ಕೊರೊನಾ ಮೂರನೇ ಅಲೆ ಜನರ ಮೇಲೇ ಅವಲಂಬಿತ; ಏಮ್ಸ್ ನಿರ್ದೇಶಕ
ನವದೆಹಲಿ, ಆಗಸ್ಟ್ 13: ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಇನ್ನೂ ಅಂತ್ಯವಾಗಿಲ್ಲ. ಜೊತೆಗೆ ಮೂರನೇ ಅಲೆ ಕೊರೊನಾ ನಿಯಮ ಪಾಲನೆಯೆಡೆಗೆ ಜನರ ನಡವಳಿಕೆ ಮೇಲೆ ಅವಲಂಬಿತವಾಗಿದೆ ಎಂದು ದೆಹಲಿಯ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಹೇಳಿದ್ದಾರೆ.
"ಕೊರೊನಾ ಎರಡನೇ ಅಲೆ ಅಂತ್ಯವಾಗಿಲ್ಲ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕಿದೆ. ಪ್ರತಿನಿತ್ಯ ದೇಶದಲ್ಲಿ ನಲವತ್ತು ಸಾವಿರ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಪ್ರತಿಯೊಬ್ಬರೂ ಕೊರೊನಾ ನಿಯಮಗಳನ್ನು ಪಾಲಿಸುವುದು ಮುಖ್ಯವಾಗಿದೆ. ನಾವು ಸೂಕ್ತವಾಗಿ ನಿಯಮ ಪಾಲನೆ ಮಾಡಿದರೆ ಮತ್ತೊಂದು ಅಲೆ ಬರದಂತೆ ತಡೆಗಟ್ಟಬಹುದು" ಎಂದು ಸಲಹೆ ನೀಡಿದ್ದಾರೆ.
ಏಪ್ರಿಲ್ ತಿಂಗಳಿನಲ್ಲಿ ದಿನಕ್ಕೆ ಲಕ್ಷ ಪ್ರಕರಣಗಳವರೆಗೆ ಕೊರೊನಾ ಪ್ರಕರಣಗಳು ದಾಖಲಾಗಿ, ಸಾವಿನ ಸಂಖ್ಯೆಯೂ ಏಕಾಏಕಿ ಏರಿಕೆಯಾಗಿ ಎರಡನೇ ಅಲೆ ಉತ್ತುಂಗಕ್ಕೇರಿತ್ತು. ಈ ಮಾರಣಾಂತಿಕ ಅಲೆ ಮೇ ತಿಂಗಳ ಮಧ್ಯದಲ್ಲಿ ತಗ್ಗಿತ್ತು. ಇದೀಗ ಆಗಸ್ಟ್ ಅಂತ್ಯದಲ್ಲಿ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಮೂರನೇ ಅಲೆ ಕಾಣಿಸಿಕೊಳ್ಳುವ ಎಚ್ಚರಿಕೆಯನ್ನು ನೀಡಲಾಗಿದೆ. ಆದರೆ ಎರಡನೇ ಅಲೆಗಿಂತ ಮೂರನೇ ಅಲೆ ಪ್ರಭಾವ ಕಡಿಮೆ ಇರುತ್ತದೆ ಎಂದು ಏಮ್ಸ್ ನಿರ್ದೇಶಕ ಹೇಳಿದ್ದಾರೆ.

"ಜನರು ಕೊರೊನಾ ನಿಯಮಗಳನ್ನು ಪಾಲನೆ ಮಾಡಿದರೆ ಮಾತ್ರ ಮೂರನೇ ಅಲೆಯ ಪ್ರಭಾವವನ್ನು ತಗ್ಗಿಸಬಹುದು" ಎಂದು ಪುನರುಚ್ಚರಿಸಿದ್ದಾರೆ.
ಈ ಮುನ್ನ ಹೈದರಾಬಾದ್ ಹಾಗೂ ಐಐಟಿ ಕಾನ್ಪುರದ ಸಂಶೋಧಕರು ಕೂಡ ಅಕ್ಟೋಬರ್ ತಿಂಗಳಿನಲ್ಲಿ ಕೊರೊನಾ ಮೂರನೇ ಅಲೆ ಕಾಣಿಸಿಕೊಳ್ಳಲಿದೆ ಎಂದು ಅಂದಾಜು ಮಾಡಿದ್ದಾರೆ. ಸೋಂಕಿನ ರೂಪಾಂತರದ ಮೇಲೆ ಇದು ಅವಲಂಬಿತವಾಗಿದೆ ಎಂದು ಹೇಳಿದ್ದಾರೆ. ಸೋಂಕು ತೀವ್ರತರವಾಗಿದ್ದರೆ ಪ್ರಕರಣಗಳಲ್ಲಿಯೂ ಮೊದಲ ಹಾಗೂ ಎರಡನೇ ಅಲೆಯಂತೆ ಹೆಚ್ಚಾಗಿರಲಿವೆ" ಎಂದು ಹೇಳಿದ್ದಾರೆ.
