಂದ ಇಡಬೇಕಾಗುತ್ತದೆ ಎಂದು ಸ್ವರಾ ಭಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ.
ಇತ್ತೀಚೆಗೆ, ನಕ್ಸಲ್ ಬೆಂಬಲಿತರ ವಿರುದ್ದ ಪೊಲೀಸ್ ಕಾರ್ಯಾಚರಣೆ ನಡೆಸಿದ ಘಟನೆಯನ್ನು ಸ್ವರಾ ಭಾಸ್ಕರ್ ತೀವ್ರವಾಗಿ ಟೀಕಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ವಿರುದ್ದ ದಾಳಿಗೆ ತಂತ್ರ ರೂಪಿಸಿದ್ದ ನಕ್ಸಲ್ ಹಾಗೂ ಅವರ ಹತ್ತು ಬೆಂಬಲಿಗರನ್ನು ಬಂಧಿಸಿ ನಂತರ ಗೃಹಬಂಧನದಲ್ಲಿ ಇಡಲಾಗಿತ್ತು.