ಕೊರೊನಾ ಮೂರನೇ ಅಲೆ ರೂಪಾಂತರಗಳ ತೀವ್ರತೆ ಮೇಲೆ ಅವಲಂಬಿತವಾಗಿದೆ. ರೂಪಾಂತರ ಅಪಾಯಕಾರಿಯಾಗಿದ್ದರೆ ಮುಂದಿನ ಅಲೆ ಕೂಡ ಅಪಾಯಕಾರಿಯಾಗಿರಲಿದೆ ಎಂದು ಭಾರತೀಯ ಸೋಂಕು ಶಾಸ್ತ್ರಜ್ಞ ಗಗನ್ದೀಪ್ ಕಾಂಗ್ ಹೇಳಿದ್ದಾರೆ.
ಹೀಗಿದ್ದಾಗ ಸೋಂಕಿನ ಸಂಖ್ಯೆ ಕುರಿತು ಯಾವುದೇ ಅಂದಾಜು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಯಾವುದೇ ಸಮಯವನ್ನು ನಿರ್ಧರಿಸಲು ಸಾಧ್ಯವಿಲ್ಲ" ಎಂದಿದ್ದಾರೆ.
ಕೊರೊನಾ ಸೋಂಕಿನಲ್ಲಿ 25 ಸಾವಿರ ರೂಪಾಂತರಿಗಳಿವೆ. ಬರೋಬ್ಬರಿ 8572 ತಳಿಗಳು ಕೋವಿಡ್ ಸೋಂಕಿನಿಂದ ಉತ್ಪತ್ತಿಯಾಗಲಿವೆ. ಮೂರನೇ ಅಲೆ ಬಗ್ಗೆ ನಾವು ಮುಂಜಾಗ್ರತೆ ವಹಿಸದಿದ್ದರೆ ಎರಡನೇ ಅಲೆಗಿಂತಲೂ ಹೆಚ್ಚು ಭೀಕರತೆಯನ್ನು ಎದುರಿಸಬೇಕಾಗುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊರೊನಾ ಅಲೆಯ ಮಾದರಿಯಲ್ಲಿ ಕಂಡುಬಂದಿರುವ ಗೊಂದಲದ ಪ್ರವೃತ್ತಿ ಕುರಿತು ಹೈದರಾಬಾದ್ ವಿಶ್ವವಿದ್ಯಾಲಯದ ಮಾಜಿ ವಿಸಿ ವಿಪಿನ್ ಶ್ರೀವಾತ್ಸವ ಎಚ್ಚರಿಕೆ ನೀಡಿದ್ದಾರೆ. ಕೊರೊನಾ ಸೋಂಕಿನಿಂದ ದೈನಂದಿನ ಸಾವಿನ ಪ್ರಕರಣಗಳು ಸಕಾರಾತ್ಮಕವಾಗಿ ಬದಲಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಇದರಿಂದ ಕೊರೊನಾ ಮೂರನೇ ಅಲೆ ಕೆಟ್ಟದಾಗಿ ತಿರುವು ಪಡೆಯಬಹುದು ಎಂದು ಎಚ್ಚರಿಕೆ ರವಾನಿಸಿದ್ದಾರೆ.
ಸದ್ಯಕ್ಕೆ ರಾಜ್ಯಗಳಲ್ಲಿ ಸೋಂಕಿನ ಪುನರುತ್ಪತ್ತಿ ದರ ತಗ್ಗಿಸುವ ಕುರಿತು ಗಮನ ಹರಿಸಬೇಕಿದೆ. ಈ ಒಂದು ಅಂಶ ಕೊರೊನಾ ಮೂರನೇ ಅಲೆ ಪರಿಣಾಮ ನಿರ್ಧರಿಸಲು ನಿರ್ಣಾಯಕವಾಗಿದೆ ಎಂದು ಕೇಂದ್ರ ಎಚ್ಚರಿಕೆ ನೀಡಿದೆ.
ಭಾರತದಲ್ಲಿ 40,120 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ, 42,295 ಮಂದಿ ಗುಣಮುಖರಾಗಿದ್ದಾರೆ 585 ಮಂದಿ ಮೃತಪಟ್ಟಿದ್ದಾರೆ. ಕೋವಿಡ್ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ದೇಶದಲ್ಲಿ ಲಸಿಕೆ ನೀಡಿಕೆ ಮುಂದುವರಿದಿದ್ದು, ಜನ ಲಸಿಕೆ ಹಾಕಿಸಿಕೊಳ್ಳಲು ಉತ್ಸಾಹದಿಂದಲೇ ಮುಂದಾಗಿದ್ದಾರೆ. ಇದುವರೆಗೆ ದೇಶದಲ್ಲಿ ಲಸಿಕೆ ಪಡೆದುಕೊಂಡವರ ಸಂಖ್ಯೆ 52,86,14,390ಕ್ಕೆ ಏರಿಕೆಯಾಗಿದೆ.












Click it and Unblock the Notifications